ಕಣದಲ್ಲಿದ್ದ ಎಲ್ಲ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡ ನಂತರ, ಬಿಜೆಪಿಯ ಮುಖೇಶ್ ದಲಾಲ್ ಅವರು ಸೂರತ್ ಲೋಕಸಭಾ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದು, ಅಚ್ಚರಿಗೆ ಕಾರಣವಾಗಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನೀಲೇಶ್ ಕುಂಭಾಣಿ ಅವರ ನಾಮಪತ್ರ ತಿರಸ್ಕೃತಗೊಂಡ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ. ಅವರ ಪರವಾಗಿ ಮೂವರು ಸೂಚಕರು ನಾಮಪತ್ರಕ್ಕೆ ಸಹಿ ಮಾಡಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಅಫಿಡವಿಟ್ನಲ್ಲಿ ಹೇಳಿದ್ದಾರೆ.
ಏಪ್ರಿಲ್ 21 ರಂದು, ಜಿಲ್ಲಾ ಚುನಾವಣಾ ಅಧಿಕಾರಿ (ಡಿಎಒ) ಸೌರಭ್ ಪಾರ್ಧಿ ಅವರು ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಿದರು. ಅವರ ಪರವಾಗಿ ಮೂವರು ಸೂಚಕರು ಸಹಿ ಮಾಡದೇ ಇರುವುದು ನಾಮಪತ್ರವನ್ನು ತಿರಸ್ಕರಿಸಲು ಕಾರಣ ಎನ್ನಲಾಗುತ್ತಿದೆ.
ಗುಜರಾತ್ನಲ್ಲಿ ಕಾಂಗ್ರೆಸ್ ಮತ್ತು ಎಎಪಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ. 26 ಸ್ಥಾನಗಳ ಪೈಕಿ 24 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಎಎಪಿ ಭಾವನಗರ ಮತ್ತು ಭರೂಚ್ನಲ್ಲಿ ಸ್ಪರ್ಧಿಸುತ್ತಿದೆ.
ಭಾರತೀಯ ಚುನಾವಣಾ ಆಯೋಗದ ವೆಬ್ಸೈಟ್ ಪ್ರಕಾರ, ಕಾಂಗ್ರೆಸ್ ಮತ್ತು ಬಿಜೆಪಿ ಹೊರತುಪಡಿಸಿ, ಬಹುಜನ ಸಮಾಜ ಪಕ್ಷವು ಸೂರತ್ ಸ್ಥಾನಕ್ಕೆ ಅಭ್ಯರ್ಥಿಯನ್ನು ನಿಲ್ಲಿಸಿದ ಏಕೈಕ ರಾಷ್ಟ್ರೀಯ ಪಕ್ಷವಾಗಿತ್ತು. ಮಾಯಾವತಿ ಪಕ್ಷದ ಅಭ್ಯರ್ಥಿಯೂ ನಾಮಪತ್ರ ವಾಪಸ್ ಪಡೆದಿರುವುದು ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಣವಾಗಿದೆ.
ಕಳೆದ ತಿಂಗಳು ಅರುಣಾಚಲ ಪ್ರದೇಶದಲ್ಲಿಯೂ ಕೂಡ, 10 ಜನ ಬಿಜೆಪಿ ಶಾಸಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಚುನಾವಣೆ ನಂತರ ನಡೆಯುತ್ತಿದ್ದ ಆಪರೇಷನ್ ಕಮಲ, ಇದೀಗ ಚುನಾವಣೆ ಪೂರ್ವದಲ್ಲಿ ನಡೆಯುತ್ತಿರುವುದಕ್ಕೆ ಹಲವರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ; ನೈಜ ಸಮಸ್ಯೆಗಳ ಗಮನ ಬೇರೆಡೆ ಸೆಳೆಯಲು ಮೋದಿಯಿಂದ ಹೊಸ ತಂತ್ರ: ಕಾಂಗ್ರೆಸ್