ಭಾರತೀಯ ಕುಸ್ತಿ ಫೆಡರೇಷನ್ನ ಅಮಾನತುಗೊಂಡಿರುವ ಸಮಿತಿಗೆ ‘ಸೀನಿಯರ್ ನ್ಯಾಷನಲ್ ಚಾಂಪಿಯನ್ಶಿಪ್’ ನಡೆಸಲು ಯಾವುದೇ ಅಧಿಕಾರವಿಲ್ಲ ಮತ್ತು ಸಂಸ್ಥೆಯು ನಡೆಸುವ ಯಾವುದೇ ಕಾರ್ಯಕ್ರಮವನ್ನು ‘ಅನುಮೋದಿತವಲ್ಲದ’ ಮತ್ತು ‘ಮಾನ್ಯತೆ ಪಡೆಯದ’ ಎಂದು ಪರಿಗಣಿಸಲಾಗುವುದು ಎಂದು ಕ್ರೀಡಾ ಸಚಿವಾಲಯ ಹೇಳಿದೆ.
ಕಳೆದ ತಿಂಗಳು WFI ಗೆ ಚುನಾವಣೆ ನಡೆದು ಸಂಜಯ್ ಸಿಂಗ್ ಅವರನ್ನು ಭಾರತೀಯ ಕುಸ್ತಿ ಫೆಡರೇಷನ್ನ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡಲಾಗಿತ್ತು. ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಆಯ್ಕೆಗೆ ಕುಸ್ತಿಪಟುಗಳು ವಿರೋಧಿಸಿದ್ದರು. ಇದರ ಬೆನ್ನಲ್ಲೇ ಸಚಿವಾಲಯವು ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ಭಾರತೀಯ ಕುಸ್ತಿ ಫೆಡರೇಷನ್ನ ಸಮಿತಿಯನ್ನು ಅಮಾನತುಗೊಳಿಸಿತ್ತು. ಬಳಿಕ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಮೂರು ಸದಸ್ಯರ ತಾತ್ಕಾಲಿಕ ಸಮಿತಿಯನ್ನು ರಚಿಸಿತ್ತು.
ಅಮಾನತುಗೊಂಡ ಡಬ್ಲ್ಯುಎಫ್ಐ ಅಧ್ಯಕ್ಷ ಸಂಜಯ್ ಸಿಂಗ್ ಅವರು ಶೀಘ್ರದಲ್ಲೇ ರಾಷ್ಟ್ರೀಯ ಚಾಂಪಿಯನ್ಶಿಪ್ಗಳನ್ನು ಆಯೋಜಿಸುವುದಾಗಿ ಹೇಳಿದ್ದರು. ಪುಣೆಯಲ್ಲಿ 2024ರ ಜನವರಿ 29 ರಿಂದ31ರವರೆಗೆ ಸೀನಿಯರ್ ನ್ಯಾಶನಲ್ ವ್ರೆಸ್ಲಿಂಗ್ ಚಾಂಪಿಯನ್ಶಿಪ್ 2023ನ್ನು ಆಯೋಜಿಸುವ ಬಗ್ಗೆ ನೀವು 06.01.2024ರ ಲೆಟರ್ಹೆಡ್ನಲ್ಲಿ ಸುತ್ತೋಲೆಯನ್ನು ಹೊರಡಿಸಿದ್ದೀರಿ ಎಂದು ಸಚಿವಾಲಯದ ಗಮನಕ್ಕೆ ಬಂದಿದೆ. 24.12.2023ರ ಈ ಸಚಿವಾಲಯದ ಆದೇಶದ ಪ್ರಕಾರ, ಅಂತಹ ಸುತ್ತೋಲೆಯನ್ನು ನೀಡಲು ಅಥವಾ ರತದ ಕುಸ್ತಿ ಫೆಡರೇಶನ್ನ ಲೆಟರ್ಹೆಡ್ನ್ನು ಬಳಸಲು ನಿಮಗೆ ಯಾವುದೇ ಅಧಿಕಾರವಿಲ್ಲ ಎಂದು ಕ್ರೀಡಾ ಸಚಿವಾಲಯ ಹೇಳಿದೆ.
ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಲೆಟರ್ಹೆಡ್ನ್ನು ಬಳಸುವುದನ್ನು ನಿಲ್ಲಿಸಬೇಕು ಮತ್ತು ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿಯ ನಿಬಂಧನೆಗಳನ್ನು ಉಲ್ಲಂಘಿಸಿ ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯದ ಹೆಸರು, ಲೋಗೋಗಳು ಮತ್ತು ಚಿಹ್ನೆಗಳನ್ನು ಬಳಸುವುದನ್ನು ನಿಲ್ಲಿಸಬೇಕು ಎಂದು ಕ್ರೀಡಾ ಸಚಿವಾಲಯ ಹೇಳಿದೆ.
ಸಂಜಯ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ ಸಚಿವಾಲಯವು, ನೀವು ಅಥವಾ ಡಬ್ಲ್ಯುಎಫ್ಐನ ಅಮಾನತುಗೊಳಿಸಿದ ಕಾರ್ಯಕಾರಿ ಸಮಿತಿ ಸದಸ್ಯರು ಆಯೋಜಿಸುವ ಯಾವುದೇ ಚಾಂಪಿಯನ್ಶಿಪ್ ಸ್ಪರ್ಧೆಗಳನ್ನು ಅನುಮೋದಿತ ಮತ್ತು ಮಾನ್ಯತೆ ಪಡೆದ ಸ್ಪರ್ಧೆಗಳೆಂದು ಪರಿಗಣಿಸಲಾಗುವುದಿಲ್ಲ. ಡಬ್ಲ್ಯುಎಫ್ಐನ ಅಮಾನತುಗೊಂಡ ಸಮಿತಿ ನಡೆಸುವ ಚಾಂಪಿಯನ್ಶಿಪ್ ಸ್ಪರ್ಧೇಗಳಲ್ಲಿ ನೀಡುವ ಪ್ರಮಾಣಪತ್ರಗಳು ಮತ್ತು ಪದಕಗಳು ಯಾವುದನ್ನು ಪರಿಗಣಿಸಲಾಗುವುದಿಲ್ಲ. ಸರ್ಕಾರದ ಯಾವುದೇ ಯೋಜನೆಯಡಿ ಅರ್ಹತೆಗಾಗಿ ಅಥವಾ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿಗಾಗಿ, ಕ್ರೀಡಾ ಪ್ರಶಸ್ತಿಗಳಿಗೆ ಅಥವಾ ಶಾಲಾ ಮತ್ತು ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಪರಿಗಣಿಸಲಾಗುವುದಿಲ್ಲ ಎಂದು ಸಚಿವಾಲಯವು ಹೇಳಿದೆ.
ಮುಂದಿನ ಆದೇಶದವರೆಗೆ ತಾತ್ಕಾಲಿಕ ಸಮಿತಿಯ ಮೇಲ್ವಿಚಾರಣೆಯಲ್ಲಿ ಆಯೋಜಿಸಲಾದ ವಿವಿಧ ವಯೋಮಾನದ ವಿಭಾಗಗಳಿಗೆ ರಾಷ್ಟ್ರೀಯ ಕುಸ್ತಿ ಚಾಂಪಿಯನ್ಶಿಪ್ಗಳನ್ನು ಮಾತ್ರ ಕ್ರೀಡಾ ಸಂಹಿತೆಯ ಅಡಿಯಲ್ಲಿ ಪರಿಗಣಿಸಲಾಗುವುದು ಎಂದು ಇಲಾಖೆಯು ತಿಳಿಸಿದೆ. ಫೆಬ್ರವರಿ 2-5 ರಿಂದ ಜೈಪುರದಲ್ಲಿ ಹಿರಿಯ ರಾಷ್ಟ್ರೀಯ ಚಾಂಪಿಯನ್ಶಿಪ್ಗಳನ್ನು ಆಯೋಜಿಸುವುದಾಗಿ ತಾತ್ಕಾಲಿಕ ಸಮಿತಿಯು ಘೋಷಿಸಿದೆ.
ಭಾರತೀಯ ಕುಸ್ತಿ ಫೆಡರೇಷನ್ ಕಳೆದ ಒಂದು ವರ್ಷದಿಂದ ಭಾರೀ ಚರ್ಚೆಯಲ್ಲಿದೆ. ಕುಸ್ತಿ ಫೆಡರೇಷನ್ನ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದರು. ಬ್ರಿಜ್ ಭೂಷಣ್ ಸಿಂಗ್ ಸಿಂಗ್ ವಿರುದ್ಧ ಪೋಕ್ಸ್ ಸೇರಿ ಹಲವು ಸೆಕ್ಸನ್ಗಳಡಿಯಲ್ಲಿ ಕೇಸ್ ದಾಖಲಾಗಿದೆ. ಆ ಬಳಿಕ ಇತ್ತೀಚೆಗೆ ಭಾರತೀಯ ಕುಸ್ತಿ ಫೆಡರೇಷನ್ ಮುಖ್ಯಸ್ಥರನ್ನಾಗಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ನಿಕಟವರ್ತಿ ಸಂಜಯ್ ಸಿಂಗ್ನ್ನು ನೇಮಿಸಲಾಗಿತ್ತು. ಈ ಬಗ್ಗೆ ವ್ಯಾಪಕ ಆಕ್ರೋಶವನ್ನು ಕುಸ್ತಿಪಟುಗಳು ವ್ಯಕ್ತಪಡಿಸಿದ್ದರು. ಸಾಕ್ಷಿ ಮಲಿಕ್ ಅವರು ಕುಸ್ತಿಯನ್ನು ತ್ಯಜಿಸುವುದಾಗಿ ಘೋಷಿಸಿದ್ದರು. ಭಜರಂಗ್ ಪುನಿಯಾ ಅವರು ಪದ್ಮಶ್ರೀ ಮತ್ತು ವಿನೇಶ್ ಫೋಗಟ್ ಅವರು ಅರ್ಜುನ ಪ್ರಶಸ್ತಿ ಮತ್ತು ಖೇಲ್ ರತ್ನವನ್ನು ಹಿಂದಿರುಗಿಸಿದರು. ಆ ಬಳಿಕ ನೂತನ ಸಮಿತಿಯನ್ನು ಅಮಾನತುಗೊಳಿಸಿ ಕ್ರೀಡಾ ಸಚಿವಾಲಯ ಆದೇಶಿಸಿತ್ತು.
ಇದನ್ನು ಓದಿ: ‘ಭಾರತೀಯ ವಿಜ್ಞಾನ ಕಾಂಗ್ರೆಸ್’ಗೆ ನೆರವು ಸ್ಥಗಿತಗೊಳಿಸಿದ ಕೇಂದ್ರ ಸರಕಾರ!