ಕಣದಲ್ಲಿದ್ದ ಎಲ್ಲಾ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡ ಹಿನ್ನೆಲೆ, ಬಿಜೆಪಿಯ ಮುಖೇಶ್ ದಲಾಲ್ ಅವರು ಸೂರತ್ ಲೋಕಸಭಾ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನೀಲೇಶ್ ಕುಂಭಾಣಿ ಅವರ ನಾಮಪತ್ರ ತಿರಸ್ಕೃತಗೊಂಡ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ.
ಈ ಕುರಿತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ತೀವ್ರ ಕಳವಳ, ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದಿದ್ದಾರೆ.
ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಜೈರಾಮ್ ರಮೇಶ್, ಸೂರತ್ ಬಿಜೆಪಿ ಅಭ್ಯರ್ಥಿ ಹೇಗೆ ಅವಿರೋಧವಾಗಿ ಆಯ್ಕೆಯಾದರು ಎಂಬುವುದನ್ನು ವಿವರಿಸಿದ್ದಾರೆ.
ಜೈರಾಮ್ ರಮೇಶ್ ವಿವರಿಸಿದಂತೆ, ಸೂರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನೀಲೇಶ್ ಕುಂಭಾಣಿ ಅವರ ನಾಮಪತ್ರವನ್ನು ಮೂವರು ಸೂಚಕರ ಸಹಿ ಇಲ್ಲಾ ಎಂಬ ಕಾರಣ ನೀಡಿ ಜಿಲ್ಲಾ ಚುನಾವಣಾಧಿಕಾರಿ ಏಪ್ರಿಲ್ 21 ರಂದು ತಿರಸ್ಕರಿಸಿದ್ದರು. ಅದೇ ಕಾರಣ ನೀಡಿ ಕಾಂಗ್ರೆಸ್ನ ಬದಲಿ ಅಭ್ಯರ್ಥಿ ಸುರೇಶ್ ಪಡಸಾಲ ಅವರ ನಾಮಪತ್ರವನ್ನೂ ಅಧಿಕಾರಿಗಳು ತಿರಸ್ಕರಿಸಿದ್ದರು. ಹಾಗಾಗಿ, ಕಾಂಗ್ರೆಸ್ ಪಕ್ಷಕ್ಕೆ ಅಭ್ಯರ್ಥಿ ಇಲ್ಲದಂತಾಯಿತು.
Democracy is under threat. Aap chronology samajhiye:
• Surat District Election Officer rejects @INCIndia’s candidate for Surat Lok Sabha, Nilesh Kumbhani’s nomination for “discrepancies in verification of signatures of three proposers”
• On similar grounds, officials reject… https://t.co/uEnLeCGOG7
— Jairam Ramesh (@Jairam_Ramesh) April 22, 2024
ನಂತರ ಬಿಜೆಪಿ ಅಭ್ಯರ್ಥಿ ಮುಖೇಶ್ ದಲಾಲ್ ಹೊರತುಪಡಿಸಿ ಎಲ್ಲಾ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂತೆಗೆಕೊಂಡರು. ಏಪ್ರಿಲ್ 22, 2024 ರಂದು ಸೂರತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ “ಅವಿರೋಧವಾಗಿ ಆಯ್ಕೆಯಾಗಿದ್ದಾರೆ” ಎಂದು ಚುನಾವಣಾಧಿಕಾರಿಗಳು ಘೋಷಿಸಿದರು. ಮೇ 7ರಂದು ಕ್ಷೇತ್ರದಲ್ಲಿ ಮತದಾನ ನಡೆಯಬೇಕಿತ್ತು. ಅದಕ್ಕೂ ಎರಡು ವಾರಗಳ ಮೊದಲು ಈ ಬೆಳವಣಿಗೆ ನಡೆದಿದೆ ಎಂದು ಜೈರಾಮ್ ರಮೇಶ್ ತಿಳಿಸಿದ್ದಾರೆ.
“ಮೋದಿಯವರ ‘ಅನ್ಯಾಯ ಕಾಲ’ದಲ್ಲಿ ಎಂಎಸ್ಎಂಇ ಮಾಲೀಕರು ಮತ್ತು ಉದ್ಯಮಿಗಳು ಎದುರಿಸುತ್ತಿರುವ ಸಂಕಷ್ಟ ಮತ್ತು ಅವರ ಆಕ್ರೋಶ ಬಿಜೆಪಿಯನ್ನು ಯಾವ ಹಂತಕ್ಕೆ ಕೊಂಡೊಯ್ದಿದೆ ಎಂದರೆ, ಅವರು 1984ರಿಂದ ಲೋಕಸಭೆ ಚುನಾವಣೆಯಲ್ಲಿ ಸತತವಾಗಿ ಗೆಲ್ಲುತ್ತಾ ಬಂದಿರುವ ಸೂರತ್ ಕ್ಷೇತ್ರದಲ್ಲಿ “ಮ್ಯಾಚ್-ಫಿಕ್ಸ್’ ಮಾಡಲು ಪ್ರಯತ್ನಿಸಿದ್ದಾರೆ” ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
“ನಮ್ಮ ಚುನಾವಣೆಗಳು, ನಮ್ಮ ಪ್ರಜಾಪ್ರಭುತ್ವ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಎಲ್ಲವೂ ಅಪಾಯದಲ್ಲಿದೆ. ಇದು ನಮ್ಮ ಜೀವಮಾನದ ಪ್ರಮುಖ ಚುನಾವಣೆ!” ಎಂದಿದ್ದಾರೆ.
ಇದನ್ನೂ ಓದಿ : ಲೋಕಸಭಾ ಚುನಾವಣೆ 2024: ಸೂರತ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅವಿರೋಧ ಆಯ್ಕೆ