| ಪುನೀತ್ ಅಪ್ಪು |
ಇವತ್ತು ವಿಭಜನೆ ಸೃಷ್ಟಿಸಿದ ವಿಲಕ್ಷಣ ಕಥೆಗಾರ ಹಸನ್ ಸಾದತ್ ಮಾಂಟೋ ಜನ್ಮದಿನ. ದೇಶ ವಿಭಜನೆಯ ಆಘಾತವನ್ನು ತಡೆದುಕೊಳ್ಳಲಾರದೆ ಕೊನೆಯ ಕ್ಷಣದವರೆಗೂ ಭಾರತ ಮತ್ತು ಪಾಕಿಸ್ಥಾನದ ಬಡ, ದಮನಿತ ಮತ್ತು ನಿಕೃಷ್ಟ ಜನರಿಗೋಸ್ಕರ ಮರುಗಿದ, ಭಾರತದ ಕನವರಿಕೆಯಲ್ಲಿಯೇ ಪ್ರಾಣ ತ್ಯಜಿಸಿದ ಮಾಂಟೋ ಬರಿಯ ಕಥೆಗಾರನಲ್ಲ, ಆತನ ಬದುಕೇ ಒಂದು ರೂಪಕ. ಆತನ ಸಾವು ಇನ್ನೂ ವಿಚಿತ್ರ. ಮಾಂಟೋ ಯಾರು ಎಂದು ಯಾರಾದರೂ ಕೇಳಿದರೆ ಮಾಂಟೋ ಅಂದರೆ ಕಳ್ಳಭಟ್ಟಿ ಸಾರಾಯಿ ಎನ್ನಬಯಸುತ್ತೇನೆ. ಮಾಂಟೋನ ಕಥೆಗಳು ಕೂಡಾ ಆ ಸಾರಾಯಿಯಂತೆ ಸುಡುತ್ತಲೇ ಒಳಗಿಳಿಯುತ್ತವೆ. ಆದರೆ ಅದನ್ನು ಮೋಹಿಸಿದವನಿಗೆ ಮಾತ್ರ ಗೊತ್ತು ಅದರ ಮತ್ತು ಮತ್ತು ಗತ್ತು. ಬದುಕಬೇಕೆಂದು ಯಾರೂ ಅದನ್ನು ಕುಡಿಯುವುದಿಲ್ಲ. ಇದು ಸತ್ತವರ ಕಥೆ. ಬದುಕಿದವರು ಕಥೆಯಾಗುವುದಿಲ್ಲ. ನಾನು ಕುಡಿದರೂ ಸಾಯುತ್ತೇನೆ, ಕುಡಿಯದಿದ್ದರೂ ಸಾಯುತ್ತೇನೆ, ಅಮೇರಿಕಾದಿಂದ ಆಮದಾಗುವ ಈ ಗೋದಿಯ ಬೆಲೆ ನೋಡಿದರೆ ಮಾನ ಮರ್ಯಾದೆ ಇಲ್ಲದವರು ಮಾತ್ರ ಬದುಕಲು ಸಾಧ್ಯ ಎಂದಿದ್ದ ಮಾಂಟೋ.
ಮಾಂಟೋನ ಕೆಲವು ಸಣ್ಣ ಸಾಲುಗಳನ್ನು ಇಲ್ಲಿ ಕೊಟ್ಟಿರುವೆ.
1. ಶಾಶ್ವತ ರಜೆ.
.ಗಲಭೆಕೋರರ ಒಂದು ಗುಂಪು ಗಣಿಯತ್ತ ತೆರಳಿತು. ಸಿಕ್ಕಿ ಸಿಕ್ಕಿದವರನ್ನು ಹೊಡೆದು ಸಾಯಿಸ ತೊಡಗಿತು. ಒಬ್ಬ ಕಾರ್ಮಿಕ ಕೂಗಿಕೊಂಡ, ” ಅಯ್ಯೋ ನನ್ನ ಕೊಲ್ಲಬೇಡಿ, ನಾನು ರಜೆಯಲ್ಲಿ ಊರಿಗೆ ತೆರಳುತಿರುವೆ”.
2. ಪಠಾಣಿಸ್ತಾನ್
ಗಲಭೆಕೋರರ ತಂಡ ಒಬ್ಬನನ್ನು ತಡೆದು ನಿಲ್ಲಿಸಿತು.
“ಏಯ್ ಯಾರು ನೀನು ಇಂದೂವ ಅಥವಾ ಮುಸ್ಲಮೀನಾ”?
ವ್ಯಕ್ತಿ : ” ಹ್ಞಾಂ ಹ್ಞಾ.. ಮುಸ್ಲಮೀನ್ ಮುಸ್ಲಮೀನ್”
ತಂಡ : “ಓಹೋ ಹಾಗಾದರೆ ನಿನ್ನ ಪ್ರವಾದಿ ಯಾರು ಹೇಳು ನೋಡೋಣ”.
ವ್ಯಕ್ತಿ: “ಹ್ಞಾಂ? …. ಮಹಮ್ಮದ್ ಖಾನ್”
ತಂಡ : ” ಸರಿ, ಈತನನ್ನು ಬಿಟ್ಟು ಬಿಡೋಣ”.
3. ರೇಡಿಯೋ ವಾರ್ತೆ:
” ಪಂಜಾಬ್, ಗ್ವಾಲಿಯರ್ ಮತ್ತು ಮುಂಬಯಿಯ ಕೆಲವು ಗಲ್ಲಿಗಳಲ್ಲಿ ಜನರು ಸಿಹಿ ಹಂಚುತ್ತಿದ್ದಾರೆ. ಮಹಾತ್ಮಾ ಗಾಂಧಿಯವರ ಹತ್ಯೆಯಾಗಿದೆ”.
4. ಮೂರ್ಖ.
ಆತನ ಆತ್ಮಹತ್ಯೆಯ ಬಗ್ಗೆ ಆತನ ಸ್ನೇಹಿತ ಹೀಗೆ ಹೇಳಿದ್ದ, ‘ ಎಂತಹಾ ಮೂರ್ಖ! ನಾನು ಅವನಲ್ಲಿ ಹೇಳುತ್ತಲೆ ಇದ್ದೆ, ಆ ಉದ್ದನೆಯ ಗಡ್ಡವನ್ನು ಬೋಳಿಸಿ, ಕೂದಲಿಗೆ ಕತ್ತರಿ ಹಾಕಿದ ಕೂಡಲೇ ಆತನೇನು ಧರ್ಮಭ್ರಷ್ಟನಾಗೋದಿಲ್ಲ. ನಮ್ಮ ಸಚ್ಚೇ ಗುರುವಿಗೆ ಶರಣಾಗಿ ಆತನ ಅನುಗ್ರಹವಿದ್ದರೆ ಆತ ತನ್ನ ಮೊದಲ ಸ್ವರೂಪಕ್ಕೆ ಬದಲಾಗಿ ಬಿಡುತ್ತಿದ್ದ’.
5. ಧೃಡತೆ.
‘ಯಾವ ಕಾರಣಕ್ಕೂ ನಾನು ಸಿಖ್ ಆಗಿ ಮತಾಂತರವಾಗಲಾರೆ, ಮರ್ಯಾದೆಯಿಂದ ನನ್ನ ಕ್ಷೌರಕತ್ತಿ ವಾಪಾಸ್ ಕೊಡಿ’
5. ಮಾನವೀಯತೆ.
‘ ಅಯ್ಯೋ ದಯವಿಟ್ಟು ನನ್ನ ಮಗಳನ್ನು ನನ್ನ ಕಣ್ಣೆದುರಿನಲ್ಲೇ ಕೊಲ್ಲದಿರಿ’.
‘ಸರಿ, ಸರಿ, ಆಕೆಯ ಬಟ್ಟೆ ಬಿಚ್ಚಿ ಓಡಿಸಿ’.
6. ದೇವರು ದೊಡ್ಡವನು !
ಆ ಸಂಜೆ ಕೊನೆಗೂ ಮುಗಿಯಿತು ಮತ್ತು ಆ ಮುಜ್ರಾ ನರ್ತಕಿಯ ಗಿರಾಕಿಗಳು ಒಬ್ಬೊಬ್ಬರೇ ಮನೆಗೆ ತೆರಳಿದರು.
ಮುಜ್ರಾವನ್ನು ವ್ಯವಸ್ಥೆ ಮಾಡಿದ್ದ ಮುದುಕ ನಿಟ್ಟುಸಿರುಬಿಟ್ಟ, ‘ ಆ ದೇಶದಲ್ಲಿ ಎಲ್ಲವನ್ನೂ ಕಳೆದುಕೊಂಡು ಇಲ್ಲಿಗೆ ಬಂದೆವು, ಆದರೂ ಅಲ್ಲಾಹ್ ಕೈ ಬಿಡಲಿಲ್ಲ. ಕೆಲವೇ ದಿನಗಳಲ್ಲಿ ನಮಗೆ ಒಳ್ಳೆಯ ದಿನಗಳು ಲಭಿಸಿದವು’.
7.ವಿಶ್ರಾಂತಿ.
‘ನೋಡು ಅವನಿನ್ನೂ ಸತ್ತಿಲ್ಲ. ಜೀವ ಇದ್ದ ಹಾಗೆ ಕಾಣ್ತಾ ಇದೆ’.
‘ ಏಯ್ ಇರ್ಲಿ ಬಿಡೊ, ನನಗೂ ಕೈ ನೋಯ್ರಾ ಇದೆ’.
8. ನ್ಯಾಯ.
‘ನೋಡು ಇದು ಅನ್ಯಾಯ. ಕಾಳಸಂತೆ ಬೆಲೆಯಲ್ಲಿ ಕಳಪೆ ಪೆಟ್ರೋಲ್ ಮಾರಾಟ ಮಾಡಿದ್ದೀಯ ನೀನು, ಒಂದೇ ಒಂದು ಅಂಗಡಿಯನ್ನು ಸುಡೋಕಾಗಿಲ್ಲ’.
9. ಅದೃಷ್ಟ.
‘ಏನ್ ದುರಾದೃಷ್ಟ ನೋಡೋ ನಂದು, ಅಷ್ಟೆಲ್ಲಾ ಕಷ್ಟಪಟ್ಟು ನನಗೆ ಸಿಕ್ಕಿದ್ದು ಈ ಒಂದು ಪೆಟ್ಟಿಗೆ ಮಾತ್ರ…. ಅದರಲ್ಲಿ ಕೂಡಾ ಸಿಕ್ಕಿದ್ದು ಹಂದಿ ಮಾಂಸ’.
10. ಕೇಳೋರೇ ಇಲ್ಲ
‘ಎಂತಹಾ ದರಿದ್ರ ಜನಗಳಪ್ಪಾ ಇವ್ರು, ಮಸೀದಿಯೊಳಗೆ ಬಿಸಾಡೋಕೆ ಅಂತ ಕಷ್ಟ ಪಟ್ಟು ಒಂದೈವತ್ತು ಹಂದಿಗಳನ್ನು ಕಡ್ದು ಕಾಯ್ತಾ ಇದ್ದೀನಿ, ಒಂದೇ ಒಂದು ಗಿರಾಕಿ ಸಿಗ್ತಾ ಇಲ್ಲ, ಗಡಿಯಾಚೆ ನೋಡು, ಅಲ್ಲಿನ ಜನ ದನದ ಮಾಂಸಕ್ಕೊಸ್ಕರ ಕ್ಯೂ ನಿಂತಿದ್ದಾರೆ, ಇಲ್ಲಿ ಹಂದಿ ಮಾಂಸನ ಕೇಳೋರೇ ಇಲ್ಲ’.
11. ತಪ್ಪನ್ನು ತಿದ್ದಲಾಯಿತು.
‘ಯಾರಯ್ಯ ನೀನು’
‘ಹರ್ ಹರ್ ಮಹಾದೇವ್, ಹರ್ ಹರ್ ಮಹದೇವ್, ಹರ್ ಹರ್ ಮಹಾದೇವ್’!
‘ನೀನು ಅದೇ ಎಂದು ಹೇಳೋದಕ್ಕೆ ಸಾಕ್ಷಿ ಏನಿದೆ’
‘ನನ್ನ ಹೆಸರು ಧರಮ್ ಚಂದ್’
‘ಅದು ಸಾಕ್ಷಿಯಾಗೋದಿಲ್ಲ’
‘ಸರಿ ಸರಿ, ನನಗೆ ನಾಲಕ್ಕು ವೇದಗಳೂ ಬಾಯಿಪಾಠ ಬರುತ್ತವೆ, ಬೇಕಿದ್ದರೆ ಪರೀಕ್ಷಿಸಿ’
‘ನಮಗೆ ವೇದ ಗೀದ ಎಲ್ಲಾ ಬರೋದಿಲ್ಲ, ಸಾಕ್ಷಿ ಕೊಡು’
‘ಏನೂ?!’
‘ನಿನ್ನ ಪೈಜಾಮ ಕೆಳಗೆ ಮಾಡು’
ಆತ ತನ್ನ ಪೈಜಾಮ ಕೆಳಗೆ ಜಾರಿಸಿದ ತಕ್ಷಣ ಅಲ್ಲೊಂದು ಬೊಬ್ಬೆ ಕೇಳಿಸಿತು,’ಕೊಲ್ಲಿ ಕೊಲ್ಲಿ ಆತನನ್ನು’.
‘ಅಯ್ಯೋ ದಯವಿಟ್ಟು ನಿಲ್ಲಿ, ನಾನು ನಿಮ್ಮ ಸಹೋದರ, ದೇವರಾಣೆಗೂ..’
‘ಹಾಗಾದರೆ ಇದೇನು?’
‘ನಾನು ಹಾದು ಬರಬೇಕಾಗಿದ್ದ ಆ ದಾರಿ ಶತ್ರುಗಳ ನಿಯಂತ್ರಣದಲ್ಲಿತ್ತು, ನಾನು ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು ಅದಿಕ್ಕೆ ಇದೊಂದೇ ತಪ್ಪು ನಾನು ಮಾಡಿದ್ದು ನಮ್ಮ ಜೀವ ಉಳಿಸುವುದಕ್ಕೋಸ್ಕರ, ಮತ್ತೆಲ್ಲವೂ ಸರಿ ಇದೆ, ಇದೊಂದೇ ತಪ್ಪು ನಾನು ಮಾಡಿದ್ದು’.
‘ಸರಿ, ತಪ್ಪನ್ನು ತಿದ್ದಿ ಬಿಡಿ’.
ಹಾಗೆ, ತಪ್ಪು ನಿವಾರಿಸಲ್ಪಟ್ಟಿತು, ಜೊತೆಗೆ ಧರಮ್ ಚಂದನು ಕೂಡಾ.