“ನಾನು ಬಿಜೆಪಿಯಲ್ಲೇ ಗುಲಾಮನಾಗಿ ಇರಬೇಕಿತ್ತಾ?” ಎಂದು ಕೇಳುವ ಮೂಲಕ ಮಾಜಿ ಮುಖ್ಯಮಂತ್ರಿ, ಪ್ರಭಾವಿ ಲಿಂಗಾಯತ ನಾಯಕರಾದ ಜಗದೀಶ್ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅವರು ಬಿಜೆಪಿ ಹೈಕಮಾಂಡ್ ವಿರುದ್ಧ ಹರಿಹಾಯ್ದಿದ್ದಾರೆ. “6 ಸಲ ಶಾಸಕನಾಗಿ ಆಯ್ಕೆಯಾಗಿದ್ದೇನೆ. ದೊಡ್ಡ ನಾಯಕನಾಗಿ ಬೆಳೆದಿದ್ದೇನೆ. ಇಷ್ಟು ವರ್ಷಗಳ ಕಾಲ ರಾಜಕೀಯದಲ್ಲಿ ಇದ್ದ ನನ್ನನ್ನು ಒಂದು ಕ್ಷಣದಲ್ಲಿ ಹೊಸಕಿಹಾಕಿದರೆ ಸುಮ್ಮನೆ ಇರಬೇಕಾ? ಗುಲಾಮನ ರೀತಿಯಲ್ಲಿ ಇರಬೇಕಾ?” ಎಂದು ಪ್ರಶ್ನಿಸಿದ್ದಾರೆ.
“ನನಗೆ ಏಕೆ ಟಿಕೆಟ್ ನಿರಾಕರಿಸಲಾಯಿತು ಎನ್ನುವುದನ್ನು ಇದುವರೆಗೆ ಹೇಳಿಲ್ಲ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೂಡ ಏನೂ ಹೇಳಿಲ್ಲ. ಹೇಳಿದ್ದರೆ ಪಕ್ಷ ಬಿಡುತ್ತಿರಲಿಲ್ಲ” ಎಂದು ತಿಳಿಸಿದ್ದಾರೆ.
“ಜಗದೀಶ್ ಶೆಟ್ಟರ್ ಒಬ್ಬ ಬಡಪಾಯಿ, ಇಷ್ಟೊಂದು ಪ್ರಹಾರ ಯಾಕೆ ಎಂಬುವುದು ಗೊತ್ತಾಗುತ್ತಿಲ್ಲ. ಕೇಂದ್ರ, ರಾಜ್ಯ ನಾಯಕರು ಬಂದು ಶೆಟ್ಟರ ಅವರನ್ನು ಏನೇ ಆಗಲಿ ಸೋಲಿಸಬೇಕು ಎನ್ನುತ್ತಿದ್ದಾರೆ. ಲಿಂಗಾಯತ ನಾಯಕರ ಮೂಲಕ ನನ್ನ ವಿರುದ್ಧ ಮಾತನಾಡಿಸುತ್ತಿದ್ದಾರೆ. ಒಡೆದು ಆಳುವ ಕುತಂತ್ರವನ್ನು ಜನರು ನೋಡುತ್ತಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ನಾನು ಕೇಂದ್ರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಷ್ಟೇ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಅಮಿತ ಶಾ, ಬಿ.ಎಸ್.ಯಡಿಯೂರಪ್ಪ, ಸ್ಮೃತಿ ಇರಾನಿ ಸೇರಿದಂತೆ ಎಲ್ಲರೂ ಶೆಟ್ಟರ ಅವರನ್ನು ಸೋಲಿಸಬೇಕು ಎಂದು ಹೇಳುತ್ತಿದ್ದಾರೆ. ಬಡಪಾಯಿ ಶೆಟ್ಟರ ಮೇಲೆ ಯಾಕೆ ಇಷ್ಟೊಂದು ಪ್ರಹಾರ ಗೊತ್ತಾಗುತ್ತಿಲ್ಲ. ಈ ಬೆಳೆವಣಿಗೆಯನ್ನು ಕ್ಷೇತ್ರದ ಜನರು ಗಮನಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
“ಬಿಜೆಪಿಯಲ್ಲಿ ಸಿದ್ದಾಂತ ಉಳಿದಿದೆಯೇ. ಸೈದ್ಧಾಂತಿಕ ವಿರೋಧಿಗಳನ್ನು ಆಪರೇಷನ್ ಕಮಲದ ಮೂಲಕ ಕರೆದುಕೊಂಡು ಸರಕಾರ ರಚನೆ ಮಾಡಲಿಲ್ಲವೆ? ಸಿದ್ಧಾಂತಿಕ ವಿರೋಧಿಗಳಿಗೆ ಟಿಕೆಟ್ ನೀಡಿಲ್ಲವೆ?” ಎಂದು ಖಾರವಾಗಿ ಟೀಕಿಸಿದ್ದಾರೆ.
“ರೌಡಿ ಶೀಟರ್, ಸಿಡಿ ಸಚಿವರು, ಶಾಸಕರಿಗೆ ಟಿಕೆಟ್ ನೀಡಿದ್ದಾರೆ. ನನ್ನ ಸ್ವಾಭಿಮಾನಕ್ಕೆ ಧಕ್ಷೆಯಾಗಿ ಪಕ್ಷ ತೊರೆದಿದ್ದೇನೆ ಹೊರತು ಅಧಿಕಾರ ಲಾಲಸೆಗಲ್ಲ. ಈಗ ಪಕ್ಷದ ಸೈದ್ಧಾಂತಿಕ ವಿರೋಧ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಪಕ್ಷದಲ್ಲಿ ಸಿದ್ದಾಂತ ಉಳಿದಿದೆಯೇ ಎಂಬುವುದನ್ನು ಮೊದಲು ನೋಡಿಕೊಳ್ಳಿ” ಎಂದು ಸವಾಲು ಹಾಕಿದ್ದಾರೆ.
“ನನ್ನ, ನನ್ನಂತಹ ಹಾಗೂ ಪಕ್ಷದ ಪರಿಸ್ಥಿತಿಗೆ ಬಿ.ಎಲ್. ಸಂತೋಷ ಕಾರಣ ಎಂದು ಟೀಕೆ ಮಾಡಿದ್ದೆ. ಆದರೆ ಇದಕ್ಕೆ ಪ್ರತಿಯಾಗಿ ಅವರೇ ಟೀಕೆ ಮಾಡಬೇಕಿತ್ತು. ಆದರೆ ಯಡಿಯೂರಪ್ಪ ಅವರ ಮೂಲಕ ವಿರುದ್ಧ ಮಾತನಾಡಿಸುತ್ತಿದ್ದಾರೆ. ಒಬ್ಬ ಲಿಂಗಾಯತ ನಾಯಕನ ಮೇಲೆ ಲಿಂಗಾಯತ ನಾಯಕರನ್ನು ಹತ್ತಿಕ್ಕುವ ಕಲಸ ಪಕ್ಷ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿರಿ: ‘ಈದಿನ’ ಮಾಧ್ಯಮದ ಚುನಾವಣಾ ಮೆಗಾ ಸರ್ವೇ; ಬೊಮ್ಮಾಯಿ ಬೇಡ ಎಂದ ಜನತೆ