ಒಂದಲ್ಲ, ಏಳು ಭಾರತೀಯ ರಾಜ್ಯಗಳು! ಬಸ್ ಖರೀದಿಯಲ್ಲಿ ‘ರೈಲು’ ಬಿಟ್ಟಿದೆ ಕೇಂದ್ರ ಸಾರಿಗೆ ಸಚಿವಾಲಯ! ಹಾಳಾಗಿ ಹೋಗ್ಲಿ, ಇದೆಲ್ಲ ಗೊತ್ತಿದ್ದರೂ, ದೊಡ್ಡ ಮೀಡಿಯಾ ಸುಮ್ಮನಿದೆ!
ಏಳು ರಾಜ್ಯಗಳಿಗೆ ಬಸ್ ಒದಗಿಸುವ ಒಪ್ಪಂದಗಳನ್ನು ಗೆಲ್ಲಲು ಸ್ವೀಡಿಷ್ ಬಸ್ ತಯಾರಕ ಕಂಪನಿ ಸ್ಕ್ಯಾನಿಯಾ ಲಂಚ ನೀಡಿದೆ, ಸ್ವೀಡನ್ನ ಎಸ್ವಿಟಿ ಮತ್ತು ಜರ್ಮನಿಯ ಝೆಡ್ಡಿಎಫ್ ಬಹಿರಂಗ ಮಾಡಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
2013 ಮತ್ತು 2016 ರ ನಡುವೆ ಏಳು ಭಾರತೀಯ ರಾಜ್ಯಗಳಲ್ಲಿ ಬಸ್ ಒಪ್ಪಂದಗಳನ್ನು ಗೆಲ್ಲಲು ಸ್ವೀಡಿಷ್ ಟ್ರಕ್ ಮತ್ತು ಬಸ್ ತಯಾರಕ ಸಂಸ್ಥೆ ಸ್ಕ್ಯಾನಿಯಾ ಲಂಚ ನೀಡಿದೆ ಎಂದು ರಾಯಿಟರ್ಸ್ ಮಂಗಳವಾರ ವರದಿ ಮಾಡಿದೆ.
ಸ್ಕ್ಯಾನಿಯಾದಿಂದ ಲಂಚ ಪಡೆದವರಲ್ಲಿ ಒಬ್ಬ ‘ಅನಾಮಧೇಯ’ ಸಚಿವ ಕೂಡ ಇದ್ದಾರೆ.
ಸ್ವೀಡನ್ನ ಎಸ್ವಿಟಿ ಮತ್ತು ಜರ್ಮನಿಯ ಝೆಡ್ಡಿಎಫ್ ತನಿಖೆಯನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದ ಪ್ರಕಾರ, 2016 ರ ನವೆಂಬರ್ನಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪುತ್ರರೊಂದಿಗೆ ಸಂಬಂಧ ಹೊಂದಿರುವ ಕಂಪನಿಗೆ ಸ್ಕ್ಯಾನಿಯಾ ಐಷಾರಾಮಿ ಬಸ್ ಒಂದನ್ನು ಮಾರಿದೆ. ಈ ಆರೋಪಗಳನ್ನು ಸಚಿವರ ಕಚೇರಿ “ದುರುದ್ದೇಶಪೂರಿತ, ಕಟ್ಟುಕಥೆ ಮತ್ತು ಆಧಾರರಹಿತ” ಎಂದು ಬುಧವಾರ ಹೇಳಿದೆ.
ಸ್ಕ್ಯಾನಿಯಾ ವಕ್ತಾರರು ಈ ಪ್ರಕರಣದಲ್ಲಿ ಲೋಪ ಆಗಿವೆ ಎಂದು ರಾಯಿಟರ್ಸ್ಗೆ ತಿಳಿಸಿದ್ದಾರೆ.. ಸ್ಕ್ಯಾನಿಯಾದ ಸಿಇಒ ಹೆನ್ರಿಕ್ ಹೆನ್ರಿಕ್ಸನ್, ಭಾರತದಲ್ಲಿ ತನ್ನ ವ್ಯವಹಾರದಲ್ಲಿ ಕಂಪನಿಯು “ಸ್ವಲ್ಪ ನಿಷ್ಕಪಟ” ವಾಗಿರಬಹುದು ಎಂದು ಹೇಳಿದ್ದಾರೆ..
ತನಿಖೆಯ ಪ್ರಕಾರ, 11.8 ಮಿಲಿಯನ್ ಡಾಲರ್ ಒಪ್ಪಂದದ ಭಾಗವಾಗಿ, ಚಾರ್ಸಿ ನಂಬರ್ ಮತ್ತು ಪರವಾನಗಿ ಫಲಕಗಳನ್ನು ಬದಲಾಯಿಸುವ ದಂಧೆಯೂ ಇಲ್ಲಿ ನಡೆದಿದೆ. ಭಾರತೀಯ ಗಣಿಗಾರಿಕೆ ಕಂಪನಿ ಒಂದರ ಜೊತೆ ಸ್ಕ್ಯಾನಿಯಾ ಈ ದಂಧೆ ಮಾಡಿದೆ ಎಂದು ಆರೋಪಿಸಲಾಗಿದೆ.
ಲಂಚ ಹಗರಣದ ಸುದ್ದಿ ಬರುತ್ತಿದ್ದಂತೆ, ಟ್ವಿಟರ್ನಲ್ಲಿ “ಸ್ಕ್ಯಾನಿಯಾ ಹಗರಣ” ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಭರ್ಜರಿ ವಿರೋಧ ವ್ಯಕ್ತವಾಗಿತು. ಆಕ್ಟಿವಿಸ್ಟ್ಗಳು, ಪತ್ರಕರ್ತರು ಮತ್ತು ಇತರ ಬಳಕೆದಾರರು ಈ ಹಗರಣ ವರದಿ ಮಾಡದ ಮುಖ್ಯವಾಹಿನಿಯ ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಇಂಡಿಯಾ ಟುಡೆ ಮಾಜಿ ಸಂಪಾದಕ ದಿಲೀಪ್ ಮಂಡಲ್, ಹಗರಣದ ಬಗ್ಗೆ ಮುಖ್ಯವಾಹಿನಿಗಳ ಮೌನವನ್ನು ಟೀಕಿಸಿದ್ದಾರೆ. ಕಾಂಗ್ರೆಸ್ ಮುಖವಾಣಿ ನ್ಯಾಷನಲ್ ಹೆರಾಲ್ಡ್ ಸಂಪಾದಕೀಯ ಸಲಹೆಗಾರ ಸಂಜುಕ್ತ ಬಸು ಮತ್ತು ಸ್ವೀಡನ್ ಮೂಲದ ಸಂಶೋಧಕ ಅಶೋಕ್ ಸ್ವೈನ್ ಕೂಡ ತನಿಖೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಆದಿವಾಸಿ ಹಕ್ಕುಗಳ ಗುಂಪು ಸಹ ವಿರೋಧ ವ್ಯಕ್ತ ಮಾಡಿದೆ.
ಪಟ್ಟಭದ್ರ ಹಿತಾಸಕ್ತಿಗಳನ್ನು ಗಮನಿಸದ ಅಥವಾ ಆ ತರಹ ನಾಟಕ ಆಡುವ ಪತ್ರಿಕೋದ್ಯಮವು ಈ ದೇಶದಲ್ಲಿ ಹೆಚ್ಚು ಚಾಲ್ತಿಯಲ್ಲಿದೆ ಎಂಬುದನ್ನು ಇದು ತೋರಿಸುತ್ತದೆ.
(ಕೃಪೆ: ನ್ಯೂಸ್ ಲ್ಯಾಂಡ್ರಿ)
ಇದನ್ನೂ ಓದಿ: ಖಾಲಿ ಗೋಡೌನ್ಗೆ ಸರ್ಕಾರದಿಂದ ಆರೂವರೆ ಕೋಟಿ ಬಾಡಿಗೆ ಪಡೆದ ಅದಾನಿ!: ಅದಾನಿಗಾಗಿ ಸಿಎಜಿ ವರದಿ…