ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ 11,170 ಸಿಬ್ಬಂದಿಗೆ ಸೇವಾ ಭದ್ರತೆ ನೀಡುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಕುರಿತ ಪತ್ರಿಕಾ ವರದಿಯನ್ನು ಎಕ್ಸ್ (ಟ್ವಿಟ್ಟರ್) ನಲ್ಲಿ ಹಂಚಿಕೊಂಡಿರುವ ಖರ್ಗೆ, 2017ಕ್ಕೂ ಮುನ್ನ ಗ್ರಾಮ ಪಂಚಾಯತಿಗಳಲ್ಲಿ ನೇಮಕಗೊಂಡಿರುವ ನೀರಗಂಟಿ, ಸ್ವಚ್ಛತಗಾರರ ಹುದ್ದೆಗಳಿಗೆ ಎದುರಾಗಿದ್ದ ಕನಿಷ್ಠ ವಿದ್ಯಾರ್ಹತೆಯ ತೊಡಕುಗಳನ್ನು ನಿವಾರಿಸಿ ವೇತನ ಪಾವತಿಗೆ ಸರ್ಕಾರ ಮುಂದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ರಾಜ್ಯದ ಗ್ರಾಮಪಂಚಾಯತಿಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ 11,170 ಸಿಬ್ಬಂದಿಗೆ ಸೇವಾ ಭದ್ರತೆ ನೀಡುವ ಮಹತ್ವದ ನಿರ್ಧಾರವನ್ನು ಕೈಗೊಳ್ಳಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
2017ಕ್ಕೂ ಮೊದಲು ಗ್ರಾಮಪಂಚಾಯತಿಗಳಲ್ಲಿ ನೇಮಕಗೊಂಡ ನೀರಗಂಟಿ, ಸ್ವಚ್ಛತಗಾರರ ಹುದ್ದೆಗಳಿಗೆ ಎದುರಾಗಿದ್ದ ಕನಿಷ್ಠ ವಿದ್ಯಾರ್ಹತೆಯ ತೊಡಕುಗಳನ್ನು… pic.twitter.com/RlQKwWJfTa
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) November 23, 2023
ಸೇವಾ ಭದ್ರತೆ ನೀಡುವುದರಿಂದ ಕನಿಷ್ಠ ವೇತನ, ರಜೆ ಸೌಲಭ್ಯ, ವೈದ್ಯಕೀಯ ಸೌಲಭ್ಯ, ಸೇವಾ ಭದ್ರತೆ, ಅನುಕಂಪದ ಮೇಲೆ ಕುಟುಂಬಸ್ಥರ ನೇಮಕ, ಪಿಂಚಣಿ ಸೌಲಭ್ಯ, ಸಕಾಲದಲ್ಲಿ ವೇತನ ಸೇರಿದಂತೆ ವಿವಿಧ ಸೌಲಭ್ಯಗಳು ಇನ್ಮುಂದೆ ಗ್ರಾಮ ಪಂಚಾಯತ್ ಸಿಬ್ಬಂದಿಗೆ ದೊರೆಯಲಿವೆ ಎಂದು ಸಚಿವರು ಹೇಳಿದ್ದಾರೆ.
ಗ್ರಾಮ ಪಂಚಾಯತ್ ಸಿಬ್ಬಂದಿಯನ್ನು ಸಬಲಗೊಳಿಸುವ ಹಾಗೂ ಹೆಚ್ಚು ಉತ್ತರದಾಯಿಯಾಗಿಸುವ ಮೂಲಕ ಗ್ರಾಮೀಣ ಭಾಗದ ಜನರಿಗೆ ಸರ್ಕಾರಿ ಸೇವೆಗಳನ್ನು ಸರಾಗವಾಗಿ ಒದಗಿಸುವ ನಿಟ್ಟಿನಲ್ಲಿ ಈ ಕ್ರಾಂತಿಕಾರಿ ಹೆಜ್ಜೆಯನ್ನು ಇಡಲಾಗಿದೆ ಎಂದಿದ್ದಾರೆ.
2017ಕ್ಕೂ ಮುಂಚಿತವಾಗಿ ನೇಮಕಗೊಂಡ ಪಂಚಾಯತ್ ಸಿಬ್ಬಂದಿಗೆ ಕನಿಷ್ಠ ವಿದ್ಯಾರ್ಹತೆ ತೊಡಕು ಸೇವಾ ಭದ್ರತೆ ನೀಡಲು ಅಡ್ಡಿಯಾಗಿತ್ತು. ಇದೀಗ ಸೇವಾ ಭದ್ರತೆ ಒದಗಿಸಲು ಸರ್ಕಾರ ಮುಂದಾಗಿರುವುದರಿಂದ ವೇತನ ವಿಳಂಬ, ಕೆಲಸದಿಂದ ವಜಾ ಮಾಡುವುದು ಇತ್ಯಾದಿ ಸಮಸ್ಯೆಗಳು ಪರಿಹಾರವಾಗಲಿದೆ. ಅಲ್ಲದೆ, ಸಿಬ್ಬಂದಿಗೆ ಸರ್ಕಾರದಿಂದ ಹಲವು ಸೌಲಭ್ಯಗಳು ದೊರೆಯಲಿವೆ.
ಇದನ್ನೂ ಓದಿ: ಡಿ.ಕೆ ಶಿವಕುಮಾರ್ ವಿರುದ್ಧದ ಸಿಬಿಐ ತನಿಖೆ ವಾಪಸ್ ಪಡೆದ ಸರ್ಕಾರ