ಕೋಲ್ಕತ್ತಾದಲ್ಲಿ ಮಂಗಳವಾರ ರಾತ್ರಿ ಕಾಲೇಜು ಕಾರ್ಯಕ್ರಮದಲ್ಲಿ ಹಾಡುತ್ತಿದ್ದಾಗಲೇ ಕೆಕೆ ಎಂದೇ ಖ್ಯಾತವಾಗಿದ್ದ ಗಾಯಕ ಕೃಷ್ಣಕುಮಾರ್ ಕುನ್ನತ್ (53) ರವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಕಾರ್ಯಕ್ರಮ ನಿಲ್ಲಿಸಿ ತಾವು ಹೋಟೆಲ್ಗೆ ತೆರಳಿದ್ದಾರೆ. ಅಲ್ಲಿಂದ ಆಸ್ಪತ್ರೆಗೆ ತೆರಳುವಾಗ ನಿಧನ ಹೊಂದಿದ್ದರು ಎಂದು ವರದಿಯಾಗಿದ್ದು, ಈ ಕುರಿತು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸತತ ಒಂದು ಗಂಟೆ ಹಾಡಿದ ಅವರು ನಂತರ ಬೆವರುತ್ತಿದ್ದರು, ಹಾಗಾಗಿ ಪದೇ ಪದೇ ಟವೆಲ್ನಿಂದ ಮುಖ ಒರೆಸಿಕೊಳ್ಳುತ್ತಿದ್ದರು. ಇಲ್ಲಿ ತುಂಬಾ ಬಿಸಿ ಇದೆ ಹೇಳಿದ್ದರು ಎಂಬ ವಿಡಿಯೋ ಸೆರೆಯಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ. ಅಲ್ಲದೇ ಅವರು ಏರ್ ಕಂಡಿಷನರ್ ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಸನ್ಹೆ ಮಾಡಿದ್ದರು ಎಂದು ವರದಿಯಾಗಿದೆ.
ದಕ್ಷಿಣ ಕೋಲ್ಕತ್ತಾದ ನಜ್ರುಲ್ ಮಂಚ್ ಸಭಾಂಗಣವು ಕಿಕ್ಕಿರಿದು ತುಂಬಿತ್ತು. ಸುಮಾರು 2,400 ಸೀಟುಗಳ ಸಾಮರ್ಥ್ಯ ಹೊಂದಿದ್ದರೆ, ಹೆಚ್ಚಿನ ಜನರು ಅಲ್ಲಿದ್ದರು. ಹಾಗಾಗಿ ಅಲ್ಲಿ ಬಿಸಿ ಹೆಚ್ಚಾಗಿರಬಹುದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸಲಾಗಿದೆ. ಸಾವಿನ ಕಾರಣ ಇನ್ನೂ ನಿಖರವಾಗಿ ತಿಳಿದಿಲ್ಲ, ಮಧ್ಯಾಹ್ನದ ನಂತರ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕೆಕೆಯವರು ಕಾರ್ಯಕ್ರಮ ನಿಲ್ಲಿಸಿ ಹೋಟೆಲ್ಗೆ ತೆರಳುವ ವಿಡಿಯೋಗಳು ಸೆರೆಯಾಗಿದ್ದು ಆಯೋಜಕರು ಸಮರ್ಪಕ ವ್ಯವಸ್ಥೆ ಮಾಡಿರಲಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ಕೆಕಯವರ ನಿಧನಕ್ಕೆ ಪ್ರಧಾನಿ ಮೋದಿ ಸೇರಿ ಹಲವರು ದುಃಖ ವ್ಯಕ್ತಪಡಿಸಿದ್ದಾರೆ. ಕೆಕೆಯವರು ಕನ್ನಡ, ಹಿಂದಿ ಸೇರಿದಂತೆ ಹಲವಾರು ಭಾಷೆಗಳಲ್ಲಿ ಹಾಡಿದ್ದರು.
ಇದನ್ನೂ ಓದಿ ; ನಾಡದ್ರೋಹಿ ರೋಹಿತ್ ಚಕ್ರತೀರ್ಥನನ್ನು ಕಿತ್ತೊಗೆಯಿರಿ: ಕನ್ನಡಪರ ಸಂಘಟನೆಗಳ ಆಗ್ರಹ