Homeಮುಖಪುಟಶಾಸಕನ ಪತ್ನಿಯಾಗಿ ಬಡತನದಲ್ಲೇ ಬದುಕಿದ ಏಕೈಕ ವ್ಯಕ್ತಿ ಗೋಪಾಲಗೌಡರ ಪತ್ನಿ ಸೋನಕ್ಕ ನಿಧನ

ಶಾಸಕನ ಪತ್ನಿಯಾಗಿ ಬಡತನದಲ್ಲೇ ಬದುಕಿದ ಏಕೈಕ ವ್ಯಕ್ತಿ ಗೋಪಾಲಗೌಡರ ಪತ್ನಿ ಸೋನಕ್ಕ ನಿಧನ

- Advertisement -
- Advertisement -

| ಬಿ. ಚಂದ್ರೇಗೌಡ |

ಗೋಪಾಲಗೌಡರ ನಿಧನಾನಂತರ 48 ವರ್ಷ ಬದುಕಿದ್ದ ಸೋನಕ್ಕ ತಮ್ಮ ತಂದೆಯವರ ಆದರ್ಶಕ್ಕೋಸ್ಕರ ಗೋಪಾಲಗೌಡರನ್ನ ಕೈಹಿಡಿದು ಬಡ ಕಾರ್ಮಿಕ ಮಹಿಳೆಯಂತೆ ಬದುಕಬೇಕಾಯ್ತು. ಆದರೂ ಕರ್ನಾಟಕದ ರಾಜಕೀಯಾಗಸದಲ್ಲಿ ನಕ್ಷತ್ರದಂತೆ ಮಿನುಗುತ್ತಿರುವ ಧೀಮಂತ ರಾಜಕಾರಣಿಯೊಬ್ಬರ ಪತ್ನಿಯಾಗಿದ್ದ ಸಾರ್ಥಕಭಾವ ಅವರಲ್ಲಿ ಕಡೆವರೆಗೂ ಇತ್ತು.

ಕಳೆದವಾರ ಗೋಪಾಲಗೌಡರ ಪತ್ನಿ ಸೋನಕ್ಕನವರು ನಿಧನರಾದರು. ಅಲ್ಲಿಗೆ ಗೋಪಾಲಗೌಡರ ಕಾಲದ ಇತಿಹಾಸದ ಕೊಂಡಿಯೊಂದು ಕಳಚಿದಂತಾಯ್ತು. ಸೋನಕ್ಕನವರು ಗೌಡರ ನಿಧನಾನಂತರ 48 ವರ್ಷಗಳ ಕಾಲ ಬದುಕಿದ್ದರು. ಗೌಡರು ಬದುಕಿದಷ್ಟು ಕಾಲ, ಅವರ ಪ್ರಾಮಾಣಿಕ ರಾಜಕಾರಣಕ್ಕೆ ತೊಂದರೆಯಾಗದಂತೆ ಹೆಣಗಿದರು. ಶಾಸಕನ ಪತ್ನಿಯಾಗಿ ಬಡತನದಲ್ಲೇ ಬದುಕಿದ ಏಕೈಕ ವ್ಯಕ್ತಿ ಸೋನಕ್ಕ.

ಗಾಂಧೀಜಿಯವರ ಬಗ್ಗೆ ಆಲ್ಬರ್ಟ್ ಐನ್‌ಸ್ಟಿನ್ ಹೇಳಿರುವ ಮಾತು ಜಗದ್ವಿಖ್ಯಾತವಾಗಿದೆ. ಅದೇನೆಂದರೆ, “ಇಂತಹ ಒಂದು ಚೈತನ್ಯ, ದೇಹದಾರಿಯಾಗಿ ಈ ಭೂಮಿಯ ಮೇಲೆ ನಡೆದಾಡಿತ್ತು ಎಂದು ಮುಂದಿನ ಜನಾಂಗ ನಂಬಲಾರದಂತಹ ವ್ಯಕ್ತಿ ಗಾಂಧಿ” ಎಂದು ಉದ್ಘರಿಸಿದ್ದರು. ಅದೇ ಮಾತನ್ನು ನಾವು ಭಾರತದ ರಾಜಕಾರಣದ ಸಂದರ್ಭದಲ್ಲಿ, ಗೋಪಾಲಗೌಡರನ್ನು ಕುರಿತು ಹೆಮ್ಮೆಯಿಂದ ಹೇಳಬಹುದು. ಮೂರು ಬಾರಿ ಶಾಸಕರಾಗಿದ್ದ ಅವರು ತೀರಿಕೊಂಡಾಗ ಸ್ವಂತಕ್ಕೆ ಒಂದು ಮನೆ ಇರಲಿಲ್ಲ. ಇಕ್ಕಿಕೊಂಡ ಜುಬ್ಬವೂ ಯಾರೋ ಕೊಟ್ಟದ್ದು. ಈತರದ ರಾಜಕಾರಣಿಯೊಬ್ಬ ಕರ್ನಾಟಕದ ರಾಜಕಾರಣದಲ್ಲಿದ್ದು ನಿರ್ಗಮಿಸಿದರೆಂಬ ಸಂಗತಿಯನ್ನು ಈಗಿನ ತಲೆಮಾರು ಕೂಡ ನಂಬಲಾರದು.

ಗೋಪಾಲಗೌಡರು ಮದುವೆಯನ್ನೂ ಮರೆತು ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು. ಈ ನವೆಂಬರ್ ತಿಂಗಳಲ್ಲಿ ಅವರನ್ನು ನೆನೆಸಿಕೊಳ್ಳುವುದು ಸೂಕ್ತ. ಕರ್ನಾಟಕ ಏಕೀಕರಣವಾದ ನಂತರದ ಮೊದಲ ರಾಜ್ಯೋತ್ಸವವನ್ನ ಮಾಡಿ ಅಂದಿನ ಮುಖ್ಯಮಂತ್ರಿ ನಿಜಲಿಂಗಪ್ಪನವರನ್ನು ಕರೆದು ಭಾಷಣ ಮಾಡಿಸಿದ್ದರು. ಕನ್ನಡದ ಶ್ರೇಷ್ಠ ಕವಿಗಳನ್ನೆಲ್ಲಾ ಅವರು ಓದಿಕೊಂಡಿದ್ದರು. ರಾಜಕಾರಣದಲ್ಲಿ ಪೂರ್ಣ ಮುಳುಗಿಹೋಗಿದ್ದ ಅವರು ಮದುವೆ, ಮಕ್ಕಳು, ಸಂಸಾರದ ಚಿಂತನೆಯಿಂದ ದೂರವಿದ್ದರು. ಆ ಸಮಯದಲ್ಲಿ ಕರ್ನಾಟಕದ ಏಕೀಕರಣದ ನಂತರ ಡಾ.ನಾಡಗೌಡರು ಮತ್ತು ಡಿ.ಎಲ್.ಪಾಟೀಲರು ಕಡಿದಾಳು ಮಂಜಪ್ಪನವರಿಗೆ ಗೆಳೆಯರಾದರು. ಡಿ.ಎಲ್.ಪಾಟೀಲರು ಧಾರವಾಡದಲ್ಲಿ ಪ್ರಸಿದ್ಧ ವಕೀಲರು. ಇಂದಿನ ಹೆಚ್.ಕೆ.ಪಾಟೀಲರ ಸಂಬಂಧಿಗಳಾಗಿದ್ದ ಅವರು ತಮ್ಮ ಮಗಳನ್ನು ಗೋಪಾಲಗೌಡರಿಗೆ ಕೊಟ್ಟು ಮದುವೆ ಮಾಡುವ ಅಪೇಕ್ಷೆ ವ್ಯಕ್ತಪಡಿಸಿದರು. ಈ ವಿಷಯವಾಗಿ ಕಡಿದಾಳರ ಜೊತೆ ಮಾತನಾಡಿ ಎಂದು ನಾಗನಗೌಡರಿಗೆ ಹೇಳಿದರು. ಅದರಂತೆ ಗೌಡರು ತಮ್ಮ ಗೆಳೆಯರಾದ ಕಡಿದಾಳು ಮಂಜಪ್ಪನವರನ್ನು ಕೋರಿದರು.

ಆಗ ಮಂಜಪ್ಪನವರು ಕಾಂಗ್ರೆಸ್ ನಾಯಕರು. ಗೋಪಾಲಗೌಡರು ಸೋಷಲಿಸ್ಟ್ ಲೀಡರು. ಈ ಲೀಡರುಗಳು ಮುಖಾಮುಖಿಯಾಗುತ್ತಿದ್ದುದು ವಿಧಾನಸಭೆಯಲ್ಲಿ ಮಾತ್ರ. ಆದರೂ ಪರಸ್ಪರ ಗೌರವವುಳ್ಳವರಾಗಿದ್ದರು. ಇಷ್ಟಾದರೂ ಕಡಿದಾಳು ಮಂಜಪ್ಪನವರು ಗೋಪಾಲಗೌಡರನ್ನು ಭೇಟಿಮಾಡಿ ಮದುವೆಯಾಗುತ್ತೀರಾ ಎಂದು ಕೇಳುವ ಧೈರ್ಯವಿರಲಿಲ್ಲ. ಏಕೆಂದರೆ ಗೌಡರು “ನನ್ನ ಮದುವೆ ಕಟಿಕೊಂಡು ನಿನಿಗೇನು” ಎಂದರೆ ಎಂಬ ಅಳುಕು. ಆದ್ದರಿಂದ ಮಂಜಪ್ಪನವರು ಗೋಪಾಲಗೌಡರ ಪ್ರಥಮ ಶಿಷ್ಯ ಕೊಣಂದೂರು ಲಿಂಗಪ್ಪನನ್ನ ಕುರಿತು “ಅವುನೇನು ಮದಿವಾಯ್ತನೋ ಇಲ್ಲವೊ ಕೇಳಯ್ಯ. ನನ್ನ ಗೆಳೆಯರು ಹೆಣ್ಣು ಕೊಡಕ್ಕೆ ಬಂದಿದ್ದಾರೆ” ಎಂದು ಜುಬ್ಬದ ತೋಳನ್ನ ಹಿಂದೆ ಸರಿಸುತ್ತಾ ಹೇಳಿದರು. ಏನೇನು ಇಲ್ಲದ ಆ ರಟ್ಟೆಗಳನ್ನು ಪೈಲ್ವಾನನಂತೆ ಹಿಂದೆ ಸರಿಸುತ್ತ ಮಾತನಾಡುತ್ತಿದ್ದ ಮಂಜಪ್ಪನವರ ಬಗ್ಗೆ ಲಿಂಗಪ್ಪನವರಿಗೆ ಒಳಗೊಳಗೇ ನಗು. “ಆಯ್ತು ಗೌಡರನ್ನ ಈ ಬಗ್ಗೆ ಕೇಳ್ತಿನಿ” ಎಂದು ಹೇಳಿ ಬಂದರು. ನಂತರ ಗೋಪಾಲಗೌಡರ ಜೊತೆ ಅಳುಕುತ್ತಲೇ “ಕಡಿದಾಳು ಮಂಜಪ್ಪನವರ ಮನೆಗೋಗಿದ್ದೆ” ಎಂದರು. “ಅದರಲ್ಲೇನು ವಿಶೇಷ ಹೋಗ್ತಾಯಿರ್ತಿ, ಬರ್ತಾಯಿರ್ತಿ”
“ಮಂಜಪ್ಪಾರು ಏನೋ ಒಂದು ವಿಷಯ ಹೇಳಿದ್ರು.”
“ಏನೇಳಿದ್ರು.”
“ನಿಮ್ಮ ಮದುವೆ ವಿಷಯ.”
“ನನ್ನ ಮದುವೆ ವಿಷಯ ಅವುರಿಗ್ಯಾಕೆ. ಸುಮ್ಮನಿರು ಅನ್ನು.”
“ಕೇಳಿಕಂಡು ಬಾ ಅಂದ್ರು.”
“ಕೇಳಿದ್ಯಲ್ಲ ಬುಡು” ಎಂದರು.

ಇದಿಷ್ಟು ವಿಷಯವನ್ನ ಲಿಂಗಪ್ಪನವರು ಮಂಜಪ್ಪವರಿಗೆ ತಲುಪಿಸಬೇಕಿತ್ತು. ಆದರೆ ಲಿಂಗಪ್ಪ ಈ ನಾಯಕರುಗಳು ಆಡಿದ ಮೂದಲಿಕೆ ಮಾತುಗಳನ್ನ ಸ್ಕ್ರೂಟನಿ ಮಾಡಿ ಅಲ್ಲಿಗೆ ಆಪ್ತ ಮಾತುಗಳನ್ನ ಸೇರಿಸಿ ತಲುಪಿಸುತ್ತಿದ್ದರು. ಇದರಿಂದ ರಾಜಕೀಯವಾಗಿ ಎಷ್ಟೇ ಟೀಕಿಸಿದರೂ, ಆಂತರಿಕವಾಗಿ ಪರಸ್ಪರ ಪ್ರೀತಿಯುಳ್ಳವರಾಗಿ ರೂಪುಗೊಂಡಿದ್ದರು.
ಕೆಲದಿನಗಳ ನಂತರ ಮಂಜಪ್ಪನವರು ಲಿಂಗಪ್ಪನನ್ನು ಈ ಬಗ್ಗೆ ಕೇಳಿದರು. ಅದಕ್ಕೆ ಲಿಂಗಪ್ಪ “ಗೌಡರು ಏನೂ ಹೇಳಲಿಲ್ಲ ಸುಮ್ಮನಾದರು” ಎಂದರು.

“ಸುಮ್ಮನಾದ ಅಂದ್ರೆ ಅಂಗೆ ಇದ್ದು ಬಿಡುತಾನ ಕೇಳು: ವಯಸ್ಸಾಯ್ತು, ಇನ್ಯಾವಾಗ ಮದುವೆಯಾಗ್ತನಂತೆ. ನಮ್ಮ ಡಾ. ನಾಗನಗೌಡರ ಫ್ರೆಂಡ್ ಪಾಟೀಲರ ಮಗಳು, ಒಳ್ಳೆ ವಿದ್ಯಾವಂತೆ, ಆಗಕ್ಕೇಳು. ಇವುನಿಂಗಿದ್ರೆ ಮುಂದೆ ಯಾರೂ ಹೆಣ್ಣು ಕೊಡಲ್ಲ. ಒಂದು ಡೇಟ್ ಗೊತ್ತು ಮಾಡಿಕೊಂಡು ಧಾರವಾಡಕ್ಕೋಗಿ ಹೆಣ್ಣು ನೋಡಿಕಂಡು ಬರಾನ. ಹೋಗಿ ಅವನಿಗೆ ಹೇಳು” ಅಂದ್ರು. ಲಿಂಗಪ್ಪ ಹೋಗಿ ಅಷ್ಟನ್ನ ಗೌಡರಿಗೆ ಹೇಳಿದರು. “ಯಾಕಯ್ಯ ನನ್ನ ಮದುವೆ ವಿಷಯದಲ್ಲಿ ಅಷ್ಟು ತಲೆ ಕೆಡಿಸಿಕೊಂಡವುನೆ. ಸುಮ್ಮನಿರು ಅಂತ ಹೇಳ್ಳಿಲ್ಲವೆ” ಎಂದ ಗೌಡರಿಗೆ ಲಿಂಗಪ್ಪ “ಈಗಾಗಲೇ ಧಾರವಾಡಕ್ಕೆ ಹೋಗಿ ಹೆಣ್ಣು ನೋಡುವ ತೀರ್ಮಾನವಾಗಿದೆ. ನೀವು ಬರೋದಕ್ಕೆ ಒಪ್ಪಬೇಕಷ್ಟೇ” ಎಂದರು. ಗೌಡರು ದೀರ್ಘಾಲೋಚನೆಯ ನಂತರ “ಆಯ್ತು ಅಂತ ಹೇಳು” ಅಂದರು.

ಅದರಂತೆ ಧಾರವಾಡಕ್ಕೆ ಹೊರಡುವ ತೀರ್ಮಾನವಾಗಿ ಬೆಂಗಳೂರಲ್ಲಿ ಗೌಡರು ರೈಲು ಏರಿದಾಗ ಜೇಬೊಳಗೆ ಮೂರು ರೂಪಾಯಿಗಳಿದ್ದವು. ಈ ಅಪಾಯವನ್ನರಿತ ಎಲ್.ಸಿ.ಅಶೋಕ್, ಇನ್ನೇನು ಹೊರಡಲಿದ್ದ ರೈಲೊಳಗೆ ನುಗ್ಗಿ ಗೌಡರ ಜೇಬಿಗೆ ಮುನ್ನೂರು ತುರುಕಿ ಬಂದರು.

ಹುಬ್ಬಳ್ಳಿಯಲ್ಲಿಳಿದ ಗೌಡರ ಟೀಮು. ಶಿವರಾಮಶೆಟ್ಟಿ ಎಂಬ ಕಂಟ್ರಾಕ್ಟರ್ ಮನೇಲಿ ಇದ್ದು ಬೆಳಿಗ್ಗೆ ಎಲ್ಲರೂ ಧಾರವಾಡಕ್ಕೆ ಹೋದರು.

ಧಾರವಾಡದ ಡಿ.ಎಲ್.ಪಾಟೀಲರ ಮನೆಯಲ್ಲಿ ಹೆಣ್ಣು ನೋಡುವ ಏರ್ಪಾಟಾಗಿತ್ತು. ವಿಧಾನಸಭೆಯನ್ನೇ ನಡುಗಿಸುತ್ತಿದ್ದ ಶಾಸಕನೊಬ್ಬ, ಹೆಣ್ಣು ನೋಡುವಂತಹ ಮೋಜಿನ ಪ್ರಸಂಗವದು. ಎದುರು ಬಂದು ಕುಳಿತ ಸೋನಕ್ಕನವರನ್ನ ನೋಡಿದ ಗೌಡರು ಇತ್ತ ಕೊಣಂದೂರು ಲಿಂಗಪ್ಪನ ಕಡೆ ನೋಡಿ ಅಭಿಪ್ರಾಯದ ಕಣ್ಣು ಬಿಟ್ಟರು. ಲಿಂಗಪ್ಪ ಗುರುಗಳ ಒಪ್ಪಿತ ಕಣ್ಣುಗಳತ್ತ ನೋಡಿ ಮಹದಾನಂದ ಪ್ರಕಟಿಸಿದರು. ಗೌಡರ ಎದುರು ನಡೆದ ಒಂದು ಶಾಸ್ತ್ರಕ್ಕೆ ಸಿಟ್ಟಾಗಿದ್ದರು. ಏಕೆಂದರೆ ಅವರ ತಲೆಯ ಮೇಲೆ ಗಾಂಧಿ ಟೋಪಿಯನ್ನಿಟ್ಟಿದ್ದರು. ಈ ಗಾಂಧಿ ಟೋಪಿ ಕ್ರಮೇಣ ಕಾಂಗ್ರೆಸ್ ಟೋಪಿಯಾಗಿದ್ದರಿಂದ ಗೌಡರಿಗೆ ಸಿಟ್ಟು ನೆತ್ತಿಗೇರಿತ್ತು. ಆದರೆ ಧಾರವಾಡದ ಕಡೆ ಸಂಸ್ಕೃತಿಯಲ್ಲಿ ಈ ಟೋಪಿ ಮದುಮಕ್ಕಳ ಸಾಂಪ್ರದಾಯಿಕ ಸಂಕೇತವಾಗಿತ್ತು.

ಗೌಡರು ಸೋನಕ್ಕನವರನ್ನ ನೋಡಿಕೊಂಡು ಬಂದ ಐದಾರು ತಿಂಗಳು ಮದುವೆ ಪ್ರಸ್ತಾಪ ಮಾಡಲಿಲ್ಲ. ಇದರಿಂದ ಕೆಡಾಮಂಡಲವಾದ ಕಡಿದಾಳು ಮಂಜಪ್ಪನವರು ಕೊಣಂದೂರು ಲಿಂಗಪ್ಪನವರನ್ನ ಕರೆದು “ಏನಂತಯ್ಯಾ ಅವನ ಅಭಿಪ್ರಾಯ. ನಾವೇನು ತಮಾಸೆಗೆ ಹೆಣ್ಣು ತೋರಿಸಿದೀವಾ. ಏನು ಹೇಳಲಿಲ್ಲವಲ್ಲ ಇವುನು. ಇವುನೇನು ಮಹಾ ಅಶೋಕ್ ಕುಮಾರ ಅಥವಾ ದಿಲೀಪ್ ಕುಮಾರ ನೋಡು. ನರ್ಗೀಸು, ವೈಜಯಂತಿ ಮಾಲ ಕಾಯ್ತಾಯಿರತರೆ ಇವುನ್ನ ಮದುವೆಯಾಗಕ್ಕೆ” ಎಂದು ಅಂದಿನ ಖ್ಯಾತ ಸಿನಿಮಾ ನಟ ನಟಿಯರ ಹೋಲಿಕೆ ಮಾಡಿ ಮೂದಲಿಸಿದರು. ಲಿಂಗಪ್ಪನವರು ಯಾವ ಸಮಜಾಯಿಷಿಯನ್ನ ಹೇಳಲಾಗದೆ ಬಂದರು. ಮುಂದೆ ಒಂದೆರಡು ತಿಂಗಳ ನಂತರ ಗೋಪಾಲಗೌಡರ ಒಪ್ಪಿಗೆ ತಲುಪಿತು. ಸೋನಕ್ಕನವರನ್ನು ನೋಡಿದ ನಂತರ ಗೌಡರು ಡಾ. ರಾಮಮನೋಹರ ಲೋಹಿಯಾರವರ ಒಪ್ಪಿಗೆ ಕೇಳಿ ಪತ್ರಬರೆದಿದ್ದರು. ಲೋಹಿಯಾ ತಮ್ಮ ಶಿಷ್ಯನ ಮದುವೆ ತೀರ್ಮಾನದ ವಿಷಯದಲ್ಲಿ ಒಪ್ಪಿಗೆ ಕೊಡಲು ತಡಮಾಡಿದ್ದರು. ಅದಕ್ಕೆ ಯಾವ ಕಾರಣವೂ ಇರಲಿಲ್ಲ.

ದಿನಾಂಕ 09.3.1964ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಗೋಪಾಲಗೌಡರು ಮತ್ತು ಸೋನಕ್ಕನವರು ಮದುವೆಯಾದ ಅಭಿನಂದನೆ ಸಮಾರಂಭ ಜರುಗಿತು. ಇದೊಂದು ಐತಿಹಾಸಿಕ ಘಟನೆ. ಮುಂದೆ ಯಾವ ರಾಜಕಾರಣಿಯ ಮದುವೆ ಸಮಾರಂಭವೂ ಈ ರೀತಿ ನಡೆದಿಲ್ಲ. ಇಡೀ ನಾಡೇ ಸೇರಿ ಗೌಡರ ಮದುವೆ ಸಂಭ್ರಮದಲ್ಲಿ ಭಾಗಿಯಾದಂತಿತ್ತು. ವಿಧಾನ ಸಭಾಧ್ಯಕ್ಷರಾದ ವೈಕುಂಠ ಬಾಳಿಗ, ದೇವರಾಜ ಅರಸು, ಕಡಿದಾಳು ಮಂಜಪ್ಪ ವೇದಿಕೆಯಲ್ಲಿದ್ದರು. ಗೌಡರು ಭಾಷಣ ಮಾಡಿ ತನಗೆ ಮದುವೆ ಮಾಡಿಸಿದ ಕಡಿದಾಳರನ್ನ ಅಭಿನಂದಿಸಿದರು. ನಂತರ ಪಿ.ಕಾಳಿಂಗ ರಾಯರಿಂದ ಸಂಗೀತವಿತ್ತು.

ಸೋನಕ್ಕ ಗೌಡರನ್ನ ಮದುವೆಯಾದ ನಂತರ ಶಾಸಕರ ಭವನದ 227ನೇ ಕೊಠಡಿಯಲ್ಲಿ ಸಂಸಾರ ಹೂಡಿದರು. ಈ ರೂಮು ಸೋಷಲಿಸ್ಟರ ಕಚೇರಿಯೂ ಆಗಿತ್ತು. ಲೋಹಿಯಾ ಕೂಡ ಇಲ್ಲಿದ್ದು ಕರ್ನಾಟಕದ ಚುನಾವಣಾ ವಿಷಯ ಚರ್ಚಿಸುತ್ತಿದ್ದರು. ಸೋಷಲಿಸ್ಟರು ಕುಡಿಯದಂತೆ ಉಪದೇಶಿಸುತ್ತಿದ್ದರು. ಆದರೆ ಸೋಷಲಿಸ್ಟರಿಗೆ ಕುಡಿಯದೇ ಮಾಡುವ ರಾಜಕಾರಣವೂ ಒಂದು ರಾಜಕಾರಣವೇ ಎನ್ನಿಸಿತ್ತು. ಆದ್ದರಿಂದ ಹುಯ್ದುಕೊಂಡೇ ವಾಲಾಡುತ್ತಿದ್ದರು. 1967ರವರೆಗೂ ಗೌಡರ ಸಂಸಾರ ಶಾಸಕರ ಕೊಠಡಿಯಲ್ಲೇ ಇತ್ತು. ಅಲ್ಲೇ ಒಬ್ಬ ಮಗಳೂ ಹುಟ್ಟಿದಳು. ಒಂದು ದಿನ ಯು.ಆರ್.ಅನಂತಮೂರ್ತಿ ಕೊಣಂದೂರು ಲಿಂಗಪ್ಪ, ಗೌಡರು ಎಲ್ಲಾ ಸೇರಿ ಮಗುವಿಗೆ ‘ಇಳಾಗೀತ” ಎಂಬ ಹೆಸರಿಟ್ಟರು. ಕೊಠಡಿ ಸಂಖ್ಯೆ 227ರಿಂದ 27ಕ್ಕೆ ಬದಲಾಯ್ತು. ಇನ್ನು ಇಲ್ಲೇ ಇರುವುದು ಸೂಕ್ತವಲ್ಲವೆಂದು ಕೊಣಂದೂರು ಲಿಂಗಪ್ಪ ಮತ್ತು ಗೆಳೆಯರು ಶ್ರೀಪುರದಲ್ಲಿ ಪುಟ್ಟದೊಂದು ಬಾಡಿಗೆ ಮನೆಯನ್ನು ಹಿಡಿದು, ಗೌಡರ ಕುಟುಂಬವನ್ನ ಅಲ್ಲಿಗೆ ಸಾಗಿಸಿದರು. ಅಲ್ಲಿ ಸೋನಕ್ಕನವರು ಒಂಥರದ ಬಡತನದ ಬಾಳನ್ನು ಆರಂಭಿಸಿದರು. ಅಲ್ಲಿ ಮಗ ಹುಟ್ಟಿದ. ಆತನಿಗೆ ರಾಮಮನೋಹರ ಎಂಬ ಹೆಸರಿಡಲಾಯ್ತು. ಕೃಷ್ಣ ವರ್ಣವನ್ನ ಇಷ್ಟಪಡುತ್ತಿದ್ದ ಗೌಡರು ತುಂಬ ಬೆಳ್ಳಗೆ ಹುಟ್ಟಿದ ಮಗನನ್ನ ನೋಡಿ ಕೌತುಕದಿಂದ `ಇದೇನು ಇದು ಈತರ ಹುಟ್ಟಿದನಲ್ಲ’ ಎಂಬ ಉದ್ಘಾರ ತೆಗೆದರಂತೆ!

ಸೋನಕ್ಕನವರು ಬದುಕಿಗಾಗಿ ಗೋಪಾಲಗೌಡರನ್ನ ಅವಲಂಬಿಸದೆ, ಟೀಚರ್ ಕೆಲಸವನ್ನ ಅವಲಂಭಿಸಿದ್ದರು. ಅದರಲ್ಲೇ ಸಂಸಾರ ಸಾಗಿಸಬೇಕಿತ್ತು. ಗೌಡರದು ಹಣಕ್ಕೆ ಹಾತೊರೆಯದ ಪರಿಶುದ್ಧ ರಾಜಕಾರಣ. ಇಂತಹ ಒಂದು ಸ್ಥಿತಿಯಲ್ಲಿ ಅಂದರೆ 1969 ಜನವರಿಯಲ್ಲಿ ಗೌಡರ ಆರೋಗ್ಯ ಹದಗೆಟ್ಟಿತು. ಅಂತಹ ಸಮಯದಲ್ಲಿ ಮುಖ್ಯಮಂತ್ರಿ ವಿರೇಂದ್ರ ಪಾಟೀಲರು ಒಂದು ಸೈಟನ್ನು ಅಲಾಟ್ ಮಾಡಿ ಪತ್ರ ಕಳಿಸಿದ್ದರು. ಆ ಪತ್ರ ಓದಿದ ಗೋಪಾಲಗೌಡರು, ಅಲಾಟ್ ಪತ್ರದ ಮೇಲೆ ಮರು ಟಿಪ್ಪಣಿ ಬರೆದು ಸೈಟಿಲ್ಲದ ಜನರಿಗೆ ಸೈಟುಗಳನ್ನು ಕೊಟ್ಟು, ನಂತರ ಉಳಿದರೆ ನೋಡೋಣ ಎಂದು ಬರೆದುದಲ್ಲದೆ ಇದನ್ನ ಮುಖ್ಯಮಂತ್ರಿಗೇ ತಲುಪಿಸಬೇಕೆಂದು ಲಿಂಗಪ್ಪನವರ ಕೈಗಿತ್ತರು. ಆದರೆ ಒಂದು ರೀತಿಯಲ್ಲಿ ಬೀದಿಯಲ್ಲೇ ಇದ್ದ ಸೋನಕ್ಕ, ಲಿಂಗಪ್ಪನವರಿಗೆ ಸೈಟಿಗೆ ಬೇಕಾದ ಹಣ ಒದಗಿಸುತ್ತೇನೆ. ಈ ಪತ್ರವನ್ನ ಮುಖ್ಯಮಂತ್ರಿಗೆ ತಲುಪಿಸಬೇಡಿ ಎಂದು ಕೇಳಿಕೊಂಡರು. ಅದರಂತೆ ಲಿಂಗಪ್ಪ ಆ ಸೈಟಿನ ವಿಷಯವನ್ನು ಎಲ್ಲೂ ಪ್ರಸ್ತಾಪಿಸದೆ ಸುಮ್ಮನಿದ್ದುಬಿಟ್ಟರು. ಲಿಂಗಪ್ಪನವರ ಪ್ರಕಾರ ಅವರು ಗೌಡರಿಂದ ಮುಚ್ಚಿಟ್ಟಿದ್ದು ಇದೊಂದೇ ಸಂಗತಿ. ಇದರಿಂದ ಗೌಡರ ನಿಧನಾನಂತರ ಸೋನಕ್ಕ ಸ್ವಂತ ನೆಲೆ ಕಂಡುಕೊಂಡರು. 1969ರ ನಂತರ ದೈಹಿಕವಾಗಿ ತುಂಬಾ ಕುಸಿದುಹೋದ ಗೌಡರು 1971ರಲ್ಲಿ ನಿಧನರಾದರು. ಗೌಡರ ನಿಧನಾನಂತರ 48 ವರ್ಷ ಬದುಕಿದ್ದ ಸೋನಕ್ಕ ತಮ್ಮ ತಂದೆಯವರ ಆದರ್ಶಕ್ಕೋಸ್ಕರ ಗೋಪಾಲಗೌಡರನ್ನ ಕೈಹಿಡಿದು ಯಾವ ಸುಖ ಉಣ್ಣಲಿಲ್ಲ. ಬಡ ಕಾರ್ಮಿಕ ಮಹಿಳೆಯಂತೆ ಬದುಕಬೇಕಾಯ್ತು. ಈ ನಡುವೆ ಗೌಡರನ್ನ ಕುರಿತು ಕಾದಂಬರಿ ಬರೆದವರು ಮತ್ತು ಸಿನಿಮಾ ತೆಗೆದವರಿಂದ ಒಂಥರದ ಅವಹೇಳನ ಅನುಭವಿಸುವಂತಾಯ್ತು. ಆದರೂ ಕರ್ನಾಟಕದ ರಾಜಕೀಯಾಗಸದಲ್ಲಿ ನಕ್ಷತ್ರದಂತೆ ಮಿನುಗುತ್ತಿರುವ ಧೀಮಂತ ರಾಜಕಾರಣಿಯೊಬ್ಬರ ಪತ್ನಿಯಾಗಿದ್ದ ಸಾರ್ಥಕಭಾವ ಅವರಲ್ಲಿ ಕಡೆವರೆಗೂ ಇತ್ತು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

LEAVE A REPLY

Please enter your comment!
Please enter your name here

- Advertisment -

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...