ರಾಜಸ್ಥಾನದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬೆನ್ನಲ್ಲಿ ಹಿಂದಿನ ಕಾಂಗ್ರೆಸ್ ಸರಕಾರ ಜಾರಿಗೆ ತಂದಿದ್ದ ರಾಜೀವ್ ಗಾಂಧಿ ಯುವ ಮಿತ್ರ ಇಂಟರ್ನ್ಶಿಪ್ ಯೋಜನೆಯನ್ನು ಕೊನೆಗೊಳಿಸಿದ್ದು, 4,000ಕ್ಕೂ ಹೆಚ್ಚು ಯುವಕರು ಉದ್ಯೋಗವನ್ನು ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯವು 5,000 ರಾಜೀವ್ ಗಾಂಧಿ ಯುವ ಮಿತ್ರರಿಗೆ ಉದ್ಯೋಗ ನೀಡಿತ್ತು. ಇದೀಗ ಯೋಜನೆಯನ್ನು ಕೊನೆಗೊಳಿಸಿರುವುದರಿಂದ ಯೋಜನೆಯಡಿಯಲ್ಲಿ ಯುವಕರು ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಸರಕಾರದ ನಿರ್ಧಾರದ ವಿರುದ್ಧ ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜೀವ್ ಗಾಂಧಿ ಯುವ ಮಿತ್ರ ಇಂಟರ್ನ್ಶಿಪ್ ಯೋಜನೆಯಡಿಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಲವು ಯೋಜನೆಗಳನ್ನು ಪ್ರಚಾರ ಮಾಡಬೇಕಿತ್ತು. ಈ ಯೋಜನೆಯಡಿ ಉದ್ಯೋಗ ಪಡೆದ ಯುವಕರಿಗೆ ಪ್ರತಿ ತಿಂಗಳು ಸುಮಾರು 17,500 ರೂ. ವೇತನ ಸಿಗುತ್ತಿತ್ತು. ಯೋಜನೆಯನ್ನು ಇದೀಗ ಕೇಂದ್ರ ಸರಕಾರ ರದ್ದುಪಡಿಸಿದ ಕಾರಣ ಸುಮಾರು 4,200 ಯುವಕರು ನಿರುದ್ಯೋಗಿಗಳಾಗಿದ್ದಾರೆ. ರಾಜೀವ್ ಗಾಂಧಿ ಯುವ ಮಿತ್ರ ಇಂಟರ್ನ್ಶಿಪ್ ಯೋಜನೆಯಡಿಯಲ್ಲಿ ಸಿಕ್ಕ ಉದ್ಯೋಗದಿಂದ ನಮ್ಮ ಕುಟುಂಬದ ಜೀವನ ಸಾಗುತ್ತಿತ್ತು. ಸುಮಾರು ಒಂದು ತಿಂಗಳಿನಿಂದ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ಸರ್ಕಾರ ನಮ್ಮ ಮನವಿಗಳನ್ನು ಸ್ವೀಕರಿಸಿಲ್ಲ. ಗುತ್ತಿಗೆ ನೌಕರರಾಗಿ ಸರ್ಕಾರ ನಮ್ಮನ್ನು ಸೇರಿಸಿಕೊಳ್ಳಬೇಕು ಎಂದು ನಾವು ಬಯಸುತ್ತೇವೆ ಎಂದು ಪ್ರತಿಭಟನಾನಿರತ 25 ವರ್ಷದ ದಿಲೀಪ್ ಸಪೇರಾ ಹೇಳಿದ್ದಾರೆ.
2021-22ರ ಬಜೆಟ್ ಭಾಷಣದಲ್ಲಿ ಮಾಜಿ ಸಿಎಂ ಗೆಹ್ಲೋಟ್ ಅವರು ಯುವ ಮಿತ್ರ ಇಂಟರ್ನ್ಶಿಪ್ ಯೋಜನೆಯನ್ನು ಘೋಷಿಸಿದ್ದರು. ಇದಕ್ಕೆ ಬಿಜೆಪಿಯು ವಿರೋಧ ಪಕ್ಷದಲ್ಲಿದ್ದಾಗ ಆಕ್ಷೇಪಣೆಗಳನ್ನು ಎತ್ತಿತ್ತು. ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಪ್ರಚಾರ ಮಾಡಲು ಯುವಮಿತ್ರರನ್ನು ಬಳಸಿಕೊಂಡಿದೆ ಎಂದು ಬಿಜೆಪಿ ಆರೋಪಿಸಿತ್ತು.
ಕಾಂಗ್ರೆಸ್ ನಾಯಕ ಮತ್ತು ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರು ಜೈಪುರದಲ್ಲಿ ಯುವ ಮಿತ್ರರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಯೋಜನೆಯ ರದ್ದತಿಯನ್ನು ಹಿಂಪಡೆಯುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಐದು ಸಾವಿರ ಯುವಕರನ್ನು ಅವರ ಕೆಲಸದಿಂದ ತೆಗೆದುಹಾಕಲಾಗಿದೆ. ಸರಕಾರದ ಈ ನಿರ್ಧಾರವನ್ನು ನಾನು ಖಂಡಿಸುತ್ತೇನೆ. ಈ ಬಗ್ಗೆ ಸರಕಾರ ಮರು ಪರಿಶೀಲಿಸಿ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಬಿಜೆಪಿ ಸರ್ಕಾರ ತನ್ನ ಚುನಾವಣಾ ಪ್ರಚಾರದ ಸಮಯದಲ್ಲಿ ನೀಡಿದ ಉದ್ಯೋಗದ ಭರವಸೆಗಳನ್ನು ಮರೆತಿದೆ. ಈಗ ಯುವಕರನ್ನು ಉದ್ಯೋಗದಿಂದಲೇ ತೆಗೆದುಹಾಕಿದೆ. ಯುವ ಸಮುದಾಯವನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ. ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತುವುದಾಗಿ ಸಚಿನ್ ಪೈಲೆಟ್ ಹೇಳಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ವಕ್ತಾರ ಸವರ್ಣಿಮ್ ಚತುರ್ವೇದಿ ಈ ಕುರಿತು ಪ್ರತಿಕ್ರಿಯಿಸಿದ್ದು, ಬಿಜೆಪಿ ಸರಕಾರ, ಹಿಂದಿನ ಗೆಹ್ಲೋಟ್ ಸರ್ಕಾರ ತಂದ ಕಲ್ಯಾಣ ಯೋಜನೆಗಳನ್ನು ನಿರ್ಲಕ್ಷಿಸಿ ಮಿಸಾ ಕೈದಿಗಳಿಗೆ ಪಿಂಚಣಿಯನ್ನು ಮರಳಿ ತರುವ ಮೂಲಕ ಬಿಜೆಪಿ ತನ್ನ ಸಿದ್ಧಾಂತದ ಜನರಿಗೆ ಲಾಭ ನೀಡಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
ಸರ್ಕಾರ ಆದೇಶವನ್ನು ಹಿಂಪಡೆಯಬೇಕು ಮತ್ತು ಉದ್ಯೋಗಗಳನ್ನು ಮತ್ತೆ ನೀಡಬೇಕು ಎನ್ನುವುದು ನಮ್ಮ ಪ್ರಾಥಮಿಕ ಬೇಡಿಕೆಯಾಗಿದೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಇದನ್ನು ಓದಿ: ವಿಜಯವಾಡದಲ್ಲಿ ವಿಶ್ವದ ಅತಿದೊಡ್ಡ ‘ಅಂಬೇಡ್ಕರ್’ ಪ್ರತಿಮೆ ಅನಾವರಣ