Homeಮುಖಪುಟಹೆಚ್ಚಿನ ಕಂಡಿಷನ್‌ಗಳಿಲ್ಲದೆ ಐದು ಗ್ಯಾರಂಟಿಗಳನ್ನು ಘೋಷಿಸಿದ ಸಿದ್ದರಾಮಯ್ಯ

ಹೆಚ್ಚಿನ ಕಂಡಿಷನ್‌ಗಳಿಲ್ಲದೆ ಐದು ಗ್ಯಾರಂಟಿಗಳನ್ನು ಘೋಷಿಸಿದ ಸಿದ್ದರಾಮಯ್ಯ

ಜುಲೈ 1 ರಿಂದ ಪ್ರತಿಯೊಂದು ಕುಟುಂಬಕ್ಕೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್, ಆಗಸ್ಟ್ 15 ರಂದು ಮನೆಯೊಡತಿಯ ಖಾತೆಗೆ 2,000 ರೂ ಜಮಾ, ಜುಲೈ ಒಂದರಿಂದ ಬಿಪಿಎಲ್ ಕಾರ್ಡುದಾರರಿಗೆ ತಲಾ 10 ಕೆಜಿ ಅಕ್ಕಿ, ಜೂನ್ 11 ರಂದು ರಾಜ್ಯಾದ್ಯಂತ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

- Advertisement -
- Advertisement -

ಜುಲೈ 1 ರಿಂದ ಪ್ರತಿಯೊಂದು ಕುಟುಂಬಕ್ಕೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ನೀಡಲಾಗುವುದು. ಆಗಸ್ಟ್ 15 ರಂದು ಮನೆಯೊಡತಿಯ ಖಾತೆಗೆ 2,000 ರೂ ಜಮಾ ಮಾಡಲಾಗುವುದು. ಜುಲೈ ಒಂದರಿಂದ ಬಿಪಿಎಲ್ ಕಾರ್ಡುದಾರರಿಗೆ ಮತ್ತು ಅಂತ್ಯೋದಯ ಕಾರ್ಡು ಹೊಂದಿರುವವರಿಗೆ ತಲಾ 10 ಕೆಜಿ ಅಕ್ಕಿ ಕೊಡಲಾಗುವುದು. ಜೂನ್ 11 ರಂದು ರಾಜ್ಯಾದ್ಯಂತ ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಮೊದಲ ಗ್ಯಾರಂಟಿ – ಗೃಹ ಜ್ಯೋತಿ

200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಎಲ್ಲರಿಗೂ ಕೊಡುತ್ತೇವೆ. ಇದನ್ನು ಜಾರಿ ಮಾಡಲು ತೀರ್ಮಾನಿಸಿದ್ದೇವೆ. 199 ಯೂನಿಟ್‌ವರೆಗೂ ಫ್ರಿ ವಿದ್ಯುತ್ ಕೊಡುತ್ತೇವೆ. 12 ತಿಂಗಳ ಸರಾಸರಿ ನೋಡುತ್ತೇವೆ. ಅದರ ಮೇಲೆ 10% ಉಚಿತವಾಗಿ ಕೊಡುತ್ತೇವೆ. ಈ ವರ್ಷದ ಜುಲೈ 1 ರಿಂದ ಫ್ರೀ ಜಾರಿಯಾಗುತ್ತದೆ ಎಂದರು. ಆದರೆ ಇದುವರೆಗೂ ಉಳಿಸಿಕೊಂಡಿರುವ ಬಾಕಿಯನ್ನು ಜನರೇ ಕಟ್ಟಬೇಕು ಎಂದರು.

ಎರಡನೇ ಗ್ಯಾರಂಟಿ – ಗೃಹ ಲಕ್ಷ್ಮೀ

ಗೃಹ ಲಕ್ಷ್ಮೀ ಯೋಜನೆ ಜಾರಿಗೊಳಿಸುತ್ತೇವೆ. ಅದಕ್ಕಾಗಿ ಅರ್ಜಿ ಆಧಾರ್ ಕಾರ್ಡ್, ಬ್ಯಾಂಕ್ ಡಿಟೈಲ್ಸ್ ಕೊಡಬೇಕು. ಮನೆ ಯಜಮಾನಿಗೆ ಎಂದು ಹೇಳಿದ್ದೇವೆ. ಅವರ ಖಾತೆಗೆ ತಿಂಗಳಿಗೆ 2,000 ರೂ ಜಮಾ ಮಾಡುತ್ತೇವೆ. ಜೂನ್ 15 ರಿಂದ ಜುಲೈ 15ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಜುಲೈ 15 ರಿಂದ ಆಗಸ್ಟ್ 15 ರೊಳಗೆ ಪ್ರಕ್ರಿಯೆ ಮಾಡಿ ಆಗಸ್ಟ್ 15ನೇ ತಾರೀಖು ಎಲ್ಲ ಮನೆಯೊಡತಿಯರ ಖಾತೆಗೆ ಹಣ ಜಮಾ ಮಾಡುತ್ತೇವೆ. ಬಿಪಿಎಲ್ ಮತ್ತು ಎಪಿಎಲ್ ಇಬ್ಬರೂ ಅರ್ಜಿ ಹಾಕಬಹುದು. ಎಲ್ಲರಿಗೂ ಕೊಡುತ್ತೇವೆ ಎಂದರು. ಅರ್ಜಿ ಸಲ್ಲಿಸುವಾಗ ಮನೆಯಲ್ಲಿ ಯಾರು ಯಜಮಾನಿ ಎಂದು ಸ್ಪಷ್ಟಪಡಿಸಬೇಕು ಎಂದರು.

ಇದುವರೆಗೂ ವಿಶೇಷ ಚೇತನರು, ಹಿರಿಯ ವಯಸ್ಸಿನವರು, ವಿಧವಾ ವೇತನ ಪಡೆಯುತ್ತಿರುವವರು ಸಹ ಈ ಗೃಹ ಲಕ್ಷ್ಮೀ ಯೋಜನೆಗೆ ಅರ್ಹರಾಗಿದ್ದಾರೆ. ಆ ಪಿಂಚಣಿ ಜೊತೆಗೆ ಈ 2,000 ರೂ ಸಹ ಕೊಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

10 ಕೆಜಿ ಅಕ್ಕಿ ಉಚಿತ

ಜುಲೈ 1ನೇ ತಾರೀಖಿನಿಂದ ಎಲ್ಲಾ ಬಿಪಿಎಲ್ ಕಾರ್ಡುದಾರರಿಗೆ ಮತ್ತು ಅಂತ್ಯೋದಯ ಕಾರ್ಡು ಹೊಂದಿರುವವರಿಗೆ ತಲಾ 10 ಕೆಜಿ ಅಕ್ಕಿ ಕೊಡಲಾಗುವುದು. ಅಂತ್ಯೋದಯ ಕಾರ್ಡು ಹೊಂದಿರುವವರಿಗೆ ಸದ್ಯ 35 ಕೆಜಿ ಅಕ್ಕಿ ಕೊಡಲಾಗುತ್ತಿದೆ. ಮುಂದೆ ಅವರಿಗೂ ತಲಾ 10 ಕೆಜಿ ಕೊಡಲಾಗುವುದು. ಸದ್ಯಕ್ಕೆ ಸ್ಟಾಕ್ ಇಲ್ಲ. ಒಂದು ತಿಂಗಳಲ್ಲಿ ಹೇಗಾದರೂ ಮಾಡಿ ಕೊಂಡುಕೊಂಡು ಜುಲೈ 1 ರಿಂದ ತಲಾ 10 ಕೆಜಿ ಅಕ್ಕಿ ಕೊಡುತ್ತೇವೆ.

4 ನೇ ಗ್ಯಾರಂಟಿ – ಶಕ್ತಿ

ಸಮಾಜದಲ್ಲಿ 50% ಮಹಿಳೆಯರು ಇದ್ದಾರೆ. ಎಲ್ಲಾ ಮಹಿಳೆಯರಿಗೆ ಅವರ ಆರ್ಥಿಕ ಸ್ಥಾನಮಾನ ಹೊರತು ಪಡಿಸಿ ಎಲ್ಲರಿಗೂ ಉಚಿತ ಬಸ್ ಪ್ರಯಾಣ ಘೋಷಿಸುತ್ತಿದ್ದೇವೆ. ಜೂನ್ 11 ರಂದು ಈ ಯೋಜನೆಗೆ ಬೆಂಗಳೂರಿನಲ್ಲಿ ಚಾಲನೆ ನೀಡುತ್ತೇವೆ ಎಂದು ಸಿದ್ದರಾಮಯ್ಯ ಘೋಷಿಸಿದರು.

ನಮ್ಮ ರಾಜ್ಯದೊಳಗೆ, ಕರ್ನಾಟಕದವರಿಗೆ ಮಾತ್ರ ಉಚಿತ ಪ್ರಯಾಣ ಇರುತ್ತದೆ. ಎ.ಸಿ ಬಸ್ ಮತ್ತು ಸ್ಲೀಪರ್ ಬಸ್, ಲಕ್ಸುರಿ ಬಸ್ ಹೊರತುಪಡಿಸಿ ಉಳಿದ ಎಲ್ಲಾ ಬಸ್‌ಗಳಲ್ಲಿ ಉಚಿತ ಪ್ರಯಾಣವಿರುತ್ತದೆ. ಅಂದರೆ ಶೇ.90 ರಷ್ಟು ಬಸ್‌ಗಳಲ್ಲಿ ರಾಜ್ಯದ ಎಲ್ಲೆಡೆ ಉಚಿತ ಪ್ರಯಾಣ ಇರುತ್ತದೆ. ಇನ್ನು ಪುರುಷರಿಗೆ 50% ಆಸನ ಮೀಸಲು ಮಾಡಲಾಗುತ್ತದೆ.

5ನೇ ಗ್ಯಾರಂಟಿ ಯುವನಿಧಿ – ಯುವಜನರಿಗೆ 3000 ನಿರುದ್ಯೋಗ ಭತ್ಯೆ

2022-23 ರಲ್ಲಿ ವ್ಯಾಸಂಗ ಮಾಡಿ ಪದವಿ ಪಡೆದವರಿಗೆ 24 ತಿಂಗಳುಗಳವರೆಗೆ ಪ್ರತಿ ತಿಂಗಳಿಗೆ 3000 ರೂ ನೀಡಲಾಗುವುದು. ಅರ್ಹರು ಅರ್ಜಿ ಸಲ್ಲಿಸಬೇಕು. ಎಲ್ಲಾ ಜಾತಿ ವರ್ಗದವರೂ, ಟ್ರಾನ್ಸ್‌ಜೆಂಡರ್‌ ಸಮುದಾಯದವರು ಸಹ ಇದಕ್ಕೆ ಅರ್ಹರು ಎಂದರು.

ಇದೇ ಸಂದರ್ಭದಲ್ಲಿ ಪ್ರತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಮೋದಿಯವರು ಪ್ರತಿಯೊಬ್ಬರಿಗೂ 15 ಲಕ್ಷ ರೂ ಕೊಡುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ, ರೈತರ ಆದಾಯ ಡಬಲ್ ಮಾಡುತ್ತೇವೆ, ಅಚ್ಛೇದಿನ್ ತರುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಅವುಗಳನ್ನು ಜಾರಿಗೆ ತಂದರೆ? ನಾವು ಹಿಂದೆಯೂ ನುಡಿದಂತೆ ನಡೆದಿದ್ದೇವೆ, ಮುಂದಿಯೂ ನುಡಿದಂತೆ ನಡೆಯುತ್ತೇವೆ ಎಂದರು.

ಇದನ್ನೂ ಓದಿ; ಶಾಲಾ ಕಾಲೇಜುಗಳಲ್ಲಿ ಪ್ರತಿದಿನ ಸಂವಿಧಾನದ ಪ್ರಸ್ತಾವನೆ ಓದು: ಡಾ.ಹೆಚ್.ಸಿ ಮಹದೇವಪ್ಪ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ ಇಡಿ; ಎಎಪಿ ಆರೋಪಿ

0
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಶುಕ್ರವಾರ ಚಾರ್ಜ್ ಶೀಟ್ ಸಲ್ಲಿಸಿದೆ; ಅವರ ಆಮ್ ಆದ್ಮಿ ಪಕ್ಷವನ್ನು...