ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ಮುಖಂಡ ಆರಿಫ್ ಜಮಾಲ್ ಅವರನ್ನು ಶನಿವಾರ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಅಪರಿಚಿತರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.
ಗುಂಡಿನ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಜಮಾಲ್ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದು, ಇದರ ಹಿಂದಿನ ಕಾರಣವನ್ನು ತಿಳಿಯಲು ಪ್ರಯತ್ನಿಸುತ್ತಿದ್ದಾರೆ. ಮೃತ ಜಮಾಲ್ ಎಐಎಂಐಎಂ ಸಿವಾನ್ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು.
नीतीश-तेजस्वी सरकार में बिहार में बेलगाम बदमाशों को खुली आज़ादी मिली हुई है, नीतीश-तेजस्वी जंगल राज में शनिवार (23 दिसंबर) की देर शाम सीवान में बदमाशों ने ऑल इंडिया मजलिस-ए-इत्तेहादुल मुस्लिमीन के पूर्व संयोजक #आरिफजमाल की गोली मारकर हत्या कर दी गई है।
याद रहे!!! AIMIM, सीमांचल… pic.twitter.com/ZxlqrkfO6e
— AIMIM (@aimim_national) December 24, 2023
ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಆರ್ಜೆಡಿ ವಕ್ತಾರ ಇಜಾಝ್ ಅಹ್ಮದ್, “ಇದು ದುಃಖಕರ ಸಂಗತಿ. ಹಂತಕರ ವಿರುದ್ದ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ನಮ್ಮ ಸರ್ಕಾರ ಶೂನ್ಯ ಅಪರಾಧ ಬಯಸುತ್ತದೆ. ಈ ಪ್ರಕರಣಲ್ಲಿ ತಪ್ಪಿತಸ್ಥರ ಸುಮ್ಮನೆ ಬಿಡುವ ಪ್ರಶ್ನೆಯಿಲ್ಲ. ಕಾನೂನು ರೀತಿಯ ಶಿಕ್ಷೆಗೆ ಗುರಿಪಡಿಸಲಾಗುವುದು” ಎಂದಿದ್ದಾರೆ.
ಮತ್ತೊಂದೆಡೆ, “ಮಹಾಘಟಬಂಧನ್ (ಆರ್ಜೆಡಿ-ಜೆಡಿಯು ಮತ್ತು ಕಾಂಗ್ರೆಸ್) ಸರ್ಕಾರವು ಬಿಹಾರದಲ್ಲಿ ‘ಜಂಗಲ್ ರಾಜ್’ ಅನ್ನು ಮರಳಿ ತಂದಿದೆ ಎಂದು ಬಿಜೆಪಿ ವಕ್ತಾರ ಅರವಿಂದ್ ಸಿಂಗ್ ಆರೋಪಿಸಿದ್ದಾರೆ. “ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜಸ್ವಿ ಯಾದವ್ ಉಪಮುಖ್ಯಮಂತ್ರಿ ಮತ್ತು ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಿರುವ ಬಿಹಾರದಲ್ಲಿ “ಜಂಗಲ್ ರಾಜ್” ಮರಳಿ ಬಂದಿರುವುದನ್ನು ನೋಡಬಹುದು” ಎಂದು ಅರವಿಂದ್ ಸಿಂಗ್ ಹೇಳಿದ್ದಾರೆ.
ಈ ಹಿಂದೆ 2021ರಲ್ಲಿ ಎಐಎಂಐಎಂನ ಅಸದ್ ಖಾನ್ ಅವರನ್ನು ಹಾಡ ಹಗಲೇ ಹೈದರಾಬಾದ್ನ ಜನನಿಬಿಡ ರಸ್ತೆಯೊಂದರಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಅಸದ್ ಖಾನ್ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದರು. ಅವರದ್ದು ಹಳೆಯ “ಸೇಡಿನ ಕೊಲೆ” ಎಂದು ಶಂಕಿಸಿರುವುದಾಗಿ ಪೊಲೀಸರು ತಿಳಿಸಿದ್ದರು.
ಆರ್ಎಲ್ಜೆಡಿ ನಾಯಕನಿಗೆ ಗುಂಡೇಟು:
ಎಂಐಎಂ ನಾಯಕ ಜಮಾಲ್ ಆರಿಫ್ ಹತ್ಯೆ ಬೆನ್ನಲ್ಲೇ ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಜನತಾದಳ (ಆರ್ಎಎಲ್ಜೆಡಿ) ಪಕ್ಷದ ಯುವ ಮುಖಂಡನ ಮೇಲೆ ಬಿಹಾರದ ಶರನ್ ಜಿಲ್ಲೆಯಲ್ಲಿ ಭಾನುವಾರ ಗುಂಡಿನ ದಾಳಿ ನಡೆದಿದೆ.
ಉತ್ಸವ್ ಸಿಂಗ್ (19) ಗುಂಡೇಟು ತಿಂದ ವ್ಯಕ್ತಿ. ಇವರು ಆರ್ಎಲ್ಜೆಡಿ ಪಕ್ಷದ ಯುವ ಘಟಕದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಭಾನುವಾರ ಬೆಳಿಗ್ಗೆ 9.50ರ ಸುಮಾರಿಗೆ ಮೆಹಿಯಾ ಸಮೀಪ ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು ಅಪರಿಚಿತರು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಉತ್ಸವ್ ಸಿಂಗ್ ಗಂಭೀರವಾಗಿ ಗಾಯಗೊಂಡಿದ್ದು, ಪಾಟ್ನಾದ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಪೂಂಛ್ನಲ್ಲಿ ಸೈನಿಕರ ಚಿತ್ರಹಿಂಸೆಯಿಂದ ಮೂವರು ನಾಗರಿಕರು ಸಾವು?