ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎರಡು ದಿನಗಳ ಭಾರತ ಭೇಟಿಗೆ ಮುಂಚಿತವಾಗಿ ತಾಜ್ ಮಹಲ್ ಇರುವ ಪಟ್ಟಣವಾದ ಆಗ್ರಾದ ಬೀದಿಗಳನ್ನು ಸುಂದರಗೊಳಿಸಲಾಗುತ್ತಿದೆ. ಗೋಡೆಗಳಿಗೆ ಬಣ್ಣಬಣ್ಣದ ಪೈಂಟ್ ಹೊಡೆಲಾಗುತ್ತಿದೆ. ಅಲ್ಲದೇ ಯಮುನಾ ನದಿಗೆ ಶುದ್ಧ ನೀರನ್ನು ಬಿಡುಗಡೆ ಮಾಡುವ ಮೂಲಕ ಅದರ ಕೊಳಕನ್ನು ಮರೆ ಮಾಚಲು ಯತ್ನಿಸಲಾಗುತ್ತಿದೆ.
ಅಮೆರಿಕಾದ ಭದ್ರತಾ ತಂಡವು ಸೋಮವಾರ ತಾಜ್ ಮಹಲ್ ಗೆ ಭೇಟಿ ನೀಡಿದೆ. ಅಲ್ಲದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಅದೇ ದಿನ ಆಗ್ರಾಕ್ಕೆ ತೆರಳಿ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ.
ಬೆಳಿಗ್ಗೆ ತಾಜ್ ಮಹಲ್ ಸಂಕೀರ್ಣದೊಳಗಿನ ಕಾರಂಜಿಗಳನ್ನು ಸ್ವಚ್ಛಗೊಳಿಸಲಾಯಿತು. ಕೆಲಸಗಾರರು ಕಾರಂಜಿಗಳು ಮತ್ತು ಮಾರ್ಗಗಳನ್ನು ಉಜ್ಜಿ ತೊಳೆಯುವ ದೃಶ್ಯಗಳು ಕಂಡುಬಂದವು ಎಂದು ಎನ್ಡಿಟಿವಿ ವರದಿ ಮಾಡಿದೆ.
ಭಾರತದ ಪುರಾತತ್ವ ಸಮೀಕ್ಷೆ ನಿರ್ವಹಿಸುವ ಯಾವುದೇ ಸ್ಮಾರಕದ ದುರಸ್ತಿ ಮತ್ತು ಪುನಃಸ್ಥಾಪನೆಗೆ ಕಟ್ಟುನಿಟ್ಟಾದ ಮಾರ್ಗಸೂಚಿಗಳಿವೆ. ಆದರೆ ಅವೆಲ್ಲವುಗಳನ್ನು ಉಲ್ಲಂಘಿಸಿ ಕಾಮಗಾರಿಗಳು ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ.
“ಮುಖ್ಯ ಮಾರ್ಗದಲ್ಲಿ ಮತ್ತು ತಾಜ್ ಮಹಲ್ ಪ್ರದೇಶದ ಸಮೀಪವಿರುವ ಎಲ್ಲಾ ಮನೆಗಳು, ಅಂಗಡಿಗಳು, ರೆಸ್ಟೋರೆಂಟ್ಗಳು ಮತ್ತು ಹೋಟೆಲ್ಗಳನ್ನು ಗುರುತಿಸಲಾಗಿದೆ. ಪರಿಶೀಲನೆ ಪ್ರಕ್ರಿಯೆ ಮುಗಿಯಲಿದೆ. ಪರಿಶೀಲನೆಗಾಗಿ ಕೆಲವು ತಂಡಗಳನ್ನು ಸಹ ನೇಮಿಸಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಬೊಟ್ರೆ ರೋಹನ್ ಪ್ರಮೋದ್ ಅವರು ತಿಳಿಸಿದ್ದಾರೆ ಎಂದು ಎಎನ್ಐ ಹೇಳಿದೆ.
ಉತ್ತರಾಖಂಡ, ಹರಿಯಾಣ, ದೆಹಲಿ, ಮತ್ತು ಉತ್ತರ ಪ್ರದೇಶದ ಮೂಲಕ ಹಾದುಹೋಗುವ ಮತ್ತು ತಾಜ್ಮಹಲ್ನ ಹಿಂದೆ ಹರಿಯುವ ಯಮುನಾ ಕಳೆದ ಕೆಲವು ದಶಕಗಳಲ್ಲಿ ಕೈಗಾರಿಕೆ ಮತ್ತು ಒಳಚರಂಡಿಗಳ ಮಾಲಿನ್ಯದಿಂದ ತೀವ್ರವಾಗಿ ನರಳುತ್ತಿದೆ. ಹಾಗಾಗಿ ಕಳೆದ ಕೆಲವು ದಿನಗಳಲ್ಲಿ ಉತ್ತರಪ್ರದೇಶದ ನೀರಾವರಿ ಇಲಾಖೆಯು ದೆಹಲಿ ಮತ್ತು ಉತ್ತರ ಪ್ರದೇಶದ ಜೀವನಾಡಿಯಾಗಿರುವ ಯಮುನಾಕ್ಕೆ 500 ಕ್ಕೂ ಹೆಚ್ಚು ಕ್ಯೂಸೆಕ್ ಶುದ್ಧ ನೀರನ್ನು ಬಿಡುಗಡೆ ಮಾಡಲಾಗಿದೆ.
ಪ್ರಧಾನಮಂತ್ರಿ ಮೋದಿಯವರ ತವರು ರಾಜ್ಯ ಗುಜರಾತ್ನ ಅಹಮದಾಬಾದ್ನಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಸೋಮವಾರ ತಮ್ಮ ಎರಡು ದಿನಗಳ ಭೇಟಿಯನ್ನು ಪ್ರಾರಂಭಿಸಲಿದ್ದಾರೆ. ಅಹಮದಾಬಾದ್ನಲ್ಲಿ ಹೊಸದಾಗಿ ನಿರ್ಮಿಸಲಾದ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ “ನಮಸ್ತೆ ಟ್ರಂಪ್” ಕಾರ್ಯಕ್ರಮದಲ್ಲಿ ಅಧ್ಯಕ್ಷ ಟ್ರಂಪ್ ಮತ್ತು ಅವರ ಪತ್ನಿ ಮೆಲಾನಿಯಾ ಭಾಗವಹಿಸಲಿದ್ದಾರೆ. ನಂತರ ದೆಹಲಿಗೆ ಹೋಗುವ ದಾರಿಯಲ್ಲಿ ತಾಜ್ ಮಹಲ್ ನೋಡಲು ಆಗ್ರಾಕ್ಕೆ ಹೋಗಲಿದ್ದಾರೆ.