Homeಮುಖಪುಟಮೋದಿ, ಅಮಿತ್ ಶಾ ಕುರಿತು ಕಟುಟೀಕೆಯೇ ಸಂಜೀವ್ ಭಟ್ ಜೀವಾವಧಿ ಶಿಕ್ಷೆಗೆ ಕಾರಣವೆ?

ಮೋದಿ, ಅಮಿತ್ ಶಾ ಕುರಿತು ಕಟುಟೀಕೆಯೇ ಸಂಜೀವ್ ಭಟ್ ಜೀವಾವಧಿ ಶಿಕ್ಷೆಗೆ ಕಾರಣವೆ?

ಶ್ವೇತಾ ಭಟ್ ಅವರ ಕಾರಿಗೆ ನಂಬರ್ ಪ್ಲೇಟ್ ರಹಿತ ಲಾರಿಯೊಂದನ್ನು ಗುದ್ದಿಸಿ ಅವರನ್ನು ಕೊಲ್ಲುವ ಯತ್ನ ನಡೆಸಲಾಯಿತು ಎಂದೂ ವರದಿಯಾಗಿತ್ತು.

- Advertisement -
- Advertisement -

| ಶ್ರೀನಿವಾಸ ಕಾರ್ಕಳ |

1989ರ ಕಸ್ಟಡಿ ಸಾವು ಪ್ರಕರಣದಲ್ಲಿ ಗುಜರಾತಿನ ಮಾಜಿ ಪೊಲೀಸ್ ಅಧಿಕಾರಿ ಸಂಜೀವ್ ಭಟ್ ಅವರಿಗೆ ಜಾಮ್ ನಗರ್ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ. ಈ ಕುರಿತು ಕಸ್ಟಡಿ ಸಾವಿಗೆ ಜೀವಾವಧಿ ಶಿಕ್ಷೆಯೇ? ಅದು ಮೋದಿಯ ವಿರುದ್ಧ ಸಾಕ್ಷಿ ನುಡಿದಿದ್ದ ವ್ಯಕ್ತಿಗೆ? ಇದರಲ್ಲಿ ರಾಜಕೀಯವಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಜೀವ್ ಭಟ್ ಮತ್ತು ಮೋದಿ ನಡುವೆ ಇದ್ದ ವೈಮನಸ್ಸನ್ನು ಕುರಿತು ಶ್ರೀನಿವಾಸ ಕಾರ್ಕಳ ರವರು ಮೇ 1 ರಂದು ಬರೆದಿದ್ದ ಲೇಖನವನ್ನು ಮರುಪ್ರಕಟಿಸುತ್ತಿದ್ದೇವೆ.

“ಶತ್ರುಗಳ ಮನೆಗೇ ನುಗ್ಗಿ ಅವರನ್ನು ಕೊಲ್ಲುವುದು ನನ್ನ ಜಾಯಮಾನ” ಎಂದು ನರೇಂದ್ರ ಮೋದಿಯವರು ಆಗಾಗ ಹೇಳುತ್ತಿರುತ್ತಾರೆ. ಅವರ ಈ ಮಾತು ಬರೇ ಬೊಗಳೆಯಲ್ಲ. ಪಾಕಿಸ್ತಾನದ ವಿಷಯದಲ್ಲಿ ಅವರ ಈ “ಶತ್ರುಗಳ ಮನೆಗೇ ನುಗ್ಗಿ ಹೊಡೆದುಹಾಕುವ” ಕಾರ್ಯಾಚರಣೆಗಳು ಚರ್ಚಾರ್ಹವಿರಬಹುದು, ಕೆಲವೊಮ್ಮೆ ಹಾಸ್ಯಾಸ್ಪದವೂ ಇರಬಹುದು. ಆದರೆ ತಮ್ಮ ವಿರೋಧಿಗಳ ವಿಷಯದಲ್ಲಿ ಅವರು ನಡೆದುಕೊಂಡ ರೀತಿಯ ಮಟ್ಟಿಗೆ ಅವರ ಈ ಮಾತು ಸತ್ಯಕ್ಕೆ ತುಂಬ ಹತ್ತಿರವಿರುವಂಥದ್ದು. ಗುಜರಾತ್ ನರಮೇಧದ ಬಳಿಕದ ವಿದ್ಯಮಾನಗಳನ್ನು ಪರಾಂಬರಿಸಿ ನೋಡಿದರೆ ಹಳೆಯ ದ್ವೇಷ ಮುಂದುವರಿಸುತ್ತಾ ಮೋದಿ ಮತ್ತು ಶಾ ಜೋಡಿ ತಮ್ಮ ವಿರೋಧಿಗಳನ್ನು ಮಟ್ಟಹಾಕಲು ಮಾಡಿದ ಅವಿರತ ಯತ್ನಗಳ ಅಸಂಖ್ಯ ಉದಾಹರಣೆಗಳನ್ನು ನೋಡಬಹುದು (ಗುಜರಾತ್ ಮಾಜಿ ಗೃಹಮಂತ್ರಿ ಹರೇನ್ ಪಾಂಡ್ಯ ಹತ್ಯೆ ಮತ್ತು ಜಸ್ಟಿಸ್ ಲೋಯಾ ನಿಗೂಢ ಸಾವು ಈಗಲೂ ಅನೇಕ ಅನುಮಾನಗಳನ್ನು ಹುಟ್ಟು ಹಾಕಿದ್ದು, ಗುಮಾನಿಯ ಬೆರಳುಗಳು ನಿರ್ದಿಷ್ಟ ಇಬ್ಬರು ವ್ಯಕ್ತಿಗಳತ್ತಲೇ ತಿರುಗಿರುವುದು ಅಚ್ಚರಿಯ ಸಂಗತಿಯೇನಲ್ಲ).

ರಾಜಕೀಯದಲ್ಲಿ ಶತ್ರುತ್ವ ತುಂಬ ಸಹಜ. ಆದರೆ ಮುತ್ಸದ್ದಿಗಳೆನಿಸಿದ ಹೆಚ್ಚಿನ ರಾಜಕಾರಣಿಗಳು ತಮ್ಮ ಸ್ಥಾನದ ಘನತೆಯನ್ನು ಕಾಪಾಡಿಕೊಂಡು ಅವೆಲ್ಲವನ್ನೂ ಮರೆತು ಮುಂದುವರಿಯುವುದಿದೆ. ಆದರೆ ಗುಜರಾತ್‍ನ ಈ ಜೋಡಿ ಹಾಗಲ್ಲ. ಅವರು ತಮ್ಮ ಶತ್ರುಗಳನ್ನು ಎಂದೂ ಮರೆಯುವುದಿಲ್ಲ, ಆ ಶತ್ರುಗಳನ್ನು ಹಣ್ಣುಗಾಯಿ, ನೀರುಗಾಯಿ ಮಾಡದೆ ಅವರು ವಿರಮಿಸುವವರೂ ಅಲ್ಲ.

2002ರ ಗುಜರಾತ್ ನರಮೇಧ ನಡೆದಾಗ ಅಲ್ಲಿನ ಮುಖ್ಯಮಂತ್ರಿಯಾಗಿದ್ದವರು ನರೇಂದ್ರ ಮೋದಿ. ಸದರಿ ನರಮೇಧವನ್ನು ಸ್ವತಃ ಮೋದಿಯವರು ನಡೆಸಿದರು ಎಂದು ಅವರ ವಿರೋಧಿಗಳೂ ಆಪಾದಿಸುವುದಿಲ್ಲ. ಆದರೆ ಮುಖ್ಯಮಂತ್ರಿಯಾಗಿದ್ದ ಅವರಿಗೆ ಆ ನರಮೇಧವನ್ನು ತಡೆಯುವ ಹೊಣೆಗಾರಿಕೆಯಿತ್ತು. ಆ ಹೊಣೆಗಾರಿಕೆಯನ್ನು ಅವರು ನಿಭಾಯಿಸುವಲ್ಲಿ ವಿಫಲರಾದರು. ನರಮೇಧವನ್ನು ಅತ್ಯಂತ ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದವರು ತಡೆಯಲು ಕನಿಷ್ಠ ಯತ್ನವನ್ನೂ ಮಾಡದಿರುವುದು ಎಂದರೆ ಒಂದರ್ಥದಲ್ಲಿ ಆ ಅಪರಾಧದಲ್ಲಿ ಭಾಗಿಯಾದುದಕ್ಕೆ ಸಮ.

ಒಂದೆಡೆಯಲ್ಲಿ ನರಮೇಧ ತಡೆಯಲು ಪರಿಣಾಮಕಾರಿಯಾಗಿ ಯತ್ನಿಸಲಿಲ್ಲ, ಇನ್ನೊಂದೆಡೆಯಲ್ಲಿ ನರಮೇಧದ ಅಪರಾಧಿಗಳಿಗೆ ಸರಿಯಾದ ಶಿಕ್ಷೆ ಆಗುವಂತೆಯೂ ನೋಡಿಕೊಳ್ಳಲಿಲ್ಲ. ನ್ಯಾಯ ಒದಗಿಸಬೇಕಾದ ಪ್ರಭುತ್ವವೇ ಅನ್ಯಾಯ ಎಸಗುತ್ತದೆ ಎಂಬುದು ಅರಿವಾಗುತ್ತಲೇ ತೀಸ್ತಾ ಸೆಟಲ್ವಾಡ್‍ರಂತಹ ಮಾನವತಾವಾದಿ ಹೋರಾಟಗಾರರು ದೊಡ್ಡ ರಿಸ್ಕ್ ತೆಗೆದುಕೊಂಡು ರಂಗಕ್ಕಿಳಿದರು, ಕೋರ್ಟ್ ಮೆಟ್ಟಲು ಹತ್ತಿದರು. ಗುಜರಾತಿನ ಪ್ರಕರಣಗಳನ್ನು ಸುಪ್ರೀಂ ಕೋರ್ಟು ಗಂಭೀರವಾಗಿ ಪರಿಗಣಿಸುವಂತೆ, ಕೆಲವೊಂದು ಪ್ರಕರಣಗಳಲ್ಲಿ ನ್ಯಾಯನೀಡುವಂತೆ ಮಾಡಲು ತೀಸ್ತಾರ ಈ ಯತ್ನ ಕಾರಣವಾಗಿತ್ತು. “ಗುಜರಾತ್ ಹೊತ್ತಿ ಉರಿಯುತ್ತಿದ್ದಾಗ ಆಧುನಿಕ ದಿನಗಳ ನೀರೋ ಬೇರೆಡೆಗೆ ನೋಡುತ್ತ ಕುಳಿತಿದ್ದ” ಎಂದು ನ್ಯಾಯಾಲಯ ಕಟುವಾಗಿ ಟೀಕಿಸುವಂತಾಯಿತು.

ಇದೇ ಕಾರಣಕ್ಕೆ ಮೋದಿಯವರ ಕೆಂಗಣ್ಣಿಗೆ ಗುರಿಯಾದರು ತೀಸ್ತಾ. ತೀಸ್ತಾರ ದುರದೃಷ್ಟಕ್ಕೆ ಮೋದಿಯರು ಮುಂದೆ ದೇಶದ ಪ್ರಧಾನಿಯೇ ಆದರು. ಆ ಬಳಿಕವೂ ತೀಸ್ತಾರನ್ನು ಮರೆಯದ ಮೋದಿಯವರು ಆಕೆಯನ್ನು ಜೈಲಿಗೆ ತಳ್ಳಲು ನಡೆಸಿದ ಯತ್ನ ಒಂದೆರಡು ಬಾರಿಯದಲ್ಲ. ತೀಸ್ತಾರ ಎನ್‍ಜಿಒ ಸಂಪೂರ್ಣ ನಿಷ್ಕ್ರಿಯವಾಗುವಂತೆ ಮಾಡಲಾಯಿತು. ಮಾತ್ರವಲ್ಲ, ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಿರದಿದ್ದರೆ ಕಳೆದ ಐದು ವರ್ಷಗಳಿಂದಲೂ ಅವರು ಜೈಲಿನಲ್ಲಿರಬೇಕಾಗಿತ್ತು.

ಗುಜರಾತ್ ಗಲಭೆಯ ವಿಷಯಕ್ಕೆ ಬಂದಾಗ ತೀಸ್ತಾ ಸೆಟಲ್‍ವಾಡರ ಸಾಲಿನಲ್ಲಿಯೇ ಕೇಳಿಬರುವ ಇನ್ನೊಂದು ಹೆಸರು ಸಂಜೀವ ಭಟ್. ಗುಜರಾತಿನ  ಪೊಲೀಸ್ ಅಧಿಕಾರಿಯಾಗಿದ್ದ ಭಟ್ ಅವರು ಸದರಿ ಗಲಭೆಯಲ್ಲಿ ಮೋದಿಯವರ ಪಾತ್ರವನ್ನು ಬೆಟ್ಟು ಮಾಡಿದವರು; ಮೋದಿಯವರ ವಿರುದ್ಧ ಸಾಕ್ಷ್ಯ ನುಡಿದವರು. “ತಮ್ಮ ಆಕ್ರೋಶವನ್ನು ಹೊರಹಾಕಲು ಹಿಂದೂಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಗಲಭೆಯ ಸಮಯದ ಅಧಿಕಾರಿಗಳ ಸಭೆಯೊಂದರಲ್ಲಿ ಮೋದಿಯವರು ಹೇಳಿದ್ದರು, ನಾನೂ ಆ ಸಭೆಯಲ್ಲಿದ್ದೆ” ಎಂದು ನ್ಯಾಯಾಲಯದಲ್ಲಿ ಪ್ರಮಾಣಪತ್ರ ಸಲ್ಲಿಸಿ ಮೋದಿಯವರ ಶತ್ರುತ್ವ ಕಟ್ಟಿಕೊಂಡವರು. ಆ ಸಭೆಯಲ್ಲಿ ಸಂಜೀವ್ ಭಟ್ ಇದ್ದರೇ, ಮೋದಿ ಹಾಗೆ ಹೇಳಿದ್ದರೇ ಎಂಬುದೆಲ್ಲ ಸಾಬೀತಾಗಿಲ್ಲ, ಮಾತ್ರವಲ್ಲ ಅದು ಅನೇಕ ಅನುಮಾನಗಳಿಗೂ ಕಾರಣವಾಗಿದೆ.

ಆದರೆ ಸಂಜೀವ್ ಭಟ್ ತಮ್ಮ ವಿರುದ್ದ ಮಾತನಾಡಿದ್ದನ್ನು ಮೋದಿಯವರು ಹಗುರವಾಗಿ ತೆಗೆದುಕೊಳ್ಳಲಿಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಲೇ ಅವರ ನೇತೃತ್ವದ ಗುಜರಾತ್ ಸರಕಾರ ಭಟ್ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಶುರು ಮಾಡಿತು. ಅವರನ್ನು ಕೆಲಸದಿಂದ ಅಮಾನತು ಮಾಡಲಾಯಿತು, ಅವರ ಮೇಲಿನ ಹಳೆಯ ಕೇಸುಗಳನ್ನು ಮತ್ತೆ ತೆರೆಯಲಾಯಿತು. ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂದೆಗೆದುಕೊಳ್ಳಲಾಯಿತು. ಅವರ ಮನೆಯ ಒಂದು ಭಾಗವನ್ನು ಕೆಡವಲಾಯಿತು. ಮೋದಿಯವರು ದೇಶದ ಪ್ರಧಾನಿಯಾದ ಬಳಿಕವಂತೂ ಭಟ್ ಅವರ ಮೇಲಿನ ಪ್ರತೀಕಾರ ಕ್ರಮಗಳು ಇನ್ನೂ ಹೆಚ್ಚಾದವು. ಅವರನ್ನು ಕೆಲಸದಿಂದಲೇ ವಜಾ ಮಾಡಲಾಯಿತು.

ಆದರೆ ಯಾವುದಕ್ಕೂ ಎದೆಗುಂದದ ಸಂಜೀವ ಭಟ್ ತಮ್ಮ ದಿಟ್ಟ ಮತ್ತು ಮೊನಚು ಮಾತುಗಳ ಮೂಲಕ ಮೋದಿಯವರ ನಡೆನುಡಿಗಳನ್ನು ಗೇಲಿ ಮಾಡುವ ಕೆಲಸ ಮುಂದುವರಿಸುತ್ತಲೇ ಹೋದರು. ಟ್ವಿಟರ್ ಮತ್ತು ಫೇಸ್‍ಬುಕ್‍ನಂತಹ ಸೋಶಿಯಲ್ ಮೀಡಿಯಾದಲ್ಲಿನ ಮೋದಿ ವಿರೋಧಿ ಬರೆಹಗಳ ಕಾರಣ ಅವರಿಗೆ ಲಕ್ಷಾಂತರ ಅಭಿಮಾನಿಗಳೂ ಹುಟ್ಟಿಕೊಂಡರು. ಆದರೆ ಸಂಜೀವ ಭಟ್ಟರಿಗೊಂದು ಪಾಠ ಕಲಿಸಲು ಹೊಂಚು ಹಾಕುತ್ತಲೇ ಇದ್ದ ಫ್ಯಾಸಿಸ್ಟ್ ಸರಕಾರದ ಏಜನ್ಸಿಗಳು ಕೊನೆಗೂ 23 ವರ್ಷಗಳ ಹಿಂದಿನ ಕೇಸೊಂದರಲ್ಲಿ ಅವರನ್ನು ಸೆಪ್ಟಂಬರ್ 5, 2018 ರಂದು ಜೈಲಿಗೆ ತಳ್ಳುವಲ್ಲಿ ಯಶಸ್ವಿಯಾದವು.

ಅಚ್ಚರಿಯ ಮತ್ತು ಆಘಾತಕಾರಿ ಅಂಶವೆಂದರೆ ನ್ಯಾಯಾಲಯ ಕೂಡಾ ಸಂಜೀವ್ ಭಟ್ ಅವರ ನೆರವಿಗೆ ಬರಲಿಲ್ಲ. ಸಂಜೀವ ಭಟ್ಟರನ್ನು ಭೇಟಿಯಾಗಲು ಅವರ ಪತ್ನಿ ಶ್ವೇತಾ ಭಟ್ಟರಿಗೂ ಸರಿಯಾಗಿ ಅವಕಾಶವನ್ನೂ ಕೊಡಲಿಲ್ಲ. ಅವರನ್ನು ಎಲ್ಲಿಟ್ಟಿದ್ದಾರೆ ಎಂಬುದೂ ಸರಿಯಾಗಿ ತಿಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಶ್ವೇತಾ ಭಟ್ ಅವರು ಸುಪ್ರೀಂಕೋರ್ಟ್ ಮೆಟ್ಟಲೇರಿದರೂ ಅವರಿಗೆ ನ್ಯಾಯ ದೊರಕಲಿಲ್ಲ. ಈ ನಡುವೆ ಶ್ವೇತಾ ಭಟ್ ಅವರ ಕಾರಿಗೆ ನಂಬರ್ ಪ್ಲೇಟ್ ರಹಿತ ಲಾರಿಯೊಂದನ್ನು ಗುದ್ದಿಸಿ ಅವರನ್ನು ಕೊಲ್ಲುವ ಯತ್ನ ನಡೆಸಲಾಯಿತು ಎಂದೂ ವರದಿಯಾಗಿತ್ತು.

ಸಂಜೀವ್ ಭಟ್‍ರನ್ನು ಬಂಧಿಸಿ ಸರಿ ಸುಮಾರು 10 ತಿಂಗಳುಗಳಾದವು. ಬಲಾಢ್ಯ ರಾಜಕಾರಣಿಯೊಬ್ಬರನ್ನು ಎದುರು ಹಾಕಿಕೊಂಡದ್ದಕ್ಕೆ ಪ್ರತೀಕಾರ ಕ್ರಮವಾಗಿಯೇ ಅವರನ್ನು ಬಂಧಿಸಿ ಜೈಲಿನಲ್ಲಿರಿಸಲಾಗಿದ್ದಲ್ಲದೇ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂಬ ಆರೋಪ ಜೋರಾಗಿಯೇ ಕೇಳಿಬಂದಿದೆ. ಇದು ದೇಶದ ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ, ಸಂವಿಧಾನಾತ್ಮಕ ಹಕ್ಕುಗಳ ಬಗ್ಗೆ, ನ್ಯಾಯಾಂಗದ ಬಗ್ಗೆ ಜನತೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡುವ ಒಂದು ವಿದ್ಯಮಾನ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...