ರಾಜಸ್ಥಾನದ ಸಂಜಿವಾಣಿ ಕ್ರೆಡಿಟ್ ಕೋಆಪರೇಟೀವ್ ಸೊಸೈಟಿ ಹಗರಣದಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಪಾತ್ರದ ಕುರಿತು ತನಿಖೆ ನಡೆಸುವಂತೆ ಜೈಪುರ ಸ್ಥಳೀಯ ನ್ಯಾಯಾಲಯ ವಿಶೇಷ ಕಾರ್ಯಾಚರಣೆ ತಂಡ (SOG) ಕ್ಕೆ ನಿರ್ದೇಶನ ನೀಡಿದೆ.
ಕಳೆದ ವರ್ಷದಿಂದಲೇ ಈ ಹಗರಣ ಬಗ್ಗೆ ವಿಶೇಷ ಕಾರ್ಯಾಚರಣೆ ತಂಡ ತನಿಖೆ ನಡೆಸುತ್ತ ಬರುತ್ತಿದೆ. ಶೇಖಾವತ್ ಮಾಲಿಕತ್ವದ ಕಂಪನಿಗೆ ದೊಡ್ಡ ಪ್ರಮಾಣದಲ್ಲಿ ಹಣ ವರ್ಗಾವಣೆಯಾಗಿದೆ ಎಂಬ ಆರೋಪದ ಮೇಲೆ ಈ ತನಿಖೆಗೆ ನಿರ್ದೇಶಿಸಲಾಗಿದೆ.
ಸೊಸೈಟಿ ಹಗರಣದಲ್ಲಿ ಶೇಖಾವತ್ ಪತ್ನಿ ಮತ್ತು ಇತರರ ಪಾತ್ರದ ಕುರಿತು ತನಿಖೆ ನಡೆಯುತ್ತಿಲ್ಲ ಎಂದು ಹೇಳಾಗಿದೆ.
ರೇವಣಿಗಳ ಮೇಲೆ ಹೆಚ್ಚಿನ ಬಡ್ಡಿ ನೀಡುವ ಭರವಸೆಯೊಂದಿಗೆ 2008 ರಲ್ಲಿ ಸಂಜಿವಾಣಿ ಕ್ರೆಡಿಕ್ ಕೋಆಪರೇಟೀವ್ ಸೊಸೈಟಿ ಸ್ಥಾಪನೆಯಾಗಿತ್ತು. ನಕಲಿ ಠೇವಣಿದಾರರ ಹೆಸರಿನಲ್ಲಿ ಹಣ ರೇವಣಿ ಇಟ್ಟಿದ್ದಲ್ಲದೆ ನಕಲಿ ಸಾಲಗಳನ್ನು ಪಡೆಯಲಾಗಿದೆ ಎಂಬ ಆರೋಪವೂ ಈ ಸೊಸೈಟಿ ವಿರುದ್ದ ಕೇಳಿಬಂದಿತ್ತು.
ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವ ನಡುವೆಯೇ ಕಾಂಗ್ರೆಸ್ ಮತ್ತು ಬಿಜೆಪಿ ಕೆಸರೆರೆಚಾಟದಲ್ಲಿ ತೊಡಗಿವೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಪ್ತರು ಮತ್ತು ಬೆಂಬಲಿಗರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿ ಮತ್ತು ಸಹೋದರನ ಮನೆಯ ಮೇಲೆ ‘ಇಡಿ’ ದಾಳಿ ನಡೆದಿತ್ತು.
ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಬಿಜೆಪಿ ಮುಖಂಡರು ರಾಜಸ್ಥಾನ ಸರ್ಕಾರವನ್ನು ಅಸ್ಥಿರ ಗೊಳಿಸಲು ಪಿತೂರಿ ನಡೆಸಿದ್ದಾರೆಂದು ಮುಖ್ಯಮಂತ್ರಿ ಅಶೋಕ್ ಗೆಹ್ಲಾಟ್ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಮರುದಿನವೇ ಹಗರಣದ ತನಿಖೆಗೆ ಕೋರ್ಟ್ ನಿರ್ದೇಶಿಸಿದೆ.
ಓದಿ: ರಾಜಸ್ಥಾನ ಸರ್ಕಾರ ಕೆಡವಲು ಕೇಂದ್ರ ಸಚಿವ ಪಿತೂರಿ: ಕಾಂಗ್ರೆಸ್ ಆರೋಪ ತಳ್ಳಿಹಾಕಿದ ಸಚಿವ ಶೇಖಾವತ್