INDIA ಮೈತ್ರಿಕೂಟಕ್ಕೆ ಬಹುಜನ ಸಮಾಜಪಕ್ಷವನ್ನು ಸೇರಿಸಬಾರದು, ಬಿಎಸ್ಪಿಯನ್ನು ಸೇರಿಸಿದರೆ ನಮ್ಮ ಪಕ್ಷವು INDIA ಮೈತ್ರಿಕೂಟವನ್ನು ತೊರೆಯಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಬೆದರಿಕೆ ಹಾಕಿದ್ದಾರೆ.
ಡಿ.19ರಂದು ನಡೆದ INDIA ಸಭೆಯಲ್ಲಿ ಬಹುಜನ ಸಮಾಜ ಪಕ್ಷವನ್ನು ಒಕ್ಕೂಟಕ್ಕೆ ಸೇರಿಸುವ ಬಗ್ಗೆ ಅಖಿಲೇಶ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದು, ಹಾಜರಿದ್ದ ಹೆಚ್ಚಿನ ವಿರೋಧಪಕ್ಷದ ನಾಯಕರನ್ನು ಈ ಬೆಳವಣಿಗೆ ಅಚ್ಚರಿಗೊಳಿಸಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮಾಯಾವತಿ ಅವರನ್ನು ಒಕ್ಕೂಟಕ್ಕೆ ಸೇರಿಸುವ ಪ್ರಯತ್ನ ನಡೆಯುತ್ತಿದೆ. ಬಹುಜನ ಸಮಾಜ ಪಕ್ಷವನ್ನು ಸೇರ್ಪಡೆ ಮಾಡಿದರೆ ತಮ್ಮ ಪಕ್ಷವು ಒಕ್ಕೂಟವನ್ನು ತೊರೆಯಲಿದೆ ಎಂದು ಅಖಿಲೇಶ್ ಸಭೆಯಲ್ಲಿ ಘೋಷಿಸಿದ್ದರು. ಈವರೆಗೆ ನಡೆದ ಒಕ್ಕೂಟದ 4 ಸಭೆಗಳಲ್ಲಿ ಬಿಎಸ್ಪಿ ಸೇರ್ಪಡೆ ಕುರಿತು ಯಾವುದೇ ಚರ್ಚೆ ನಡೆಯದ ಕಾರಣ ಸಭೆಯಲ್ಲಿ ಉಪಸ್ಥಿತರಿದ್ದ ವಿರೋಧ ಪಕ್ಷಗಳ ಮುಖಂಡರು ಎಸ್ಪಿ ಮುಖ್ಯಸ್ಥರ ಹೇಳಿಕೆಯಿಂದ ಆಚ್ಚರಿಗೊಂಡಿದ್ದರು.
ಮೂಲಗಳ ಪ್ರಕಾರ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಬಿಎಸ್ಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಲು ಉತ್ಸುಕವಾಗಿದೆ ಎಂದು ಅಖಿಲೇಶ್ ಭಾವಿಸಿದ್ದಾರೆ ಮತ್ತು ಬಿಎಸ್ಪಿಯನ್ನು ಸೇರ್ಪಡೆಗೊಳಿಸುವ ಮೊದಲು ಅಖಿಲೇಶ್ ಈ ಬಗ್ಗೆ ಎಚ್ಚರಿಕೆಯನ್ನು ನೀಡಲು ಬಯಸಿದ್ದರು ಎಂದು ಹೇಳಲಾಗಿದೆ.
ಇಂಡಿಯಾ ಮೈತ್ರಿಕೂಟ ಹಾಗೂ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದಿಂದ ದೂರವಿರುವ ಮಾಯಾವತಿ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿ ಜನರು ಮತ್ತು ದೇಶಕ್ಕಾಗಿ ಭವಿಷ್ಯದಲ್ಲಿ ಯಾರಿಗೆ ಯಾರ ಸಹಾಯ ಬೇಕೆಂಬುದು ಯಾರಿಗೂ ತಿಳಿದಿಲ್ಲ. ಅಖಿಲೇಶ್ ಯಾದವ್ ಅವರನ್ನು ನೇರವಾಗಿ ಗುರಿಯಾಗಿಸಿ ಮಾತನಾಡಿದ ಮಾಯಾವತಿ ಇಂತಹ ಹೇಳಿಕೆಗಳನ್ನು ನೀಡುವ ಪಕ್ಷಗಳು ನಂತರ ಮುಜುಗರಕ್ಕೊಳಗಾಗಬೇಕಾಗಬಹುದು ಎಂದು ಹೇಳಿದ್ದಾರೆ. ಅಖಿಲೇಶ್ ವಿರುದ್ಧ ತಕ್ಷಣ ಮಾಯಾವತಿ ತಿರುಗೇಟು ನೀಡಿರುವುದು ಅವರು ವಿಪಕ್ಷದೊಂದಿಗೆ ಹೊಂದಾಣಿಕೆಗೆ ಸಿದ್ಧ ಎಂಬುದನ್ನು ಸೂಚಿಸುತ್ತದೆ ಎಂಬುದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
2024ರ ಚುನಾವಣೆಯಲ್ಲಿ ಎನ್ಡಿಎ ಮೈತ್ರಿ ಕೂಟಕ್ಕೆ ಪ್ರತಿಯಾಗಿ ಪ್ರತಿಪಕ್ಷಗಳು INDIA ಮೈತ್ರಿಕೂಟವನ್ನು ರಚಿಸಿತ್ತು. INDIA ಮೈತ್ರಿಕೂಟದಲ್ಲಿ ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಆಮ್ ಆದ್ಮಿ ಪಾರ್ಟಿ, ಜೆಡಿಯು, ಆರ್ಜೆಡಿ, ಎನ್ಸಿಪಿ (ಶರದ್ ಪವಾರ್), ಜೆಎಂಎಂ, ಶಿವಸೇನೆ(ಉದ್ಧವ್), ಎಸ್ಪಿ, ಆರ್ಎಲ್ಡಿ, ಅಪ್ನಾದಳ (ಕಾಮೇರವಾಡಿ), ನ್ಯಾಷನಲ್ ಕಾನ್ಫರೆನ್ಸ್, ಪಿಡಿಪಿ, ಸಿಪಿಐ (ಎಂ), ಸಿಪಿಐ, ಆರ್ಎಸ್ಪಿ, ಎಎಫ್ಬಿ, ಎಂಡಿಎಂಕೆ, ವಿಸಿಕೆ, ಕೆಎಂಡಿಕೆ, ಎಂಎಂಕೆ, ಐಯುಎಂಎಲ್, ಕೇರಳ ಕಾಂಗ್ರೆಸ್, ಕೇರಳ ಕಾಂಗ್ರೆಸ್ (ಜೆ), ಸಿಪಿಐ (ಎಂ) ಎಲ್ ಸೇರಿ 26 ಪಕ್ಷಗಳು ಇವೆ. ಆದರೆ ಬಿಎಸ್ಪಿ ಈವೆರೆಗೆ INDIA ಮೈತ್ರಿಕೂಟ ಅಥವಾ ಎನ್ಡಿಎ ಮೈತ್ರಿ ಕೂಟಕ್ಕೆ ಸೇರದೆ ಸ್ವತಂತ್ರವಾಗಿ ಉಳಿದಿದೆ.
ಇದನ್ನು ಓದಿ: ಪೂಂಛ್ನಲ್ಲಿ ಸೈನಿಕರ ಚಿತ್ರಹಿಂಸೆಯಿಂದ ಮೂವರು ನಾಗರಿಕರು ಸಾವು?