ಕೊರೊನಾ ಎರಡನೆ ಅಲೆಯ ಸಮಯದಲ್ಲಿ ಅಲೋಪತಿ ವಿರುದ್ಧ ತಪ್ಪು ಮಾಹಿತಿ ಹರಡಿದ್ದಾರೆ ಎಂಬ ಆರೋಪದಡಿ ವಿವಾದಿತ ಯೋಗ ಗುರು ರಾಮ್ದೇವ್ ವಿರುದ್ಧ ಏಳು ವೈದ್ಯರ ಸಂಘಗಳು ಸಲ್ಲಿಸಿರುವ ಮನವಿಯನ್ನು ದೆಹಲಿ ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿ ಸಿ. ಹರಿ ಶಂಕರ್ ಅವರು ಈ ಪ್ರಕರಣವನ್ನು ವಿಚಾರಣೆ ನಡೆಸಲಿದ್ದಾರೆ.
ನ್ಯಾಯಮೂರ್ತಿ ಸಿ. ಹರಿ ಶಂಕರ್ ಈ ಹಿಂದೆ ವೈದ್ಯರ ಸಂಘಗಳಿಗೆ ಆಪಾದಿತ ತಪ್ಪು ಮಾಹಿತಿ ನೀಡಿದ ವೀಡಿಯೊಗಳನ್ನು ಸಲ್ಲಿಸುವಂತೆ ಕೇಳಿದ್ದರು. ರಾಮ್ದೇವ್ ವಿರುದ್ದ ಒಟ್ಟು ಏಳು ವೈದ್ಯರ ಸಂಘಗಳು ಒಟ್ಟಾಗಿ ನ್ಯಾಯಾಲಯದ ಮೆಟ್ಟಿಲನ್ನು ಹತ್ತಿದ್ದವು.
ಕೊರೊನಾ ಸೋಂಕಿತ ರೋಗಿಗಳ ಹಲವಾರು ಜನರ ಸಾವಿಗೆ ಅಲೋಪತಿಯೆ ಕಾರಣ ಮತ್ತು ಅಲೋಪತಿ ವೈದ್ಯರು ರೋಗಿಗಳ ಸಾವಿಗೆ ಕಾರಣರಾಗುತ್ತಿದ್ದಾರೆ ಎಂದು ರಾಮ್ದೇವ್ ಪ್ರತಿಪಾದಿಸಿದ್ದು, ಅವರು ಸಾರ್ವಜನಿಕರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ ಎಂದು ವೈದ್ಯರ ಸಂಘಗಳು ಆರೋಪಿಸಿದ್ದವು.
ಇದನ್ನೂ ಓದಿ: ಅಲೋಪತಿ ವೈದ್ಯರ ವಿರುದ್ಧ ಅವಹೇಳನ: ವಿಚಾರಣೆಗೆ ತಡೆಯೊಡ್ಡಲು ಸುಪ್ರೀಂ ಮೊರೆ ಹೋದ ಬಾಬಾ ರಾಮದೇವ್
ಅಲೋಪತಿ ಚಿಕಿತ್ಸೆಗಳು ಮಾತ್ರವಲ್ಲದೆ, ಕೊರೊನಾ ಲಸಿಕೆಗಳ ಸುರಕ್ಷತೆ ಮತ್ತು ಪರಿಣಾಮಕಾರಿತ್ವ ಸಂಬಂಧಿಸಿದಂತೆ ರಾಮ್ದೇವ್ ಸಾರ್ವಜನಿಕರ ಮನಸ್ಸಿನಲ್ಲಿ ಅನುಮಾನಗಳನ್ನು ಬಿತ್ತುತ್ತಿದ್ದಾರೆ ಎಂದು ಸಂಘಗಳು ತಮ್ಮ ಮನವಿಯಲ್ಲಿ ದೂರಿದ್ದವು.
ರಾಮ್ದೇವ್ ಪ್ರಭಾವಶಾಲಿ ವ್ಯಕ್ತಿಯಾಗಿರುವುದರಿಂದ ಅವರ ಹೇಳಿಕೆಗಳು ಲಕ್ಷಾಂತರ ಜನರ ಮೇಲೆ ಪ್ರಭಾವ ಬೀರಬಹುದಾಗಿದ್ದು, ಜನರು ಅಲೋಪಥಿಕ್ ಚಿಕಿತ್ಸೆಯಿಂದ ದೂರ ಸರಿಯಲು ಈ ಹೇಳಿಕೆ ಕಾರಣವಾಗಬಹುದು ಎಂದು ಮನವಿಯಲ್ಲಿ ಹೇಳಿದ್ದಾರೆ.
ಅಲೋಪತಿ ಔಷಧಿಗಳ ವಿರುದ್ಧದ ಹೇಳಿಕೆಗಳು ಮತ್ತು ಪತಂಜಲಿಯ ಕೊರೊನಿಲ್ ಕಿಟ್ಗೆ ಸಂಬಂಧಿಸಿದ ಪ್ರತಿಪಾದನೆಗೆ ಸಂಬಂಧಿಸಿದಂತೆ ದೆಹಲಿ ವೈದ್ಯಕೀಯ ಸಂಘವು ಸಲ್ಲಿಸಿದ್ದ ಮನವಿಯ ಮೇರೆಗೆ ನ್ಯಾಯಾಲಯವು ಜೂನ್ 3 ರಂದು ರಾಮದೇವ್ಗೆ ಸಮನ್ಸ್ ಜಾರಿಗೊಳಿಸಿತ್ತು.
ಇದನ್ನೂ ಓದಿ: ಬಾಬಾ ರಾಮದೇವ್ ವಿರುದ್ಧ ಎಫ್ಐಆರ್ ದಾಖಲಿಸಿದ ಛತ್ತೀಸ್ಗಢ ಪೊಲೀಸರು