ವಿವಿಧ ನ್ಯಾಯಾಲಯಗಳ ಮುಂದೆ ಬಾಕಿ ಇರುವ ಜ್ಞಾನವಾಪಿ ಸಂಬಂಧಿತ ಮೊಕದ್ದಮೆಗಳನ್ನು ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯಕ್ಕೆ ವರ್ಗಾಯಿಸಲು ಕೋರಿ ಸಲ್ಲಿಸಲಾದ ಏಳು ಅರ್ಜಿಗಳನ್ನು ವಾರಣಾಸಿ ನ್ಯಾಯಾಲಯವು ಮಂಗಳವಾರ ಕ್ರೋಢೀಕರಿಸಿದೆ.
ಜಿಲ್ಲಾ ನ್ಯಾಯಾಧೀಶ ಎ.ಕೆ.ವಿಶ್ವೇಶ್ ಅವರು ತಮ್ಮ ವಿಶೇಷ ಅಧಿಕಾರ ಬಳಸಿ, ಪ್ರತಿವಾದಿಗಳ ಆಕ್ಷೇಪದ ನಡುವೆಯೂ ಪ್ರಕರಣಗಳನ್ನು ಕ್ರೋಢೀಕರಿಸಿ ವಿಚಾರಣೆ ನಡೆಸಲು ಆದೇಶ ನೀಡಿದರು ಎಂದು ಜ್ಞಾನವಾಪಿ ಮತ್ತು ಆದಿ ವಿಶ್ವೇಶ್ವರ್ ಪ್ರಕರಣಗಳ ಪರ ವಿಶೇಷ ವಕೀಲ ರಾಜೇಶ್ ಮಿಶ್ರಾ ಹೇಳಿದರು.
”ಈ ಎಲ್ಲಾ ಪ್ರಕರಣಗಳು ಬೇರೆ ಬೇರೆ ನ್ಯಾಯಾಲಯಗಳಲ್ಲಿ ಬಾಕಿ ಉಳಿದರೆ ವ್ಯತಿರಿಕ್ತ ಆದೇಶಗಳು ಬರುವ ಸಾಧ್ಯತೆ ಇದೆ” ಎಂದು ಜಿಲ್ಲಾ ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ”ಈ ಎಲ್ಲಾ ಪ್ರಕರಣಗಳು ಒಂದೇ ನ್ಯಾಯಾಲಯದಲ್ಲಿ ಉಳಿದಿದ್ದರೆ, ಈ ಎಲ್ಲಾ ಪ್ರಕರಣಗಳಲ್ಲಿ ಯಾವುದೇ ವ್ಯತಿರಿಕ್ತ ತೀರ್ಪು ಅಥವಾ ಆದೇಶದ ಸಾಧ್ಯತೆ ಇರುವುದಿಲ್ಲ” ಎಂದು ಮಿಶ್ರಾ ಹೇಳಿದರು.
”ಒಂದೇ ನ್ಯಾಯಾಲಯದಲ್ಲಿ ಎರಡು ಅಥವಾ ಹೆಚ್ಚಿನ ಪ್ರಕರಣಗಳು ಬಾಕಿ ಇರುವಾಗ ಮತ್ತು ನ್ಯಾಯದ ಹಿತಾಸಕ್ತಿಯಿಂದ ನ್ಯಾಯಾಲಯವು ಅಭಿಪ್ರಾಯಪಟ್ಟರೆ, ಅವುಗಳ ಜಂಟಿ ವಿಚಾರಣೆಗೆ ಆದೇಶಿಸಬಹುದು” ಎಂದು ಸಿಪಿಸಿಯ 4ಎ ಆದೇಶವನ್ನು ಉಲ್ಲೇಖಿಸಿ ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಈ ಎಲ್ಲಾ ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸುವುದು ನ್ಯಾಯದ ಹಿತದೃಷ್ಟಿಯಿಂದ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಜ್ಞಾನವಾಪಿ ಶಿವಲಿಂಗದ ಕಾರ್ಬನ್ ಡೇಟಿಂಗ್ ನಡೆಸುವಂತೆ ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶವನ್ನು ಮುಂದೂಡಿದ ಸುಪ್ರೀಂ
ಇಡೀ ಜ್ಞಾನವಾಪಿ ಮಸೀದಿ ಸಂಕೀರ್ಣವನ್ನು ಸಮೀಕ್ಷೆ ಮಾಡಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ (ಎಎಸ್ಐ) ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿಗೆ ಮುಸ್ಲಿಂ ಕಡೆಯವರು ಸೋಮವಾರ ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಆಕ್ಷೇಪಣೆ ಸಲ್ಲಿಸಿದರು.
ಮುಸ್ಲಿಮರ ಪರ ವಾದ ಮಂಡಿಸಿದ್ದ ವಕೀಲ ಮೊಹಮ್ಮದ್ ತೊಹಿದ್ ಖಾನ್ ಅವರು, ಎಲ್ಲಾ ಏಳು ಪ್ರಕರಣಗಳ ವಿಚಾರಣೆಯನ್ನು ವಿರೋಧಿಸಿದರು. ”ಜ್ಞಾನವಾಪಿಗೆ ಸಂಬಂಧಿಸಿದ ವಿಷಯಗಳು ಇನ್ನೂ ಒಂದು ಹಂತಕ್ಕೆ ಬಂದಿಲ್ಲ, ಅವುಗಳನ್ನು ಒಟ್ಟಿಗೆ ಆಲಿಸುವ ನಿರ್ಧಾರ ಹಿಂತೆಗೆದುಕೊಳ್ಳಬೇಕು” ಎಂದು ಪ್ರತಿಪಾದಿಸಿದರು.
‘ಈಗಿನಂತೆ ಎಲ್ಲಾ ಪ್ರಕರಣಗಳ ಸಾಕ್ಷ್ಯವನ್ನು ನ್ಯಾಯಾಲಯವು ನೋಡಬೇಕಿತ್ತು. ಸಾಕ್ಷಿ ಒಂದೇ ಆಗಿದ್ದರೆ, ಅಂತಹ ತೀರ್ಪು ನೀಡಬಹುದು’ ಎಂದು ಖಾನ್ ಹೇಳಿದರು.
ಶೃಂಗಾರ್ ಗೌರಿ-ಜ್ಞಾನವಾಪಿ ಪ್ರಕರಣದ ದಾವೆದಾರರಾದ ಲಕ್ಷ್ಮಿ ದೇವಿ, ರೇಖಾ ಪಾಠಕ್, ಸೀತಾ ಸಾಹು ಮತ್ತು ಮಂಜು ವ್ಯಾಸ್ ಏಳು ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸುವಂತೆ ನ್ಯಾಯಾಲಯವನ್ನು ಒತ್ತಾಯಿಸಿದ್ದರು.