ತ್ರಿಪುರಾದ ಅತ್ಯಾಚಾರ ಸಂತ್ರಸ್ತೆಯೊಬ್ಬರು ಮ್ಯಾಜಿಸ್ಟ್ರೇಟ್ ತನ್ನ ಚೇಂಬರ್ನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾಗಿ ವರದಿಯಾಗಿದೆ.
ಧಲೈ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗೌತಮ್ ಸರ್ಕಾರ್ ನೇತೃತ್ವದ ಮೂವರು ಸದಸ್ಯರ ಸಮಿತಿಯು, ಮಹಿಳೆಯ ಆರೋಪದ ಬಗ್ಗೆ ತನಿಖೆ ಪ್ರಾರಂಭಿಸಿದೆ ಎಂದು ಹಿರಿಯ ವಕೀಲರು ಭಾನುವಾರ ತಿಳಿಸಿದ್ದಾರೆ.
“ಫೆಬ್ರವರಿ 16ರಂದು ತನ್ನ ಮೇಲೆ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಲು ಕಮಲಾಪುರದ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಕೋಣೆಗೆ ಹೋದಾಗ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ನಾನು ನನ್ನ ಹೇಳಿಕೆ ನೀಡಲು ಮುಂದಾದಾಗ ನ್ಯಾಯಾಧೀಶರು ತಬ್ಬಿಕೊಂಡರು. ನಾನು ಅವರ ಕೊಠಡಿಯಿಂದ ಹೊರಗೆ ಧಾವಿಸಿ ಬಂದು ವಕೀಲರು ಮತ್ತು ನನ್ನ ಪತಿಗೆ ಘಟನೆಯ ಬಗ್ಗೆ ತಿಳಿಸಿದೆ”ಎಂದು ಮಹಿಳೆ ಆರೋಪಿಸಿದ್ದಾರೆ.
“A rape survivor has alleged that she was sexually abused by a magistrate inside his chamber in a court in Tripura.”
State of district judiciary? https://t.co/zwRJDMgjLp
— Ratna Singh (@whattalawyer) February 19, 2024
ಘಟನೆ ಕುರಿತು ಮಹಿಳೆಯ ಪತಿ ಕಮಲಾಪುರ ಬಾರ್ ಅಸೋಸಿಯೇಷನ್ಗೆ ಪ್ರತ್ಯೇಕ ದೂರು ನೀಡಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗೌತಮ್ ಸರ್ಕಾರ್ ಅವರು ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಸತ್ಯಜಿತ್ ದಾಸ್ ಅವರೊಂದಿಗೆ ಕಮಲಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಕಚೇರಿಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
”ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ನೇತೃತ್ವದ ತ್ರಿಸದಸ್ಯ ಸಮಿತಿಯು ನ್ಯಾಯಾಲಯದ ಆವರಣದಲ್ಲಿರುವ ಕಮಲಾಪುರ ವಕೀಲರ ಸಂಘದ ಕಚೇರಿಗೆ ಭೇಟಿ ನೀಡಿ ಮಹಿಳೆಯ ಆರೋಪದ ಬಗ್ಗೆ ನಮ್ಮ ಅಭಿಪ್ರಾಯವನ್ನು ಕೇಳಿದ್ದಾರೆ. ನಾವು ನಮ್ಮಲ್ಲಿರುವ ಮಾಹಿತಿಯನ್ನು ಸಮಿತಿಯ ಮುಂದೆ ಹಂಚಿಕೊಂಡಿದ್ದೇವೆ” ಎಂದು ವಕೀಲರ ಸಂಘದ ಕಾರ್ಯದರ್ಶಿ ಶಿಬೇಂದ್ರ ದಾಸ್ಗುಪ್ತಾ ಹೇಳಿದ್ದಾಗಿ ಪಿಟಿಐಗೆ ವರದಿ ಮಾಡಿದೆ.
ನ್ಯಾಯಾಧೀಶರ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯಿಸಿದ ತ್ರಿಪುರಾ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ವಿ ಪಾಂಡೆ ಅವರು, “ಈ ವಿಷಯದ ಬಗ್ಗೆ ನಮಗೆ ಇನ್ನೂ ಯಾವುದೇ ಅಧಿಕೃತ ದೂರು ಬಂದಿಲ್ಲ. ರಾಜ್ಯದ ಇತರ ಜನರಂತೆ ನನಗೂ ಈ ಬಗ್ಗೆ ಮಾಧ್ಯಮಗಳಿಂದ ಮಾಹಿತಿ ಗೊತ್ತಾಗಿದೆ. ಈ ಬಗ್ಗೆ ನಾವು ಸರಿಯಾದ ಸ್ವರೂಪದಲ್ಲಿ ದೂರನ್ನು ಸ್ವೀಕರಿಸಿದರೆ ಖಂಡಿತವಾಗಿಯೂ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ” ಎಂದಿದ್ದಾರೆ.
ಇದನ್ನೂ ಓದಿ : ಚಂಡೀಗಢ ಮೇಯರ್ ರಾಜೀನಾಮೆ: ಮೂವರು ಎಎಪಿ ಕೌನ್ಸಿಲರ್ಗಳು ಬಿಜೆಪಿ ಸೇರ್ಪಡೆ