ರಾಜ್ಯದ ಹೊಸ ಸಚಿವ ಸಂಪುಟದ ಪಟ್ಟಿ ಬುಧವಾರ ಹೊರ ಬಿದ್ದಿದೆ. ಹಲವು ಪ್ರಭಾವಿ ಸಚಿವರಿಗೆ ಈ ಬಾರಿಯ ಸಂಪುಟದಲ್ಲಿ ಸ್ಥಾನ ಗಿಟ್ಟಿಲ್ಲ. ಅದಾಗಿಯು ಯಡಿಯೂರಪ್ಪ ಅವರ ಸಂಪುಟದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದ, ಮೊಟ್ಟೆ ಟೆಂಡರ್ ಹಗರಣದ ಆರೋಪ ಹೊತ್ತಿರುವ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.
ಗರ್ಭಿಣಿಯರು ಮತ್ತು ಮಕ್ಕಳಿಗೆ ನೀಡುವ ಮಾತೃಪೂರ್ಣ ಯೋಜನೆಯ ಮೊಟ್ಟೆ ಖರೀದಿಯ ಟೆಂಡರ್ ನೀಡಲು ಸಚಿವೆ ಶಶಿಕಲಾ ಜೊಲ್ಲೆ ಮತ್ತು ಗಂಗಾವತಿಯ ಶಾಸಕ ಪರಣ್ಣ ಮುನವಳ್ಳಿ ಲಂಚ ಪಡೆದಿದ್ದಾರೆ ಎಂದು ಖಾಸಗಿ ವಾಹಿನಿಯೊಂದು ಕಳೆದ ತಿಂಗಳು ಆರೋಪಿಸಿತ್ತು.
ಸಚಿವ ಸಂಪುಟದ ಸಂಭಾವ್ಯ ಪಟ್ಟಿಯಲ್ಲಿ ಹಿರಿಯೂರು ಶಾಸಕಿ ಕೆ. ಪೂರ್ಣಿಮಾ ಅವರ ಹೆಸರು ಇತ್ತಾದರೂ, ಅಂತಿಮ ಹಂತದಲ್ಲಿ ಅವರ ಹೆಸರು ಕೈಬಿಡಲಾಗಿದೆ. ಇದೀಗ ಹೊಸ ಸಂಪುಟದಲ್ಲಿ ಒಬ್ಬ ಮಹಿಳೆಗೆ ಮಾತ್ರ ಅವಕಾಶ ನೀಡಲಾಗಿದೆ. ಅದೂ ಕೂಡಾ ಅವರ ಮೇಲೆ ಭ್ರಷ್ಟಾಚಾರ ಆರೋಪ ಇದ್ದರೂ, ರಾಜ್ಯ ಸರ್ಕಾರ ಅವರಿಗೆ ಸಚಿವ ಸ್ಥಾನ ನೀಡುವ ಧೈರ್ಯ ಮಾಡಿದೆ.
ಇದನ್ನೂ ಓದಿ: ಮೊಟ್ಟೆ ಖರೀದಿ ಟೆಂಡರ್ ಹಗರಣ: ಸಚಿವೆ ಶಶಿಕಲಾ ಜೊಲ್ಲೆ ನಿವಾಸಕ್ಕೆ ಮೊಟ್ಟೆ ಎಸೆದು ಪ್ರತಿಭಟನೆ
ಖಾಸಗಿ ವಾಹಿನಿ ನ್ಯೂಸ್ ಫಸ್ಟ್ ಮಾಡಿದ್ದ ಕುಟುಕು ಕಾರ್ಯಾಚರಣೆಯ ವಿಡಿಯೊದಲ್ಲಿ, “ಈ ಮುಂಚೆ ನೇರವಾಗಿ ಅಂಗನವಾಡಿ ಕೇಂದ್ರಗಳು ಮೊಟ್ಟೆ ಖರೀದಿ ಮಾಡುತ್ತಿದ್ದವು. ಆದರೆ ಈಗ ಕೇಂದ್ರೀಕೃತವಾಗಿ ಮೊಟ್ಟೆ ಪೂರೈಕೆಗೆ ಟೆಂಡರ್ ಕರೆದಿದ್ದೇವೆ. ನಿಮಗೆ ಟೆಂಡರ್ ಸಿಗುವಂತೆ ಮಾಡುತ್ತೇವೆ” ಎಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿರುವುದು ದಾಖಲಾಗಿತ್ತು.
ಅದೇ ರೀತಿಯಲ್ಲಿ ಸಚಿವೆಯ ಸಂಪರ್ಕ ಕೊಟ್ಟ ಶಾಸಕ ಪರಣ್ಣ ಮುನವಳ್ಳಿ “ಟೆಂಡರ್ ನಿಮಗೆ ಆಗಬೇಕಾದರೆ ಪ್ರತಿ ತಿಂಗಳು ಸಚಿವರಿಗೆ ಒಂದು ಕೋಟಿ ಮತ್ತು ತನಗೆ 30 ಲಕ್ಷ ಹಣ ನೀಡಬೇಕು” ಎಂದು ಬೇಡಿಕೆಯಿಟ್ಟಿರುವುದು ಸಹ ರಹಸ್ಯ ಕಾರ್ಯಾಚರಣೆಯಲ್ಲಿ ದಾಖಲಾಗಿತ್ತು. ಟೆಂಡರ್ಗಾಗಿ ಸಚಿವೆಯ ಸೂಚನೆಯಂತೆ ಚಿಕ್ಕೋಡಿಯ ಸಂಜಯ್ ಅರಗಿ ಎಂಬುವವರು 25 ಲಕ್ಷ ಅಡ್ವಾನ್ಸ್ ಹಣ ಪಡೆದಿದ್ದಾರೆ ಎಂದು ನ್ಯೂಸ್ಫಸ್ಟ್ ತಂಡ ತಿಳಿಸಿತ್ತು.
ಪಾರದರ್ಶಕವಾಗಿ ಮತ್ತು ಪಕ್ಷಪಾತರಹಿತವಾಗಿ ಟೆಂಡರ್ ನಡೆಸಬೇಕಾದ ಸಚಿವರು, ಲಂಚ ಪಡೆದು ಅಕ್ರಮವಾಗಿ ಟೆಂಟರ್ ಕೊಡಲು ಮುಂದಾಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದು ಮಕ್ಕಳಿಗೆ, ಗರ್ಭಿಣಿಯರಿಗೆ ತಲುಪಬೇಕಾದ ಹಣದ ವ್ಯವಸ್ಥಿತ ಲೂಟಿಯಾಗಿದೆ ಎಂದು ಸಾರ್ವಜನಿಕರು ಅಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಭ್ರಷ್ಟಾಚಾರವನ್ನ ಖಂಡಿಸಿ, ಬೆಂಗಳೂರಿನ ಜೆ.ಸಿ ನಗರ ರಸ್ತೆಯಲ್ಲಿರುವ ಶಶಿಕಲಾ ಜೊಲ್ಲೆಯವರ ನಿವಾಸದ ಮುಂದೆ ಜಮಾಯಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು, ನಿವಾಸಕ್ಕೆ ಮೊಟ್ಟೆಗಳನ್ನು ಎಸೆದು ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: ‘ಇದೊಂತರ ಎಗ್ರೈಸ್ ಸರ್ಕಾರ!’: #ನುಂಗಬೇಡಿಮಕ್ಕಳಮೊಟ್ಟೆ ಟ್ವಿಟರ್ ಟ್ರೆಂಡ್