ಅಖಿಲ ಭಾರತ ಪ್ರಜಾಪ್ರಭುತ್ವ ಮಹಿಳಾ ಸಂಘ (ಎಐಡಿಡಬ್ಲ್ಯೂಎ) ಮತ್ತು ಅಖಿಲ ಭಾರತ ಪೀಪಲ್ಸ್ ಸೈನ್ಸ್ ನೆಟ್ವರ್ಕ್ (ಎಐಪಿಎಸ್ಎನ್) ಜುಲೈ 23 ರಿಂದ ಕೊರೊನಾವನ್ನು ಗುಣಪಡಿಸುತ್ತೇವೆ ಎನ್ನುವ ವಿವಿಧ ಮೂಡನಂಬಿಕೆಗಳು ಮತ್ತು ಸುಳ್ಳು ಚಿಕಿತ್ಸೆಗಳ ವಿರುದ್ಧ ಜಂಟಿ ಅಭಿಯಾನವನ್ನು ನಡೆಸಲಿವೆ.
ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಎಐಡಿಡಬ್ಲ್ಯೂಎ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಡಾ. ಲಕ್ಷ್ಮಿ ಸೆಹಗಲ್ ನಿಧನ ದಿನವಾದ ಗುರುವಾರ ಈ ಅಭಿಯಾನ ಪ್ರಾರಂಭವಾಗಲಿದೆ. ಮೂಡನಂಬಿಕೆ ವಿರೋಧಿ ಪ್ರಚಾರಕ ಡಾ. ನರೇಂದ್ರ ದಾಭೋಲ್ಕರ್ ಅವರನ್ನು ಬಲಪಂಥೀಯ ಶಕ್ತಿಗಳು ಹತ್ಯೆ ಮಾಡಿದ ದಿನಾಂಕವಾದ ಆಗಸ್ಟ್ 20 ರಂದು ಇದರ ಸಮಾರೋಪ ನಡೆಯಲಿದೆ ಎಂದು ಪ್ರಚಾರ ಪ್ರಕಟನೆ ತಿಳಿಸಿದೆ.
ಪರೀಕ್ಷಿಸಲ್ಪಡದ ಆಯುರ್ವೇದ ಔಷಧಿಗಳನ್ನು ಪ್ರತಿರೋಧಕಗಳಾಗಿ ಅಥವಾ ಕೊರೊನಾ ವೈರಸ್ಗೆ ಪರಿಹಾರವೆಂದು ಹೇಳಲಾಗುತ್ತಿರುವ ಈ ಸಮಯದಲ್ಲಿ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ.
“ಕೊರೊನಾವನ್ನು ಗುಣಪಡಿಸುತ್ತದೆ ಹಾಗೂ ತಡೆಗಟ್ಟುತ್ತದೆ ಎಂದು ಯಾವುದೇ ಸಾಬೀತಾಗದ ಅನೇಕ ಸಾಂಪ್ರದಾಯಿಕವಾದಿ ಔಷಧಿಳನ್ನು ಪ್ರತಿಪಾದಿಸಲಾಗುತ್ತಿದೆ. ಸಾಂಕ್ರಾಮಿಕದ ಹೆಸರಲ್ಲಿ ಸಾಮಾಜದಲ್ಲಿ ಸಂಪ್ರದಾಯವಾದವನ್ನು, ಕೋಮು ಪೂರ್ವಾಗ್ರಹಗಳನ್ನು ಮತ್ತು ಪುರುಷ ಪ್ರಧಾನ ಕಲ್ಪನೆಗಳನ್ನು ಹೆಚ್ಚಿಸಲು ಸಂಘ ಪರಿವಾರ ಪ್ರಯತ್ನಗಳು ನಡೆಯುತ್ತಿವೆ. ಇದನ್ನು ಪ್ರಗತಿಪರ ಮತ್ತು ಪ್ರಜಾಪ್ರಭುತ್ವ ಶಕ್ತಿಗಳು ಒಗ್ಗಟ್ಟಿನಿಂದ ವಿರೋಧಿಸಬೇಕು” ಎಂದು ಜಂಟಿ-ಪ್ರಚಾರ ಪ್ರಕಟನೆ ಕೋರಿದೆ.
“ಈ ಅಭಿಯಾನವು ನಮ್ಮನ್ನು ಹಿಂದಕ್ಕೆ ಕರೆದೊಯ್ಯುವ ಸರ್ಕಾರ ಮತ್ತು ಅಸ್ಪಷ್ಟವಾದಿ ಶಕ್ತಿಗಳ ಪ್ರಯತ್ನಗಳನ್ನು ವಿರೋಧಿಸುತ್ತದೆ. ಜಾತ್ಯತೀತತೆ, ಲಿಂಗ ಸಮಾನತೆ, ವಿಮರ್ಶಾತ್ಮಕ ಚಿಂತನೆ ಮತ್ತು ವೈಜ್ಞಾನಿಕ ಮನೋಭಾವದ ಮೌಲ್ಯಗಳನ್ನು ಈ ಅಭಿಯಾನವು ಎತ್ತಿಹಿಡಿಯುತ್ತದೆ, ಇವೆಲ್ಲವು ಪ್ರಜಾಪ್ರಭುತ್ವ ಸಮಾಜವನ್ನು ನಿರ್ಮಿಸಲು ಅವಶ್ಯಕವಾಗಿದೆ” ಪ್ರಕಟನೆ ಹೇಳಿದೆ.
ಓದಿ: ಕರ್ನಾಟಕದ ಕೊರೊನಾ ಡಾಕ್ಟರ್ ಏನು ಹೇಳುತ್ತಾರೆ? ಡಾ.ಆಸಿಮ ಬಾನು ಸಂದರ್ಶನ