ಸಾಮಾಜಿಕ ಮಾಧ್ಯಮ ಕಂಪನಿಗಳು ಭಾರತದಲ್ಲಿ ಯಾವುದೇ ರಾಜಕೀಯ ಪಕ್ಷವನ್ನು ಚುನಾವಣೆಯಲ್ಲಿ ಗೆಲ್ಲುವಂತೆ ಮಾಡಬಹುದು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
“ಇವಿಎಂ [ವಿದ್ಯುನ್ಮಾನ ಮತಯಂತ್ರ] ಸುರಕ್ಷಿತವಾಗಿದ್ದರೂ, ಭಾರತೀಯ ಚುನಾವಣೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಸಜ್ಜುಗೊಳಿಸಬಹುದು” ಎಂದು ರಾಹುಲ್ ಹೇಳಿದ್ದಾರೆ.
“ವ್ಯವಸ್ಥಿತ ಪಕ್ಷಪಾತವನ್ನು ಅಲ್ಲಿ ಮಾಡಲಾಗುತ್ತಿದೆ. ನನ್ನ ಸಾಮಾಜಿಕ ಮಾಧ್ಯಮ ಹ್ಯಾಂಡಲ್ಗಳೇ ಇದಕ್ಕೆ ಜೀವಂತ ಉದಾಹರಣೆಯಾಗಿವೆ” ಎಂದು ಅವರು ಆರೋಪಿಸಿದ್ದಾರೆ.
ತಮ್ಮ ಪಕ್ಷದ ಭಾರತ್ ಜೋಡೋ ಯಾತ್ರೆಯು ಮಹಾರಾಷ್ಟ್ರಕ್ಕೆ ಕಾಲಿಟ್ಟ ಬಳಿಕ ಮುಂಬೈನಲ್ಲಿ ನಾಗರಿಕ ಸಮಾಜದ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ರಾಹುಲ್ ಈ ಹೇಳಿಕೆಗಳನ್ನು ನೀಡಿದ್ದಾರೆ.
ಕೇಂದ್ರ ಸರ್ಕಾರದ ಒತ್ತಡದಿಂದಾಗಿ ಜನವರಿಯಲ್ಲಿ ತನ್ನ ಫಾಲೋವರ್ಸ್ಗಳನ್ನು ಟ್ವಿಟರ್ನಲ್ಲಿ ಸೀಮಿತಗೊಳಿಸಲಾಗಿದೆ ಎಂದು ಅವರು ದೂರಿದ್ದಾರೆ.
ಟ್ವಿಟರ್ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಕಚೇರಿ ಪರಾಗ್ ಅಗರವಾಲ್ಗೆ ಪತ್ರ ಬರೆದಿದ್ದ ರಾಹುಲ್, ತಮ್ಮ ಖಾತೆಯು 2 ಕೋಟಿ ಫಾಲೋವರ್ಸ್ ಹೊಂದಿದೆ. ಪ್ರತಿದಿನ ಸರಾಸರಿ 8,000 ರಿಂದ 10,000 ಫಾಲೋವರ್ಸ್ಗಳು ಸೇರುತ್ತಿದ್ದಾರೆ. ನಂತರ ಏನೋ ವಿಚಿತ್ರ ಸಂಭವಿಸಿದೆ” ಎಂದು ತಿಳಿಸಿದ್ದರು.
“ಆಗಸ್ಟ್ 2021ರಿಂದ, ನನ್ನ ಟ್ವಿಟರ್ ಅನುಯಾಯಿಗಳ ಸರಾಸರಿ ಸಂಖ್ಯೆ ಶೂನ್ಯಕ್ಕೆ ಕುಸಿದಿದೆ. ನನ್ನ ಟ್ವಿಟ್ಟರ್ ಖಾತೆಯು ಪಾರ್ಶ್ವವಾಯುವಿಗೆ ಒಳಪಟ್ಟಿರುವಂತೆ ತೋರುತ್ತಿದೆ” ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದಲಿತ ಬಾಲಕಿಯ ಮೇಲಿನ ಅತ್ಯಾಚಾರ, ರೈತರ ಪ್ರತಿಭಟನೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಂತಹ ವಿಷಯಗಳ ಬಗ್ಗೆ ಟ್ವೀಟ್ ಮಾಡಿದ ನಂತರ ಹೀಗಾಗಿದೆ ಎಂದು ಗಾಂಧಿ ಹೇಳಿಕೊಂಡಿದ್ದರು.
ಕಳೆದ ವರ್ಷ ಆಗಸ್ಟ್ನಲ್ಲಿ ಅತ್ಯಾಚಾರಕ್ಕೊಳಗಾದ ದಲಿತ ಬಾಲಕಿಯ ಕುಟುಂಬದ ಗುರುತನ್ನು ಬಹಿರಂಗಪಡಿಸುವ ಫೋಟೋವನ್ನು ಹಂಚಿಕೊಂಡಿದ್ದಕ್ಕಾಗಿ ಅವರ ಖಾತೆಯನ್ನು ಲಾಕ್ ಮಾಡಲಾಗಿದೆ. ಒಂದು ವಾರದ ನಂತರ ಖಾತೆಯನ್ನು ಮರುಸ್ಥಾಪಿಸಲಾಯಿತು.
ಸರ್ಕಾರಿ ಕಚೇರಿಗಳು ಸೇರಿದಂತೆ ಇತರ ಟ್ವಿಟರ್ ಹ್ಯಾಂಡಲ್ಗಳು ಅದೇ ಫೋಟೋವನ್ನು ಟ್ವೀಟ್ ಮಾಡಿದ್ದರೂ ಅವುಗಳನ್ನು ನಿರ್ಬಂಧಿಸಲಾಗಿಲ್ಲ ಎಂದು ಗಾಂಧಿ ಆರೋಪಿಸಿದ್ದಾರೆ.
ಬುಧವಾರದ ಸಂವಾದದಲ್ಲಿ ಯಾವುದೇ ರಾಜಕೀಯ ಪಕ್ಷವನ್ನು ಹೆಸರಿಸದೆ ಮಾತನಾಡಿದ ಅವರು, “ಸಮಾಜದಲ್ಲಿ ಸಾಮರಸ್ಯವನ್ನು ಕದಡಲು ಒಂದು ಸಿದ್ಧಾಂತ ಮತ್ತು ಅದರ ನಾಯಕರು ಕೋಮು ಹಿಂಸಾಚಾರವನ್ನು ಕಾರ್ಯತಂತ್ರದ ಅಸ್ತ್ರವಾಗಿ ಭಾರತದಲ್ಲಿ ನೆಡೆಸುತ್ತಾರೆ” ಎಂದು ಗಾಂಧಿ ಹೇಳಿರುವುದಾಗಿ ಎಂದು ‘ದಿ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ.
“ಈ ಸಮಯದಲ್ಲಿ ಭಾರತವು ಪ್ರಬಲ ನಗರವಾಸಿ ಗಣ್ಯರ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಅದನ್ನು ಸರಿಯಾದ ಆಲೋಚನಾ ವಿಧಾನದಿಂದ ಮಾತ್ರ ಒಡೆದುಹಾಕಬಹುದು. ಆ ದೃಷ್ಟಿಯನ್ನು ಪರಿಷ್ಕರಿಸುವುದು ನಮ್ಮ ಕರ್ತವ್ಯವಾಗಿದೆ” ಎಂದು ತಿಳಿಸಿದ್ದಾರೆ.