ಮಾಹಿತಿ ಹಕ್ಕು ಕಾಯಿದೆ(ಆರ್ಟಿಐ) ಜಾರಿಗೆ ಬಂದ 18ನೇ ವರ್ಷಾಚರಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಕೇಂದ್ರ ಸರಕಾರವನ್ನು ಟೀಕಿಸಿದ್ದು, ಮೋದಿ ಸರ್ಕಾರವು ಈ ಕಾನೂನನ್ನು ದುರ್ಬಲಗೊಳಿಸಲು ಪ್ರಯತ್ನಿಸಿದೆ ಎಂದು ಆರೋಪಿಸಿದೆ.
ಮಾಹಿತಿ ಹಕ್ಕು ಕಾಯಿದೆಯ ನಿಬಂಧನೆಗಳನ್ನು ದುರ್ಬಲಗೊಳಿಸುವ, ಪ್ರಧಾನಿಗಳ ಆಜ್ಞೆಯನ್ನು ಪಾಲಿಸುವವರನ್ನು ಕಮಿಷನ್ಗೆ ನೇಮಿಸುವ, ಅರ್ಜಿಗಳನ್ನು ತಿರಸ್ಕರಿಸುವ ಮೂಲಕ ನಿರಂತರವಾಗಿ ಕಾಯ್ದೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆದಿದೆ ಎಂದು ಕಾಂಗ್ರೆಸ್ ಗುರುವಾರ ಆರೋಪಿಸಿದೆ.
ಎಕ್ಸ್ನಲ್ಲಿ ಮಾಡಿದ ಪೋಸ್ಟ್ನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರತಿಕ್ರಿಯಿಸಿದ್ದು, RTI ಕಾಯಿದೆಯು ಕನಿಷ್ಠ 2014ರವರೆಗೆ ಪ್ರಬಲವಾಗಿತ್ತು. ಅದರ ನಂತರ ಮೋದಿ ಸರ್ಕಾರವು ಕಾನೂನನ್ನು ದುರ್ಬಲಗೊಳಿಸಲು, ಅದರ ನಿಬಂಧನೆಗಳನ್ನು ದುರ್ಬಲಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ರಮೇಶ್ ಆರೋಪಿಸಿದ್ದಾರೆ.
ಆರ್ಟಿಐಯಿಂದ ಬಹಿರಂಗವಾಗುತ್ತಿದ್ದ ವಿಚಾರಗಳು ಪ್ರಧಾನಿಯವರಿಗೆ ಅತ್ಯಂತ ಮುಜುಗರವನ್ನುಂಟುಮಾಡಿತ್ತು, ಅದು ತಿದ್ದುಪಡಿಗೆ ಪ್ರಮುಖ ಕಾರಣವಾಗಿದೆ. ಈ ಕೆಲವು ತಿದ್ದುಪಡಿಗಳನ್ನು ನಾನು ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದೇನೆ ಮತ್ತು ಆರ್ಟಿಐ ವೇಗವಾಗಿ ಆರ್ಐಪಿ/ಓಂ ಶಾಂತಿ ಸ್ಥಾನಮಾನಕ್ಕೆ ಸಾಗುತ್ತಿರುವ ಕಾರಣ ಅರ್ಜಿಯನ್ನು ಶೀಘ್ರದಲ್ಲೇ ವಿಚಾರಣೆ ಮಾಡಲಾಗುತ್ತದೆ ಎಂದು ನಾನು ಇನ್ನೂ ಆಶಿಸುತ್ತಿದ್ದೇನೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
2019ರ ಜುಲೈನಲ್ಲಿ ನಡೆದ ಆರ್ಟಿಐ ಕಾಯ್ದೆಯ ತಿದ್ದುಪಡಿ ಕುರಿತ ತಮ್ಮ ಆಕ್ಷೇಪವನ್ನು ಉಲ್ಲೇಖಿಸಿದ ವಿಡಿಯೋವನ್ನು ಕೂಡ ಜೈರಾಮ್ ರಮೇಶ್ ಅವರು ಹಂಚಿಕೊಂಡಿದ್ದಾರೆ. ಆರ್ಟಿಐ ಕಾಯ್ದೆ 2005ರ ಅ.12ರಂದು ಕಾರ್ಯ ರೂಪಕ್ಕೆ ಬಂದಿತ್ತು.
ಇದನ್ನು ಓದಿ: ತೀರ್ಪಿನ ಶೀರ್ಷಿಕೆಯಲ್ಲಿ ಆರೋಪಿಯ ಜಾತಿ ನಮೂದಿಗೆ ಆಕ್ಷೇಪಿಸಿದ ಸುಪ್ರೀಂಕೋರ್ಟ್