Homeರಾಜಕೀಯದನ ದಂಧೆದಾರ ಹುಸೇನಬ್ಬನ  ಕೊಂದುತಿಂದ ಭಜರಂಗಿಗಳು!

ದನ ದಂಧೆದಾರ ಹುಸೇನಬ್ಬನ  ಕೊಂದುತಿಂದ ಭಜರಂಗಿಗಳು!

- Advertisement -
ಕರಾವಳಿಯಲ್ಲಿ ಪೊಲೀಸ್-ಭಜರಂಗಿ ಪಾತಕ
ಹಿಂದೂತ್ವದ ‘ಕರ್ಮ’ಭೂಮಿ ಕರಾವಳಿಯ ಪೊಲೀಸ್ ಇಲಾಖೆಯಲ್ಲಿ ಸದ್ದಿಲ್ಲದೆ ಭಜರಂಗೀಕರಣದ ಕವಾಯತು ನಡೆಯುತ್ತಿದೆಯಾ? ಇಂಥದೊಂದು ಅನುಮಾನ ಎದ್ದು ಅದ್ಯಾವುದೋ ಕಾಲವಾಗಿ ಹೋಗಿದೆ. ಆದರೆ ಇತ್ತೀಚಿನ ಹಲವು ಹಿಂದೂತ್ವದ ಹರಾಮಿ ಕಾರ್ಯಾಚರಣೆಗಳು ಕರಾವಳಿಯ ತ್ರಿವಳಿ ಜಿಲ್ಲೆಯ ಪೊಲೀಸ್ ಇಲಾಖೆ ಕೇಸರೀಕರಣ ಆಗುತ್ತಿರುವ ಸಂಶಯವನ್ನು ನಿಸ್ಸಂಶಯವಾಗಿ ಸಾಬೀತುಪಡಿಸಿಬಿಟ್ಟಿದೆ! ಸಂಘಪರಿವಾರದ ಅನೈತಿಕ ಪೊಲೀಸರಿಗೆ, ಅಸಲಿ ಪೊಲೀಸರು ಪ್ರತ್ಯಕ್ಷ-ಅಪ್ರತ್ಯಕ್ಷವಾಗಿ ಕಾಯಾ-ವಾಚಾ-ಮನಸಾ ನೆರವಾದ ನಿದರ್ಶನದ ಹಲವು ಕುರುಹುಗಳು ಕರಾವಳಿಯ ಮೂರುಜಿಲ್ಲೆಗಳ ಉದ್ದಗಲದಲ್ಲಿದೆ.
  ಹಿಂದುತ್ವದ ಅಮಲೇರಿಸಿಕೊಂಡಿರುವ ಪೊಲೀಸರು ಖಾಕಿ ಬಲದಲ್ಲಿ ಮುಗ್ಧ ಮುಸ್ಲಿಂ-ಕ್ರಿಶ್ಚಿಯನ್ನರ ಸತಾಯಿಸಿ ಭಜರಂಗಿ ಬಾಯಿಜಾನ್‍ಗಳ ಪಾತಕ ಕರಾಮತ್ತಿಗೆ ಅನುಕೂಲ ಮಾಡಿಕೊಡುವುದು ಕರಾವಳಿ ಪೊಲೀಸ್ ಇಲಾಖೆಯ ದೈನಂದಿನ ಸಾಮಾನ್ಯ ಡ್ಯೂಟಿ ಎಂಬಂತಾಗಿದೆ. ಚೆಡ್ಡಿ ಎಂಎಲ್‍ಸಿ ಗಣೇಶ್ ಕಾರ್ಣಿಕ್ ಎಂಬ ವಿಪ್ರೋತ್ತಮ “ಕೋಬ್ರಾಪೋಸ್ಟ್”ನ ರಹಸ್ಯ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದು – ಕರಾವಳಿ ಪೊಲೀಸ್ ಇಲಾಖೆಯಲ್ಲಿ ಶೇ.60ರಷ್ಟು ಹಿಂದೂತ್ವವಾದಿ ಪೊಲೀಸರಿದ್ದಾರೆಂದು ಹೇಳಿದ್ದರು. ಅದೀಗ ಪಕ್ಕಾ ಆಗುತ್ತಿದೆ. ಪೊಲೀಸ್ ಇಲಾಖೆಯ ಈ ಮುಕ್ಕಾಲು ಪಾಲು ಭಜರಂಗಿ ಪೊಲೀಸರ ಹಾವಳಿಗೆ ಅಮಾಯಕ ಅಲ್ಪಸಂಖ್ಯಾತರು ಆಹುತಿ ಆಗುವ ಭಯಾನಕ ಪರಿಸ್ಥಿತಿ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರ್ಮಾಣ ಆಗಿದೆ.
ಭಜರಂಗಿಗಳು ಪೊಲೀಸರನ್ನು ಜೊತೆಗಿಟ್ಟುಕೊಂಡೇ ಸಾಬಿಗಳ ಹೊಡೆದು-ಬಡಿದು-ರಕ್ತ ಹರಿಸಿ-ಕೊಂದೇ ಹಾಕುವ ವಿಕೃತಿ ಅಟ್ಟಹಾಸ ಮೆರೆಯುತ್ತಿದ್ದಾರೆ! ಸಂಘಿ ಸೈತಾನರು ಪೊಲೀಸ್ ಠಾಣೆಗಳಲ್ಲಿ ಕುಳಿತು ಯಾರದೋ ಮನೆಯ ಪಾಪದ ಹಿಂದು ಹುಡುಗಿಯರ ಮಾನ ಹರಾಜು ಹಾಕುವುದು, ಪಾಲಕರ ಅವಮಾನಿಸುವುದು ನಡೆದೇ ಇದೆ. ಹಲವು ಪೊಲೀಸ್ ಸ್ಟೇಷನ್‍ಗಳಲ್ಲಿ ಭಜರಂಗಿ ಭಂಡರದೇ ಆಡಳಿತ. ಈ ರೌಡಿಗಳು ಹೇಳಿದ್ದೇ ಕಾನೂನು: ಆಡಿದ್ದೇ ಆಟ! ಮೇ 30ರ ಬೆಳಗಿನಜಾವದ 4 ಗಂಟಿಗೆ ಉಡುಪಿಯ ಪೆರ್ಡೂರು ಬಳಿ ಭಜರಂಗಿ ಕಿರಾತಕರು ಸಬ್ ಇನ್ಸ್‍ಪೆಕ್ಟರ್ ಮತ್ತು ಪೇದೆಗಳನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಅರವತ್ತೆರಡು ವರ್ಷದ ವೃದ್ಧ ಜಾನುವಾರು ವ್ಯಾಪಾರಿ ಹುಸೇನಬ್ಬರ ಬಡಿದು-ಬಡಿದೇ ಕೊಂದು ಬಿಸಾಕಿದ ಹಿಂಸಾಕಾಂಡ ಕರಾವಳಿಯ ಪೊಲೀಸರ ಮನೋವಿಕಾರಕ್ಕೊಂದು ಸ್ಯಾಂಪಲ್‍ನಂತಿದೆ.
ಹುಸೇನಬ್ಬ ಮಂಗಳೂರಿನ ಜೋಕಟ್ಟೆ ನಿವಾಸಿ, ಕಳೆದ 35 ವರ್ಷದಿಂದ ಈತ ಹಿಂದೂಗಳಿಂದ ಜಾನುವಾರು ಖರೀದಿಸಿ ಕಸಾಯಿಖಾನೆಗೆ ಸಾಗಿಸುವ ಉಪಕಸುಬು ಮಾಡುತ್ತಾ ಬಂದಿದ್ದಾರೆ. ಇದು ಈ ನೆಲದ ಕಾನೂನುಬದ್ಧ ವೃತ್ತಿ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಹಲವು ಹಳ್ಳಿಗಳಲ್ಲಿ ಜಾನುವಾರು ಮಾರುವ ಹಿಂದೂ ಏಜೆಂಟರೂ ಇದ್ದಾರೆ. ಕಳೆದ ಮೇ 29-30 ರಂದು ಹುಸೇನಬ್ಬ ಇನ್ನಿಬ್ಬರೊಂದಿಗೆ ಸ್ಕಾರ್ಪಿಯೋ ಗಾಡಿಯಲ್ಲಿ ಉಡುಪಿಯ ಪೆರ್ಡೂರು ಕಡೆ ದನದ ಖರೀದಿಗೆಂದು ಹೋಗಿದ್ದರು. ಹುಸೇನಬ್ಬ ಪೆರ್ಡೂರು ಮತ್ತು ಉಡುಪಿಯ ಸುತ್ತಲಿನ ಹಳ್ಳಿಗೆ ಬರುವುದು ಕರಾರುವಾಕ್ಕಾಗಿ ನೋಡಿಕೊಂಡಿದ್ದ ಭಜರಂಗ ದಳದ ಗ್ಯಾಂಗ್ ದಾಳಿಗೆ ಹೊಂಚುಹಾಕಿ ಕುಂತಿತ್ತು. ದೊಡ್ಡ ಮೊತ್ತದ ಹಣ ವಸೂಲಿ ಮಾಡುವುದು, ಅದು ಸಾಧ್ಯವಿಲ್ಲದಿದ್ದಾಗ ಮಾರಣಾಂತಿಕವಾಗಿ ಹಲ್ಲೆ ಮಾಡಿ ಹಿಂದೂತ್ವ ಸಬೂಬು ಹೇಳೋದು ಕರಾವಳಿ ಭಾಗದ ಭಜರಂಗಿಗಳ ಮಾಮೂಲಿ ಕಸುಬು.
ಅಂದು, ಮೇ 30ರ ನಸುಕಿನ 4ರ ಹೊತ್ತಿಗೆ ಹುಸೇನಬ್ಬ ಸ್ಕಾರ್ಪಿಯೋ ಕಾರಲ್ಲಿ ದನ ತುಂಬಿಕೊಂಡು ಬರುವುದನ್ನೇ ಕಾದು ಕುಳಿತಿತ್ತು ಪೆರ್ಡೂರು ಕಡೆಯ ಭಜರಂಗಿ ಪಡೆ. ವಿಶ್ವ ಹಿಂದೂ ಪರಿಷತ್‍ನ ಉಡುಪಿ ಗ್ರಾಮಾಂತರ ಸಂಚಾಲಕ ಕಲ್ಬಂಡೆ ಸುರೇಶ್ ಮೆಂಡನ್ ಯಾನೆ ಸೂರಿ, ಭಜರಂಗದಳದ ಖತರ್ನಾಕ್ ಕಾರ್ಯಕರ್ತರಾದ ಹಿರಿಯಡ್ಕದ ಕೊಂಡಾಡಿಯ ಪ್ರಸಾದ್ ಮರಕಾಲ, ಪೆರ್ಡೂರ್‍ನ ಗೋರೆಲ್ ನಿವಾಸಿ ಉಮೇಶ್ ಶೆಟ್ಟಿ, ಬೊಮ್ಮರಬೆಟ್ಟು ಗ್ರಾಮದ ರತನ್ ಪೂಜಾರಿ, ಚೇತನ್ ಆಚಾರ್ಯ, ಶೈಲೇಶ್‍ಶೆಟ್ಟಿ, ಗಣೇಶ್ ನಾಯ್ಕರ್ ಮುಂದಾಳತ್ವದ ಸುಮಾರು 15-20 ಮಂದಿಯ ಕೇಸರಿ ಗ್ಯಾಂಗ್ ಹುಸೇನಬ್ಬರ ವಾಹನವನ್ನು ಪೆರ್ಡೂರು ಬಳಿಯ ಅಲಾಗಾರು ರಸ್ತೆಯ ಕೊತ್ಯಾರು ಕಾಫೀತೋಟದ ಬಳಿ ಅಡ್ಡಗಟ್ಟಿದೆ. ಸೂರಿ ಮೆಂಡನ್ ಮತ್ತು ಪ್ರಸಾದ್ ಮರಕಾಲ ತಮ್ಮ ಆತ್ಮೀಯ ಮಿತ್ರ ಹಿರಿಯಡ್ಕ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಡಿ.ಎನ್.ಕುಮಾರ್‍ನ ಜತೆಗಿಟ್ಟುಕೊಂಡೇ ದಾಳಿಗೆ ಇಳಿದಿದ್ದರು. ಎಸೈ ಕಮಾರ್ ಮೂರ್ನಾಲ್ಕು ಪೇದೆಗಳ ಬೆನ್ನಿಗಿಟ್ಟುಕೊಂಡಿದ್ದ. ಪೇದೆ ಮೋಹನ್ ಕೊತ್ವಾಲ್ ಪಕ್ಕಾ ಪಾಪಿ ಭಜರಂಗಿ: ಭಜರಂಗಿ ರೌಡಿಗಳ ಸಹಚರ.
ಪೊಲೀಸ್-ಭಜರಂಗಿ ಪಡೆÀಯನ್ನು ಕಂಡು ಕಂಗಾಲಾದ ಹುಸೇನಬ್ಬರ ಜತೆಗಿದ್ದ ಇಬ್ಬರು ಸ್ಕಾರ್ಪಿಯೋ ನಿಲ್ಲಿಸಿದ್ದೇ ಬಚಾವಾಗಲು ಓಡಿದ್ದಾರೆ. ವಯಸ್ಸಾದ ಹುಸೇನಬ್ಬ ಗೂಂಡಾ ತಂಡÀದ ಕೈಗೆ ಸಿಕ್ಕಿಹಾಕಿಕೊಂಡಿದ್ದಾರೆ. ಪಿಎಸ್‍ಐ ಮತ್ತು ಪೇದೆಗಳ ಎದುರೇ ಸೂರಿ-ಪ್ರಸಾದ್ ತಂಡ ಹುಸೇನಬ್ಬರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಇದನ್ನು ತಪ್ಪಿಸುವುದು ಬಿಟ್ಟು ಎಸ್‍ಐ ಕುಮಾರ್ ಮತ್ತು ಪೇದೆಗಳಾದ ಮೋಹನ್ ಕೊತ್ವಾಲ್, ಜೀಪ್ ಚಾಲಕ ಗೋಪಾಲ್ ಹಿಂದೂತ್ವದ ಪ್ರವರ ತೋರಿಸಿದ್ದಾರೆ. ರೌಡಿ ಭಜರಂಗಿಗಳ ಕೈಗೆ ಕಾನೂನು ಕೊಟ್ಟು ಮೀಸೆ ತಿರುಗಿಸುತ್ತಾ ಮಜಾ ತೆಗೆದುಕೊಂಡಿದ್ದಾರೆ. ಭಜರಂಗಿಗಳು ಮನಸೋ ಇಚ್ಛೆ ಹುಸೇನಬ್ಬರಿಗೆ ಬಡಿದು ಸುಸ್ತಾದ ನಂತರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅದಾಗಲೇ ಜೀವ ಬಿಡುವ ಹಂತ ತಲುಪಿದ್ದ ಹುಸೇನಬ್ಬರನ್ನ ಪೊಲೀಸ್ ಜೀಪಿಗೆ ಹಾಕಿದ ಭಜರಂಗಿ ಪಡೆ ಸ್ಕಾರ್ಪಿಯೋ ಗಾಡಿ ದ್ವಂಸ ಮಾಡಿದ್ದಾರೆ. ನಜ್ಜು-ಗುಜ್ಜಾದ ಸ್ಕಾರ್ಪಿಯೋ ಭಜರಂಗಿಗಳೇ ಚಲಾಯಿಸಿ ಹಿರಿಯಡ್ಕ ಠಾಣೆಗೆ ತಂದಿದ್ದಾರೆ. ಠಾಣೆಗೆ ಬರುವಷ್ಟರಲ್ಲಿ ಹುಸೇನಬ್ಬ ಪ್ರಾಣ ಬಿಟ್ಟಿದ್ದರು. ಹುಸೇನಬ್ಬರ ಹೆಣ ಕಂಡದ್ದೇ ಎಸ್‍ಐ ಕುಮಾರ್‍ಗೆ ನಡುಕ ಶುರುವಾಗಿದೆ. ಎಸ್‍ಐ ಕುಮಾರ್‍ನ ಹಿಂದೂತ್ವದ ತೆವಲಿಗೆ ಸಾಬಿ ಜೀವ ಬಿಡಬೇಕಾಗಿ ಬಂತು. ಇದು ತನ್ನ ನೌಕರಿಗೆ ಸಂಚಕಾರ ತರುತ್ತದೆಂದು ಗಾಬರಿಗೆ ಬಿದ್ದ ಕ್ರಿಮಿನಲ್ ಕುಮಾರ್ ಹೆಣವನ್ನು ಠಾಣೆಯಾಚೆ ಸಾಗಿಸುವ ಪ್ಲಾನು ಹಾಕಿದ್ದಾನೆ. ಆರೋಪಿ ಭಜರಂಗಿಗಳ ಜತೆ ಸೇರಿಕೊಂಡು ಹುಸೇನಬ್ಬರ ಶವವನ್ನು ಒಂದು ಕಿಲೋಮೀಟರ್ ದೂರದ ಕೊಟ್ಯಾರು ಕಾಡಿನಲ್ಲಿ ಬಿಸಾಡಿ ಬಂದಿದ್ದಾನೆ. ಎಸೈ ಕುಮಾರ್ ಸಾಹೇಬರಿಗೆ ಪೇದೆಗಳಾದ ಮೋಹನ್ ಕೊತ್ವಾಲ್, ಗೋಪಾಲ್, ರೌಡಿ ಪ್ರಸಾದ್ ಮರಗಾಲ ಸಾಗಾಟಕ್ಕೆ ನೆರವಾಗಿದ್ದಾರೆ.
ಮರುದಿನ ಬೆಳಗ್ಗೆ ಎಸ್‍ಐ ಕುಮಾರ್ ಮತ್ತೊಂದು ಹಿಂದೂತ್ವದ ಹೈಡ್ರಾಮಾ ಮಾಡಿದ್ದಾನೆ. ಬೆಳಗ್ಗೆ 9.45ರ ಸುಮರಿಗೆ ಹುಸೇನಬ್ಬ ಅಕ್ರಮವಾಗಿ ದನಗಳನ್ನು ಸ್ಕಾರ್ಪಿಯೋ ಗಾಡಿಯಲ್ಲಿ ತುಂಬಿಕೊಂಡು ಬರುತ್ತಿದ್ದಾಗ ತಾನು ತಡೆಗಟ್ಟಿದೆನೆಂದೂ, ಆಗ ತಪ್ಪಿಸಿಕೊಳ್ಳುವ ಭರದಲ್ಲಿ ಕಾಡಿಗೆ ಹೋಗಿಬಿದ್ದ ಹುಸೇನಬ್ಬ ಹೃದಯಾಘಾತದಿಂದ ಸತ್ತಿದ್ದಾನೆಂದೂ ಎಸ್‍ಐ ಕುಮರ್ ಕಥೆ ಕಟ್ಟಿದ್ದಾನೆ. ಅಸಹಜ ಸಾವು ಪ್ರಕರಣ ದಾಖಲಿಸಿ ಕೈತೊಳೆದುಕೊಂಡು ಆರಾಮಾಗಿದ್ದಾನೆ. ಆದರೆ ನಡೆದ ಘಟನೆಗಳನ್ನೆಲ್ಲಾ ಹುಸೇನನ್ನರ ಜತೆಗಿದ್ದು ಬಚಾವಾಗಿದ್ದವರು ಆತನ ಸಹೋದರ ಮೊಹಮ್ಮದ್ ಇಸ್ಮಾಯಿಲ್‍ಗೆ ತಿಳಿಸಿದ್ದಾರೆ. ಇಸ್ಮಾಯಿಲ್ ತನ್ನ ಅಣ್ಣನನ್ನು ಪೊಲೀಸರ ಸಮ್ಮುಖದಲ್ಲಿ ಭಜರಂಗಿಗಳು ಹೊಡೆದುಕೊಂದಿದ್ದಾರೆಂದು ಎಸ್ಪಿ ಲಕ್ಷ್ಮಣ ನಿಂಬರಗಿಗೆ ಕಂಪ್ಲೆಂಟ್ ಕೊಟ್ಟಿದ್ದಾರೆ.
ಇಸ್ಮಾಯಿಲ್ ದೂರು ತನ್ನ ಕೈಗಿಡುತ್ತಲೇ ಸೂಕ್ಷ್ಮಮತಿ ಎಸ್‍ಪಿ ಲಕ್ಷ್ಮಣ ನಿಂಬರಗಿಗೆ ಹಿರಿಯಡ್ಕ ಠಾಣೆಯ ಎಸ್‍ಐ ಕುಮಾರನ ಭಜರಂಗಿ ಭಂಡಾಟದ ಸಂಶಯ ಶುರುವಾಗಿದೆ. ತಕ್ಷಣ ಎಸ್‍ಐ ಕುಮಾರ್ ಮತ್ತು ಜೀಪು ಚಾಲಕ ಗೋಪಾಲ್, ಪೇದೆ ಮೋಹನ್ ಕೊತ್ವಾಲರ ಅಮಾನತ್ತು ಮಾಡಿದ್ದಾರೆ. ಪ್ರಕರಣದ ಸಮಗ್ರ ತನಿಖೆಗೆ ಮೂರು ತಂಡ ರಚಿಸಿದ ಎಸ್‍ಪಿ ನಿಂಬರಗಿ, ಈ ಕೊಲೆ ಪ್ರಕರಣದಲ್ಲಿ ಪೊಲೀಸರ “ಪಾತ್ರ”ದ ಬಗ್ಗೆ ತಲೆಕೆಡಿಸಿಕೊಂಡಿದ್ದರು. ಎಸ್‍ಐ ಕುಮಾರ ಮತ್ತು ಪೇದೆಗಳ ಸಹಕಾತ-ಸಹಾಯದಿಂದಲೇ ಭಜರಂಗಿಗಳು ಹುಸೇನಬ್ಬರ ಮೇಲೆ ಹಲ್ಲೆ ಮಾಡಿ ಪ್ರಾಣ ತೆಗೆದಿದ್ದಾರೆಂಬುದು ಎಸ್‍ಪಿ ನಿಂಬರಗಿಗೆ ಖಾತ್ರಿಯಾಗಿತ್ತು. ಆ ದಿಶೆಯಲ್ಲಿ ತನಿಖೆ ತಿರುಗಿಸಿದ ತನಿಖಾ ತಂಡಕ್ಕೆ ಬೆಚ್ಚಿಬೀಳುವ ಸತ್ಯಗಳು ಕಣ್ಣಿಗೆ ರಾಚಿತು.
ಎಸ್‍ಐ ಕುಮಾರ್, ಪೇದೆ ಮನೋಹರ್ ಮತ್ತು ಗೋಪಾಲ್ ತಾವು ಪ್ರಸಾದ್ ಮರಕಾಲ, ಉಮೇಶ್ ಶೆಟ್ಟಿ, ರತನ್ ಪೂಜಾರಿ ಮುಂತಾದ ಭಜರಂಗಿ ಗೂಂಡಾಗಳ ಜತೆ ಸೇರಿ ಹುಸೇನಬ್ಬರ ಕೊಂದು ಹೆಣವನ್ನು ಹಾದಿಯಲ್ಲಿ ಬಿಸಾಕಿ ಹೃದಯಾಘಾತದ ಅಸಹಜ ಸಾವೆಂದು ಕೇಸ್ ದಾಖಲಿಸಿದ್ದನ್ನು ಒಂದೊಂದಾಗಿ ತನಿಖಾ ತಂಡದ ಎದುರು ಹೇಳುತ್ತಾ ಹೋದರು. ಈಗ ಎಸ್‍ಐ ಕುಮಾರ್ ಮತ್ತು ಪೇದೆಗಳು ಕಾರವಾರದ ಜೈಲಲ್ಲಿ ಒಣ ಮೀನು-ಗಂಜಿ ಊಟ ಮಾಡುತ್ತಿದ್ದಾರೆ. ಏಳು ಭಜರಂಗಿ ಕೊಲೆಪಾತಕಿಗಳು ಜೈಲು ಪಾಲಾಗಿದ್ದಾರೆ. ಭಜರಂಗಿಗಳು ಕೊಡುವ ಹಫ್ತಾ, ದನದ ವ್ಯಾಪಾರಿ ಸಾಬಿಗಳಿಂದ ಕಿತ್ತುಕೊಳ್ಳುವ ಕಾಸಿನ ಆಸೆ ಮತ್ತು ಹಿಂದೂತ್ವದ ಚಟಕ್ಕೆ ಎಸ್‍ಐ ಕುಮಾರ್ ನೌಕರಿ ಕಳೆದುಕೊಂಡು ಕೊಲೆ ಆರೋಪಿಯಾಗಿ ಅರೆಸ್ಟಾಗಿ ಜೈಲು ಸೇರಿದ್ದಾನೆ.
ಹುಸೇನಬ್ಬರ ಮರ್ಡರ್ ಸ್ಟೋರಿ ಬಿಡಿಸಿದ ಎಸ್‍ಪಿ ಲಕ್ಷ್ಮಣ ನಿಂಬರಗಿಗೆ ಕಾನೂನು ನಿಷ್ಠೆ-ಕರ್ತವ್ಯಪ್ರಜ್ಞೆ-ಖಾಕಿ ಕದರಿನ ನಿಯತ್ತು ಎಲ್ಲೆಡೆ ಶ್ಲಾಘನೆಗೆ ಪಾತ್ರವಾಗುತ್ತಿದೆ. ಸಹೋದ್ಯೋಗಿ ಕೊಲೆಗಡುಕ ಎಸ್‍ಐ, ಪೇದೆಗಳನ್ನು ಬಚಾಯಿಸಲು ನಿಂಬರಗಿಗೆ ಹಲವು ಅವಕಾಶವಿತ್ತು. ಆದರೆ ಆತ ಯಾವುದೇ ಮುಲಾಜು, ಮಮಕಾರಕ್ಕೆ ಒಳಗಾಗದೇ ಪೊಲೀಸ್ ಅಧಿಕಾರಿಯ ಭಜರಂಗಿ ಭಾನ್ಗಡಿ ಹೊರಹಾಕಿದ್ದಾರೆ ನಿಂಬರಗಿ. ಇಷ್ಟು ನಿಷ್ಠೂರವಾಗಿ, ಪ್ರಾಮಾಣಿಕವಾಗಿ ಕರ್ತವ್ಯ ಮಡದಿದ್ದರೆ ಹುಸೇನಬ್ಬರ ಕೇಸ್ ಹಿಂದೂತ್ವಕ್ಕೆ ಬಲಿಯಾದ ಹಲವು ಸಾಬಿಗಳ ಪ್ರಕರಣದಂತೆ ಮುಚ್ಚಿಹೋಗುತ್ತಿತ್ತು.  ಮಾಜಿ ಸಂಸದ- ಮಾಜಿ ಮಂತ್ರಿ ಜಯಪ್ರಕಾಶ್ ಹೆಗ್ಡೆ ಎಂಬ ನವರಂಗಿ ಚಡ್ಡಿ ಮತ್ತು ಕಾಪು ಶಾಸಕ ಬಾಲಾಜಿ ಮೆಂಡನ್ ಥರದವರು ಫೋನ್ಮಾಡಿದರೂ ಎಸ್‍ಪಿ ನಿಂಬರಗಿ ಅದಕ್ಕೆಲ್ಲ ಬಗ್ಗದೆ ಪಾತಕಿಗಳ ಜಾತಕ ಜಗಜ್ಜಾಹೀರು ಮಾಡಿದ್ದಾರೆ.
ಖಡಕ್ ಎಸ್‍ಪಿ ನಿಂಬರಗಿ ಬದಲಿಗೆ ಹಿಂದೂತ್ವದ ಹುಚ್ಚೇರಿಸಿಕೊಂಡಾತ ಯಾರಾದರೂ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರೆ ಏನಾಗುತ್ತಿತ್ತು? ಸಂಘಿಗಳ ವೈದಿಕಶಾಹಿ ಪ್ರಯೋಗ ಶಾಲೆಯಾಗಿರುವ ಕರಾವಳಿ ಭವಿಷ್ಯದ ಬಗ್ಗೆ ಭಯವಾಗುತ್ತದ? ಸದ್ಯಕ್ಕÀಂತೂ ಹಿಂದೂತ್ವದ ಕೇಡಿಂದ ಕರಾವಳಿಗೆ ಮುಕ್ತಿ ಕಾಣಿಸುತ್ತಿಲ್ಲ.
ಬೇಬಿಯಕ್ಕನ ಬೊಂಬಡಾ!
ಉಡುಪಿ ಸಂಸದೆ ಬೇಬಿಯಕ್ಕ ಯಾನೆ ಶೋಭಾ ಕರಂದ್ಲಾಜೆ ಹಿಂದೂತ್ವ ಆವಾಹಿಸಿಕೊಂಡು ಯಡವಟ್ಟಾಗಿ, ಬರ್ಬರ ಭಯಾನಕವಾಗಿ ಬೊಬ್ಬಿರಿಯುವ ಪರಿಗೆ ಇಡೀ ಕರಾವಳಿ ಹೇಸಿಹೋಗಿದೆ. ಈ ಹೆಂಗಸು ಇಷ್ಟೇಕೆ ಸುಳ್ಳು ಹೇಳುತ್ತಾಳೆ? ಹಿಂದೂತ್ವದ ಹೆಸರಲ್ಲಿ ಬಲಿಗೆ ಯಾಕೆ ಪ್ರಚೋದಿಸುತ್ತಾಳೆ? ಹಿಂದುಳಿದ ವರ್ಗದಲ್ಲಿ ಹುಟ್ಟಿದ ಈಕೆ ಸಂಘದ ಜನಿವಾರಗಳ ಹುಸಿ ಹಿಂದೂತ್ವದ ಯುದ್ದಕ್ಕೆ ಅಮಾಯಕ ಶೂದ್ರರ ಕಾಲಾಳಾಗಿಸುತ್ತಾಳೆ? ಸಂಸದೆಯಾಗಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಪ್ರಯತ್ನ ಮಾಡೋದು ಬಿಟ್ಟು ಬೂಟಾಟಿಕೆಯ ಮತಾಂಧ ಮಸಲತ್ತು ಈಕೆ ಯಾಕೆ ಮಾಡುತ್ತಾಳೆ? ತಾನ ಕ್ಷೇತ್ರದ ಪಾಲಿಗೆ ಕೃತಘ್ನ ಎಂಪಿಣಿ ಎಂಬುದೇಕೆ ಈಕೆಗಿನ್ನು ಅರಿವಾಗಿಲ್ಲ? ಇಂಥ ಹಲವು ಮಾರ್ಮಿಕ-ಜಿಜ್ಞಾಸೆ ಕರಾವಳಿಯ ಜನರಿಗಷ್ಟೇ ಅಲ, ಕಟ್ಟರ್ ಚಡ್ಡಿ ರಿಂಗ್‍ಮಾಸ್ಟರ್‍ಗಳಿಗೂ ಕಾಡುತ್ತಿದೆ.
ತೀರ್ಥಹಳ್ಳಿಯ ನಂದಿತಾ ಆತ್ಮಹತ್ಯೆಯಿಂದ ಬಂಟ್ವಾಳದ ಶರತ್ ಮಡಿವಾಳನ ಹತ್ಯೆತನಕ, ಅಲ್ಲಿಂದ ಹೊನ್ನಾವರದ ಪರೇಶ್ ಮೆಹ್ತಾನ ನಿಗೂಢಸಾವಿನಿಂದ ಸುರತ್ಕಲ್‍ನ ದೀಪಕ್‍ರಾವತ್ ಹತ್ಯೆವರೆಗೆ, ಟಿಪ್ಪು ಜಯಂತಿಯಿಂದ ಅನೈತಿಕ ಪೊಲೀಸ್‍ಗಿರಿಯ ಪರಹಿಸುವ ತನಕ ಬೇಬಿಯಕ್ಕ ಕೂಗಾಡಿದ್ದಕ್ಕೆ ಒಂದಕ್ಕೂ ಅರ್ಥವೇ ಇಲ್ಲ. ಹಸಿಹಸಿ ಸುಳ್ಳುಗಳೇ ಆಕೆಯ ಬಾಯಿಂದ ಹೊರಬಿದ್ದಿದೆ. ಆಕೆಯ ಮಾತಿಂದ ಹಿಂದೂಗಳಿಗೆ ಅನುಕೂಲವಾಗುವುದಿರಲೀ ತೊಂದರೆ, ಸಾವು-ನೋವುಗಳೇ ಆಗಿದೆ. ಉಡುಪಿ ಚಿಕ್ಕಮಗಳೂರು ಎಂಪಿಯಾಗಿ ಆಕೆ ಕರ್ಮಗೇಡಿ ಕ್ಷೇತ್ರವಾಸಿಗಳಿಗೆ ಆಕೆಯಿಂದ ಮೂರು ಕಾಸಿನ ಪ್ರಯೋಜನವಾಗಿಲ್ಲ.
ಇಂಥ ಇತಿಹಾಸ-ಭೂಗೋಳದ ಬೇಬಿಯಕ್ಕ ಮೊನ್ನೆ ಭಜರಂಗಿ ಮತ್ತು ಪೊಲೀಸರು ಸೇರಿ ಹುಸೇನಬ್ಬರ ಕೊಂದು ತಿಂದಾಗ ಹಠಾತ್ ಉಡುಪಿಗೆ ಒಕ್ಕರಿಸಿದ್ದರು. ಬೈಂದೂರಿನ ಶಾಸಕ ಸುಕುಮಾರ್ ಶೆಟ್ಟಿ, ಕಾಪು ಶಾಸಕ ಬಾಲಾಜಿ ಮೆಂಡನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಜತೆ ಸೇರಿ ಹುಸೇನಬ್ಬ ಕೇಸಲ್ಲಿ ಅಮಾಯಕ ಹಿಂದುಗಳನ್ನು ಬಂಧಿಸಿದ್ದೀರಿ, ಪಾಪದ ಪೊಲೀಸ್ ಅಧಿಕಾರಿಗಳನ್ನು ಜೈಲಿಗೆ ಹಾಕಿದ್ದೀರಿ ಯಾಕೆ? ತನಿಖೆ “ಸರಿಯಾಗಿ” ನಡೆಸಿರಿ ಎಂದು ಎಸ್‍ಪಿಗೆ ಮನವಿ ಕೊಟ್ಟಿದ್ದಾರೆ ಬೇಬಿಯಕ್ಕ ಹುಸೇನಬ್ಬ ಕೇಸ್ ತನಿಖೆಯನ್ನು ತನ್ನದೇ ಪರಮ ಪೂಜ್ಯ ಮೋದಿ ಸರ್ಕಾರದ ಸಿಬಿಐಗೆ ಅಥವಾ ಎನ್‍ಐಎಗೆ ಕೊಡಲು ಪ್ರಯತ್ನಿಸುತ್ತಿಲ್ಲ? ಹಾಗಂತ ಕರಾವಳಿ ಮಂದಿ ಹಣೆ-ಹಣೆ ಚಚ್ಚಿಕೊಳ್ಳುತ್ತಿದ್ದಾರೆ. ಬೇಬಿಯಕ್ಕನದು ಬರೀ ಹಗಲುವೇಷ ಎಂಬುದು ಜನರಿಗೆ ಅರ್ಥವೂ ಆಗಿದೆ.
ಇಷ್ಟಾದರೂ ಬೇಬಿಯಕ್ಕ ನಿರ್ಲಜ್ಜವಾಗಿ ಕೂಗುಮಾರಿ ಸ್ಟೈಲಲ್ಲಿ ಮಾತಾಡೋದು ಮಾತ್ರ ನಿಲ್ಲಿಸಿಲ್ಲ. ಹುಸೇನಬ್ಬರ ಕೊಂದು ಹಾಕಿದ ಭಜರಂಗಿಗಳಲ್ಲಿ ಕೆಲವರು ಕಾಪು ಶಾಸಕ ಲಾಲಾಜಿ ಮೆಂಡನ್‍ರ ಪರಮಾಪ್ತರು. ಈ ಕೊಲೆಗಡುಕರು ಮೆಂಡನ್ ಸಾಹೇಬರ ಜತೆಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂಥ ಲಾಲಾಜಿ ಮೆಂಡನ್‍ರ ಬಗಲಲ್ಲಿಟ್ಟುಕೊಂಡು ಬೇಬಿಯಕ್ಕ ಓಡಾಡೋದೆ ಒಂಥರಾ ಮಜಾ. ಭಜರಂಗಿಗಳ ಕೈಯಲ್ಲಿ ಸತ್ತ ಹುಸೇನಬ್ಬ ಹೃದಯಾಘಾತದಿಂದ ಸತ್ತಿದ್ದಾನೆಂದು ಶೋಭಾ ಬೊಬ್ಬಿರಿಯುವುದು ಆಕೆಯ ನೈತಿಕ ಅಧಃಪತನದ ಸಂಕೇತವಾ?
– ನಹುಷ
- Advertisement -

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಜಾಗತಿಕ ಮಾದ್ಯಮಗಳಲ್ಲಿ ಸುದ್ದಿಯಾದ ಪ್ರಧಾನಿಯ ದ್ವೇಷ ಭಾಷಣ: ಅಂತರಾಷ್ಟ್ರೀಯ ಮಟ್ಟದಲ್ಲಿ ಮತ್ತೆ ಟೀಕೆಗೆ ಗುರಿಯಾದ...

0
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ಮಾಡಿದ್ದ ದ್ವೇಷ ಭಾಷಣ ಜಾಗತಿಕ ಮಾದ್ಯಮಗಳಲ್ಲಿ ಭಾರೀ ಸುದ್ದಿಯಾಗಿದ್ದು, ಮೋದಿ ಮತ್ತೆ ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಿದ್ದಾರೆ. 'ಕೊಳಕು ಭಾಷಣ’ ಆದರೆ...