‘ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ತೆರೆಯುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಉಳಿದಂತೆ ರಾಜ್ಯದಲ್ಲಿ ಯಾವುದೇ ಹೊಸ ನ್ಯಾಯಾಲಯವನ್ನು ಸ್ಥಾಪಿಸುವ ಯೋಜನೆಯ ಸದ್ಯಕ್ಕಿಲ್ಲ’ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳವಾರ ತಿಳಿಸಿದ್ದಾರೆ.
ದಕ್ಷಿಣ ರಾಜ್ಯದಲ್ಲಿ ಹೊಸ ನ್ಯಾಯಾಲಯಗಳ ಸ್ಥಾಪನೆ ಕುರಿತಂತೆ ಶಾಸಕ ಕ್ಸೇವಿಯರ್ ಚಿಟ್ಟಿಲಪ್ಪಿಲ್ಲಿ ಅವರು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಿದ್ದ ಪ್ರಶ್ನೆಗೆ ಪಿಣರಾಯಿ ವಿಜಯನ್ ಪ್ರತಿಕ್ರಿಯಿಸಿದ್ದಾರೆ.
ಹೊಸ ನ್ಯಾಯಾಲಯಗಳ ಸ್ಥಾಪನೆಯ ಆದ್ಯತಾ ಪಟ್ಟಿಯಲ್ಲಿ ವಡಕ್ಕಂಚೇರಿ ಉಪ ನ್ಯಾಯಾಲಯವನ್ನು ಮೂರನೇ ಸ್ಥಾನಕ್ಕೆ ಸೇರಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
‘ಹೊಸ ನ್ಯಾಯಾಲಯಗಳ ಸ್ಥಾಪನೆ ಕುರಿತಂತೆ ಸರ್ಕಾರವು ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಪ್ರಸ್ತುತ ಸಂದರ್ಭವನ್ನು ಪರಿಗಣಿಸಿ, ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳನ್ನು ಪ್ರಾರಂಭಿಸಲು ಆದ್ಯತೆ ನೀಡಲಾಗಿದೆ. ಈ ವಿಶೇಷ ನ್ಯಾಯಾಲಯಗಳು ಸಿದ್ಧವಾದ ನಂತರ, ಇತಹ ನ್ಯಾಯಾಲಯಗಳ ಸ್ಥಾಪನೆಯ ವಿಷಯವನ್ನು ಸರ್ಕಾರ ಪರಿಶೀಲಿಸುತ್ತದೆ’ ಎಂದು ಮುಖ್ಯಮಂತ್ರಿಗಳು ಹೇಳಿದ್ದಾರೆ.
ಇಡೀ ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಗಣನೀಯ ಸಂಖ್ಯೆಯಲ್ಲಿ ಹೆಚ್ಚುತ್ತಿದ್ದು, ಸರ್ಕಾರಗಳು ಇಂತಹ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಯಾವ ಕ್ರಮವನ್ನು ಕೈಗೊಳ್ಳದೇ ಮೌನವಾಗಿರುವುದು ಬೇಸರದ ಸಂಗತಿ. ಇಂತಹ ಪ್ರಕರಣಗಳು ನ್ಯಾಯಾಲಯದ ಮೆಟ್ಟಿಲೇರಿ, ನ್ಯಾಯ ದೊರೆಯುವುದು ಎಂಬುದು ಕನಸಿನ ಮಾತು ಎನ್ನುವಂತಾಗಿದೆ. ನ್ಯಾಯಕ್ಕಾಗಿ ವರ್ಷಾನುಗಟ್ಟಲೆ ಕೋರ್ಟಿಗೆ ಅಲೆದಾಡುವ ಸಂತ್ರಸ್ಥರು ಕೊನೆಗೆ ‘ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣವನ್ನು ಕೈಬಿಡಲಾಗಿದೆ’ ಎಂಬ ನ್ಯಾಯಾಧೀಶರ ಮಾತಿನಿಂದ ಜರ್ಜರಿತಗೊಂಡಂತಹ ಘಟನೆಗಳು ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿ. ಈ ನಿಟ್ಟಿನಲ್ಲಿ ಕೇರಳ ಜಾರಿ ಮಾಡಿರುವ ವಿಶೇಷ ನ್ಯಾಯಾಲಯಗಳು ಶೀರ್ಘದಲ್ಲೇ ಕಾರ್ಯರೂಪಕ್ಕೆ ಬರಲಿ. ಕೇರಳ ಇಡೀ ದೇಶಕ್ಕೆ ಮಾದರಿಯಾಗಲಿ.
ಇದನ್ನೂ ಓದಿ: ಶಿಕ್ಷಣ ವ್ಯವಸ್ಥೆ ಬದಲಾಗಲಿ, ನನ್ನ ಬಲಿದಾನ ಬದಲಾವಣೆಗೆ ದಾರಿದೀಪವಾಗಲಿ ಎಂದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
ಪಿಣರಾಯಿ ವಿಜಯನ್ ರವರ ಈ ನಿರ್ದಾರ ಸ್ವಾಗತಾರ್ಹ. ಈ ವ್ಯವಸ್ಥೆ ನಮ್ಮ ರಾಜ್ಯದಲ್ಲೂ ಆಗಬೇಕು.