ರಾಮನಗರದಲ್ಲಿ ವಕೀಲರೋರ್ವರಿಗೆ ಹಲ್ಲೆ, ನಿಂದನೆ ಪ್ರಕರಣಕ್ಕೆ ಸಂಬಂಧಿಸಿ 40 ವಕೀಲರ ವಿರುದ್ಧ ಎಫ್ಐಆರ್ ದಾಖಲಿಸಿದ್ದ ಐಜೂರು ಪೊಲೀಸ್ ಠಾಣೆಯ ಪಿಎಸ್ಐ ತನ್ವೀರ್ ಹುಸೇನ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ.
ಫೆಬ್ರವರಿ 19ರಿಂದ ವಕೀಲರು ರಾಮನಗರ ಜಿಲ್ಲಾಧಿಕಾರಿ ಕಚೇರಿ ಎದುರು ಹಲ್ಲೆ, ನಿಂದನೆ ಪ್ರಕರಣಕ್ಕೆ ಸಂಬಂಧಿಸಿ ದಾಖಲಾಗಿದ್ದ ಎಫ್ಐಆರ್ನ್ನು ರದ್ದು ಮಾಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು. ಪ್ರತಿಭಟನೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ-ಜೆಡಿಎಸ್ ಪ್ರತಿಭಟನೆಗೆ ಬೆಂಬಲವನ್ನು ನೀಡಿತ್ತು.
ಪ್ರಕರಣದ ಹಿನ್ನೆಲೆ:
ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಾರಣಾಸಿ ನ್ಯಾಯಾಲಯದ ಆದೇಶ ಖಂಡಿಸಿ, ವಕೀಲ ಚಾನ್ ಪಾಷಾ ಎಂಬವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. ಅವರ ಪೋಸ್ಟ್ ವಿರುದ್ಧ ಕೆಲವು ವಕೀಲರು ವಕೀಲರ ಸಂಘಕ್ಕೆ ದೂರು ನೀಡಿದ್ದರು. ಬಳಿಕ ಸಂಘದಿಂದ ಚಾನ್ ಪಾಷಾ ಅವರನ್ನು ವಜಾಗೊಳಿಸಲಾಗಿತ್ತು. ತನ್ನ ವಿರುದ್ಧದ ದೂರು ಸುಳ್ಳೆಂದು ಮನವರಿಕೆ ಮಾಡಲು ಚಾನ್ ಪಾಷಾ ಅವರು ವಕೀಲರ ಸಂಘಕ್ಕೆ ಹೋಗಿದ್ದರು. ಈ ವೇಳೆ ಮಾತಿನ ಚಕಮಕಿ ನಡೆದು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು 40 ವಕೀಲರ ವಿರುದ್ಧ ಐಜೂರು ಪೊಲೀಸ್ ಠಾಣೆಯಲ್ಲಿ ಚಾನ್ ಪಾಷಾ ದೂರು ನೀಡಿದ್ದರು. ಅವರ ದೂರಿನ ಆಧಾರದ ಮೇಲೆ ಪಿಎಸ್ಐ ತನ್ವೀರ್ ಹುಸೇನ್ ಎಫ್ಐಆರ್ ದಾಖಲಿಸಿದ್ದರು.
ಇದರ ಬೆನ್ನಲ್ಲಿ ಎಫ್ಐಆರ್ ರದ್ದು ಮಾಡಬೇಕೆಂದು ವಕೀಲರು ಪ್ರತಿಭಟನೆ ಆರಂಭಿಸಿದ್ದರು. ಅವರ ಪ್ರತಿಭಟನಾ ಸ್ಥಳಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್ ಅಶೋಕ್ ಭೇಟಿ ನೀಡಿ, ಪ್ರಕರಣಕ್ಕೆ ರಾಜಕೀಯ ತಿರುವು ನೀಡಿದ್ದರು. ಈ ಘಟನೆ ವಿಧಾನಸಭಾ ಕಲಾಪದಲ್ಲೂ ಚರ್ಚೆಯಾಗಿತ್ತು.
ಇದಲ್ಲದೆ ಚಾನ್ ಪಾಷಾ ಅವರನ್ನು ವಕೀಲರ ಸಂಘದಿಂದ ವಜಾಗೊಳಿಸಿರುವುದು ಸರಿಯಲ್ಲ. ಅವರ ವಜಾವನ್ನು ರದ್ದು ಮಾಡಬೇಕೆಂದು ದಲಿತ ಮುಖಂಡರು ಕೂಡ ವಕೀಲರ ಸಂಘಕ್ಕೆ ಮನವಿ ಮಾಡಿದ್ದರು. ಈ ವೇಳೆಯೂ ಕೆಲವು ವಕೀಲರು ತಮಗೆ ಜಾತಿ ನಿಂದನೆ ಮಾಡಿದ್ದಾರೆ ಎಂದು ದಲಿತ ಮುಖಂಡರು ಆರೋಪಿಸಿ ದೂರು ದಾಖಲಿಸಿದ್ದರು. ಆದರೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಲಾಗಿದೆ.
ಇದನ್ನು ಓದಿ: ದೆಹಲಿ ಚಲೋ ರೈತರ ಪ್ರತಿಭಟನೆ: ತಲೆಗೆ ಪೆಟ್ಟು ಬಿದ್ದು ಪ್ರತಿಭಟನಾನಿರತ ಯುವ ರೈತ ಸಾವು