220 ರೂ ಇದ್ದ ಕೇಬಲ್ ಬಿಲ್ 400 ರೂ ದಾಟುತ್ತಿರುವುದೇಕೆ? ಇದರ ಲಾಭ ಯಾರಿಗೆ? ಹಿಂದಿರುವವರು ಯಾರು?
ಚಾನೆಲ್ಗಳು ಮಾತ್ರ ಅಂಬಾನಿಯದ್ದಲ್ಲ; ಕೇಬಲ್ ಸಹಾ ರಿಲೆಯನ್ಸ್ ದೇ. ಅಪಾಯಕಾರಿ ಬೆಳವಣಿಗೆಗೆ ನಾಂದಿ
ಮಂಡ್ಯದಲ್ಲಿ ಸುಮಲತಾ ನಾಮಪತ್ರ ಸಲ್ಲಿಸಿದ ದಿನ ಸ್ಥಳೀಯವಾಗಿ ಜೆಡಿಎಸ್ನ ಪ್ರಭಾವದಿಂದಾಗಿ ಕೇಬಲ್ ಟಿವಿ ಕೆಲಸ ಮಾಡದಂತೆ ಮಾಡಲಾಯಿತು ಎಂಬ ಒಂದು ಆರೋಪವಿದೆ. ಆದರೆ, ಮುಖೇಶ್ ಅಂಬಾನಿಯ ಬೆಂಬಲಕ್ಕೆ ನಿಂತಿರುವ ಬಿಜೆಪಿ ಪಕ್ಷದ ವಿರುದ್ಧ ಯಾವುದಾದರೂ ಚಾನೆಲ್ ಸುದ್ದಿ ಮಾಡಿದರೆ, ಆ ಚಾನೆಲ್ಲೇ ಬರದಂತೆ ನೋಡಿಕೊಳ್ಳುವ ಸಂಭವ ತೆರೆದುಕೊಂಡಿದೆ. ಅದು ಹೇಗೆಂಬುದನ್ನು ನೋಡೋಣ.
200 ರೂ. ಆಸುಪಾಸಿನಷ್ಟು ಖರ್ಚು ಮಾಡಿ ನೂರಾರು ಚಾನೆಲ್ಗಳನ್ನು ಪಡೆದುಕೊಳ್ಳುತ್ತಿದ್ದ ದಿನಗಳು ಈಗ ಇಲ್ಲ. ಕೆಲವು ಕಾಲದ ನಂತರ ಇದು ಯಾವ ಸ್ವರೂಪ ತೆಗೆದುಕೊಳ್ಳಲಿದೆ ಎಂಬುದನ್ನೂ ಹೇಳಲಾಗದು. ಹಿಂದೆಯೂ ಉಚಿತ ಚಾನೆಲ್ಗಳು ಮತ್ತು ಹಣ ಕೊಟ್ಟು ಕೊಳ್ಳಬೇಕಾದ ಚಾನೆಲ್ಗಳಿದ್ದವು. ಆದರೆ, ಅವೆಲ್ಲಾ ಸಾಮಾನ್ಯ ಗ್ರಾಹಕರ ಗಮನಕ್ಕೆ ಬರುತ್ತಿರಲಿಲ್ಲ. ಏಕೆಂದರೆ, ಕೇಬಲ್ ಮೂಲಕ ಸೇವೆ ಒದಗಿಸುತ್ತಿದ್ದ ಆಪರೇಟರ್ಗಳು ಅವನ್ನೆಲ್ಲಾ ಮಾಡಿ, ಇಂತಿಷ್ಟು ಹಣಕ್ಕೆ ಇಷ್ಟು ಚಾನೆಲ್ ಎಂಬ ಪ್ಯಾಕೇಜ್ನೊಂದಿಗೆ ಒದಗಿಸುತ್ತಿದ್ದರು.
ಆದರೆ, ಈಗೆರಡು ತಿಂಗಳ ಹಿಂದೆ ಕೆಲವು ಉಚಿತ ಚಾನೆಲ್ಗಳನ್ನು ಬಿಟ್ಟರೆ ತಮಗೆ ಬೇಕಾದ ಮನರಂಜನೆ ಅಥವಾ ಸುದ್ದಿ ಚಾನೆಲ್ಗಳಿಗೆ ಪ್ರತ್ಯೇಕವಾಗಿ ಇಂತಿಷ್ಟು ಶುಲ್ಕವೆಂದು ಪಾವತಿಸಬೇಕೆಂದು ಸೂಚಿಸಲಾಗಿತ್ತು. ಇದರಿಂದ ಬಹುತೇಕ ಎಲ್ಲಾ ಚಾನೆಲ್ಗಳನ್ನು ನೋಡುತ್ತಿದ್ದ ಗ್ರಾಹಕರಿಗೆ ಗೊಂದಲವುಂಟಾಯಿತು. ಪ್ರತೀ ಮನೆಯಲ್ಲೂ ಬೇರೆ ಬೇರೆ ಆಸಕ್ತಿಗಳ ಸದಸ್ಯರಿರುತ್ತಾರಾದ್ದರಿಂದ, ಎಲ್ಲರಿಗೂ ಬೇಕಾದ ಸೀಮಿತ ಚಾನೆಲ್ಗಳಿಗೂ ಹಿಂದಿಗಿಂತ 150 ರೂ ಹೆಚ್ಚು ಕೊಡಬೇಕು. ಇದು ಇನ್ನೂ ಹೆಚ್ಚಾಗಬಹುದೇ ಹೊರತು ಕಡಿಮೆಯಾಗದು. ಇನ್ನು ಸ್ವಲ್ಪ ಹೆಚ್ಚು ಚಾನೆಲ್ಗಳು ಬೇಕೆಂದರೆ, ದುಪ್ಪಟ್ಟು ಬೆಲೆ ನೀಡಬೇಕಾದಂತಹ ಪರಿಸ್ಥಿತಿ ಏಕೆ ತಲೆದೋರಿತು? ಇದರ ಲಾಭ ಯಾರಿಗೆ ಆಗಬಹುದು ಎಂಬುದನ್ನು ನೋಡೋಣ.
ಎಲ್ಲರಿಗೂ ತಿಳಿದಿರುವಂತೆ ಬಹಳ ಹಿಂದೆ ಮನೆ ಮನೆಗೆ ಕೇಬಲ್ ಎಳೆದು ವಿವಿಧ ಚಾನೆಲ್ಗಳಲ್ಲದೇ, ಕೇಬಲ್ನವರೇ ಸಿನೆಮಾ ಸಹಾ ತೋರಿಸುತ್ತಿದ್ದರು. ಈ ರೀತಿ ಕೇಬಲ್ ಜಾಲ ವಿಸ್ತರಿಸಲು ಬಹಳ ದೊಡ್ಡ ಪೈಪೋಟಿಯೇ ನಡೆದಿದೆ. ಕೇಬಲ್ ಮಾಫಿಯಾ ಎಂದೆಲ್ಲಾ ಅದನ್ನು ಕರೆಯಲಾಗುತ್ತಿತ್ತು. ಆದರೆ, ಕಂಬ, ಮರಗಳು, ಮನೆಯ ಮೇಲಿನ ಕೊಕ್ಕೆಗಳು ಎಲ್ಲಕ್ಕೂ ಸಿಕ್ಕಿಸಿ ಮನೆಯಿಂದ ಮನೆಗೆ ತೆಗೆದುಕೊಂಡು ಹೋಗಿ ಎಲ್ಲಾ ಕಡೆ ಈ ಮಾರುಕಟ್ಟೆ ಸೃಷ್ಟಿ ಮಾಡಿದ್ದರಲ್ಲಿ ಸಣ್ಣ ಆಪರೇಟರ್ಗಳ ಪಾಲು ದೊಡ್ಡದು. ನಂತರ ಅವು ‘ಮಾಫಿಯಾ’ಗಳ ಹಿಡಿತಕ್ಕೆ, ರಾಜಕಾರಣಿಗಳ ಹಿಡಿತಕ್ಕೆ ಹೋಯಿತು.
ಆ ನಂತರ ಸಿಟಿ ಕೇಬಲ್, ಹಾಥ್ವೇ ಮತ್ತು ಡೆನ್ಗಳೆಂಬ ಎಂಎಸ್ಓ (ಮಲ್ಟಿ ಸರ್ವೀಸ್ ಆಪರೇಟರ್)ಗಳು ತಲೆಯೆತ್ತಿದವು. ಇವು ಸ್ಥಳೀಯ ಅಗತ್ಯಗಳೂ ಇದ್ದುದರಿಂದ ಲೋಕಲ್ ಆಪರೇಟರ್ಗಳನ್ನೂ ಸಣ್ಣ ಪಾಲುದಾರರನ್ನಾಗಿ ಉಳಿಸಿಕೊಂಡು, ಬೃಹತ್ತಾಗಿ ಬೆಳೆದವು. ಶೇ.10ರಿಂದ ಶೇ.50ರವರೆಗೆ ತಮ್ಮ ಷೇರುಗಳನ್ನು ಉಳಿಸಿಕೊಂಡ ಲಕ್ಷಾಂತರ ಸಣ್ಣ ಆಪರೇಟರ್ಗಳು ಒಂದಲ್ಲಾ ಒಂದು ಎಂಎಸ್ಓ ಜೊತೆಗೆ ಸೇರಲೇಬೇಕಾಯಿತು.
ಅಂದ ಹಾಗೆ ಈ ಡೆನ್ ಯಾರದ್ದು?
ಸಮೀರ್ ಮಂಚಂಡ ಮತ್ತು ರಾಘವ್ ಬೆಹ್ಲ್ ಇಬ್ಬರೂ ಪಾಲುದಾರರಾಗಿದ್ದ ಕಾಲದಿಂದಲೂ ಡೆನ್ ಬೆಳೆಯುತ್ತಾ, ಹಿಂದಿ ರಾಜ್ಯಗಳಲ್ಲೆಲ್ಲಾ ವ್ಯಾಪಿಸಿತು. ಸಿಎನ್ಎನ್ ಐಬಿಎನ್ ಹುಟ್ಟಿ ಹಾಕಿದ್ದ ರಾಘವ್ ಬೆಹ್ಲ್ ನಂತರ ಅದನ್ನು ಅಂಬಾನಿಗೆ ಮಾರಿದರು. ಅದರ ಜೊತೆಗೆ ಕೇಬಲ್ ಜಾಲದ ತಮ್ಮ ಷೇರುಗಳನ್ನೂ. ಇನ್ನು ಮಂಚಂಡ, ರಿಪಬ್ಲಿಕ್ ಟಿವಿಯಲ್ಲೂ ಪಾಲುದಾರಿಕೆ ಹೊಂದಿದ್ದ. ಅರ್ನಬ್ ಗೋಸ್ವಾಮಿ ರಿಪಬ್ಲಿಕ್ ಶುರು ಮಾಡಿದಾಗ ಕೇಬಲ್ ಜಾಲವನ್ನೂ ಹಿಡಿತಕ್ಕೆ ತೆಗೆದುಕೊಳ್ಳುವ ಯೋಜನೆಯೊಂದಿಗೇ ಹೊರಟಿದ್ದು.
ಆದರೆ, ಈಗಿನ ಪರಿಸ್ಥಿತಿ ಬೇರೆಯೇ ಆಗಿದೆ. ಡೆನ್ ಮತ್ತು ಹಾಥ್ವೇ ಎರಡರ ಮೇಲೂ ಸಂಪೂರ್ಣ ಹಿಡಿತ ಸಾಧಿಸಿರುವುದು ಆರ್ಐಜಿ – ಅಂದರೆ ರಿಲೆಯನ್ಸ್ ಇಂಡಸ್ಟ್ರೀಸ್ ಗ್ರೂಪ್.
ಟಿವಿ – 18 ಕೊಂಡ ನಂತರ, ಈ ಟಿವಿ ಸಮೂಹದ ಬಹುತೇಕ ಚಾನೆಲ್ಗಳನ್ನು ಮುಖೇಶ್ ಅಂಬಾನಿ ಒಡೆತನದ ರಿಲೆಯನ್ಸ್ ಕಂಪೆನಿಯೇ ಕೊಂಡಿತ್ತು. ಇಷ್ಟಲ್ಲದೇ ನಷ್ಟದಲ್ಲಿರುವ ಝೀ ಟಿವಿ ಸಮೂಹವನ್ನು ಕೊಳ್ಳಲೂ ಸಹಾ ಅಂಬಾನಿ ಹಾಗೂ ಭಾರ್ತಿ ಮಿತ್ತಲ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಟಿವಿ ಚಾನೆಲ್ಲೂ ಅಂಬಾನಿಯದ್ದೇ, ಕೇಬಲ್ ನೆಟ್ವರ್ಕ್ ಸಹಾ ಅವರದ್ದೇ ಆದರೆ ಏನಾಗಬಹುದು?
ಮೋದಿ ಸರ್ಕಾರದ ತಪ್ಪುಗಳು/ಹಗರಣಗಳನ್ನು ಬಯಲಿಗೆಳೆಯುತ್ತಿದ್ದ ಎಬಿಪಿ ಚಾನೆಲ್ಅನ್ನು ಮಣಿಸಲು ಸರ್ಕಾರ ಏನು ಮಾಡಿತೆಂಬುದನ್ನು ನಾವು ನೋಡಿದ್ದೇವೆ. ಸರ್ಕಾರೀ ಜಾಹೀರಾತುಗಳನ್ನು ನಿಲ್ಲಿಸುವುದು, ಸಿಗ್ನಲ್ ಸಹಾ ಇಲ್ಲದಂತೆ ಮಾಡುವುದು ಇತ್ಯಾದಿಗಳ ಮೂಲಕ ಎಬಿಪಿ ನ್ಯೂಸ್ ಶರಣಾಗಿ ಬಿಜೆಪಿಯ ಮುಂದೆ ಮಂಡಿಯೂರಬೇಕಾಯಿತು. ಅದರ ಪ್ರಸಿದ್ಧ ಸಂಪಾದಕ ಪುಣ್ಯಪ್ರಸೂನ್ ವಾಜಪೇಯಿ ಅವರನ್ನು ಕಿತ್ತೊಗೆಯಬೇಕಾಯಿತು. ಕಿತ್ತೊಗೆದ ಮರುದಿನದಿಂದಲೇ ‘ಎಲ್ಲವೂ ಸರಿಹೋಯಿತು’.
ಹೀಗಿದ್ದ ಮೇಲೆ ಮುಂದೆ ಸರ್ಕಾರಗಳು ಅಂಬಾನಿಯ ಮುಂದೆ ಮಂಡಿಯೂರಬೇಕಾಗಬಹುದು. ಏಕೆಂದರೆ, ತಮ್ಮ ವಿರುದ್ಧ ಸುದ್ದಿ ಪ್ರಸರಣ ಮಾಡುವ ಇತರ ಮಾಧ್ಯಮಗಳ ಮೇಲೂ ಹಿಡಿತ ಹೊಂದುವ ಅಂಬಾನಿ, ಸರ್ಕಾರಕ್ಕೇ ಸವಾಲು ಹಾಕಬಹುದು. ಇವೆಲ್ಲದರ ಕುರಿತು ಟ್ರಾಯ್ 2008ರಲ್ಲೇ ಎಚ್ಚರಿಸಿತ್ತು. ಮುದ್ರಣ ಮಾಧ್ಯಮ, ದೃಶ್ಯ ಮಾಧ್ಯಮ ಮತ್ತು ಕೇಬಲ್ ನಿರ್ವಹಣೆಯಲ್ಲಿ ದೊಡ್ಡ ಕಾರ್ಪೋರೇಟ್ ಏಕಸ್ವಾಮ್ಯಕ್ಕೆ ದಾರಿ ಮಾಡಿಕೊಟ್ಟರೆ ಆಗುವ ದುಷ್ಟರಿಣಾಮಗಳು ಗಂಭೀರವಾಗಿರುತ್ತದೆ. ಜನರ ಮನೋಲೋಕವನ್ನು ಹಿಡಿದಿಡುವ, ನಿರ್ಬಂಧಿಸುವ ಕೆಲಸವನ್ನು ಈಗಾಗಲೇ ಮಾಡುತ್ತಿರುವ ದೃಶ್ಯ ಮಾಧ್ಯಮಗಳು ಈ ಚಾಲದ ಮಾಲೀಕರ ಹಿತಾಸಕ್ತಿಗೆ ತಕ್ಕಂತೆ ದುಡಿಯಲಾರಂಭಿಸುತ್ತದೆ.
ಏಕಸ್ವಾಮ್ಯ ಸಾಧಿಸಿದ ಮೇಲೆ ಜನರಿಗೆ ಉಚಿತವಾಗಿ ಚಾನೆಲ್ ನೀಡುವ ಅಗತ್ಯವಿಲ್ಲ. ಎಲ್ಲಕ್ಕೂ ಹಣ ನಿಗದಿ ಮಾಡಿ ಹೆಚ್ಚಿಸುತ್ತಾ ಹೋದರೆ ಸಾಕು. ಮನರಂಜನೆ ಮತ್ತು ಸುದ್ದಿಯೂ ಮಾರುವ ಸರಕಾಗಿರುವಾಗ ಇದೇನು ಮಹಾ ಅಲ್ಲವೇ? ಆ ಧೈರ್ಯದಿಂದಲೇ ಚುನಾವಣೆ 4-5 ತಿಂಗಳಿರುವಾಗಲೇ ಸರ್ಕಾರದ ಕುಮ್ಮಕ್ಕಿನೊಂದಿಗೆ ಕೇಬಲ್ ಚಾನೆಲ್ಗಳ ಬೆಲೆಯನ್ನು ವಿಪರೀತವಾಗಿ ಹೆಚ್ಚಿಸಲಾಯಿತು.
ಇದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿಯಾದುದು.