ಕೇರಳದ ಕಲಡಿಯಲ್ಲಿರುವ ಶ್ರೀ ಶಂಕರಾಚಾರ್ಯ ಸಂಸ್ಕೃತ ವಿಶ್ವವಿದ್ಯಾಲಯ (ಎಸ್ಎಸ್ಯುಎಸ್) ಪೌರತ್ವ ತಿದ್ದುಪಡಿ ಕಾಯ್ದೆ (ಸಿಎ) ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ದೇಶದ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿಶ್ವವಿದ್ಯಾನಿಲಯದ 15 ಸದಸ್ಯರ ಸಿಂಡಿಕೇಟ್ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ನಿರ್ಣಯವನ್ನು ಅಂಗೀಕರಿಸಿದೆ. “ಮೋದಿ ಸರ್ಕಾರದ ಸಕ್ರಿಯ ಪ್ರಚೋದನೆಯೊಂದಿಗೆ ಬಲಪಂಥೀಯ ಬೆಂಬಲಿಗರಿಂದ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ವಿದ್ವಾಂಸರ ಮೇಲಿನ ಹಲ್ಲೆ ಮತ್ತು ಹಿಂಸಾಚಾರ”ವನ್ನು ಖಂಡಿಸಿದೆ.
ನಿರ್ಣಯವನ್ನು ಸಿಂಡಿಕೇಟ್ನಲ್ಲಿರುವ ವಿದ್ಯಾರ್ಥಿ ಪ್ರತಿನಿಧಿ ಕೆ.ವಿ. ಅಭಿಜಿತ್ ಓದಿದರು. “ಆಡಳಿತಾರೂಢ BJP ದೇಶದ ಯುವಜನರ ಮೇಲೆ ಕ್ರೂರವಾಗಿ ಹಲ್ಲೆ ಮಾಡುವ ಮೂಲಕ ಭಿನ್ನಾಭಿಪ್ರಾಯದ ಪ್ರತಿಧ್ವನಿಯನ್ನು ನಿಗ್ರಹಿಸಲು ಪ್ರಯತ್ನಿಸುತ್ತಿದೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಶುಲ್ಕ ಹೆಚ್ಚಳವನ್ನು ವಿರೋಧಿಸಿದ ವಿದ್ಯಾರ್ಥಿಗಳು ಮತ್ತು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಇತರರ ಮೇಲೆ ಬಿಜೆಪಿ ಸರ್ಕಾರವು ಪೊಲೀಸರು ಮತ್ತು ಗೂಂಡಾಗಳನ್ನು ಬಳಸಿ ಹಲ್ಲೆ ನಡೆಸಿದೆ. ಬಿಜೆಪಿ ಎಲ್ಲಾ ವಿಷಯಗಳಲ್ಲಿ ಮೂಗು ತೂರಿಸುತ್ತಿದೆ ಎಂದು ನಿರ್ಣಯದಲ್ಲಿ ಸೇರಿಸಲಾಗಿದೆ.
“ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಭಯಾನಕ ಹಿಂಸಾಚಾರ” ದ ವಿರುದ್ಧ ಪ್ರಬಲ ಪ್ರತಿಭಟನೆ ನಡೆಸಬೇಕೆಂದು ವಿಶ್ವವಿದ್ಯಾಲಯವು ಶೈಕ್ಷಣಿಕ ಸಮುದಾಯವನ್ನು ಒತ್ತಾಯಿಸಿತು.
1994 ರಲ್ಲಿ ಸ್ಥಾಪನೆಯಾದ ಎಸ್ಎಸ್ಯುಎಸ್ ಬೋಧನೆ, ಸಂಶೋಧನೆ ಮತ್ತು ನಾವೀನ್ಯತೆಗಳಲ್ಲಿ ಭಾರತದ ಪ್ರಖ್ಯಾತ ಸಂಸ್ಕೃತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಇದಕ್ಕೆ ಹಿಂದೂ ಋಷಿ ಮತ್ತು ತತ್ವಜ್ಞಾನಿ ಆದಿ ಶಂಕರಾಚಾರ್ಯರ ಹೆಸರಿಡಲಾಗಿದೆ.
ಸಮಕಾಲೀನ ವಿಷಯಗಳ ಬಗ್ಗೆ, ಈ ವಿಶ್ವವಿದ್ಯಾಲಯವು ಕೆಲವು ದೃಢವಾದ ನಿಲುವುಗಳನ್ನು ತೆಗೆದುಕೊಳ್ಳುವಲ್ಲಿ ಹೆಸರುವಾಸಿಯಾಗಿದೆ. ಕಳೆದ ತಿಂಗಳು, ಇದು ಹೊಸ ಶಿಕ್ಷಣ ನೀತಿಯನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ಅಂಗೀಕರಿಸಿತು. ಇದನ್ನು “ಜಾತ್ಯತೀತತೆ, ಮಾನವತಾವಾದ ಮತ್ತು ಸಮಕಾಲೀನ ವೈಜ್ಞಾನಿಕ ಚಿಂತನೆಯಿಂದ ವಿಚಲನೆ” ಎಂದು ಕರೆದಿದೆ.
ಸಿಎಎ ವಿರುದ್ಧ ನಿರ್ಣಯ ಅಂಗೀಕರಿಸಿದ ಈ ವಿಶ್ವವಿದ್ಯಾಲಯದ ಮಾದರಿಯನ್ನು ಈ ದೇಶದ ಎಲ್ಲಾ ವಿಶ್ವವಿದ್ಯಾಲಯಗಳೂ ಅನುಸರಿಸಬೇಕು.