ವಿಧಾನಸಭೆ ಅಂಗೀಕರಿಸಿದ ವಿಧೇಯಕಗಳಿಗೆ ಒಪ್ಪಿಗೆ ನೀಡುವಲ್ಲಿ ವಿಳಂಬವನ್ನು ಪ್ರಶ್ನಿಸಿ ಕೇರಳ ರಾಜ್ಯ ಸರ್ಕಾರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್ ಸೋಮವಾರ ಕೇಂದ್ರ ಮತ್ತು ಕೇರಳ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಕೇಂದ್ರ ಸರ್ಕಾರ ಮತ್ತು ರಾಜ್ಯಪಾಲರ ಕಚೇರಿಯಿಂದ ಈ ಕುರಿತು ಪ್ರತಿಕ್ರಿಯೆಯನ್ನು ಕೇಳಿದೆ ಮತ್ತು ಮುಂದಿನ ವಿಚಾರಣೆಯನ್ನು ಶುಕ್ರವಾರಕ್ಕೆ ನಿಗದಿಪಡಿಸಲಾಗಿದೆ.
ಕೇರಳ ಸರ್ಕಾರದ ಪರವಾಗಿ ಹಿರಿಯ ವಕೀಲ ಕೆ ಕೆ ವೇಣುಗೋಪಾಲ್ ಅವರು ವಾದವನ್ನು ಮಂಡಿಸಿದ ಬಳಿಕ ನ್ಯಾಯಾಲಯವು ಅಟಾರ್ನಿ ಜನರಲ್ ಆರ್ ವೆಂಕಟ್ರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಈ ವಿಷಯದಲ್ಲಿ ಪ್ರತಿಕ್ರಿಯಿಸುವಂತೆ ಸೂಚಿಸಿದೆ.
ವೇಣುಗೋಪಾಲ್ ಅವರು 8 ಬಿಲ್ಗಳ ಬಗ್ಗೆ ಹೇಳಿದರು. ಅದರಲ್ಲಿ ಕೆಲವು 7 ತಿಂಗಳು ಮತ್ತು ಮತ್ತೆ ಕೆಲವು 3 ವರ್ಷಗಳಿಂದ ಬಾಕಿ ಉಳಿದಿವೆ ಎಂದು ಕೋರ್ಟ್ ಗಮನಿಸಿದೆ. ಪಂಜಾಬ್ ಮತ್ತು ತಮಿಳುನಾಡು ನಂತರ ರಾಜ್ಯಪಾಲರ ವಿರುದ್ಧ ಸುಪ್ರೀಂಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ 3ನೇ ರಾಜ್ಯ ಕೇರಳವಾಗಿದೆ.
ಸಂವಿಧಾನದ 200ನೇ ಪರಿಚ್ಛೇದದ ಅಡಿಯಲ್ಲಿ ಅನಿರ್ದಿಷ್ಟಾವಧಿಗೆ ಮಸೂದೆಗಳನ್ನು ತಡೆಹಿಡಿಯುವ ರಾಜ್ಯಪಾಲರ ಕ್ರಮಗಳು ಪ್ರಜಾಪ್ರಭುತ್ವದ ಮೌಲ್ಯಗಳು, ಸಚಿವ ಸಂಪುಟದ ಆದರ್ಶಗಳಿಗೆ ವಿರುದ್ಧವಾದುದು. ಸಾಂವಿಧಾನಿಕತೆ ಮತ್ತು ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾದುದು ಎಂದು ಕೇರಳ ಸರಕಾರದ ಪರ ವಕೀಲರು ಕೋರ್ಟ್ ಗಮನಕ್ಕೆ ತಂದಿದ್ದಾರೆ.
ಕೇರಳ ವಿಧಾನಸಭೆ ಅಂಗೀಕರಿಸಿದ ಮತ್ತು ಸಂವಿಧಾನದ 200ನೇ ವಿಧಿಯ ಅಡಿಯಲ್ಲಿ ಒಪ್ಪಿಗೆಗಾಗಿ ರಾಜ್ಯಪಾಲರಿಗೆ ಸಲ್ಲಿಸಿದ 8 ಮಸೂದೆಗಳು ಬಾಕಿ ಉಳಿದಿವೆ. ಇವುಗಳಲ್ಲಿ 3 ಬಿಲ್ಗಳು 2 ವರ್ಷಗಳಿಗೂ ಹೆಚ್ಚು ಕಾಲ ಬಾಕಿ ಉಳಿದಿವೆ. ರಾಜ್ಯಪಾಲರ ನಡವಳಿಕೆಯು ರಾಜ್ಯದ ಜನರ ಹಕ್ಕುಗಳನ್ನುಉಲ್ಲಂಘನೆಯಾಗಿದೆ. ಸಂವಿಧಾನದ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ದೀರ್ಘ ಮತ್ತು ಅನಿರ್ದಿಷ್ಟಾವಧಿಯವರೆಗೆ ಬಿಲ್ಲುಗಳನ್ನು ಬಾಕಿ ಇರಿಸುವಲ್ಲಿ ರಾಜ್ಯಪಾಲರ ನಡವಳಿಕೆಯು ಸ್ಪಷ್ಟವಾಗಿ ನಿರಂಕುಶವಾದವಾಗಿದೆ ಮತ್ತು ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಇದು ಸಂವಿಧಾನದ 21ನೇ ವಿಧಿ ಮತ್ತು ಕೇರಳ ರಾಜ್ಯದ ಜನರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕೋರ್ಟ್ ಗಮನಕ್ಕೆ ತರಲಾಗಿತ್ತು.
ಇದನ್ನು ಓದಿ: ಕೇರಳ: ಪೊಲೀಸ್ ದೌರ್ಜನ್ಯದಿಂದ ಹಾಸಿಗೆ ಹಿಡಿದ ಬಾಲಕ