Homeಅಂಕಣಗಳುಬಹುಜನ ಭಾರತ; ಫ್ಯಾಸಿಸ್ಟ್ ಕನ್ನಡಿಯನ್ನು ಒಡೆಯಿರೆಂಬ ಹರಾರಿ ಕಿವಿಮಾತು

ಬಹುಜನ ಭಾರತ; ಫ್ಯಾಸಿಸ್ಟ್ ಕನ್ನಡಿಯನ್ನು ಒಡೆಯಿರೆಂಬ ಹರಾರಿ ಕಿವಿಮಾತು

- Advertisement -
- Advertisement -

ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನದ ಮಹಾಸ್ಫೋಟಕ್ಕೆ ಭೂಮಂಡಲ ಸಾಕ್ಷಿಯಾಗಿದೆ. ಮಾಹಿತಿ ಅಥವಾ ಡೇಟಾವನ್ನು ಹೊಸ ಪ್ರಬಲ ಅಸ್ತ್ರ ಎಂದು ಬಣ್ಣಿಸಲಾಗುತ್ತಿದೆ. ಡೇಟಾವನ್ನು ನಿಯಂತ್ರಿಸುವಾತನೇ ಸರ್ವಶಕ್ತ ಎಂಬುದು ಈ ಯುಗದ ಹೊಸ ಸತ್ಯ.

ಚಿಂತಕರು, ತಂತ್ರಜ್ಞನಿಪುಣರು ಕೆಲವು ವರ್ಷಗಳಿಂದ ಪ್ರತಿಪಾದಿಸುತ್ತಾ ಬಂದಿರುವ ಈ ಅಂಶ ದಿನಗಳೆದಂತೆ ಮತ್ತಷ್ಟು ಗಟ್ಟಿಯಾಗಿ ಸ್ಫುಟವಾಗಿ ಹರಳುಗಟ್ಟತೊಡಗಿದೆ. ಜೊತೆಜೊತೆಗೆ ಸರ್ವಾಧಿಕಾರಗಳು, ಧ್ರುವೀಕರಣ ರಾಜಕಾರಣ ಬೇರಿಳಿಸುತ್ತಿರುವುದನ್ನು ಕಾಣುತ್ತಿದ್ದೇವೆ.

ತಮ್ಮ ಮೇಲೆ ಪ್ರಯೋಗಿಸಲಾಗಿರುವ ಮಂಕುಬೂದಿಯನ್ನು ಜನಸಮುದಾಯಗಳು ಕೊಡವಿಕೊಳ್ಳದಿದ್ದರೆ ಈ ಅಪಾಯ ಕೈಮೀರಲಿದೆ ಮತ್ತು ಗಹಗಹಿಸಲಿದೆ. ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.

ಈ ಸನ್ನಿವೇಶದಲ್ಲಿ ಇಸ್ರೇಲಿ ಮೂಲದ ಜಗತ್ಪ್ರಸಿದ್ಧ ಯುವ ಚಿಂತಕ ಯುವಾಲ್ ನೋವಾ ಹರಾರಿ ಅವರ ಕೆಳಕಂಡ ಚಿಂತನೆಗೆ ಕಿವಿಗೊಟ್ಟು ಧೇನಿಸಬೇಕಿದೆ.

ಹರಾರಿ ಹೇಳುತ್ತಾರೆ… ಆರಂಭದಲ್ಲಿ ಭೂವಿಸ್ತಾರ, ಆನಂತರ ಯಂತ್ರಗಳು, ಇದೀಗ ಡೇಟಾ ಬಹುದೊಡ್ಡ ಆಸ್ತಿಯೆಂದು ಪರಿಗಣಿಸಲಾಗಿದೆ. ಡೇಟಾವನ್ನು ನಿಯಂತ್ರಿಸುವವರು ಭಾರೀ ಜನಸಮೂಹಗಳನ್ನು ಮತ್ತು ಆ ಮೂಲಕ ಅಧಿಕಾರವನ್ನು ನಿಯಂತ್ರಿಸುತ್ತಾರೆ ಎನ್ನುವ ವಾದ ಊರ್ಜಿತಗೊಂಡಿದೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉಂಟಾಗಿರುವ ಕ್ರಾಂತಿಯೇ ಉದಾರವಾದಿ ಜನತಂತ್ರದ ಪಾಲಿಗೆ ಬಲು ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. ಮಾಹಿತಿ ತಂತ್ರಜ್ಞಾನವು ಕಟಾವು ಮಾಡಿರುವ ಡೇಟಾದ ಮಹಾ ಇಳುವರಿಯು ಜನತಂತ್ರಗಳಿಗೆ ಶಕ್ತಿ ತುಂಬುವ ಬದಲು ಸರ್ವಾಧಿಕಾರಗಳ ಕೈ ಬಲಪಡಿಸಲಿದೆ

ಸರ್ವಾಧಿಕಾರಗಳು ತಮ್ಮ ಲಾಭಕ್ಕಾಗಿ ಎಲ್ಲ ಡೇಟಾವನ್ನು ಒಂದೆಡೆ ಕೇಂದ್ರೀಕರಿಸುವಲ್ಲಿ ಯಶಸ್ವಿಯಾಗಿವೆ. ತಂತ್ರಜ್ಞಾನ ಬೆಳೆದಂತೆಲ್ಲ ಅಪಾರ ಡೇಟಾವನ್ನು ಒಂದೆಡೆ ಸಂಸ್ಕರಿಸಿ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಸಲೀಸಾಗಿ ಹೋಗಿದೆ.

ಮಾಹಿತಿ ತಂತ್ರಜ್ಞಾನ ಮತ್ತು ಜೀವತಂತ್ರಜ್ಞಾನ (ಐಟಿ ಮತ್ತು ಬಿಟಿ) ಒಂದರೊಡನೆ ಮತ್ತೊಂದು ವಿಲೀನಗೊಳ್ಳುವ ವಿದ್ಯಮಾನವು ’ಆಲ್ಗರಿದಮ್’ಗಳನ್ನು ಸೃಷ್ಟಿಸಿದೆ. ಈ ’ಆಲ್ಗರಿದಮ್’ಗಳು ವ್ಯಕ್ತಿಗಳ ಅನಿಸಿಕೆ ಆಶಯ ಆಯ್ಕೆಗಳನ್ನು ಖುದ್ದು ಅವರೇ ಅರಿತಿರುವುದಕ್ಕಿಂತ ಹೆಚ್ಚು ನಿಖರವಾಗಿ ನಿಚ್ಚಳವಾಗಿ ಅರಿಯಬಲ್ಲವು. ಸರ್ಕಾರದಂತಹ ಸಂಸ್ಥೆಗಳು ಈ ತಂತ್ರಜ್ಞಾನದ ಲಾಭ ಪಡೆದು ಜನಸಮುದಾಯಗಳ ಒಲವು ನಿಲುವುಗಳನ್ನು ಮುಂದಾಗಿಯೇ ಕಂಡುಕೊಳ್ಳಬಲ್ಲವು. ಆವರ ಭಾವನೆಗಳನ್ನು ತಮಗೆ ಬೇಕಾದಂತೆ ತಿದ್ದಿ ತೀಡಬಲ್ಲವು. ಉದಾಹರಣೆಗೆ ತನ್ನ ಜನರಿಗೆ ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸಲಾರದ ಸರ್ವಾಧಿಕಾರಿಯೊಬ್ಬನು ತನ್ನ ಜನರು ತನ್ನನ್ನು ಪ್ರೀತಿಸುವಂತೆಯೂ ಪ್ರತಿಪಕ್ಷಗಳನ್ನು ದ್ವೇಷಿಸುವಂತೆಯೂ ಮಾಡಬಲ್ಲ. ಅಂತಹ ವಿರೋಧಾಭಾಸದ ಪರಿಸ್ಥಿತಿಯಲ್ಲಿ ಜನತಂತ್ರ ಉಳಿದು ಬೆಳೆಯಲಾರದು. ಅಂತಹ ವಾತಾವರಣದಲ್ಲಿ ಜನತಂತ್ರವು ಸರಿತಪ್ಪುಗಳನ್ನು ವಿವೇಚಿಸುವ ಮಾನವ ಆಲೋಚನಾ ಶಕ್ತಿಯ ಆಧಾರವನ್ನು ಕಳೆದುಕೊಳ್ಳುತ್ತದೆ. ಬುದ್ಧಿಯ ಜಾಗವನ್ನು ಭಾವುಕತೆ ಆವರಿಸುತ್ತದೆ. ನಮ್ಮ ಭಾವನೆಗಳನ್ನು ಹ್ಯಾಕ್ ಮಾಡಿ ಧ್ರುವೀಕರಣ ಮಾಡಿ ಜನತಂತ್ರವನ್ನು ನಾಶ ಮಾಡಲು ಬಳಸಿಕೊಳ್ಳಲಾಗುತ್ತದೆ. ಜನತಂತ್ರವು ಕೇವಲ ಒಂದು ಭಾವನಾತ್ಮಕ ಗೊಂಬೆಯಾಟ ಆಗಿಬಿಡುತ್ತದೆ.

ಇಂತಹ ಅಪಾಯವನ್ನು ತಪ್ಪಿಸಲು ಭಾರೀ ಡೇಟಾ ಒಂದೇ ಕಡೆ ಕೇಂದ್ರೀಕೃತ ಆಗುವುದನ್ನು ತಪ್ಪಿಸಬೇಕು. ಡೇಟಾ ನಿಯಂತ್ರಿಸುವವರು ನಮ್ಮ ಭಾವನೆಗಳನ್ನು ತಮ್ಮ ಅಗತ್ಯಗಳಿಗೆ ತಕ್ಕಂತೆ ತಿದ್ದಿ ತೀಡಿಕೊಳ್ಳುವುದಕ್ಕೆ ಆಗ ಸಾಧ್ಯವಾಗುವುದಿಲ್ಲ.

ದೈನಂದಿನ ಗ್ರಾಹಕ ಸರಕು ಸರಂಜಾಮುಗಳನ್ನು ನಮಗೆ ಮಾರಾಟ ಮಾಡಲು ಮಾಹಿತಿ ತಂತ್ರಜ್ಞಾನದ ಆಲ್ಗರಿದಂ ವಿಧಾನದ ಪ್ರಯೋಗ ಈಗಾಗಲೆ ಜಾರಿಯಲ್ಲಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಜನತಂತ್ರದ ಶತ್ರುಗಳು ಇದೇ ವಿಧಾನವನ್ನು ಅನುಸರಿಸಿ ಭಯ, ದ್ವೇಷ ಹಾಗೂ ಒಣಪ್ರತಿಷ್ಠೆಗಳನ್ನು ಮಾರಾಟ ಮಾಡುತ್ತಿದ್ದಾರೆ. ಇವುಗಳ ಮಾರಾಟ ಶೂನ್ಯದಲ್ಲಿ ಸಾಧ್ಯವಿಲ್ಲ. ಅವರು ಜನಸಮೂಹಗಳ ದೌರ್ಬಲ್ಯಗಳನ್ನು ಗುರುತಿಸಿ ಅವುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ತಮ್ಮ ದೌರ್ಬಲ್ಯಗಳು ಜನತಂತ್ರದ ಶತ್ರುಗಳ ಕೈಯಲ್ಲಿನ ಅಸ್ತ್ರವಾಗದಂತೆ ಜನಸಮೂಹಗಳು ಜಾಗ್ರತೆ ವಹಿಸಬೇಕು. ದೌರ್ಬಲ್ಯಗಳನ್ನು ಅರಿತು ಇಂತಹ ಎಚ್ಚರಿಕೆ ವಹಿಸುವುದು ಜನರನ್ನು ಫ್ಯಾಸಿಸ್ಟ್ ಕನ್ನಡಿಯಿಂದಲೂ ಕಾಪಾಡುತ್ತದೆ. ಫ್ಯಾಸಿಸಮ್ ನಮ್ಮ ಒಣಪ್ರತಿಷ್ಠೆಯಂತಹ ದೌರ್ಬಲ್ಯಗಳನ್ನು ಬಳಸಿಕೊಂಡು ಬೇರೂರುತ್ತದೆ. ನಾವು ಇರುವುದಕ್ಕಿಂತಲೂ ಹೆಚ್ಚು ಸುಂದರವಾಗಿ ನಮ್ಮನ್ನು ತೋರುತ್ತದೆ. ನಮ್ಮನ್ನು ನಾವು ಚೆನ್ನಾಗಿ ಬಲ್ಲೆವಾದರೆ ಈ ಮೋಹಪರವಶತೆಗೆ ಬಲಿ ಬೀಳುವುದು ಸಾಧ್ಯವಿಲ್ಲ. ಸರ್ವಾಧಿಕಾರಿಗಳು ನಿಮ್ಮ ಕಣ್ಣೆದುರಿಗೆ ಫ್ಯಾಸಿಸ್ಟ್ ಕನ್ನಡಿಯೊಂದನ್ನು ಇಡುತ್ತಾರೆ. ಆ ಕನ್ನಡಿಯು ನಿಮ್ಮ ಎಲ್ಲ ಕುರೂಪವನ್ನು ಅಡಗಿಸಿಟ್ಟು ನೀವು ಇರುವುದಕ್ಕಿಂತಲೂ ಹೆಚ್ಚು ಸುಂದರವಾಗಿ ತೋರಿಸುತ್ತದೆ. ನಿಮಗೆ ವಾಸ್ತವದಲ್ಲಿ ಇಲ್ಲದಸಲ್ಲದ ಪ್ರಾಮುಖ್ಯತೆಯನ್ನು ತೊಡಿಸುತ್ತದೆ. ಈ ಅವಾಸ್ತವಿಕ ಕನ್ನಡಿಯನ್ನು ಒಡೆಯಿರಿ….


ಇದನ್ನೂ ಓದಿ: ಬಹುಜನ ಭಾರತ; ಜನತಂತ್ರದ ಸ್ತಂಭಗಳ ಮೇಲೆ ನಡೆದ ಕರಾಳ ದಾಳಿ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...

ಕ್ಯಾಂಪಸ್ ಜಾತಿ ತಾರತಮ್ಯ ವಿರುದ್ಧದ ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ರಾಜ್ಯ ಸಚಿವ ಸಂಪುಟ ಗುರುವಾರ (ಏ.16) ರಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ'ಗೆ ಅನುಮೋದನೆ ನೀಡಿತು. ಜೊತೆಗೆ, ಪ್ರಮುಖ ಮೂಲಸೌಕರ್ಯ ಮತ್ತು...