ಮಾಜಿ ಸಚಿವ ಸೊಗಡು ಶಿವಣ್ಣ ಮತ್ತು ಕುರುಬರ ಸಂಘದ ನಡುವೆ ನಡೆಯುತ್ತಿರುವ ಪರಸ್ಪರ ಆರೋಪ ಪ್ರತ್ಯಾರೋಪ ಮುಂದುವರಿದಿದೆ. ಇಂದು ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಕುರುಬ ಸಮಾಜದ ಮುಖಂಡರು ಸಿದ್ದರಾಮಯ್ಯ ವಿರುದ್ಧ ಕ್ಷುಲ್ಲಕವಾಗಿ ಮಾತನಾಡುವ ಯಾರೇ ಆಗಲಿ ಅಂತಹ ಚಾಳಿ ಬಿಡಬೇಕು. ಇದನ್ನೇ ಮುಂದುವರಿಸಿದರೆ ಸಹಿಸಿಕೊಂಡಿರಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಚುನಾವಣೆ ಸಮಯದಲ್ಲಿ ಹಿಂದೂ ಧರ್ಮದ ಬಗ್ಗೆ ಮಾತನಾಡಿ ಅಧಿಕಾರಕ್ಕೆ ಬರುವ ಬಿಜೆಪಿ ಮತ್ತು ಮಾಜಿ ಸಚಿವ ಸೊಗಡು ಶಿವಣ್ಣನಂಥಹ ಮಹಾನುಭಾವರು ಮೊದಲು ದಲಿತರೊಂದಿಗೆ ಸಹಪಂಕ್ತಿ ಭೋಜನ ಮಾಡಲಿ. ದಲಿತರ ಮನೆಯಲ್ಲಿ ಉಣ್ಣುತ್ತೇವೆ ಎನ್ನುವ ಸೊಗಡು ಶಿವಣ್ಣ ತಮ್ಮ ಸಮುದಾಯದವರು ಮತ್ತು ದಲಿತರೊಂದಿಗೆ ಸಹಪಂಕ್ತಿ ಭೋಜನ ಮಾಡಲಿ ನೋಡೋಣ ಎಂದು ಜಿಲ್ಲಾ ಪಂಚಾಯತಿ ಸದಸ್ಯ ತಿಮ್ಮಯ್ಯ ಸವಾಲು ಹಾಕಿದರು.
ಸಿದ್ದರಾಮಯ್ಯ ಗಾಂಧೀ ಹತ್ಯೆಯ ಏಳನೇ ಆರೋಪಿ ಸಾವರ್ಕರ್ ಅವರಿಗೆ ಭಾರತ ರತ್ನ ಕೊಡುವುದು ಬೇಡ. ಅದರ ಬದಲು ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ಕೊಡಬೇಕು ಎಂದು ಹೇಳಿದ್ದಾರೆ. ಸಾವರ್ಕರ್ ಅವರನ್ನು ಅವಮಾನಿಸುವಂತಹ ಹೇಳಿಕೆಯನ್ನು ಸಿದ್ದರಾಮಯ್ಯ ನೀಡಿಲ್ಲ. ಸಾವರ್ಕರ್ ಅವರಿಗೆ ಭಾರತ ರತ್ನ ಕೊಡಬಾರದು ಎಂದು ಹೇಳಿದ್ದನ್ನೇ ನೆಪಮಾಡಿಕೊಂಡು ಸಿದ್ದರಾಮಯ್ಯ ಜಾತಿವಾದಿ, ಟೆರರಿಸ್ಟ್ ಎನ್ನುವುದು ಮೂರ್ಖತನದ ಪರಮಾವಧಿ. ಇದನ್ನು ನಾವು ಸಹಿಸುವುದಿಲ್ಲ ಎಂದು ಕಿಡಿಕಾರಿದರು.
ದೇಶದಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಬೇಕಾದವರ ಪಟ್ಟಿಯೇ ಇದೆ. ಸ್ವಾಮಿ ವಿವೇಕಾನಂದ, ಸಿದ್ದಗಂಗಾ ಹಿರಿಯ ಶ್ರೀಗಳು ಹೀಗೆ ಹಲವರಿದ್ದಾರೆ. ಅವರಿಗೆ ಕೊಡಲಿ, ಕೊಲೆಯ ಆರೋಪಿಗೆ ಕೊಡುವುದು ಬೇಡ. ಸಮಾಜಕ್ಕಾಗಿ ದುಡಿದ ಮಹನೀಯರಿಗೆ ಭಾರತ ರತ್ನ ಕೊಡುವುದರಿಂದ ಪ್ರಶಸ್ತಿಗೂ ಗೌರವ ಬರುತ್ತದೆ ಎಂದು ಹೇಳಿದರು.
ಕುರುಬ ಸಮುದಾಯದ ಮುಖಂಡ ಕೆಂಪರಾಜು ಮಾತನಾಡಿ, ಮಾಜಿ ಸಚಿವ ಸೊಗಡು ಶಿವಣ್ಣ ಅವರಿಗೆ ಯಾವುದೇ ಅಧಿಕಾರವಿಲ್ಲ. ತಮ್ಮ ಪಕ್ಷದ ನಾಯಕರನ್ನು ಮೆಚ್ಚಿಸಲು ಪ್ರಚಾರದ ಗೀಳಿಗೆ ಬಿದ್ದಿದ್ದಾರೆ. ಅಧಿಕಾರ ಪಡೆಯಬೇಕೆಂದರೆ ಗೌರವಯುತ ವ್ಯಕ್ತಿಯ ವಿರುದ್ಧ ಮಾತನಾಡಿದರೆ ನನಗೆ ಅಧಿಕಾರ ಲಭಿಸುತ್ತದೆ ಎಂದು ನಂಬಿರುವುದರಿಂದ ಪ್ರಯೋಜನ ಇಲ್ಲ ಎಂದು ವ್ಯಂಗ್ಯವಾಡಿದರು.