Homeನ್ಯಾಯ ಪಥ’ಉಚಿತ ಕೊಡುಗೆ’ ಒಂದು ರೋಗವೆ? ಸುಪ್ರೀಂ ಕೋರ್ಟಿನ ವಿಚಾರಣೆ ಮತ್ತು ಬಡ ಭಾರತದ ಪ್ರಜಾಪ್ರಭುತ್ವ

’ಉಚಿತ ಕೊಡುಗೆ’ ಒಂದು ರೋಗವೆ? ಸುಪ್ರೀಂ ಕೋರ್ಟಿನ ವಿಚಾರಣೆ ಮತ್ತು ಬಡ ಭಾರತದ ಪ್ರಜಾಪ್ರಭುತ್ವ

- Advertisement -
- Advertisement -

ಉಚಿತ ವಿದ್ಯುತ್ ನೀಡುವುದು ಒಂದು ಕೆಟ್ಟ ನೀತಿ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ,
ಸಾಮಾನ್ಯ ಜನರಿಗೆ ಈ ರೀತಿಯ ಉಡುಗೊರೆ ನೀಡುವುದರ ಕುರಿತು ನಾವೇಕೆ ಇಷ್ಟೊಂದು ಅಸಮಾಧಾನ ಹೊಂದುತ್ತೇವೆ? ಅತ್ಯಂತ ಶ್ರೀಮಂತರ ತೆರಿಗೆ ಕಡಿತ ಮತ್ತು ಸಾಲ ಮನ್ನಾ ಕುರಿತು ನಾವೇಕೆ ಚಿಂತೆಯನ್ನೇ ಮಾಡುವುದಿಲ್ಲ?

ನನಗೆ ಅಸ್ಸಾಮಿನ ಹಿರಿಯ ಗೆಳೆಯರೊಬ್ಬರ ಇ-ಮೇಲ್ ಬಂತು. “ಪ್ರತಿ ವರ್ಷವೂ ಅಸ್ಸಾಮಿನಲ್ಲಿ ನೆರೆಗಳು ಉಂಟುಮಾಡುವ ವಿನಾಶದ ಕುರಿತು ಮಧ್ಯಪ್ರವೇಶ ಮಾಡುವಂತೆ ನಾವು ನ್ಯಾಯಾಲಯಗಳ ಮೊರೆಹೋಗಬಹುದೆ?” ಎಂದು ಅವರು ಕೇಳಿದ್ದರು. ಈ ದೂರಿನ ವೇದಿಕೆಯ ಕುರಿತಾಗಲೀ, ಅದರ ಫಲಶ್ರುತಿಯ ಕುರಿತಾಗಲೀ ಸ್ಪಷ್ಟವಾಗಿ ತಿಳಿಯದೆ, ಅವರು ಸ್ವಲ್ಪ ಹಿಂಜರಿಕೆಯಿಂದಲೇ ಬರೆದಿದ್ದರು. ಆದರೆ, ದಿನನಿತ್ಯ ಎಂಬಂತೆ ನನ್ನನ್ನು ಸಂಪರ್ಕಿಸುವ ಇತರರಿಗೆ ಇಂತಾ ಸಂಶಯವಾಗಲೀ, ಹಿಂಜರಿಕೆಯಾಗಲೀ ಇಲ್ಲವೇ ಇಲ್ಲ. ಅಗ್ನಿಪಥ ಯೋಜನೆ, ಗೋದಿಯ ರಫ್ತು ಅಥವಾ ರಫ್ತಿನ ನಿಷೇಧ, ಅಥವಾ ಹೀಗೆ ಇನ್ನೂ ಹಲವು ವಿಷಯಗಳ ಕುರಿತು ವಕೀಲ ಪ್ರಶಾಂತ್ ಭೂಷಣ್ ಅವರು ನ್ಯಾಯಾಲಯದ ಮೊರೆಹೋದರೆ ಮಾತ್ರವೇ ದೇಶ ಉಳಿಯಬಹುದು ಎಂಬುದು ಅವರ ದೃಢ ನಂಬಿಕೆ. ಅವರು ಎತ್ತುವ ವಿಷಯಗಳು ನನ್ನ ಹೃದಯಕ್ಕೂ ಹತ್ತಿರವಾದವುಗಳೇ. ಆದರೆ, ಸಮಸ್ಯೆ ಅಥವಾ ಪರಿಹಾರ ಕಾನೂನಿನಲ್ಲಿ ಇದೆ ಎಂದು ಅವರೇಕೆ ಯೋಚಿಸುತ್ತಾರೆಂದು ನನಗೆ ಸ್ಪಷ್ಟವಾಗಿಲ್ಲ. ’ನೀನು ಪ್ರಶಾಂತ್ ಭೂಷಣ್ ಅವರ ಗೆಳೆಯನಾಗಿರುವುದಕ್ಕೆ ತೆರಬೇಕಾಗಿರುವ ಬೆಲೆಯಿದು’ ಎಂದು- ನಾನು ಪ್ರತೀ ವಾರವೂ ಇಂತಾ ಕೆಲವು ವಿನಂತಿಗಳನ್ನು ಅವರಿಗೆ ವರ್ಗಾಯಿಸುವಾಗ- ನನಗೆ ನಾನೇ ಹೇಳಿಕೊಳ್ಳುತ್ತೇನೆ. ಇಂತಹ ವಿನಂತಿಗಳ ವಿಶೇಷವಾದ ವಿಭಾಗವೊಂದನ್ನು ನಾನು ಗಮನಿಸಿದ್ದೇನೆ. ಕಾನೂನಿನ ಮಧ್ಯಪ್ರವೇಶದ ಮೂಲಕ ಭಾರತೀಯ ರಾಜಕಾರಣದಲ್ಲಿ ಸುಧಾರಣೆ ತರಲು ಬಯಸುವ ನನ್ನ ಗೆಳೆಯರಿವರು.

ಪ್ರಶಾಂತ್ ಭೂಷಣ್

1960ರಿಂದ 80ರ ದಶಕದವರೆಗೂ ಈ ವಿನಂತಿಗಳು- ’ಮೊದಲು ಬಂದವರು ವಿಜಯಿ’ ಎಂಬ ಚುನಾವಣಾ ವ್ಯವಸ್ಥೆಯಿಂದ, ಪ್ರಮಾಣಕ್ಕೆ ಅನುಗುಣವಾಗಿ ಪ್ರಾತಿನಿಧ್ಯ ನೀಡುವ ವ್ಯವಸ್ಥೆಗೆ ನಾವು ಬದಲಾಗಬೇಕು ಎಂಬಂತವುಗಳಾಗಿರುತ್ತಿದ್ದವು. ಚುನಾವಣಾ ಆಯೋಗವು ಟಿ.ಎನ್. ಶೇಷನ್ ಅವರ ನೇತೃತ್ವದಲ್ಲಿ ಮಾಡಿದ ಚುನಾವಣಾ ಸುಧಾರಣೆಗಳು ಮುನ್ನೆಲೆಗೆ ಬಂದುದರಿಂದ ಈ ಧ್ವನಿಗಳು ಇನ್ನಷ್ಟೂ ಜೋರಾದವು ಮತ್ತು ’ಗಂಭೀರವಲ್ಲದ ಆಭ್ಯರ್ಥಿಗಳು’ ಚುನಾವಣಾ ಕಣಕ್ಕೆ ಇಳಿಯಂತೆ ಮಾಡೋಣ, ಅತಂತ್ರ ಪರಿಸ್ಥಿತಿ ಉಂಟಾಗದಂತೆ ತಡೆಯೋಣ, ಕ್ರಿಮಿನಲ್‌ಗಳು ಮತ್ತು ಭ್ರಷ್ಟರು ಚುನಾಯಿತರಾಗದಂತೆ ತಡೆಯೋಣ ಮುಂತಾದ ಬೇಡಿಕೆಗಳು ಹೆಚ್ಚಾದವು. ಯಾವುದೇ ಜಾತಿ ಅಥವಾ ಕೋಮಿನ ಹೆಸರಿನಲ್ಲಿ ಮತ ಕೇಳುವುದನ್ನು ತಡೆಯೋಣ, ಪಕ್ಷಗಳು ತಾವು ನೀಡಿದ ಚುನಾವಣಾ ಭರವಸೆಗಳಿಗೆ ಕಾನೂನು ಪ್ರಕಾರ ಬದ್ಧವಾಗಿರುವಂತೆ ಮಾಡೋಣ- ಇತ್ಯಾದಿಯಾಗಿ ಈ ಪಟ್ಟಿಗೆ ಇನ್ನಷ್ಟು ವಿಷಯಗಳು ನಂತರದಲ್ಲಿ ಸೇರಿಕೊಂಡವು.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆಗೆ ಇಡಿ ಸಮನ್ಸ್‌: ‘ಮೋದಿಶಾಹಿ’ ಅಧೋಗತಿಗೆ ತಲುಪುತ್ತಿದೆ ಎಂದ ಕಾಂಗ್ರೆಸ್‌

ಪ್ರತೀ ಸಲ ನಾನು ಇಂತಹ ಪ್ರಸ್ತಾಪಗಳನ್ನು ಕೇಳಿದಾಗ ನನಗೆ ಬೀದಿ ದೀಪದ ಕೆಳಗೆ ತನ್ನ ಕಳೆದುಹೋದ ಬೀಗದ ಕೈ ಹುಡುಕುತ್ತಿದ್ದ ವ್ಯಕ್ತಿಯೊಬ್ಬನ ಕುರಿತ ಜೋಕೊಂದು ನೆನಪಾಗುತ್ತದೆ. “ಬೀಗದ ಕೈ ಕಳೆದು ಹೋದದ್ದು ಎಲ್ಲಿ?” ಎಂದು ಕೇಳಿದಾಗ, ಆತ ಕತ್ತಲಲ್ಲಿ ಇದ್ದ ದೂರದ ಸ್ಥಳವೊಂದನ್ನು ತೋರಿಸುತ್ತಾನೆ. “ಹಾಗಾದರೆ ನೀನದನ್ನು ಈ ಬೀದಿ ದೀಪದ ಕೆಳಗೆ ಯಾಕೆ ಹುಡುಕುತ್ತಿದ್ದೀಯ?” ಎಂದು ಕೇಳಿದಾಗ, ಆವನು ಮುಗ್ಧವಾಗಿ ಉತ್ತರಿಸುತ್ತಾನೆ: “ಇಲ್ಲಿ ಬೆಳಕು ಇದೆಯಲ್ಲ; ಅಲ್ಲಿ ಕತ್ತಲೆ!” ರಾಜಕೀಯದ ರೋಗಗಳನ್ನು ಗುಣಪಡಿಸಲು ಕಾನೂನು, ನ್ಯಾಯಾಂಗ ಮತ್ತು ಸಾಂಸ್ಥಿಕ ಪರಿಹಾರಗಳನ್ನು ಬಯಸುವವರು ಹೆಚ್ಚಾಗಿ ಆ ಮನುಷ್ಯನಷ್ಟೇ ಮುಗ್ಧರೋ, ಪೆದ್ದರೋ ಆಗಿರುತ್ತಾರೆ. ಇದಕ್ಕಿಂತಲೂ ಕೆಟ್ಟ ವಿಷಯವೆಂದರೆ, ಇಂತಾ ಹಸ್ತಕ್ಷೇಪಗಳು ಹಲವು ಬಾರಿ ಪ್ರಜಾಪ್ರಭುತ್ವವೊಂದರಲ್ಲಿ ಸಾಮಾನ್ಯ ಜನರ ಅಗತ್ಯ ಮತ್ತು ಆಶಯಗಳ ಬದಲಿಗೆ ಪ್ರತಿಷ್ಟಿತರ ಕಳವಳ-ಆತಂಕಗಳನ್ನು ಕೂರಿಸಬಯಸುತ್ತವೆ.

ಹಿಂದೆ1996ರಲ್ಲಿ, ಚುನಾವಣಾ ಸುಧಾರಣೆಗಳ ಮೇಲಿನ ಚಿಂತನೆಗಳ ಕುರಿತು ’ಬಿಯಾಂಡ್ ಮಿಡಲ್ ಕ್ಲಾಸ್ ಫ್ಯಾಂಟೆಸೀಸ್’ (ಮಧ್ಯಮ ವರ್ಗದ ಭ್ರಮೆಗಳ ಆಚೆ) ಎಂಬ ಕಟುವಾದ ಲೇಖನವೊಂದನ್ನು ನಾನು ಬರೆದೆ. (ಸೆಮಿನಾರ್, ನಂ. 440, ಎಪ್ರಿಲ್ 1996.) ಏನೂ ಬದಲಾಗಲಿಲ್ಲ- ನಾನು ಕೆಲವು ಗೆಳೆಯರ ಅನುಕಂಪ ಕಳೆದುಕೊಳ್ಳುವುದರ ಹೊರತಾಗಿ. ನಂತರದಲ್ಲಿ ರಾಜಕೀಯ ಸುಧಾರಣೆ ಏನು, ಏಕೆ, ಹೇಗೆ ಎಂಬ ಕುರಿತು ವಿವರಿಸುತ್ತಾ, ಹೆಚ್ಚು ಉದ್ದವಾದ, ಹೆಚ್ಚು ನಿರಾಳವಾದ ಆವೃತ್ತಿಯನ್ನು ಬರೆದೆ. ಆದರೆ, ದೇಶದ ಎಲ್ಲಾ ರಾಜಕೀಯ ರೋಗಗಳಿಗೆ ಯಾವುದಾದರೂ ಕಾನೂನು ಅಥವಾ ಇನ್ನಾವುದರ ಮೂಲಕವೇ ಅಂತಿಮ ಪರಿಹಾರ ಕಂಡುಕೊಳ್ಳಲು ಬಯಸುವವರ ಉತ್ಸಾಹವನ್ನು ಮಾತ್ರ ಇದ್ಯಾವುದೂ ಕುಂದಿಸಿಲ್ಲ.

ನಾವೊಂದು ಮಂತ್ರದ ಕಷಾಯ ಹುಡುಕುತ್ತಿರುವ ದೇಶವಾಗಿದ್ದೇವೆ. ನಾವು ಎಂತ ಅವಸರದಲ್ಲಿದ್ದೇವೆ ಎಂದರೆ, ನಿಜವಾಗಿಯೂ ರೋಗವಿದೆಯೇ ಅಥವಾ ಅದಕ್ಕೆ ನಾವು ಬಯಸುವಂತಾ ರೀತಿಯ ಮದ್ದಿನ ಅಗತ್ಯ ಇದೆಯೇ ಎಂದು ಯೋಚಿಸುವಷ್ಟೂ ನಮಗೆ ವ್ಯವಧಾನವಿಲ್ಲ. ನಾವು ಎಷ್ಟು ಹತಾಶರಾಗಿದ್ದೇವೆ ಎಂದರೆ, ವೈದ್ಯನ ಕುರಿತಾಗಲೀ ಮದ್ದಿನ ಕುರಿತಾಗಲೀ ವಿಚಾರಿಸಿ ನೋಡಲು ಸಮಯ ವ್ಯರ್ಥ ಮಾಡುವಂತಿಲ್ಲ. ನಮಗೆ ಪಕ್ಕಾ ಪರಿಹಾರ ಬೇಕು: ಇಲ್ಲೇ ಮತ್ತು ಈಗಿಂದೀಗಲೇ!

ರೋಗಕ್ಕಿಂತಲೂ ಕೆಟ್ಟ ಪರಿಹಾರ?

ಈ ಮಹಾ ಕಥಾನಕದಲ್ಲಿ ಇತ್ತೀಚಿನದ್ದು ಎಂದರೆ, ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರದ ವೇಳೆ ’ವಿವೇಚನೆಯಿಲ್ಲದ ಉಚಿತ ಕೊಡುಗೆ’ಗಳ ಭರವಸೆ ನೀಡುವುದನ್ನು ತಡೆಯಬೇಕು, ಇಲ್ಲವಾದರೆ ಚುನಾವಣಾ ಆಯೋಗವು ಅಂತಾ ಪಕ್ಷಗಳ ಚುನಾವಣಾ ಚಿಹ್ನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಸುಪ್ರೀಂಕೋರ್ಟನ್ನು ಕೋರುವ ಅರ್ಜಿ. ಅರ್ಜಿದಾರ, ವಕೀಲ ಮತ್ತು ಚಿಕ್ಕ ಮಟ್ಟದ ಬಿಜೆಪಿ ನಾಯಕ ಅಶ್ವಿನಿ ಉಪಾಧ್ಯಾಯ ಎಂಬವರು ಕೋಮುದ್ವೇಷ ಹರಡುತ್ತಿರುವ ಆರೋಪಗಳ ಸಹಿತ ಹಲವಾರು ತಪ್ಪು ಕಾರಣಗಳಿಗಾಗಿ ಸುದ್ದಿಯಲ್ಲಿದ್ದಾರೆ ಎಂದಷ್ಟೇ ಹೇಳಿದರೆ ಸಾಕಾಗುತ್ತದೆ. ಚುನಾವಣಾ ಸುಧಾರಣೆಗಳಿಗೆ ನೇರವಾಗಿ ಸಂಬಂಧ ಹೊಂದಿರುವ ಚುನಾವಣಾ ಬಾಂಡ್‌ಗಳ ಪ್ರಕರಣದ ವಿಚಾರಣೆಗೆ ಸಮಯ ಹೊಂದಿಸಲಾಗದ ಸುಪ್ರೀಂ ಕೋರ್ಟ್, ತನ್ನ ಅಮೂಲ್ಯವಾದ ಸಮಯವನ್ನು ಇಂತಹದ್ದೊಂದು ಅರ್ಜಿಯ ವಿಚಾರಣೆಗೆ ಕೊಡುತ್ತಿದೆ ಎಂಬುದರ ಕುರಿತೂ ನಾವು ಗಮನ ಕೇಂದ್ರೀಕರಿಸುವುದು ಬೇಡ. ವರದಿಗಳ ಪ್ರಕಾರ, ಮುಖ್ಯ ನ್ಯಾಯಮೂರ್ತಿ ಎನ್.ವಿ ರಮಣ ಅವರ ನೇತೃತ್ವದ ಪೀಠವು, ಈ ಉಚಿತ ಕೊಡುಗೆಗಳು ಮುಂದುವರಿಯಬೇಕೇ ಬೇಡವೇ ಎಂಬ ಕುರಿತು ನಿಲುವೊಂದನ್ನು ತಳೆಯಬೇಕು ಎಂದು ಕೇಂದ್ರ ಸರಕಾರವನ್ನು ಕೋರಿದ್ದು, ಮುಂದಿನ ವಿಚಾರಣೆಗೆ ಆಗಸ್ಟ್ 3ರ ದಿನಾಂಕ ನಿಗದಿಪಡಿಸಿದೆ.

ಅಶ್ವಿನಿ ಉಪಾಧ್ಯಾಯ

ಒಂದು ಕ್ಷಣ ನಾವು ’ಉಚಿತ ಕೊಡುಗೆ’ ಎಂಬ ವ್ಯಾಪಕವಾದ ರಾಜಕೀಯ ರೋಗ ಇದೆ ಎಂದೇ ಅಂದುಕೊಳ್ಳೋಣ. ಆದುದರಿಂದ, ಇದರ ಕುರಿತಾಗಿ ಆತಂಕ ಹೊಂದಿರುವ ಎಲ್ಲರೂ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕು: ಈ ರೋಗ ಎಷ್ಟು ಗಂಭೀರವಾದದ್ದು? ಇದು ನನ್ನ ಆದ್ಯತೆಗಳ ಪಟ್ಟಿಯಲ್ಲಿ ಅತ್ಯಂತ ಮೇಲೆ ಇದೆಯೆ? ಇದು ಗುಣವಾಗಬಹುದೆ? ಚಿಕಿತ್ಸೆ ಕೈಗೆಟಕುವಂತದ್ದೆ? ಅಥವಾ ಆ ರೋಗಕ್ಕಿಂತ ಅದರ ಚಿಕಿತ್ಸೆಯೇ ಹೆಚ್ಚು ಖರ್ಚಿನದಾಗಿದ್ದರೆ, ರೋಗದೊಂದಿಗೆಯೇ ಬದುಕಲು ನಾನು ಕಲಿಯಬೇಕೆ? ಅದನ್ನು ಗುಣಪಡಿಸಬೇಕಾದರೆ, ಸರಿಯಾದ ವೈದ್ಯರು ಯಾರು? ಸರಿಯಾದ ಔಷಧಿ ಯಾವುದು?

ಈಗ ನೀವು ಒಂದು ನಿಮಿಷ ಯೋಚನೆ ಮಾಡಿದರೂ ಸಾಕು; ಯಾವುದೇ ರಾಜಕೀಯ ಪಕ್ಷದ ಚುನಾವಣಾ ಚಿಹ್ನೆಯನ್ನು ಕಿತ್ತುಕೊಳ್ಳುವುದು, ಅಥವಾ ಆ ಮೂಲಕ, ಚುನಾವಣಾ ಯಶಸ್ಸಿನ ಯಾವುದೇ ಅವಕಾಶವನ್ನು ಇಲ್ಲದಂತೆ ಮಾಡುವುದು ರೋಗಕ್ಕಿಂತಲೂ ಕೆಟ್ಟದಾದ ಚಿಕಿತ್ಸೆ ಎಂದು ತಿಳಿದುಬಿಡುತ್ತದೆ. ಒಂದು ಪ್ರಜಾಪ್ರಭುತ್ವದಲ್ಲಿ ಯಾರ ಕೈಗೂ ಇಂತಾ ಕೊಡಲಿಯನ್ನು ಕೊಡಬಾರದು; ಯಾಕೆಂದರೆ, ಅಂತಾ ಕೊಡಲಿ ಹೊಂದಿದ ವ್ಯಕ್ತಿ ಅಥವಾ ಸಂಸ್ಥೆ ಜನರಿಗಿಂತಲೂ ಹೆಚ್ಚು ಶಕ್ತಿಶಾಲಿ ಆಗುವ ಕಾರಣಕ್ಕಾಗಿ. ಚುನಾವಣಾ ಆಯೋಗವು ಈಗಾಗಲೇ ಕಳೆದುಕೊಂಡಿರುವುದಕ್ಕಿಂತಲೂ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಇನ್ನೂ ಕಳೆದುಕೊಳ್ಳಬಾರದು ಎಂದಾದರೆ, ಇಂತಾ ಅಧಿಕಾರವನ್ನು ಅದಕ್ಕೆ ಯಾವತ್ತೂ ನೀಡಬಾರದು. “ಇದು ಮತದಾರರೇ ನಿರ್ಧರಿಸಬೇಕಾದ ಪ್ರಶ್ನೆ” ಎಂದು ಚುನಾವಣಾ ಆಯೋಗವು ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಹೇಳಿರುವುದು ಸರಿಯಾಗಿದೆ.

ಈ ಹೊಣೆಗಾರಿಕೆಯನ್ನು ವಹಿಸಿಕೊಳ್ಳುವಂತೆ ಹಣಕಾಸು ಆಯೋಗವನ್ನು ಕೇಳಬಹುದೇ ಎಂಬುದನ್ನು ಮುಖ್ಯ ನ್ಯಾಯಮೂರ್ತಿಯನ್ನೊಳಗೊಂಡ ಪೀಠವು ಪರಿಗಣಿಸಿದೆ ಎಂದು ವರದಿಗಳು ಹೇಳುತ್ತವೆ. ವಾಸ್ತವವೆಂದರೆ, ಯಾವುದೇ ಸಂಸ್ಥೆಯು ಇಂತಾ ಒಂದು ಅಧಿಕಾರವನ್ನು ಅನಿಯಂತ್ರಿತವಾಗಿ ಅಥವಾ ನಿರಂಕುಶವಾಗಿ ಚಲಾಯಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವವನ್ನು ಕೊಲ್ಲುವ ಅತ್ಯಂತ ಸಾಮಾನ್ಯ ಉಪಾಯ ಎಂದರೆ, ಒಂದಲ್ಲದಿದ್ದರೆ, ಇನ್ನೊಂದು ನೆಪ ಹೂಡಿ ಪ್ರತಿಸ್ಪರ್ಧಿಗಳು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸುವುದು ಎಂಬುದನ್ನು ನಾವು ಮರೆಯುವುದು ಬೇಡ. ಇಂತಾ ಒಂದು ಅವಕಾಶದ ಕಿಟಕಿ ನಮ್ಮ ದೇಶದಲ್ಲಿ ಈ ತನಕ ಇಲ್ಲ. ಇಂತಾ ಕಿಟಕಿಯೊಂದನ್ನು ಯಾವತ್ತೂ ತೆರೆಯಬಾರದು.

’ಉಚಿತ ಕೊಡುಗೆ’ ಒಂದು ರೋಗವೆ?

ಹಾಗಾದರೆ, ರೋಗವನ್ನು ಗುಣಪಡಿಸುವುದು ಹೇಗೆ? ಈ ಪ್ರಶ್ನೆಯನ್ನು ಮುಂದುವರಿಸಿ, ಇನ್ನೊಂದು ಪರಿಹಾರವನ್ನು ಹುಡುಕುವ ಮೊದಲು ಒಂದು ಚಿಂತನೆಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳೋಣ; ಪ್ರಜಾಪ್ರಭುತ್ವವೊಂದರಲ್ಲಿ ರಾಜಕೀಯವು ಸ್ವಯಂ ನಿಯಂತ್ರಿತ ಚಟುವಟಿಕೆಯಾಗಿರಬೇಕು. ನೀವು ಪ್ರಜಾಪ್ರಭುತ್ವವನ್ನು ಬಾಹ್ಯ ಬೆದರಿಕೆಗಳಿಂದ ರಕ್ಷಿಸಬಹುದು; ತಾತ್ಕಾಲಿಕ ತಪ್ಪುಗಳಿಂದ, ವೈಯಕ್ತಿಕ ತೆವಲುಗಳಿಂದ, ಬಹುಸಂಖ್ಯಾತವಾದಿ ಅತಿರೇಕಗಳಿಂದ ರಕ್ಷಿಸಿಕೊಳ್ಳಬಹುದು. ಆದರೆ, ನೀವು ಪ್ರಜಾಪ್ರಭುತ್ವವನ್ನು ಜನರಿಂದಲೇ ರಕ್ಷಿಸಿಕೊಳ್ಳಲು ಆಗದು.

ಒಂದು ವೇಳೆ ’ಉಚಿತ ಕೊಡುಗೆ’ಗಳು ಜನರನ್ನು ಆಕರ್ಷಿಸುತ್ತವೆ ಎಂದಾದರೆ, ನೀವು ಅವರಿಗೆ ಈ ಕುರಿತು ತಿಳುವಳಿಕೆ ನೀಡಬಹುದು. ಇಂತಾ ಭರವಸೆಗಳ ಪೊಳ್ಳುತನವನ್ನು ಬಹಿರಂಗಗೊಳಿಸಲು ಸಾಧ್ಯವಾಗುವಂತೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸುವುದನ್ನು ಕಡ್ಡಾಯ ಮಾಡಬಹುದು. ಕಾರ್ಯಸಾಧ್ಯವಲ್ಲದ ಭರವಸೆಗಳನ್ನು ನೀಡುವ ಪಕ್ಷಗಳು ಮತ್ತು ನಾಯಕರನ್ನು ಈ ಕುರಿತು ಪ್ರಶ್ನಿಸಲು ಮಾಧ್ಯಮಗಳಿಗೆ ಹೆಚ್ಚಿನ ಅಧಿಕಾರ ನೀಡಬಹುದು. ಒಂದು ವೇಳೆ ಜನರು ಅತ್ಯಂತ ದೊಡ್ಡ ವರ್ಗ ಒಂದು ದೂರಕಾಲೀನ ಕಾರ್ಯಸೂಚಿಯನ್ನು ಬಯಸಿದರೆ, ಸ್ವತಃ ಪ್ರಜಾಪ್ರಭುತ್ವವನ್ನೇ ದಮನಿಸದೆ ನೀವೇನೂ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ.

ಅಂತಿಮವಾಗಿ ’ಉಚಿತ ಕೊಡುಗೆ’ಗಳ ಬಗ್ಗೆ, ಅಂದರೆ, ’ರೋಗ’ದ ಬಗ್ಗೆಯೇ ಒಂದು ಚಿಂತನೆ. ’ಉಚಿತ ಕೊಡುಗೆ’ಗಳನ್ನು ನೀಡುವುದು ಒಂದು ಸಮಸ್ಯೆ ಎಂದು ನಾವೇಕೆ ಭಾವಿಸಬೇಕು? ಮೇಲ್ನೋಟಕ್ಕೇ ಇಂತಹ ನೀತಿಗಳು ಬೇಜವಾಬ್ದಾರಿಯುತ ಮತ್ತು ರಾಷ್ಟ್ರೀಯ ಆರ್ಥಿಕ ಸಂಪನ್ಮೂಲಗಳ ಪೋಲು ಎಂಬಂತೆ ಕಾಣುತ್ತವೆ. ನನ್ನನ್ನು ಕೇಳಿದರೆ, ಉಚಿತ ವಿದ್ಯುತ್ ಒಂದು ಕೆಟ್ಟ ನೀತಿ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ, ಸಾಮಾನ್ಯ ಜನರಿಗೆ ಈ ರೀತಿಯ ಉಡುಗೊರೆ ನೀಡುವ ಬೇಜವಾಬ್ದಾರಿ ಆರ್ಥಿಕ ನೀತಿಗಳನ್ನು ಕುರಿತು ಮಾತ್ರವೇ ನಾವೇಕೆ ಇಷ್ಟೊಂದು ಅಸಮಾಧಾನ ಹೊಂದುತ್ತೇವೆ? ಅತ್ಯಂತ ಶ್ರೀಮಂತರ ತೆರಿಗೆ ಕಡಿತ, ಲಾಭದ ಮಳೆ ಸುರಿಸುವ ಕಾರ್ಯಕ್ರಮಗಳು ಮತ್ತು ಸಾಲ ಮನ್ನಾ ಕುರಿತು ನಾವೇಕೆ ಚಿಂತೆಯನ್ನೇ ಮಾಡುವುದಿಲ್ಲ?

ಈ ರೀತಿಯ ತರ್ಕರಹಿತ ’ಉಚಿತ ಕೊಡುಗೆ’ಗಳ ಭರವಸೆಗಳಿಗೆ ಬಲಿಬೀಳುವ ಬಡ ಮತದಾರರು ಅಷ್ಟೊಂದು ತರ್ಕರಹಿತರಲ್ಲ ಎಂಬುದರಿಂದಾಗಿ ಆಗಿರಬಹುದೆ? ಬಹುಶಃ ಅವರಿಗೆ ಪ್ರಜಾಪ್ರಭುತ್ವದ ತರ್ಕ ಮತ್ತು ಮೇಲಿಂದ ಕೆಳಕ್ಕೆ ಇಳಿದುಬರುವ ಆರ್ಥಿಕತೆಯ ಅಸಾಧ್ಯತೆ ತಜ್ಞರಿಗಿಂತ ಹೆಚ್ಚಾಗಿ ಅರ್ಥವಾಗುತ್ತದೆ. ತಾರ್ಕಿಕ ವಿವೇಚನೆಯಿಂದ ಕೆಲಸ ಮಾಡುವ ನೀತಿಗಳು ಹೇಗಿದ್ದರೂ ತಮಗೆ ಹೆಚ್ಚಿನದೇನನ್ನೂ ನೀಡುವುದಿಲ್ಲ; ಈಗಲೇ, ಇಲ್ಲಿಯೇ ಎಷ್ಟನ್ನು ಬಾಚಿಕೊಳ್ಳಲು ಸಾಧ್ಯವೋ ಅಷ್ಟೇ ತಮಗೆ ಸಿಗುವುದು ಎಂದು ಬಹುಶಃ ಅವರಿಗೆ ಅರ್ಥವಾಗಿದೆ. ಕೆಲವು ನೇರ ಮತ್ತು ಕಣ್ಣಿಗೆ ಕಾಣುವ ಸರಕುಗಳು ಮತ್ತು ’ಉಚಿತ ಕೊಡುಗೆ’ಗಳು ಮಾತ್ರವೇ ವಾಸ್ತವದಲ್ಲಿ ತಮಗೆ ದಕ್ಕಲಿರುವುದು ಎಂದು ಅವರಿಗೆ ಗೊತ್ತಿರುವುದರಿಂದಲೇ ಅವರು ಅವುಗಳಿಗಾಗಿಯೇ ಮತ ಹಾಕುತ್ತಾರೆ. ಈ ’ಉಚಿತ ಕೊಡುಗೆ’ಗಳ ಬಗ್ಗೆ ಚಿಂತಿತರಾಗಿರುವವರು ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರು ಹಿಂದೊಮ್ಮೆ ಕರೆದಿದ್ದ ’ತಾರ್ಕಿಕ ಮೂರ್ಖ’ರೇ ಆಗಿರಬಹುದೆ?

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟಾಧ್ಯಕ್ಷರು. ಪ್ರಸ್ತುತ ರಾಜಕೀಯ ಸಂತಿಗಳ ಬಗ್ಗೆ, ಪ್ರಜಾಪ್ರಭುತ್ವವನ್ನು ಉಳಿಸುವ ತಮ್ಮ ಚಿಂತನೆಗಳನ್ನು ಹಲವು ಪತ್ರಿಕೆಗಳಲ್ಲಿ ಸಕ್ರಿಯವಾಗಿ ಮಂಡಿಸುತ್ತಾರೆ. ‘ಮೇಕಿಂಗ್ ಸೆನ್ಸ್ ಆಫ್ ಇಂಡಿಯನ್ ಡೆಮಾಕ್ರಸಿ’ ಪುಸ್ತಕ ರಚಿಸಿದ್ದಾರೆ.


ಇದನ್ನೂ ಓದಿ: ಮಸೀದಿ-ಮಂದಿರ ವಿವಾದಗಳಲ್ಲಿ ನ್ಯಾಯಾಲಯಗಳು ಸಂವಿಧಾನಬದ್ಧವಾಗಿ ನಡೆದುಕೊಳ್ಳುತ್ತಿವೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...