ಲೋಕಸಭೆಯಿಂದ ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್(ಟಿಎಂಸಿ) ನಾಯಕಿ ಮಹುವಾ ಮೊಯಿತ್ರಾ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಜನವರಿ 3ಕ್ಕೆ ಮುಂದೂಡಿದೆ.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ವಿಎನ್ ಭಟ್ಟಿ ಅವರ ಸುಪ್ರೀಂ ಕೋರ್ಟ್ ಪೀಠವು ಮಹುವಾ ಮೊಯಿತ್ರಾ ಅವರ ಅರ್ಜಿಯನ್ನು ವಿಚಾರಣೆ ನಡೆಸಲಿದೆ.
ಪಶ್ಚಿಮ ಬಂಗಾಳದ ಕೃಷ್ಣನಗರ ಲೋಕಸಭಾ ಕ್ಷೇತ್ರದ ಸಂಸದೆಯಾಗಿದ್ದ ಮಹುವಾ ಮೊಯಿತ್ರಾ ಅವರನ್ನು ಡಿಸೆಂಬರ್ 8 ರಂದು ಪ್ರಶ್ನೆಗಾಗಿ ನಗದು ಆರೋಪದ ಮೇಲೆ ಲೋಕಸಭೆಯ ನೈತಿಕ ಸಮಿತಿಯ ವರದಿ ಆಧರಿಸಿ ಉಚ್ಚಾಟನೆ ಮಾಡಲಾಗಿದೆ.
ಸುಪ್ರೀಂ ಕೋರ್ಟ್ ಇಂದು(ಡಿ.15) ಮಹುವಾ ಅವರ ಅರ್ಜಿಯನ್ನು ಕೈಗೆತ್ತಿಕೊಂಡಾಗ ಅವರ ಪರ ಹಿರಿಯ ವಕೀಲ ಎಎಂ ಸಿಂಘ್ವಿ ವಾದ ಮಂಡಿಸಿದರು. ಈ ವೇಳೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ನಿಶಿಕಾಂತ್ ದುಬೆ ಪರವಾಗಿ ಹಿರಿಯ ವಕೀಲ ಹರೀಶ್ ಸಾಳ್ವೆ ಅವರ ಉಪಸ್ಥಿತಿಯನ್ನು ಸಿಂಘ್ವಿ ಆಕ್ಷೇಪಿಸಿದರು.
ನಿಶಿಕಾಂತ್ ದುಬೆ ದೂರಿನ ಮೇಲೆ ಮೊಯಿತ್ರಾ ವಿರುದ್ಧ ತನಿಖೆ ನಡೆಸಿ ಅವರನ್ನು ಲೋಕಸಭೆಯಿಂದ ಉಚ್ಚಾಟನೆ ಮಾಡಲಾಗಿದೆ. ಇಂದು ದುಬೆ ಪರ ವಕೀಲರು ಕೋರ್ಟ್ಗೆ ಬರುವ ಅವಶ್ಯಕತೆ ಇಲ್ಲ. ದುಬೆ ಪರ ವಕೀಲರ ಉಪಸ್ಥಿತಿ ಮಹುವಾ ಉಚ್ಚಾಟನೆಯ ಹಿಂದೆ ದುಬೆ ಪ್ರೇರಣೆಯನ್ನು ಒತ್ತಿ ಹೇಳುತ್ತದೆ ಎಂದು ಸಿಂಘ್ವಿ ಕಿಡಿಕಾರಿದರು.
ಇದಕ್ಕೆ ಉತ್ತರಿಸಿದ ಹರೀಶ್ ಸಾಳ್ವೆ, ‘ನಾನು ಕೂಡ ಅರ್ಜಿ ಸಲ್ಲಿಸಿದ್ದೇನೆ’ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ನ್ಯಾಯಾಲಯ, ಇತರ ಅರ್ಜಿದಾರರ ಬಗ್ಗೆ ಮಾತನಾಡುವುದಕ್ಕೆ ನಿರಾಕರಿಸಿತು. ಜನವರಿ 3 ರವರೆಗೆ ವಿಚಾರಣೆಯನ್ನು ಮುಂದೂಡಿತು.
ಇದನ್ನೂ ಓದಿ : ಶಾಹಿ ಈದ್ಗಾ ಮಸೀದಿ ಸರ್ವೆ: ಹೈಕೋರ್ಟ್ ಆದೇಶಕ್ಕೆ ತಡೆ ನೀಡಲು ಸುಪ್ರೀಂ ನಕಾರ