ಪಂಜಾಬ್ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ರವರು ತಮ್ಮನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ್ದಾಗಿ ಆಕ್ರೋಶಿತಗೊಂಡು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ನೀಡಿದ್ದ ರಾಜೀನಾಮೆಯನ್ನು, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅಂಗೀಕರಿಸಿದ್ದಾರೆ.
ಈ ಕುರಿತು ಎಐಸಿಸಿಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮಾಹಿತಿ ನೀಡಿದ್ದು, ’ಗೌರವಾನ್ವಿತ ಕಾಂಗ್ರೆಸ್ ಅಧ್ಯಕ್ಷರು, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಅಮರಿಂದರ್ ಸಿಂಗ್ ಅವರು ಕೊಟ್ಟಿರುವ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ’ ಎಂದು ಟ್ವಿಟ್ನಲ್ಲಿ ತಿಳಿಸಿದ್ದಾರೆ.
ಮಂಗಳವಾರ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದ ಅಮರಿಂದರ್, ‘ತಮ್ಮನ್ನು ಪದಚ್ಯುತಗೊಳಿಸಲು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಮಧ್ಯರಾತ್ರಿ ಸಂಚು ಮಾಡಿದ್ದಾರೆ’ ಎಂದು ಆರೋಪಿಸಿದ್ದರು.
ಈ ನಡುವೆ ‘ಪಂಜಾಬ್ ಲೋಕ್ ಕಾಂಗ್ರೆಸ್’ ಎಂಬ ಹೊಸ ಪಕ್ಷವನ್ನು ಅಮರಿಂದರ್ ಸಿಂಗ್ ಘೋಷಿಸಿದ್ದಾರೆ. ಪಕ್ಷದ ನೋಂದಣಿಗೆ ಅನುಮೋದನೆಗಾಗಿ ಭಾರತದ ಚುನಾವಣಾ ಆಯೋಗಕ್ಕೆ ಕಳುಹಿಸಲಾಗಿದ್ದು, ನಂತರ ಪಕ್ಷದ ಚುನಾವಣಾ ಚಿಹ್ನೆಯನ್ನು ಪಡೆಯಲಾಗುತ್ತದೆ ಎಂದು ಹೇಳಿದ್ದಾರೆ.
ಪ್ರಸ್ತುತ ಪಂಜಾಬ್ನ ಕ್ರೀಡೆ ಮತ್ತು ಶಿಕ್ಷಣ ಸಚಿವರಾದ ಪರ್ಗತ್, ಅಮರಿಂದರ್ ಅವರ ಹೊಸ ಪಕ್ಷವಾದ ಪಂಜಾಬ್ ಲೋಕ್ ಕಾಂಗ್ರೆಸ್ ಕುರಿತು, ’ಇದು ‘ಪಂಜಾಬಿಗಳು’ ಅಥವಾ ‘ಲೋಕ್’ಗಾಗಿ ಅಲ್ಲ. ಹಾಗೂ ಇದು ಖಂಡಿತವಾಗಿಯೂ ಕಾಂಗ್ರೆಸ್ ಅಲ್ಲ’ ಎಂದು ಟೀಕಿಸಿದ್ದಾರೆ.
‘ನೀವು ಪ್ರಸ್ತುತ ರೈತ ವಿರೋಧಿ ಬಿಜೆಪಿಯೊಂದಿಗೆ ‘ಸೀಟು ಹಂಚಿಕೆ’ ಮಾಡುತ್ತಿರುವಂತೆ, ನಿಮ್ಮ ಹೊಸ ಬಮ್ ಚುಮ್ಗಳ ಕೆಲವು ಚಿತ್ರಗಳು ಇಲ್ಲಿವೆ’ ಎಂದು ವಾರಿಂಗ್ 2015ರಲ್ಲಿ ಪಾಕಿಸ್ತಾನದಲ್ಲಿ ಆಗಿನ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿಯಾದ ಫೋಟೊಗಳನ್ನು ಟ್ಯಾಗ್ ಮಾಡಿ ಟ್ವಿಟ್ ಮಾಡಿದ್ದಾರೆ.
ಇದನ್ನೂ ಓದಿ: ’ಪಂಜಾಬ್ ಲೋಕ್ ಕಾಂಗ್ರೆಸ್’: ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೊಸ ಪಕ್ಷ