ಭೂಮಾಫಿಯಾ ನಡೆಸುತ್ತಿರುವವರಿಂದ ತನಗೆ ಜೀವ ಬೆದರಿಕೆ ಇದೆ ಎಂದು ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯಲ್ಲಿ ಪತ್ರಕರ್ತರೊಬ್ಬರು ಹೇಳಿದ್ದರು. ಈ ಬಗ್ಗೆ ದೂರು ನೀಡಿದ ತಿಂಗಳ ನಂತರ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.
24ವರ್ಷದ ಮನ್ನು ಅವಸ್ತಿ ಎನ್ನುವ ಪತ್ರಕರ್ತರ ಮೇಲೆ ಗುಂಡಿನ ದಾಳಿ ನಡೆದಿದೆ. ಅವರು ಜೂನ್ 24, ಶನಿವಾರ ರಾತ್ರಿ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಗುಂಡು ಹಾರಿಸಿದ್ದರಿಂದ ಬಲ ಭುಜಕ್ಕೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದೀಗ ಅವರ ಸ್ಥಿತಿ ಸ್ಥಿರವಾಗಿದ್ದು, ಕಾನ್ಪುರದ ಲಾಲಾ ಲಜಪತ್ ರಾಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಮದು ತಿಳಿದುಬಂದಿದೆ.
ಈ ಬಗ್ಗೆ ಮಾತನಾಡಿದ ಉನ್ನಾವೊ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಶಶಿ ಶೇಖರ್ ಸಿಂಗ್ ಅವರು, ”ಘಟನಾ ಸ್ಥಳದಿಂದ ಗುಂಡಿನ ದಾಳಿಯ ವೇಳೆ ಬಳಸಿದ ಮತ್ತು ಕೆಲವು ಜೀವಂತ ಕಾಟ್ರಿಡ್ಜ್ಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
ಉನ್ನಾವೋ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಸಿದ್ಧಾರ್ಥ್ ಶಂಕರ್ ಮೀನಾ ಅವರು ಅವಸ್ತಿ ಮೇಲೆ ಗುಂಡು ಹಾರಿಸಿದ್ದಾರೆಯೇ ಎಂದು ಭಾನುವಾರ ಮಧ್ಯಾಹ್ನದ ವೇಳೆಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಅವರು ಪೊಲೀಸರಿಗೆ ಮಾಹಿತಿ ನೀಡಲಿಲ್ಲ. ಉನ್ನಾವೋ ಆಸ್ಪತ್ರೆಯ ವೈದ್ಯರು ಇದು ಗುಂಡಿನ ಗಾಯ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಹೇಳಿರುವುದಾಗಿ ಎಕ್ಸ್ಪ್ರೆಸ್ ಉಲ್ಲೇಖಿಸಿದೆ.
ವಶಪಡಿಸಿಕೊಂಡ ಕಾರ್ಟ್ರಿಡ್ಜ್ ಗಾಯಕ್ಕೆ ಹೊಂದಿಕೆಯಾಗಲಿಲ್ಲ ಎಂದು ಮೀನಾ ಹೇಳಿದ್ದಾರೆ.
ಮಾರ್ಚ್ನಲ್ಲಿ ಪತ್ರಕರ್ತ ಮನ್ನು ಅವಸ್ತಿ ಅವರು, ಉನ್ನಾವೊ ಎಸ್ಪಿ ಮತ್ತು ಇತರ ಹಿರಿಯ ಅಧಿಕಾರಿಗಳಿಗೆ ಔಪಚಾರಿಕ ದೂರು ಸಲ್ಲಿಸಿದ್ದರು. ದೂರಿನಲ್ಲಿ, ”ಭೂಮಾಫಿಯಾ ನಡೆಸುವ ನಾಲ್ವರಿಂದ ತನಗೆ ಜೀವ ಬೆದರಿಕೆ ಇದೆ. ನೋಂದಣಿ ಸಂಖ್ಯೆ ಇಲ್ಲದ ಕಾರುಗಳು ತನ್ನನ್ನು ಹಿಂಬಾಲಿಸುತ್ತಿವೆ. ನಾನು ಭೂಮಾಫಿಯಾ ಸುದ್ದಿಗಳನ್ನು ಬರೆದಿದ್ದೇನೆ ಹಾಗಾಗಿ ನನ್ನ ಮೇಲೆ ಹಾಲಿ ಶಾಸಕರೊಬ್ಬರು ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ವೀಡಿಯೊಗಳನ್ನು ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದರು.
ಈ ಮಧ್ಯೆ ಉನ್ನಾವೋ ಎಸ್ಪಿ ಅವರು ತನಗೆ ಒದಗಿಸಿದ ಭದ್ರತಾ ಪೊಲೀಸರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಹೇಳಿದ್ದೆ. ಆದ್ದರಿಂದ ಭದ್ರತಾ ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಅವಸ್ಥಿ ಹೇಳಿದ್ದಾರೆ.