ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಸಂಚು ರೂಪಿಸಿದ್ದಾರೆ ಎಂಬ ಕಾಂಗ್ರೆಸ್ ಆರೋಪವನ್ನು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಳ್ಳಿಹಾಕಿದ್ದಾರೆ.
ಜುಲೈ 16ರಂದು ಸಂಜೆ ಕೇಂದ್ರ ಸಚಿವ ಗೇಜಂದ್ರ ಸಿಂಗ್ ಶೇಖಾವತ್, ಕಾಂಗ್ರೆಸ್ ಎಂಎಲ್ಎ ಬನ್ವಾರಿ ಲಾಲ್ ಶರ್ಮ ಮತ್ತು ಬಿಜೆಪಿ ಮುಖಂಡ ಸಂಜಯ್ ಜೈನ್ ಅವರ ಮಾತುಕತೆಯನ್ನೊಳಗೊಂಡ ಎರಡು ಆಡಿಯೋ ಬಿಡುಗಡೆಯಾಗಿದ್ದವು.
ಈ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಕೇಂದ್ರ ಸಚಿವರ ವಿರುದ್ಧ ಸರ್ಕಾರ ಉರುಳಿಸುವ ಪಿತೂರಿಗೆ ಯತ್ನ ಎಂದು ಎರಡು FIR ಗಳನ್ನು ದಾಖಲಿಸಿತ್ತು.
ಈ ಕುರಿತು ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಧ್ವನಿಮುದ್ರಿಕೆ ತಿರುಚಲಾಗಿದೆ. ಅದರಲ್ಲಿರುವ ಧ್ವನಿ ನನ್ನದಲ್ಲ. ಈ ಸಂಬಂಧ ಸರ್ಕಾರ ನಡೆಸುವ ತನಿಖೆ ಸಿದ್ದ ಎಂದು ಹೇಳಿದ್ದಾರೆ.
ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ. ಸಂಜಯ್ ಜೈನ್ ಯಾರೆಂಬುದು ನನಗೆ ಗೊತ್ತಿಲ್ಲ. ಆ ಹೆಸರಿನ ವ್ಯಕ್ತಿಗಳು ಬಹಳಷ್ಟು ಮಂದಿ ಇದ್ದಾರೆ. ಅಂತಹ ಕೆಲವರ ಜೊತೆ ಮಾತನಾಡಿದ್ದೇನೆ. ಕೆಲವರ ಜೊತೆ ನನ್ನ ನಂಬರ್ ಇರಬೇಕು. ಸರ್ಕಾರ ಆಡಿಯೋದ ಕುರಿತು ತನಿಖೆ ನಡೆಸಲಿ. ನಾನು ತನಿಖೆಗೆ ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮಾಧ್ಯಮ ವಕ್ತಾರ ರಣಧೀಪ್ ಸುರ್ಜಿವಾಲ ಮಾತನಾಡಿ ರಾಜಸ್ಥಾನ ಸರ್ಕಾರ ಕೆಡವಲು ಬಿಜೆಪಿ ಯತ್ನಿಸುತ್ತಿದೆ. ಕೇಂದ್ರ ಸಚಿವರು ಪಿತೂರಿ ನಡೆಸಿದ್ದಾರೆ ಎಂದು ಆಡಿಯೋವನ್ನು ಉಲ್ಲೇಖಿಸಿ ಸಮರ್ಥಿಸಿಕೊಂಡರು.
ಎರಡು ಧ್ವನಿಮುದ್ರಿಕೆಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಬಿಜೆಪಿ ವಿರುದ್ಧ ಆರೋಪ ಮಾಡುತ್ತಿದೆ. ಇದು ಕಾಂಗ್ರೆಸ್ ತಂತ್ರ ಎಂದು ಶೇಖಾವತ್ ಆರೋಪಿಸಿದರು.
ಓದಿ: ಬಿಜೆಪಿಯೊಂದಿಗಿನ ಸಚಿನ್ ಪೈಲಟ್ ಬೆಂಬಲಿಗ ಶಾಸಕನ ಸಂಭಾಷಣೆಯ ಆಡಿಯೋ ಬಿಡುಗಡೆ ಮಾಡಿದ ಗೆಹ್ಲೋಟ್ ಬಣ