ಗೋಮಾಂಸವನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಶಂಕೆಯ ಮೇಲೆ ಗೋರಕ್ಷಕರ ಗುಂಪೊಂದು ಶನಿವಾರ ರಾತ್ರಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿಯಾಗಿದೆ.
ಮುಂಬೈನ ಕುರ್ಲಾದ ಖುರೇಷಿ ನಗರದ ನಿವಾಸಿ ಅಫಾನ್ ಅಬ್ದುಲ್ ಮಜಿದ್ ಅನ್ಸಾರಿ ಎಂಬಾತ ಬಲಿಯಾದ ವ್ಯಕ್ತಿ. ಅನ್ಸಾರಿ ಮತ್ತು ಆತನ ಸ್ನೇಹಿತ ನಾಸಿರ್ ಹುಸೇನ್ ಶೇಖ್ ಅಹ್ಮದ್ನಗರದಿಂದ ಮುಂಬೈಗೆ ಕಾರಿನಲ್ಲಿ 450 ಕೆಜಿ ಮಾಂಸವನ್ನು ಸಾಗಿಸುತ್ತಿದ್ದರು. ಈ ವೇಳೆ ಗೋರಕ್ಷಕರು ಅವರನ್ನು ಅಡ್ಡಗಟ್ಟಿ ಥಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಫಾನ್ ಅಬ್ದುಲ್ ಮಜಿದ್ ಅನ್ಸಾರಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ನಾಸಿಕ್ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಶಹಾಜಿ ಉಮಾಪ್ ಟೈಮ್ಸ್ ಆಫ್ ಇಂಡಿಯಾಗೆ ಮಾಹಿತಿ ನೀಡಿದ್ದು, ”ಶೇಖ್ ಅವರು ಸಿನ್ನಾರ್ ಪಟ್ಟಣದ ಟೋಲ್ ಗೇಟ್ ತಲುಪಿದಾಗ, ಕಾರಿನಲ್ಲಿ ಮಾಂಸವನ್ನು ಯಾರೋ ನೋಡಿದ್ದಾರೆ. ಆಗ ಯಾರೋ ದಾಳಿಕೋರರಿಗೆ ಮಾಹಿತಿ ನೀಡಿದ್ದಾರೆ. ನಾವು ಆ ಬಗ್ಗೆ ತನಿಖೆ ನಡೆಸುತ್ತಿದ್ದೇವೆ” ಎಂದು ಉಮಾಪ್ ಹೇಳಿದ್ದಾರೆ.
ಸಬ್ ಇನ್ಸ್ಪೆಕ್ಟರ್ ಸುನಿಲ್ ಭಮ್ರೆ ಮಾತನಾಡಿ, ”ಘಟನಾ ಸ್ಥಳವನ್ನು ತಲುಪಿದಾಗ, ಕಾರು ಸಂಪೂರ್ಣವಾಗಿ ಹಾನಿಗೊಳಗಾದ ಸ್ಥಿತಿಯಲ್ಲಿ ಇದ್ದದ್ದು ಗಮನಕ್ಕೆ ಬಂದಿದೆ. ಇಬ್ಬರು ಗಾಯಾಳುಗಳು ಕಾರಿನೊಳಗೆ ಇದ್ದರು. ತಕ್ಷಣ ನಾವು ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದೇವೆ. ಆದರೆ, ಚಿಕಿತ್ಸೆ ವೇಳೆ ಅವರಲ್ಲಿ ಒಬ್ಬರು ಸಾವನ್ನಪ್ಪಿದರು” ಎಂದು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ನಾಸಿರ್ ಹುಸೇನ್ ಶೇಖ್ ಅವರು ತಮ್ಮ ಮೇಲೆ ದಾಳಿ ನಡೆದ ಬಗ್ಗೆ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಪೊಲೀಸರು ಪ್ರಥಮ ಮಾಹಿತಿ ವರದಿಯನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಇದುವರೆಗೆ 11 ಜನರನ್ನು ಬಂಧಿಸಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ.
ಪೊಲೀಸರು ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಸ್ಕ್ಯಾನ್ ಮಾಡಿದ್ದಾರೆ ಮತ್ತು ಅವರ ಮೊಬೈಲ್ ಫೋನ್ ಲೊಕೇಶನ್ ಆಧರಿಸಿ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಉಮಾಪ್ ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿದರು.
”ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಹತ್ತು ಜನರನ್ನು ಬಂಧಿಸಲಾಗಿದೆ. ಗಾಯಾಳು ನೀಡಿದ ದೂರಿನ ಮೇರೆಗೆ ಕೊಲೆ ಮತ್ತು ಗಲಭೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಸಂತ್ರಸ್ತರು ನಿಜವಾಗಿಯೂ ಗೋಮಾಂಸ ಸಾಗಿಸುತ್ತಿದ್ದಾರೋ ಇಲ್ಲವೋ ಎಂಬುದು ಪ್ರಯೋಗಾಲಯದ ವರದಿ ಬಂದ ನಂತರವಷ್ಟೇ ತಿಳಿಯಲಿದೆ” ಎಂದು ಪೊಲೀಸರು ಹೇಳಿದ್ದಾರೆ.
One more Person Lynched to Death by Cow Vigilantes. Afan Ansari was beaten to death allegedly by a group of cow vigilantes on suspicion of transporting beef in Nashik district of Maharashtra. pic.twitter.com/14aZSJ9XA6
— Mohammed Zubair (@zoo_bear) June 26, 2023
ಕಳೆದ ವಾರ ಇದೇ ನಾಸಿಕ್ ಜಿಲ್ಲಯಲ್ಲಿ ಜಾನುವಾರುಗಳನ್ನು ಸಾಯಿಸಲು ಸಾಗಿಸುತ್ತಿದ್ದಾರೆ ಎನ್ನುವ ಶಂಕೆಯ ಮೇರೆಗೆ ಮುಸ್ಲಿಂ ವ್ಯಕ್ತಿಯನ್ನು ಕೊಲ್ಲಲಾಗಿತ್ತು. ಲುಕ್ಮಾನ್ ಅನ್ಸಾರಿಯನ್ನು ಕೊಂದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ, ಅವರಲ್ಲಿ ಕೆಲವರು ಹಿಂದುತ್ವ ಸಂಘಟನೆಯಾದ ರಾಷ್ಟ್ರೀಯ ಬಜರಂಗದಳದೊಂದಿಗೆ ಸಂಬಂಧ ಹೊಂದಿದ್ದಾರೆ.
ಜೂನ್ 8 ರಂದು ಅನ್ಸಾರಿ ಮತ್ತು ಅವರ ಇಬ್ಬರು ಸಹಚರರಾದ ಅಕ್ವೀಲ್ ಗವಂಡಿ ಮತ್ತು ಪಪ್ಪು ಪಡ್ಡಿ ವಾಹನದಲ್ಲಿ ಜಾನುವಾರುಗಳನ್ನು ಸಾಗಿಸುತ್ತಿದ್ದಾಗ ಈ ಘಟನೆ ನಡೆದಿತ್ತು. ನಾಸಿಕ್ನ ಇಗತ್ಪುರಿ ಪ್ರದೇಶದಲ್ಲಿ ಹಿಂದುತ್ವ ಸಂಘಟನೆಯ 10ರಿಂದ 15 ಮಂದಿ ಅವರನ್ನು ಅಡ್ಡಗಟ್ಟಿದ್ದರು. ಗವಂಡಿ ಓಡಿಹೋದರು, ಉಳಿದ ಇಬ್ಬರನ್ನು ಗೋರಕ್ಷಕರು ಥಳಿಸಿದ್ದರು. ಈ ಘಟನೆ ಬೆನ್ನಲ್ಲೇ ಇದೀಗ ಗೋಮಾಂಸ ಕಳ್ಳಸಾಗಣೆ ಆರೋಪದ ಮೇಲೆ ನಾಸಿಕ್ ಜಿಲ್ಲೆಯಲ್ಲಿಹಿಂದುತ್ವ ಸಂಘಟನೆಯವರು ಗೋರಕ್ಷಣೆಯ ಹೆಸರಿನಲ್ಲಿ ಮುಸ್ಲಿಂ ವ್ಯಕ್ತಿಯನ್ನು ಹೊಡೆದು ಕೊಂದಿದ್ದಾರೆ.