ಗೃಹ ವ್ಯವಹಾರಗಳ ಸಚಿವಾಲಯವು ಫೀಡ್ಬ್ಯಾಕ್ ಯೂನಿಟ್ ಸ್ನೂಪಿಂಗ್ ಪ್ರಕರಣದಲ್ಲಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಭ್ರಷ್ಟಾಚಾರ ತಡೆ ಕಾಯ್ದೆಯಡಿ ವಿಚಾರಣೆಗೆ ಒಳಪಡಿಸಲು ಅನುಮತಿ ನೀಡಿದೆ. ಮದ್ಯ ನೀತಿ ಪ್ರಕರಣದಲ್ಲಿ ಸಿಸೋಡಿಯಾ ಸಿಬಿಐನ ವಿಚಾರಣೆಯಲ್ಲಿರುವುದರಿಂದ ಈ ಬೆಳವಣಿಗೆಯಾಗಿದೆ.
ಆಮ್ ಆದ್ಮಿ ಪಕ್ಷ 2015ರಲ್ಲಿ ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ನಂತರ ರಾಜಕೀಯ ಗುಪ್ತಚರ ಸಂಗ್ರಹಣೆಗಾಗಿ ಫೀಡ್ಬ್ಯಾಕ್ ಯೂನಿಟ್ನ್ನು ರಚಿಸಿತು. ಈ ಸ್ನೂಪಿಂಗ್ ಯೂನಿಟ್ಗೆ ಮನೀಶ್ ಸಿಸೋಡಿಯಾ ಅವರು ಮುಖ್ಯಸ್ಥರಾಗಿದ್ದರು ಎಂದು ಸಿಬಿಐ ವರದಿ ಹೇಳಿದೆ ಎಂದು ಹೇಳುವ ಸಿಬಿಐ ವರದಿಯಲ್ಲಿ ಸಿಸೋಡಿಯಾ ವಿರುದ್ಧ ಸ್ನೂಪಿಂಗ್ ಆರೋಪಗಳನ್ನು ಮಾಡಲಾಗಿದೆ.
ಈ ಆರೋಪಗಳನ್ನು ಈ ಹಿಂದೆಯೇ ತಳ್ಳಿ ಹಾಕಿರುವ ಎಎಪಿ, ”ಇಲ್ಲಿಯವರೆಗೆ, ಸಿಬಿಐ, ಇಡಿ ಮತ್ತು ದೆಹಲಿ ಪೊಲೀಸರು ನಮ್ಮ ವಿರುದ್ಧ 163 ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೆ, ಬಿಜೆಪಿಗೆ ಯಾವ ಪ್ರಕರಣವನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ. ಈ ಪ್ರಕರಣಗಳಲ್ಲಿ ಸುಮಾರು 134 ಪ್ರಕರಣಗಳನ್ನು ನ್ಯಾಯಾಲಯಗಳು ವಜಾಗೊಳಿಸಿದೆ ಮತ್ತು ಉಳಿದ ಪ್ರಕರಣಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರಕ್ಕೆ ಯಾವುದೇ ಸಾಕ್ಷ್ಯಾಧಾರ ಒದಗಿಸಲು ಸಾಧ್ಯವಾಗಿಲ್ಲ. ಈ ಪ್ರಕರಣಗಳು ರಾಜಕೀಯ ಪ್ರೇರಿತವಾಗಿವೆ ಎಂದು ಹೇಳುವ ಮೂಲಕ ಆರೋಪಗಳನ್ನು ದೆಹಲಿ ಸರಕಾರ ನಿರಾಕರಿಸಿತ್ತು.
ಇದನ್ನೂ ಓದಿ: ‘ಮತ್ತೆ ದಾಳಿ ನಡೆಸಿದ ಸಿಬಿಐ’: ದೆಹಲಿ ಡಿಸಿಎಂ ಸಿಸೋಡಿಯಾ ಆರೋಪ
ಸಿಸೋಡಿಯಾ ವಿರುದ್ಧ ಕಾನೂನು ಕ್ರಮಕ್ಕೆ ಸಿಬಿಐ ಕೋರಿಕೆಯನ್ನು ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಅನುಮೋದಿಸಿ, ಆ ಮನವಿಯನ್ನು ಗೃಹ ಸಚಿವಾಲಯಕ್ಕೆ ರವಾನಿಸಿದರು. ಸೆಪ್ಟೆಂಬರ್ 29, 2015ರ ಕ್ಯಾಬಿನೆಟ್ ನಿರ್ಣಯದ ಮೂಲಕ ಫೀಡ್ಬ್ಯಾಕ್ ಯೂನಿಟ್ ರಚಿಸಲಾಗಿದೆ. ಸಿಸೋಡಿಯಾ ನೇತೃತ್ವದ ಈ ಘಟಕವು ಯಾವುದೇ ಶಾಸಕಾಂಗ ಅಥವಾ ನ್ಯಾಯಾಂಗ ಕಾನೂನುಬದ್ಧತೆಯನ್ನು ಹೊಂದಿಲ್ಲ ಆದರೆ ರಾಜಕಾರಣಿಗಳ ಮೇಲೆ ಕಣ್ಣಿಡುತ್ತಿದ್ದು, ಗೂಢಚಾರಿಕೆ ಮಾಡುತ್ತಿದೆ ಎಂದು ಸಿಬಿಐ ತನ್ನ ವರದಿಯಲ್ಲಿ ಹೇಳಿದೆ.
ದೆಹಲಿ ಸರ್ಕಾರದ ವಿಜಿಲೆನ್ಸ್ ವಿಭಾಗದ ಮುಖ್ಯಸ್ಥರಾಗಿರುವ ಸಿಸೋಡಿಯಾ ವಿರುದ್ಧ ಎಫ್ಐಆರ್ ದಾಖಲಿಸಲು ಸಿಬಿಐ ಅನುಮತಿ ಕೋರಿತ್ತು, ಅದರ ಅಡಿಯಲ್ಲಿ 2015 ರಲ್ಲಿ ಘಟಕವನ್ನು ‘ಹೆಚ್ಚುವರಿ ಸಾಂವಿಧಾನಿಕ-ಹೆಚ್ಚುವರಿ ನ್ಯಾಯಾಂಗ ಗುಪ್ತಚರ ಸಂಸ್ಥೆ’ ಎಂದು ರಹಸ್ಯವಾಗಿ ರಚಿಸಲಾಗಿದೆ ಎಂದು ಸಿಬಿಐ ಆರೋಪಿಸಿತ್ತು. ಇದೀಗ ಗೃಹ ವ್ಯವಹಾರಗಳ ಸಚಿವಾಲಯವು ಸಿಸೋಡಿಯಾ ಅವರನ್ನು ಭ್ರಷ್ಟಾಚಾರ ತಡೆ ಕಾಯ್ದೆಯಡಿ ವಿಚಾರಣೆಗೆ ಒಳಪಡಿಸಲು ಅನುಮತಿ ನೀಡಿದೆ.
ಈ ಬಗ್ಗೆ ಟ್ವಿಟರ್ನಲ್ಲಿ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಸಿಸೋಡಿಯಾ ಅವರು, ”ನಿಮ್ಮ ಪ್ರತಿಸ್ಪರ್ಧಿಗಳ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವುದು, ಪ್ರಕರಣಗಳನ್ನು ದಾಖಲಿಸುವುದು ದುರ್ಬಲ ಮತ್ತು ಹೇಡಿತನದ ಸಂಕೇತವಾಗಿದೆ. ಆಮ್ ಆದ್ಮಿ ಪಕ್ಷ ಬೆಳೆದಂತೆ ನಮ್ಮ ವಿರುದ್ಧ ಇನ್ನೂ ಹಲವು ಪ್ರಕರಣಗಳು ದಾಖಲಾಗುತ್ತವೆ” ಎಂದಿದ್ದಾರೆ.
ಏನಿದು ಫೀಡ್ಬ್ಯಾಕ್ ಯೂನಿಟ್ ಸ್ನೂಪಿಂಗ್ ಪ್ರಕರಣ?
ಆಮ್ ಆದ್ಮಿ ಪಕ್ಷ 2015ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ದೆಹಲಿಯಲ್ಲಿ ಸರ್ಕಾರ ರಚಿಸಿತು. ಕೆಲದಿನಗಳ ನಂತರದಲ್ಲಿ ಎಎಪಿ ಸರ್ಕಾರವು ವಿವಿಧ “ಇಲಾಖೆಗಳು, ಸ್ವಾಯತ್ತ ಸಂಸ್ಥೆಗಳು, ಸಂಸ್ಥೆಗಳು ಮತ್ತು ಘಟಕಗಳ” ಕಾರ್ಯನಿರ್ವಹಣೆಯ ಕುರಿತು “ಸಂಬಂಧಿತ ಮತ್ತು ಕ್ರಿಯಾಶೀಲ ಪ್ರತಿಕ್ರಿಯೆ” ಸಂಗ್ರಹಿಸಲು ಮತ್ತು ಅವುಗಳ ಮೇಲೆ ಕಣ್ಗಾವಲಿಡಲು “ಫೀಡ್ಬ್ಯಾಕ್ ಯೂನಿಟ್“ನ್ನು ರಚಿಸಿತು. ಅದು ಮುಂದೆ ರಾಜಕಾರಣಿಗಳನ್ನು “ಟ್ರ್ಯಾಪ್” ಮಾಡಲು ಬಳಕೆಯಾಗಿದೆ ಎಂದು ಆರೋಪಿಸಲಾಗಿದೆ.