ಪ್ರೇಮ ಪ್ರಸ್ತಾಪವನ್ನು ಒಪ್ಪದಿದ್ದಕ್ಕೆ ಸವರ್ಣಿಯ ಹಿಂದು ಯುವಕನೋರ್ವ ಪರಿಶಿಷ್ಟ ಜಾತಿಗೆ ಸೇರಿದ ಯುವತಿಯನ್ನು ಕುಡುಗೋಲಿನಿಂದ ಕತ್ತು ಸೀಳಿ ಕೊಲೆ ಮಾಡಿರುವ ಘಟನೆ ಸೋಮವಾರ ತಿರುನೆಲ್ವೆಲಿನ ನೆಲ್ಲೈಯಪ್ಪಾರ್ ದೇವಸ್ಥಾನದ ಬಳಿಯ ಗೋದಾಮೊಂದರಲ್ಲಿ ನಡೆದಿದೆ.
ತಿರುಪ್ಪನಿಕರಿಸಲ್ಕುಲಂ ನಿವಾಸಿ ಸಂಧ್ಯಾ (೧೮) ಕೊಲೆಯಾದ ಯುವತಿ. ಸಂಧ್ಯಾ ಕೆಲಸ ಮಾಡುತ್ತಿದ್ದ ಫ್ಯಾನ್ಸಿ ಸ್ಟೋರ್ ಬಳಿಯ ಗೋಲ್ಡ್ ಕವರಿಂಗ್ ಆಭರಣಗಳ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದ ರಾಜೇಶ ಕಣ್ಣಾ ಆರು ತಿಂಗಳ ಹಿಂದೆ ಆಕೆಯೊಂದಿಗೆ ಗೆಳೆತನ ಬೆಳೆಸಿದ್ದನು. ಆತ ಪ್ರೇಮ ಪ್ರಸ್ತಾವವನ್ನು ಮುಂದಿರಿಸಿದ್ದಾಗ ಸಂಧ್ಯಾ ಅದನ್ನು ತಿರಸ್ಕರಿಸಿದ್ದಳು. ಆದಾಗ್ಯೂ ಕಣ್ಣಾ ಆಕೆಯ ಬೆನ್ನು ಬಿಟ್ಟಿರಲಿಲ್ಲ ಮತ್ತು ತಾನು ಕೆಲಸವನ್ನು ಬಿಟ್ಟಿದ್ದರೂ ಆಕೆಯನ್ನು ಫೋನ್ ಮೂಲಕ ಸಂಪರ್ಕಿಸಲು ಯತ್ನಿಸುತ್ತಿದ್ದನು.
ಎರಡು ದಿನಗಳ ಹಿಂದೆ ಸಂಧ್ಯಾಳ ಅಕ್ಕನಿಗೆ ಕಣ್ಣಾ ಕರೆ ಮಾಡಿ, ಆಕೆಯ ಬಗ್ಗೆ ದೂರಿದ್ದನು. ಸೋಮವಾರ ಮಧ್ಯಾಹ್ನ ಸಂಧ್ಯಾ ಕೆಲವು ಸಾಮಗ್ರಿಗಳನ್ನು ತರಲು ಫ್ಯಾನ್ಸಿಸ್ಟೋರ್ನ ಗೋದಾಮಿಗೆ ತೆರಳಿದ್ದಾಗ ಆಕೆಯನ್ನು ಕಣ್ಣಾ ಹಿಂಬಾಲಿಸಿಕೊಂಡು ಬಂದು ಕತ್ತು ಸೀಳಿ ಪರಾರಿಯಾಗಿದ್ದನು. ಸಂಧ್ಯಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಳು.
ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಸಿಸಿಟವಿ ದೃಶ್ಯಗಳ ನೆರವಿನಿಂದ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಇದನ್ನೂ ಓದಿ: ದಲಿತ ಕುಟುಂಬದ ಮೂವರ ಹತ್ಯೆ ಪ್ರಕರಣ: ಪೊಲೀಸರ ವರ್ಗಾವಣೆ