ಪಠ್ಯ ಪುನರ್ ಪರಿಷ್ಕರಣೆ ವಿವಾದ ತಾರಕಕ್ಕೇರಿದ್ದು, ರೋಹಿತ್ ಚಕ್ರತೀರ್ಥ ನೇತೃತ್ವದ ಪರಿಷ್ಕತ ಪಠ್ಯದಲ್ಲಿ ತಮ್ಮ ಪಾಠ ಕವಿತೆ ಕೈಬಿಡಿ ಎಂಬ ಕೂಗು ಜೋರಾಗಿದೆ. ಹಿರಿಯ ಸಾಹಿತಿಗಳಾದ ಬೊಳುವಾರು ಮಹಮದ್ ಕುಂಞಿಯವರು ಸಹ ತಮ್ಮ ‘ಸುಳ್ಳು ಹೇಳಬಾರದು’ ಎಂಬ ಕತೆಯನ್ನು ಕಿತ್ತು ಹಾಕಿ ಎಂದು ಆಗ್ರಹಿಸಿದ್ದಾರೆ.
ಈ ಕುರಿತು ತಮ್ಮ ಫೇಸ್ಬುಕ್ ವಾಲ್ನಲ್ಲಿ ಶಿಕ್ಷಣ ಸಚಿವರಿಗೆ ಪತ್ರ ಬರೆದಿರುವ ಅವರು, “ಪ್ರಸಕ್ತ ಸಿರಿ ಕನ್ನಡ–ಪ್ರಥಮ ಭಾಷಾ ಕನ್ನಡ ಪಠ್ಯಪುಸ್ತಕ (ಪರಿಷ್ಕೃತ) 5ನೆಯ ತರಗತಿ ಪುಸ್ತಕದ 24ನೆಯ ಪುಟದಲ್ಲಿರುವ, ‘ಸುಳ್ಳು ಹೇಳಬಾರದು’ ಎಂಬ ಹೆಸರಿನ ನನ್ನ ಪುಟ್ಟ ಕತೆಯೊಂದರ ಆಶಯಗಳು, ಪ್ರಸಕ್ತ ವರ್ಷದಲ್ಲಿ ಪರಿಷ್ಕೃತಗೊಂಡಿರುವ/ಗೊಳ್ಳಲಿರುವ ಇತರ ಕೆಲವು ಪಠ್ಯಗಳ ಆಶಯಗಳೊಂದಿಗೆ ಸರಿಯಾಗಿ ಹೊಂದಿಕೆಯಾಗದಿರುವ ಸಾಧ್ಯತೆಗಳಿರುವುದರಿಂದ, ನಮ್ಮ ಪುಟ್ಟ ಮಕ್ಕಳು ಗೊಂದಲಕ್ಕೊಳಗಾಗುವ ಸಾಧ್ಯತೆಗಳುಂಟು” ಎಂದು ತಿಳಿಸಿದ್ದಾರೆ.
ಆದ್ದರಿಂದ, ದಯವಿಟ್ಟು ‘ಸುಳ್ಳು ಹೇಳಬಾರದು’ ಎಂಬ ಈ ನನ್ನ ಕತೆಯನ್ನು ಕಿತ್ತು ಹಾಕಿ, ಪರಿಷ್ಕೃತ ಪಠ್ಯ ಕ್ರಮದ ಆಶಯಗಳಿಗೆ ಹೊಂದಿಕೊಳ್ಳುವ ಬೇರೊಂದು ಪಠ್ಯವನ್ನು ಸೇರಿಸಿಕೊಳ್ಳಬೇಕೆಂದು ಪ್ರಾರ್ಥಿಸುತ್ತಿದ್ದೇನೆ ಎಂದು ಬರೆದಿದ್ದಾರೆ.
ದೇವನೂರು ಮಹಾದೇವರವರು ಆರಂಭಿಸಿದ ಈ ಪಠ್ಯ ವಾಪ್ಸಿ ಚಳವಳಿಗೆ ವ್ಯಾಪಕ ಬೆಂಬಲ ದೊರಕಿದೆ. ಅವರ ಹಾದಿಯಲ್ಲಿದೇ ಹಿರಿಯ ಸಾಹಿತಿಗಳಾದ ಜಿ.ರಾಮಕೃಷ್ಣ, ಎಸ್.ಜಿ ಸಿದ್ದರಾಮಯ್ಯ, ಮೂಡ್ನಾಕೂಡು ಚಿನ್ನಸ್ವಾಮಿ, ಈರಪ್ಪ ಕಂಬಳಿ, ಚಂದ್ರಶೇಖರ ತಾಳ್ಯ, ಪ್ರೊ.ಮಧುಸೂದನ ಮತ್ತು ರೂಪ ಹಾಸನ ಸೇರ್ಪಡೆಗೊಂಡಿದ್ದರು. ಇದೀಗ ಬೊಳುವಾರುರವರು ಅದೇ ಹಾದಿ ತುಳಿದಿದ್ದಾರೆ.
ಇದನ್ನೂ ಓದಿ: ಸರ್ಕಾರದಿಂದ ಮಹಿಳಾ ಸಂಕುಲಕ್ಕೆ ಅವಮಾನ: ಪಠ್ಯದಿಂದ ತಮ್ಮ ಕವಿತೆ ಕೈಬಿಡುವಂತೆ ಲೇಖಕಿ ರೂಪ ಹಾಸನ ಪತ್ರ
ಬೊಳುವಾರರ ಈ ಕ್ರಮ ಸ್ವಾಗತಾರ್ಹ