ಕೊರೊನ ಬಿಕ್ಕಟ್ಟನ್ನು ಪ್ರಧಾನ ಮಂತ್ರಿ ಅವರು ದುರುಪಯೋಗ ಮಾಡುತ್ತಿದ್ದಾರೆಯೆ ಎಂದು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಕುಮಾರಸ್ವಾಮಿ ಅವರು ತನ್ನ ಟ್ವಿಟ್ಟರ್ ಹ್ಯಾಂಡಲಿನಲ್ಲಿ “ಬಿಜೆಪಿಯ ಸಂಸ್ಥಾಪನಾ ದಿನ ಆಚರಿಸಲು ಕೊರೋನ ಸಂಕಷ್ಟವನ್ನು ಪ್ರಧಾನಿ ದುರುಪಯೋಗ ಮಾಡಿಕೊಂಡರೇ? 6 ಎಪ್ರಿಲ್ ಬಿಜೆಪಿ ಸಂಸ್ಥಾಪನಾ ದಿನ. ಇಂದಿಗೆ ಬಿಜೆಪಿಗೆ ನಲವತ್ತು ವರ್ಷ ತುಂಬುತ್ತವೆ. ತನ್ನ ಸಂಸ್ಥಾಪನಾ ದಿನದ ಸಂಭ್ರಮೋತ್ಸವವನ್ನು ಕೊರೋನ ಸಂಕಷ್ಟದ ದಿನಗಳಲ್ಲಿ ನೇರಾ ನೇರ ಆಚರಿಸಲು ಹಿಂಜರಿದ ಬಿಜೆಪಿ ಪರೋಕ್ಷವಾಗಿ ಇಡೀ ದೇಶದ ಜನತೆಯ ಕೈಯಲ್ಲಿ ದೀಪ ಬೆಳಗಿಸಿ ತನ್ನ ಭಂಡತನವನ್ನು ಮೆರೆಯುತ್ತಿದೆಯೇ?” ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
“ದೇಶದ ಸಂಕಟವನ್ನು ಬಗೆ ಹರಿಸುವ ಯಾವುದೇ ಮಾರ್ಗೋಪಾಯಗಳನ್ನು ದೇಶಕ್ಕೆ ಹೇಳದ ಪ್ರಧಾನಿ ಏಪ್ರಿಲ್ 5 ನ್ನೇ ಆಯ್ದುಕೊಂಡದ್ದಕ್ಕೆ ಬೇರೆ ಏನು ವೈಜ್ಞಾನಿಕ, ವೈಚಾರಿಕ ಕಾರಣ ಎಂಬುದನ್ನು ಸ್ಪಷ್ಟ ಪಡಿಸಬೇಕು” ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
“ದೇಶ ಹಿಂದೆಂದೂ ಕಂಡರಿಯದ ಕಷ್ಟದ ದಿನಗಳಲ್ಲಿ ಇರುವಾಗ ದೀಪ ಬೆಳಗಿಸಿ ಒಗ್ಗಟ್ಟು ಪ್ರದರ್ಶಿಸುವ ನೆಪದಲ್ಲಿ ಈ ತರದ ತೋರಿಕೆಯ ಸಂಭ್ರಮ ಬೇಕೇ? ಜಗತ್ತು ಕೊರೊನ ಮಹಾಮಾರಿಯಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಇಂತಹ ರಹಸ್ಯ ಕಾರ್ಯಸೂಚಿ ಅರ್ಥಾತ್ ಪರದೆ ಹಿಂದಿನ ಸತ್ಯ ಮರೆಮಾಚಿ ಅಕಾಲಿಕ ದೀಪಾವಳಿ ಮಾಡಬೇಕೆ?” ಎಂದು ಪ್ರಶ್ನಿಸಿದ್ದಾರಲ್ಲದೆ, “ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ.. ಕೈ ಹಿಡಿದು ನಡೆಸೆನ್ನನು…..” ಎಂದು ಟ್ವಿಟ್ಟರಿನಲ್ಲಿ ಕುಮಾರಸ್ವಾಮಿ ಅವರು ಬರೆದಿದ್ದಾರೆ.