ಹೋರಾಟಗಾರ ಅಗ್ನಿ ಶ್ರೀಧರ್ ಅಧ್ಯಕ್ಷತೆಯಲ್ಲಿ ಜನವರಿ 12ರಂದು ರಾಷ್ಟ್ರೀಯ ದ್ರಾವಿಡ ಸಂಘ ಉದ್ಘಾಟನೆ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕ, ಮಾಜಿ ಸಚಿವ ಸತೀಶ್ ಜಾರಕಿಹೊಳಿಯವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಬೆಂಗಳೂರಿನ ಮಹಾರಾಣಿ ಕಾಲೇಜು ಪಕ್ಕದ ಭಾರತ್ ಸ್ಕೌಟ್ ಮತ್ತು ಗೈಡ್ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಚಿಂತಕರಾದ ಬಂಜಗೆರೆ ಜಯಪ್ರಕಾಶ್ ಪ್ರಸ್ತಾವಿಕವಾಗಿ ಮಾತನಾಡಲಿದ್ದಾರೆ. ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ ಜಿ.ಬಿ.ಪಾಟೀಲ್, ಚಿತ್ರ ಸಾಹಿತಿ ಕವಿರಾಜ್, ಕ್ರಿಕೆಟ್ ಪಟು ವೇದ ಕೃಷ್ಣಮೂರ್ತಿ ಅತಿಥಿಗಳಾಗಿ ಪಾಲ್ಗೊಳ್ಳುತ್ತಿದ್ದಾರೆ.
“ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ನಾಡಿನಲ್ಲಿ ಹಿಂದಿ ಹೇರಿಕೆ, ಆರ್ಯ ಸಂಸ್ಕೃತಿಯ ಪ್ರಭಾವ ಹೆಚ್ಚಾಗಿದೆ. ಇದರಿಂದ ಕನ್ನಡ ಭಾಷೆಯ ಜೊತೆಗೆ ಈ ನೆಲದ ಸಂಸ್ಕೃತಿಯು ಅಳಿದುಹೋಗುತ್ತಿದೆ ಎನ್ನುವ ಕಾರಣಕ್ಕೆ ಸಂಘವನ್ನು ತೆರೆಯಲಾಗುತ್ತಿದೆ” ಎಂದು ಸಂಘಟಕರು ತಿಳಿಸಿದ್ದಾರೆ.
“ಇಂದು ನಾವು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇವೆ. ದೇಶ ಸಾಗುತ್ತಿರುವ ಹಾದಿ ಯಾರಲ್ಲೂ ಭರವಸೆ ಮೂಡಿಸಿಲ್ಲ. ಆರ್ಎಸ್ಎಸ್ ಎನ್ನುವ ರಾಷ್ಟ್ರೀಯ ಸನಾತನ ಸಂಘ ನಮ್ಮನ್ನೆಲ್ಲಾ ಶಾಶ್ವತವಾಗಿ ಗುಲಾಮಗಿರಿಗೆ ದೂಡುತ್ತಿದೆ. ಈ ನೆಲದ ಜನರ ಜೀವನ ಶೈಲಿಯನ್ನೇ ಬದಲಾಯಿಸುತ್ತಿದೆ. ಧರ್ಮದ ಹೆಸರಿನಲ್ಲಿ ಜಾತೀಯತೆಯನ್ನು ಜೀವಂತವಾಗಿಡುವ ಪ್ರಯತ್ನ ನಡೆಸುತ್ತಿದೆ. ದ್ರಾವಿಡರ ಆಹಾರ ಸಂಸ್ಕೃತಿಯನ್ನು ಹಾಳುಗೆಡವಲು ಮೇಲು-ಕೀಳು ಎನ್ನುವ ವಿಚಾರವನ್ನು ಜನರ ಮನಸ್ಸಿನಲ್ಲಿ ತುಂಬಲಾಗುತ್ತಿದೆ” ಎಂದಿದ್ದಾರೆ.
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ‘ನಾವು ದ್ರಾವಿಡ ಕನ್ನಡಿಗರು’ ಚಳವಳಿಯ ಅಭಿಗೌಡ ಹನಕೆರೆಯವರು, “ಸರ್ಕಾರ ಕೂಡ ಆರ್ಎಸ್ಎಸ್ನ ಅಣತಿಯಂತೆ ಕೆಲಸ ಮಾಡುತ್ತಿದೆ. ಶಾಲಾ ಗೋಡೆಗೆ ಕೇಸರಿ ಬಣ್ಣ ಬಳಿಯುತ್ತದೆ. ಶಾಲೆಯಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ವಿಚಾರದಲ್ಲೂ ಕೇವಲ ಸಸ್ಯಾಹಾರವನ್ನೇ ನೀಡಬೇಕು ಎನ್ನುವ ನೀತಿ ತರಲಾಗುತ್ತಿದೆ. ಇವೆಲ್ಲಾ ನಮ್ಮ ದ್ರಾವಿಡ ಸಂಸ್ಕೃತಿಯನ್ನು ನಾಶಪಡಿಸುವ ಹುನ್ನಾರವಾಗಿದೆ” ಎಂದು ಕಿಡಿಕಾರಿದರು.
ಇದನ್ನೂ ಓದಿರಿ: ಕಾಂತಾರವಷ್ಟೇ ಅಲ್ಲ, ನಿಮ್ಮ ಸಿನಿಮಾವೂ ಆಸ್ಕರ್ಗೆ ಅರ್ಹತೆ ಪಡೆಯಬಹುದು: ಷರತ್ತುಗಳು ಅನ್ವಯ!
“ಈ ಸಂಘಟನೆಯ ಮುಖ್ಯ ಉದ್ದೇಶ ಯಾರನ್ನೋ ವಿರೋಧಿಸುವುದಲ್ಲ. ನಮ್ಮ ನೆಲದ ಸಂಸ್ಕೃತಿಯನ್ನು ಉಳಿಸುವುದು ಹಾಗೂ ಬೆಳೆಸುವುದಾಗಿದೆ. ಎಲ್ಲರೂ ಸಮಾನವಾಗಿ ಬದುಕಬೇಕು ಎನ್ನುವುದು ದ್ರಾವಿಡ ತತ್ವ ಸಿದ್ಧಾಂತವಾಗಿದೆ. ಈ ಸಿದ್ದಾಂತದಲ್ಲಿ ಮೇಲು-ಕೀಳುಗಳಿಲ್ಲ, ರಾಜಸೇವಕನಿಲ್ಲ, ಎಲ್ಲರೂ ಪ್ರಜೆಗಳೇ ಆಗಿದ್ದು, ಎಲ್ಲರಿಗೂ ಮಾನ್ಯತೆ ನೀಡಬೇಕು. ಧರ್ಮ-ಜಾತಿ ಹೆಸರಿನಲ್ಲಿ ನಮ್ಮನ್ನು ಮಾನಸಿಕವಾಗಿ ದಿಕ್ಕು ತಪ್ಪಿಸಿ, ನಮ್ಮೊಳಗೆ ಅಸೂಯೆ, ದ್ವೇಷ ಬಿತ್ತಲಾಗುತ್ತಿದೆ. ನಾವು ಅದನ್ನು ತಡೆಯಬೇಕಿದೆ. ಹಾಗಾಗಿ ದ್ರಾವಿಡ ಸಂಘ ಹುಟ್ಟುಹಾಕುತ್ತಿದ್ದೇವೆ” ಎಂದು ವಿವರಿಸಿದರು.
“ಈ ದ್ರಾವಿಡ ಸಂಘ ಕುರುಡು ಭಕ್ತರಿಗಲ್ಲ; ತೆರೆದ ಮನಸ್ಸಿನವರಿಗೆ, ಪ್ರಬುದ್ಧರಿಗೆ, ಅಬಲೆಯರಿಗಾಗಿ ಸಂಘಟಿಸಲಾಗುತ್ತಿದೆ. ದ್ರಾವಿಡ ಸಂಸ್ಕೃತಿ ಒಂದು ಮಹಾ ಸಮುದ್ರ. ಅದಕ್ಕೆ ಅಂಟಿಕೊಂಡು ಬಂದಿರುವ ಒಂದು ಉಪ ನದಿ, ಹಿನ್ನೀರು ಈ ಆರ್ಯ ಧರ್ಮ. ದುರಂತವೆಂದರೆ ಈ ಆರ್ಯ ಧರ್ಮ ಇಡೀ ಕಡಲನ್ನೇ ವಿಷಮಗೊಳಿಸುತ್ತಿದೆ. ಇಂದು ನಾವೆಲ್ಲರೂ ಸೇರಿ ಆ ಕಡಲನ್ನು ವಿಷಮುಕ್ತ ಮಾಡಬೇಕಿದೆ. ನಮ್ಮ ದ್ರಾವಿಡ ಸಂಸ್ಕೃತಿಯನ್ನು ಮುನ್ನೆಲೆಗೆ ತರಬೇಕಿದೆ. ಹಾಗಾಗಿ ಈ ದ್ರಾವಿಡ ಸಂಘದ ಜೊತೆ ಕೈ ಜೋಡಿಸಿ” ಎಂದು ಮನವಿ ಮಾಡಿದ್ದಾರೆ.