ರಾಜ್ಯದಲ್ಲಿ ಪ್ರಸ್ತುತ ಸದ್ದು ಮಾಡುತ್ತಿರುವ ಆರ್.ಆರ್. ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ಮಾಡಿದ ಕಾರಣಕ್ಕಾಗಿ ನಟ ದರ್ಶನ್ ಇದೀಗ ಪೇಚಿಗೆ ಸಿಲುಕಿದ್ದಾರೆ. ಪ್ರಚಾರದ ಸಂದರ್ಭದಲ್ಲಿ ನಟ ದರ್ಶನ್ ಮಾಸ್ಕ್ ಹಾಕಿಲ್ಲ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿಲ್ಲ ಎಂಬ ಕಾರಣಕ್ಕೆ ಇದೀಗ ಅವರ ಮೇಲೆ ಕೋವಿಡ್-19 ಮಾರ್ಗಸೂಚಿಯನ್ನು ಉಲ್ಲಂಘಿಸಿದ ಆರೋಪದ ಮೇಲೆ ದೂರು ದಾಖಲಾಗಿದೆ.
ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ಶಾಸಕ ಮುನಿರತ್ನ ನಂತರ ಪಕ್ಷಾಂತರ ಮಾಡಿದ್ದ ಕಾರಣಕ್ಕೆ ಪ್ರಸ್ತುತ ಆರ್.ಆರ್. ನಗರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಆದರೆ, ಈ ಕ್ಷೇತ್ರಕ್ಕೆ ಚುನಾವಣೆ ದಿನಾಂಕ ಘೋಷಣೆಯಾದ ದಿನದಿಂದ ರಾಜ್ಯ ರಾಜಕೀಯದಲ್ಲಿ ಕೂತೂಹಲ ಮನೆ ಮಾಡಿದೆ. ಅಲ್ಲದೆ, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟಿ ಖುಷ್ಬೂ, ನಟ ದರ್ಶನ್ ಸೇರಿದಂತೆ ಅನೇಕ ಸ್ಟಾರ್ ನಟ ನಟಿಯರು ಕ್ಷೇತ್ರಕ್ಕೆ ಆಗಮಿಸಿ ಪ್ರಚಾರ ಮಾಡುತ್ತಿದ್ದಾರೆ.
ನಟ ದರ್ಶನ್ ಕಳೆದ ಶುಕ್ರವಾರ ಮುನಿರತ್ನ ಪರ ಪ್ರಚಾರ ನಡೆಸಿದ್ದರು. ಆದರೆ, ಈ ಸಂದರ್ಭದಲ್ಲಿ ಅವರು ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೋವಿಡ್-19 ಮಾರ್ಗಸೂಚಿಯನ್ನು ಉಲ್ಲಂಘಿಸಿದ್ದರು. ಈ ದೃಶ್ಯಗಳು ಸುದ್ದಿ ಮಾಧ್ಯಮದಲ್ಲೂ ಸಹ ಬಿತ್ತರವಾಗಿತ್ತು.
ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಇದೀಗ ನಟ ದರ್ಶನ್ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಸಂಬಂಧ ಮಾತನಾಡಿರುವ ಅವರು, “ನಮ್ಮ ಸಿಬ್ಬಂದಿ ಸೆರೆಹಿಡಿದ ಪೋಟೋ ಮತ್ತು ವಿಡಿಯೋಗಳ ಆಧಾರದ ಮೇಲೆ ನಟ ದರ್ಶನ್ ವಿರುದ್ಧ ಸೆಕ್ಷನ್ 205ರ ಅಡಿಯಲ್ಲಿ ದೂರು ದಾಖಲಿಸಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: 5 ಕೋಟಿ ಮೌಲ್ಯದ 34,000 ಸೆಟ್ಟಾಪ್ ಬಾಕ್ಸ್ ಹಂಚಿದ BJP ಅಭ್ಯರ್ಥಿ ಮುನಿರತ್ನ; ದೂರು…