ಪ್ರಶಸ್ತಿ ವಿಜೇತ ಫೋಟೊ ಜರ್ನಲಿಸ್ಟ್ ದಿವಂಗತ ಡ್ಯಾನಿಶ್ ಸಿದ್ದೀಖಿ ಅವರ ಮಕ್ಕಳಾದ ಯೂನಸ್ ಸಿದ್ದಿಕಿ (6) ಮತ್ತು ಸಾರಾ ಸಿದ್ದಿಕಿ (4) ನ್ಯಾಯಾರ್ಕ್ನಲ್ಲಿ ತಮ್ಮ ತಂದೆಯ ಪರವಾಗಿ ಪ್ರತಿಷ್ಠಿತ ಪುಲಿಟ್ಜರ್ ಪ್ರಶಸ್ತಿಯನ್ನು ಶುಕ್ರವಾರ ಸ್ವೀಕರಿಸಿದ್ದಾರೆ.
ಜಾಗತಿಕ ಸುದ್ದಿ ಸಂಸ್ಥೆಯಾಗಿರುವ ರಾಯಿಟರ್ಸ್ನಲ್ಲಿ ಡ್ಯಾನಿಶ್ ಸಿದ್ದೀಖಿ ಅವರು ಸೇವೆ ಸಲ್ಲಿಸುತ್ತಿದ್ದರು. ತಮ್ಮ “ಭಾರತದಲ್ಲಿ ಕೊರೊನಾ ಸಂಕಷ್ಠದ ಚಿತ್ರಗಳಿಗಾಗಿ” ರಾಯಿಟರ್ಸ್ ಪತ್ರಕರ್ತರಾದ ಅದ್ನಾನ್ ಅಬಿದಿ, ಅಮಿತ್ ದೇವ್, ಡ್ಯಾನಿಶ್ ಸಿದ್ದೀಖಿ ಮತ್ತು ಸನ್ನಾ ಇರ್ಷಾದ್ ಮಟ್ಟೂ ಅವರುಗಳು ಫೀಚರ್ ಫೋಟೋಗ್ರಫಿ ವಿಭಾಗದಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
38ರ ಹರೆಯದ ಡ್ಯಾನಿಶ್ ಸಿದ್ದೀಖಿ ಅವರು ಕಳೆದ ವರ್ಷ ಜುಲೈನಲ್ಲಿ ಅಫ್ಘಾನಿಸ್ತಾನಕ್ಕೆ ವರದಿಗೆಂದು ತೆರಳಿದ್ದಾಗ, ಕಂದಹಾರ್ ನಗರದ ಸ್ಪಿನ್ ಬೋಲ್ಡಾಕ್ ಜಿಲ್ಲೆಯಲ್ಲಿ ಅಫ್ಘಾನ್ ಪಡೆಗಳು ಮತ್ತು ತಾಲಿಬಾನ್ ನಡುವಿನ ಘರ್ಷಣೆಯ ವೇಳೆ ಕೊಲ್ಲಲ್ಪಟ್ಟರು. ಅವರ ಮಕ್ಕಳು ತಮ್ಮ ತಂದೆಯ ಪರವಾಗಿ ಬಹುಮಾನವನ್ನು ಸ್ವೀಕರಿಸಿದ್ದಾರೆ.
ಇದನ್ನೂ ಓದಿ: ತಾಲಿಬಾನಿಗಳಿಂದ ಹತರಾದ ದಾನಿಶ್ ಸಿದ್ದೀಕಿಗೆ ಮರಣೋತ್ತರವಾಗಿ ’ವರ್ಷದ ಪತ್ರಕರ್ತ’ ಪ್ರಶಸ್ತಿ
ಇದು ಡ್ಯಾನಿಶ್ ಸಿದ್ದೀಖಿ ಅವರಿಗೆ ದಕ್ಕುತ್ತಿರುವ ಎರಡನೇ ಪುಲಿಟ್ಜರ್ ಪ್ರಶಸ್ತಿಯಾಗಿದೆ. ಈ ಹಿಂದೆ ಅವರಿಗೆ ರೋಹಿಂಗ್ಯಾ ಬಿಕ್ಕಟ್ಟಿನ ವರದಿಗಾಗಿ ರಾಯಿಟರ್ಸ್ ತಂಡದ ಭಾಗವಾಗಿ 2018 ರಲ್ಲಿ ಪುಲಿಟ್ಜರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿತ್ತು.
ಡ್ಯಾನಿಶ್ ಸಿದ್ದೀಖಿ ಅವರು ಅಫ್ಘಾನಿಸ್ತಾನ ಸಂಘರ್ಷ, ಹಾಂಗ್ ಕಾಂಗ್ ಪ್ರತಿಭಟನೆಗಳು ಮತ್ತು ಏಷ್ಯಾ, ಮಧ್ಯಪ್ರಾಚ್ಯ ಮತ್ತು ಯುರೋಪ್ನಲ್ಲಿನ ಇತರ ಪ್ರಮುಖ ಘಟನೆಗಳನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದು ಜಾಗತಿಕವಾಗಿ ವರದಿ ಮಾಡಿದ್ದಾರೆ.
ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿರುವ ಡ್ಯಾನಿಶ್ ಸಿದ್ದೀಖಿ ಅವರು 2007 ರಲ್ಲಿ ಜಾಮಿಯಾದಲ್ಲಿನ AJK ಸಮೂಹ ಸಂವಹನ ಸಂಶೋಧನಾ ಕೇಂದ್ರದಿಂದ ಸಮೂಹ ಸಂವಹನದಲ್ಲಿ ಪದವಿ ಪಡೆದಿದ್ದಾರೆ.
ಡ್ಯಾನಿಶ್ ಸಿದ್ದೀಖಿ ಅವರು ದೂರದರ್ಶನ ಸುದ್ದಿ ವರದಿಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ನಂತರ ಫೋಟೋ ಜರ್ನಲಿಸ್ಟ್ ಆಗಿ ಬದಲಾದ ಅವರು, 2010 ರಲ್ಲಿ ಇಂಟರ್ನ್ ಆಗಿ ರಾಯಿಟರ್ಸ್ ಸೇರಿದ್ದರು.
ಈ ಮಧ್ಯೆ, ಡ್ಯಾನಿಶ್ ಸಿದ್ದೀಖಿ ಅವರೊಂದಿಗೆ ಪ್ರಶಸ್ತಿ ಹಂಚಿಕೊಂಡಿರುವ ಸನ್ನಾ ಇರ್ಷಾದ್ ಮಟ್ಟೂ ಅವರನ್ನು ವಲಸೆ ಅಧಿಕಾರಿಗಳ ಮೂಲಕ ವಿಮಾನ ನಿಲ್ದಾಣದಲ್ಲಿ ಸರ್ಕಾರ ತಡೆದಿದೆ. ಅದರಿಂದಾಗಿ ಅವರು ನ್ಯೂಯಾರ್ಕ್ಗೆ ತೆರಳಲು ಅಸಾಧ್ಯವಾಗಿದ್ದು, ಅವರು ಪುಲಿಟ್ಜರ್ ಪ್ರಶಸ್ತಿಯನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ.
ಈ ವರ್ಷದ ಆರಂಭದಲ್ಲಿ ಕೂಡಾ ಅವರನ್ನು ಫ್ರಾನ್ಸ್ಗೆ ಪ್ರಯಾಣಿಸುವುದನ್ನು ತಡೆಯಲಾಗಿತ್ತು. ಅವರು ಅಲ್ಲಿ ಪುಸ್ತಕ ಬಿಡುಗಡೆ ಮತ್ತು ಛಾಯಾಗ್ರಹಣ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿತ್ತು.
ಇದನ್ನೂ ಓದಿ: ದಿಟ್ಟ ಪತ್ರಕರ್ತ ದಾನಿಶ್ ಸಿದ್ದೀಕಿ ಹತ್ಯೆಗೆ ಪಿಎಂ ಮೋದಿ ಸಂತಾಪ ಸೂಚಿಸಲಿಲ್ಲವೇಕೆ?
ನ್ಯೂಯಾರ್ಕ್ ತಡೆಯ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ನೀಡುರುವ ಸನ್ನಾ ಅವರು,“ನನ್ನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ತಡೆದು ನಿಲ್ಲಿಸಲಾಗಿದೆ ಮತ್ತು ಸರಿಯಾದ ಅಮೆರಿಕ ವೀಸಾ ಮತ್ತು ಟಿಕೆಟ್ ಅನ್ನು ಹೊಂದಿದ್ದರೂ ಅಂತಾರಾಷ್ಟ್ರೀಯವಾಗಿ ಪ್ರಯಾಣಿಸುವುದನ್ನು ನಿರ್ಬಂಧಿಸಲಾಗಿದೆ” ಎಂದು ಹೇಳಿದ್ದರು.