ಬೆಂಗಳೂರಿಗೆ ಕುಡಿಯುವ ನೀರಿಗಾಗಿ ಲಿಂಗನಮಕ್ಕಿಯಿಂದ ನೀರು ತರುವ ರಾಜ್ಯ ಸರ್ಕಾರದ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಇಂದಿನ ಶಿವಮೊಗ್ಗ ಬಂದ್ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗಿದೆ. ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ ಕರೆ ನೀಡಿದ್ದ ಬಂದ್ ಗೆ ಸಾರ್ವಜನಿಕರು, ವ್ಯಾಪಾರಿಗಳು, ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು, ಕಾಲೇಜುಗಳು, ಮಹಿಳಾ ಸಂಘಟನೆಗಳು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಬೀದಿಗಿಳಿದು ದನಿಯೆತ್ತಿದ್ದಾರೆ.
ಕಳೆದೊಂದು ತಿಂಗಳಿನಿಂದಲೂ ಶರಾವತಿ ನದಿ ಉಳಿಸಲು ಹೋರಾಟ ನಡೆಯುತ್ತಿದ್ದು ರಾಜ್ಯ ಸರ್ಕಾರ ಸದರಿ ಯೋಜನೆಯಿಂದ ಹಿಂದೆ ಸರಿಯುವಂತೆ ಮತ್ತು ಮೊದಲು ಸಾಗರ ಸೊರಬ ಶಿವಮೊಗ್ಗಕ್ಕೆ ನೀರು ಕೊಡುವಂತೆ ಒತ್ತಾಯಿಸಿದ್ದರು. ಆದರೆ ಈ ವಿಚಾರದಲ್ಲಿ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದಿರುವುದರಿಂದು ಇಂದು ಶಿವಮೊಗ್ಗ ಜಿಲ್ಲೆಯಾದ್ಯಂತ ಬಂದ್ ಆಚರಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗಿದೆ. ಬಂದ್ ನ ವಿಡಿಯೋ ನೋಡಿ
ಶರಾವತಿ ನದಿ ಉಳಿಸಲ್ಲೊಂದು ಹಾಡು ಇಲ್ಲಿದೆ ನೋಡಿ.
#SaveSharavathiRiver
#ಶರಾವತಿ ನದಿ ಉಳಿಸಿ ಹೋರಾಟ ಒಕ್ಕೂಟ
ನಮಗೆ ಗೊತ್ತು
ನೀರು ಮೇಲಿನಿಂದ ಕೆಳಗೆ ಹರಿಯುತ್ತದೆ.
ಹಾಗೂ ಹಣ
ಕೆಳಗಿನಿಂದ ಮೇಲೆ ಹರಿಯುತ್ತದೆ.
ನಮಗೆ ಗೊತ್ತು
ನೀವು ಹಾಕಲು ಹೊರಟಿರುವ ದೈತ್ಯ ಪೈಪುಗಳಲ್ಲಿ ನೀರು ಎಂದೂ ಹರಿವುದಿಲ್ಲ
ನೀವು ಸುರಿಸ ಹೊರಟಿರುವ
ಕೋಟಿಗಟ್ಟಲೆ ಹಣ ಅದೆ ಪೈಪುಗಳಲ್ಲಿ
ನಿಮ್ಮ ಕಿಸೆ ಸೇರುತ್ತದೆ
ಮೇಲಿನವನ ದಾಹ
ಕೆಳಗಿನವನ ಆತಂಕ
ಎಂದಿಗೂ ಮುಗಿಯುವುದಿಲ್ಲ
ನಮಗೆ ಗೊತ್ತು
ನಮ್ಮ ಶರಾವತಿ ಉಳಿಯದಿದ್ದರೆ
ನಮ್ಮ ಬದುಕಿಲ್ಲ
ಯಾವುದೇ ಬೆಲೆ ಕೊಟ್ಟಾದರೂ ಸರಿ
ನಿಮ್ಮ ಕಳ್ಳ ಯೋಜನೆ ಜಾರಿ ಮಾಡಲು
ನಾವು ಬಿಡುವುದಿಲ್ಲ
ಬಂದ್ ಗೆ ಶಿವಮೊಗ್ಗ ಮಾತ್ರವಲ್ಲದೇ ರಾಜ್ಯದಾದ್ಯಂತ ಬೆಂಬಲ ವ್ಯಕ್ತವಾಗಿದ್ದು ಬೆಂಗಳೂರಿನ ಬಹಳಷ್ಟು ಪ್ರಜ್ಞಾವಂತರು ಶರಾವತಿ ನೀರು ಬೆಂಗಳೂರಿಗೆ ಬೇಡ ಎಂಬ ಕೂಗಿಗೆ ದನಿಗೂಡಿಸಿದ್ದಾರೆ.
ನಾ.ಡಿಸೋಜ, ಶಶಿ ಸಂಪಳ್ಳಿ, ಹರ್ಷಕುಮಾರ್ ಕುಗ್ವೆ, ಶಿವಾನಂದ್ ಕುಗ್ವೆ ಸೇರಿದಂತೆ ಹಲವು ಜನ ಈ ಹೋರಾಟದ ನೇತೃತ್ವ ವಹಿಸಿದ್ದಾರೆ.
ಶಿವಮೊಗ್ಗ ಬಂದ್ ನ ಕೆಲವು ಫೋಟೊಗಳು