ಲೋಕಸಭೆ ಚುನಾವಣೆಗೆ ಮುನ್ನ ರಾಜಕೀಯ ಅಸ್ತಿತ್ವವನ್ನು ಗಳಿಸಲು ಆಡಳಿತಾರೂಢ ಬಿಜೆಪಿಯು ಕಚ್ಚತೀವಿನ ಮುಗಿದು ಹೋಗಿರುವ ಸಮಸ್ಯೆಯನ್ನು ಮುನ್ನೆಲೆಗೆ ತಂದಿದೆ, ಇದು ಶ್ರೀಲಂಕಾದಲ್ಲಿ ಕೋಟ್ಯಂತರ ತಮಿಳು ಮಾತನಾಡುವ ಜನರ ಹಿತಾಸಕ್ತಿಗಳಿಗೆ ಗಂಭೀರ ಹಾನಿಯನ್ನುಂಟುಮಾಡುತ್ತದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಪಿ ಚಿದಂಬರಂ ವಾಗ್ದಾಳಿ ನಡೆಸಿದ್ದಾರೆ.
ಈ ವಿಷಯವನ್ನು ಭಾರತದಲ್ಲಿ ಅನಾವಶ್ಯಕವಾಗಿ ಎತ್ತಿಕೊಂಡಿರುವುದರಿಂದ ಶ್ರೀಲಂಕಾದಲ್ಲಿ ತಮಿಳರು ಮತ್ತು ಸಿಂಹಳೀಯರ ನಡುವೆ ಘರ್ಷಣೆಯ ಪರಿಸ್ಥಿತಿಯನ್ನು ಸೃಷ್ಟಿಸುವ ಸಾಧ್ಯತೆ ಇದೆ. ಈ ವಿಚಾರವನ್ನು ಮುನ್ನೆಲೆಗೆ ತಂದರೆ ಶ್ರೀಲಂಕಾದಲ್ಲಿ ವಾಸಿಸುವ ಲಕ್ಷಾಂತರ ತಮಿಳು ಮಾತನಾಡುವ ಜನರ ಹಿತಾಸಕ್ತಿಗೆ ಗಂಭೀರವಾಗಿ ಹಾನಿಯಾಗುತ್ತದೆ. ಇದು ಘರ್ಷಣೆಯ ಪರಿಸ್ಥಿತಿ ಸೃಷ್ಟಿಸುತ್ತದೆ ಎಂದು ಮೋದಿ ಮತ್ತು ಅವರ ಮಂತ್ರಿಗಳಿಗೆ ಗೊತ್ತು. ಸ್ಪಷ್ಟ ರಾಜಕೀಯ ಮತ್ತು ಚುನಾವಣಾ ಕಾರಣಗಳಿಗಾಗಿ ಮುಗಿದು ಹೋಗಿರುವ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ಇದು ಖಂಡನೀಯ ಎಂದು ಚಿದಂಬರಂ ಹೇಳಿದ್ದಾರೆ.
ಈ ವಿಷಯವನ್ನು ಬಿಜೆಪಿ ಪ್ರಸ್ತಾಪಿಸಿದ ಸಮಯವನ್ನು ಪ್ರಶ್ನಿಸಿದ ಚಿದಂಬರಂ, ಕೇಸರಿ ಪಕ್ಷವು ಸ್ಪಷ್ಟ ರಾಜಕೀಯ ಮತ್ತು ಚುನಾವಣಾ ಕಾರಣಗಳಿಗಾಗಿ, ಚೀನೀ ಪಡೆಗಳು ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿರುವುದರಿಂದ ಜನರ ಗಮನ ಬೇರೆಡೆ ಸೆಳೆಯಲು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಕಚ್ಚತೀವು ಮುಗಿದ ವಿಚಾರ, 50 ವರ್ಷಗಳ ಹಿಂದೆಯೇ ಈ ಬಗ್ಗೆ ಒಪ್ಪಂದವಾಗಿತ್ತು. 2014ರಿಂದ ಮೋದಿ ಅಧಿಕಾರದಲ್ಲಿದ್ದರು, ಕಳೆದ 10 ವರ್ಷಗಳಲ್ಲಿ ಅವರು ಏಕೆ ಈ ವಿಷಯವನ್ನು ಪ್ರಸ್ತಾಪಿಸಲಿಲ್ಲ? ಚೀನಾದ ಪಡೆಗಳು ಭಾರತೀಯ ಭೂಪ್ರದೇಶವನ್ನು ಆಕ್ರಮಿಸಿಕೊಂಡಿವೆ, ನಮ್ಮ ಹಲವಾರು ಗಸ್ತು ಕೇಂದ್ರಗಳನ್ನು ನಿರ್ಬಂಧಿಸಲಾಗಿದೆ. ಇದನ್ನು ಮುಚ್ಚಿ ಹಾಕಲು ಈ ವಿಚಾರವನ್ನು ಪ್ರಸ್ತಾಪಿಸಲಾಗಿದೆ ಎಂದು ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ, ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ಕಚ್ಚತೀವು ದ್ವೀಪದ ಸಮಸ್ಯೆಯನ್ನು “ಸಂಪೂರ್ಣ ಅಸಂಬದ್ಧ” ಎಂದು ಹೇಳಿದ್ದರು. ಅಲ್ಲಿ ಯಾರಾದರೂ ವಾಸಿಸುತ್ತಾರೆಯೇ? ಇದು ಸಂಪೂರ್ಣ ಅಸಂಬದ್ಧವಾಗಿದೆ. ಪ್ರಧಾನಿ ಮೋದಿ ಆಧಾರ ರಹಿತವಾಗಿ ಮಾತನಾಡುತ್ತಾರೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದರು.
1974ರಲ್ಲಿ ಕಚ್ಚತೀವು ದ್ವೀಪವನ್ನು ಶ್ರೀಲಂಕಾಕ್ಕೆ ಹಸ್ತಾಂತರಿಸಿರುವ ಇಂದಿರಾಗಾಂಧಿ ಸರ್ಕಾರದ ನಿರ್ಧಾರವು ಲೋಕಸಭೆ ಚುನಾವಣೆಯ ಹೊಸ್ತಿಲಲ್ಲಿ ಮುನ್ನೆಲೆಗೆ ಬಂದಿತ್ತು. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಕಚ್ಚತೀವು ದ್ವೀಪವನ್ನು ಭಾರತಕ್ಕೆ ಮರು ಸೇರ್ಪಡೆಗೊಳಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದರು. ತಮಿಳುನಾಡು ದಿವಂಗತ ಮುಖ್ಯಮಂತ್ರಿ ಕರುಣಾನಿಧಿ ಅವರ ಒಪ್ಪಿಗೆಯ ಮೇರೆಗೆ ಶ್ರೀಲಂಕಾಕ್ಕೆ ಕಚ್ಚತೀವು ನೀಡಲಾಗಿದೆ. ಈಗ ಬಿಜೆಪಿಯು ಕಚ್ಚತೀವು ವಾಪಸ್ ಪಡೆಯುವಂತೆ ವಿದೇಶಾಂಗ ಸಚಿವ ಜೈಶಂಕರ್ಗೆ ಪತ್ರ ನೀಡಿದೆ. ಅದನ್ನು ಭಾರತಕ್ಕೆ ವಾಪಸ್ ತರಬೇಕು, ಇದು ನಮ್ಮ ನಿಲುವು. ಕೇಂದ್ರ ಮೀನುಗಾರರ ರಕ್ಷಣೆಗಾಗಿ ಕಚ್ಚತೀವು ಮರಳಿ ತರಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ನಾವು ಮಾಡುತ್ತಿದ್ದೇವೆ ಎಂದು ಅಣ್ಣಾಮಲೈ ಹೇಳಿದ್ದರು. ಬಿಜೆಪಿ ನಾಯಕರ ಹೇಳಿಕೆಯನ್ನು ಸಂಪೂರ್ಣವಾಗಿ ತಳ್ಳಿ ಹಾಕಿದ್ದ ಶ್ರೀಲಂಕಾ ಈ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿತ್ತು.
ಇದನ್ನು ಓದಿ: ರಾಜ್ಯದಲ್ಲಿ ‘ಆಪರೇಷನ್ ಕಮಲ’ಕ್ಕೆ ಯತ್ನ: ಸಿಎಂ ಸಿದ್ದರಾಮಯ್ಯ; ಕಾಂಗ್ರೆಸ್ ಶಾಸಕರಿಗೆ ಬಿಜೆಪಿಯಿಂದ 50ಕೋಟಿ ರೂ. ಆಫರ್?