ರಾಜ್ಯ ಸಂಪುಟ ವಿಸ್ತರಣೆಯ ಕುರಿತು ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಡಿಸೆಂಬರ್ 20-22 ರ ನಂತರವಷ್ಟೇ ಸಾಧ್ಯ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ನಾವು ಭರವಸೆ ಕೊಟ್ಟಂತೆ ಎಲ್ಲರಿಗೂ ಮಂತ್ರಿ ಮಾಡುವುದು ಖಾತ್ರಿ. ಇದರಲ್ಲಿ ಯಾವುದೇ ಗೊಂದಲವಿಲ್ಲ. ನಾನು ದೆಹಲಿಗೆ ಹೋಗಲಿಕ್ಕೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ಅಮಿತ್ ಶಾರವರು ಚುನಾವಣೆ ಸೇರಿದಂತೆ ಹಲವು ವಿಚಾರಗಳಲ್ಲಿ ಬ್ಯುಸಿ ಇದ್ದಾರೆ. ಹಾಗಾಗಿ ಒಂದು ವಾರದ ನಂತರ ಬಿಟ್ಟು ಬನ್ನಿ ಎಂದಿದ್ದಾರೆ” ಎಂದು ತಿಳಿಸಿದ್ದಾರೆ.
ಗೆದ್ದ ತಕ್ಷಣವೇ ಮಂತ್ರಿ ಮಾಡಲಾಗುವುದು ಎಂದು ಯಡಿಯೂರಪ್ಪನವರು ಘೋಷಿಸಿದ್ದರು. ಅದಕ್ಕಾಗಿ 16 ಸಚಿವ ಸ್ಥಾನಗಳನ್ನು ಖಾಲಿ ಸಹ ಉಳಿಸಿಕೊಂಡಿದ್ದರು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ 22ನೇ ತಾರೀಖಿನವರೆಗೂ ಮಂತ್ರಿಮಂಡಲ ವಿಸ್ತರಣೆ ಅಸಾಧ್ಯ ಎಂದು ಸಿಎಂ ಹೇಳಿದ್ದಾರೆ.
ಯಡಿಯೂರಪ್ಪನವರು ಬಾಯಿಮಾತಿಗೆ 22ರ ನಂತರ ಸಚಿವ ಸಂಪುಟ ವಿಸ್ತರಣೆ ಎಂದು ಹೇಳುತ್ತಿದ್ದರೂ ಸಹ ಧರ್ನುಮಾಸ ಸೇರಿದಂತೆ ಹಲವು ಅಡೆಗಡೆಗಳಿರುವುದರಿಂದ ಈ ವರ್ಷ ಅತೃಪ್ತರಾಗಿ, ಅನರ್ಹರಾಗಿ ಮತ್ತು ಹಾಲಿ ಶಾಸಕರಾಗಿರುವ 12 ಜನರಿಗೆ ಮಂತ್ರಿ ಭಾಗ್ಯ ಸಿಗುವುದು ಮುಂದಿನ ವರ್ಷಕ್ಕೆ ಎಂದು ಹಲವು ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ.