ಕನ್ನಡದ ಖ್ಯಾತ ನಟ ಪುನೀತ್ ರಾಜ್ಕುಮಾರ್ ಶುಕ್ರವಾರ ಹೃದಯಾಘಾತಕ್ಕೊಳಗಾಗಿ ನಿಧನ ಹೊಂದಿದ್ದಾರೆ. ಪ್ರತಿಭಾವಂತ ನಟನ ಅಕಾಲಿಕ ನಿಧನಕ್ಕೆ ದೇಶದಾದ್ಯಂತ ಸಂತಾಪ ವ್ಯಕ್ತವಾಗಿದೆ. ಅವರು ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೆ ಒಳಗಾಗಿದ್ದರು. ಅವರ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕಾಗಿ ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಇಡಲಾಗಿದ್ದು, ನಾಳೆ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ಇಂದು ಸಂಜೆಗೆ ನಟನ ಅಂತ್ಯಸಂಸ್ಕಾರ ನಡೆಯಲಿದೆ ಎಂದು ವರದಿಯಾಗಿತ್ತು. ನಿರ್ದೇಶಕ ರಾಕ್ಲೈನ್ ವೆಂಕಟೇಶ್ ಕೂಡಾ ಇಂದು ಸಂಜೆ ಅಂತಿಮ ಕ್ರಿಯೆ ನಡೆಯಲಿದೆ ಎಂದು ಹೇಳಿದ್ದರು. ಆದರೆ ಶನಿವಾರ ಮಧ್ಯಾಹ್ನ ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಮುಖ್ಯಮಂತ್ರಿ, “ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪುನೀತ್ ನಿಧನ: ಅರ್ಧಕ್ಕೆ ನಿಂತು ಹೋಯಿತು ಸಾಲು ಸಾಲು ಸಿನಿಮಾ
“ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ. ಅವರ ಮಗಳು ದೆಹಲಿ ತಲುಪಿ, ಬೆಂಗಳೂರು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾರೆ.ಅವರು ಬಹುತೇಕವಾಗಿ 5:30, 6:00 ಗಂಟೆಗೆ ತಲುಪಲಿದ್ದಾರೆ. ಇಲ್ಲೂ ಜನಸಂದಣಿ ಹೆಚ್ಚಾಗಿದ್ದು, ಬಹಳಷ್ಟು ಜನರಿಗೆ ಅವರ ಅಂತಿಮ ದರ್ಶನ ಪಡೆಯುವ ಇಚ್ಛೆ ಇದೆ. ಆರುಗಂಟೆಯ ನಂತರ ಕತ್ತಲಾದ ಮೇಲೆ ಸಣ್ಣಜಾಗದಲ್ಲಿ ಅಂತ್ಯಕ್ರಿಯೆ ಮಾಡುವುದು ಸವಾಲಿನ ಕೆಲಸ” ಎಂದು ಹೇಳಿದ್ದಾರೆ.
“ಕುಟುಂಬ ಸದಸ್ಯರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಜೊತೆಗೆ ಚರ್ಚೆ ಮಾಡಿ, ಅಂತ್ಯಕ್ರಿಯೆಯನ್ನು ನಾಳೆ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇವೆ. ನಾಳೆ ಬೆಳಗಿನ ಜಾವದವರೆಗೂ ನಟನ ದರ್ಶನಕ್ಕೆ ಅನುಕೂಲ ಮಾಡಲಾಗುವುದು. ಎಲ್ಲರೂ ನಿಧಾನವಾಗಿ, ಶಾಂತವಾಗಿ ಸಾಲಿನಲ್ಲಿ ಬಂದು ದರ್ಶನ ಮಾಡಬಹುದು” ಎಂದು ಬೊಮ್ಮಾಯಿ ಹೇಳಿದ್ದಾರೆ.
ಪುನೀತ್ ಅವರ ಸಹೋದರ ರಾಘವೇಂದ್ರ ರಾಜ್ಕುಮಾರ್ ಅವರ ಮಗ ವಿನಯ್ ರಾಜ್ಕುಮಾರ್ ಅಂತಿಮ ವಿಧಿವಿಧಾನವನ್ನು ನೆರೆವೇರಿಸಲಿದ್ದಾರೆ ಎಂದು ತಿಳಿದು ಬಂದಿದೆ. ಅಂತ್ಯ ಸಂಸ್ಕಾರಕ್ಕೆ ಕಂಠೀರವ ಸ್ಟುಡಿಯೋದಲ್ಲಿ ಎಲ್ಲಾ ವ್ಯವಸ್ಯೆ ಮಾಡಿಕೊಳ್ಳಲಾಗಿದ್ದು, ಡಾ. ರಾಜ್ ಕುಮಾರ್ ಸಮಾಧಿಯಿಂದ 125 ಅಡಿ ಹಾಗೂ ಪಾರ್ವತಮ್ಮ ಸಮಾಧಿಯಿಂದ 45 ಅಡಿ ದೂರದಲ್ಲಿ ಪುನೀತ್ ರಾಜ್ಕುಮಾರ್ ಅಂತ್ಯಸಂಸ್ಕಾರ ನಡೆಯಲಿದೆ. ಈ ನಡುವೆ ಪುನೀತ್ ಅವರ ಮಗಳು ಧೃತಿ ಅಮೇರಿಕದಿಂದ ಹೊರಟಿದ್ದು, ಸಂಜೆ ವೇಳೆಗೆ ಬೆಂಗಳೂರು ತಲುಪಲಿದ್ದಾರೆ ಎಂದು ವರದಿಯಾಗಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಪುನೀತ್ ರಾಜ್ಕುಮಾರ್ ಅವರ ಅಂತಿಮ ದರ್ಶನ ಪಡೆದು ಕುಟುಂಬಿಕರಿಗೆ ಸಾಂತ್ವಾನ ಹೇಳಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್ಚೆಕ್: ಜಿಮ್ನಲ್ಲಿ ಕುಸಿದು ಬೀಳುತ್ತಿರುವ ಈ ವಿಡಿಯೊ ‘ಪುನೀತ್ ರಾಜ್ಕುಮಾರ್’ ಅವರದಲ್ಲ