“ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಹಂಚುತ್ತೇನೆ: ಸಿದ್ದರಾಮಯ್ಯ.. ಅವಕಾಶವಾದಿಗಳಿಗೆ, ಓಲೈಕೆ; ಭಾಗ್ಯ, ಗ್ಯಾರಂಟಿ ರಾಜಕಾರಣ ಮಾಡುತ್ತ ದೇಶದ ಸಂಪತ್ತನ್ನು ಲೂಟಿ ಮತ ನೀಡಬೇಡಿ. ಮತದಾನದ ದಿನದಂದು ಮೈಮರೆಯದಿರಿ” ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟಿವಿ9 ಸುದ್ದಿ ವಾಹಿನಿಯ ವಿಡಿಯೋವೊಂದನ್ನು ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಹಂಚುತ್ತೇನೆ: ಸಿದ್ದರಾಮಯ್ಯ
ಅವಕಾಶವಾದಿಗಳಿಗೆ, ಓಲೈಕೆ; ಭಾಗ್ಯ, ಗ್ಯಾರಂಟಿ ರಾಜಕಾರಣ ಮಾಡುತ್ತ ದೇಶದ ಸಂಪತ್ತನ್ನು ಲೂಟಿ ಮತ ನೀಡಬೇಡಿ.
ಮತದಾನದ ದಿನದಂದು ಮೈಮರೆಯದಿರಿ pic.twitter.com/bGaF1NHJLI
— Basanagouda R Patil (Yatnal) (ಮೋದಿಯವರ ಕುಟುಂಬ) (@BasanagoudaBJP) April 22, 2024
ಫ್ಯಾಕ್ಟ್ಚೆಕ್ : ಶಾಸಕ ಯತ್ನಾಳ್ ಅವರು ವಿಡಿಯೋ ಹಂಚಿಕೊಂಡಂತೆ ದೇಶದ ಸಂಪತ್ತನ್ನು ಮುಸಲ್ಮಾನರಿಗೆ ಹಂಚುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರಾ? ಎಂಬುವುದರ ಕುರಿತು ನಾನುಗೌರಿ.ಕಾಂ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ.
ಟಿವಿ9 ಸುದ್ದಿಯ ವಿಡಿಯೋ ಗಮನಿಸಿದಾಗ, ಅದು ಡಿಸೆಂಬರ್ 4, 2023ರಂದು ಹುಬ್ಬಳ್ಳಿ ತಾಲೂಕಿನ ಪಾಳ ಗ್ರಾಮದಲ್ಲಿ ದಕ್ಷಿಣ ಭಾರತದ ಮುಸ್ಲಿಂ ಧರ್ಮಗಳ ಸಮಾವೇಶದ್ದು ಎಂದು ತಿಳಿದು ಬಂದಿದೆ.
ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದ ಸಿಎಂ ಸಿದ್ದರಾಮಯ್ಯ ಅವರು, “ನಿಮಗೂ ಶಿಕ್ಷಣ ಸಿಗಬೇಕು, ನಿಮ್ಮ ಧಾರ್ಮಿಕ ಕೇಂದ್ರಗಳ ಅಭಿವೃದ್ದಿ ಆಗಬೇಕು. ನಿಮಗೂ ಈ ದೇಶದ ಸಂಪತ್ತಿನಲ್ಲಿ ಪಾಲು ಸಿಗಬೇಕು. ನೀವು ಕೂಡ ಭಾರತೀಯರಲ್ವಾ? ಈ ದೇಶ ನಿಮಗೂ ಸೇರಬೇಕು, ನನಗೂ ಸೇರಬೇಕು. ಈ ದೇಶದ ಸಂಪತ್ತು ನಿಮಗೂ ಸಿಗಬೇಕು, ನನಗೂ ಸಿಗಬೇಕು. ಈ ದೇಶದ ಸಂಪತ್ತನ್ನು ನಿಮಗೂ ಹಂಚುವ ಕೆಲಸ ಮಾಡುತ್ತೇನೆ. ನಿಮಗೆ ಯಾವುದೇ ಕಾರಣಕ್ಕೆ ಕೂಡ ಅನ್ಯಾಯ ಆಗಲು ಬಿಡಲ್ಲ. ನಿಮ್ಮ ರಕ್ಷಣೆ ಮಾಡುವಂತಹ ಕೆಲಸ ಮಾಡುತ್ತೇನೆ. ಆದೇ ರೀತಿ ಎಲ್ಲಾ ಧರ್ಮ, ಜಾತಿಯವರಿಗೂ ರಕ್ಷಣೆ ಕೊಡುವಂತಹ ಕೆಲಸ ಮಾಡುತ್ತೇನೆ” ಎಂದಿದ್ದರು.
ಇದೇ ವಿಷಯವನ್ನು ಡಿಸೆಂಬರ್ 5, 2023ರಂದು “Siddaramaiah: ಯಾವುದೇ ಕಾರಣಕ್ಕೂ ಅನ್ಯಾಯ ಆಗೋಕೆ ಬಿಡಲ್ಲ: ಮುಸ್ಲಿಮರಿಗೆ ಸಿಎಂ ಭರವಸೆ” ಎಂಬ ಶೀರ್ಷಿಕೆಯಲ್ಲಿ ನ್ಯೂಸ್ 18 ಕನ್ನಡ ಮಾಡಿದ್ದ ವರದಿಯಲ್ಲೂ ಉಲ್ಲೇಖಿಸಿದೆ.
ಇಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಮುಸ್ಲಿಮರಿಗೂ ಈ ದೇಶದ ಸಂಪತ್ತಿನಲ್ಲಿ ಹಕ್ಕಿದೆ. ನ್ಯಾಯಯುತವಾಗಿ ಮುಸ್ಲಿಮರಿಗೆ ಸಿಗಬೇಕಾದ ಸಂಪತ್ತನ್ನು ಮುಖ್ಯಮಂತ್ರಿಯಾಗಿ ಕೊಡಿಸುವಂತ ಕೆಲಸ ಮಾಡುತ್ತೇನೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಅಲ್ಲದೆ, ಈ ದೇಶದ ಸಂಪತ್ತನ್ನು ಸಂಪೂರ್ಣವಾಗಿ ಮುಸ್ಲಿಮರಿಗೆ ಹಂಚುತ್ತೇನೆ ಎಂದಿಲ್ಲ. ಸಿಎಂ ತನ್ನ ಭಾಷಣದಲ್ಲಿ “ಎಲ್ಲಾ ಧರ್ಮ, ಜಾತಿಯವರಿಗೂ ರಕ್ಷಣೆ ಕೊಡುವಂತಹ ಕೆಲಸ ಮಾಡುತ್ತೇನೆ” ಎಂದಿರುವುದು ಗಮನಿಸಬಹುದು. ಸಿಎಂ ಮುಸ್ಲಿಂ ಧರ್ಮ ಗುರುಗಳ ಸಮಾವೇಶದಲ್ಲಿ ಭಾಷಣ ಮಾಡಿದ್ದರಿಂದ ಮುಸ್ಲಿಂ ಸಮುದಾಯಕ್ಕೆ ಸಿಗಬೇಕಾದ ಹಕ್ಕುಗಳ ಬಗ್ಗೆ ಮಾತನಾಡಿದ್ದಾರೆ. ಆಯಾ ಸಮುದಾಯದ ಕಾರ್ಯಕ್ರಮದಲ್ಲಿ ಸಮುದಾಯಕ್ಕೆ ಸರ್ಕಾರದಿಂದ ಸಿಗಬೇಕಾದ ಹಕ್ಕು, ಸೌಲಭ್ಯಗಳ ಬಗ್ಗೆ ಜನ ಪ್ರತಿನಿಧಿಗಳು ಮಾತನಾಡುವುದು, ಭರವಸೆ ಕೊಡುವುದು ಸಾಮಾನ್ಯ ಪ್ರಕ್ರಿಯೆ.
ಗಮನಾರ್ಹವಾಗಿ, ಶಾಸಕ ಯತ್ನಾಳ್ ಅವರು ಹಂಚಿಕೊಂಡ ವಿಡಿಯೋ 5 ತಿಂಗಳು ಹಳೆಯದು. ಈಗ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ಹಳೆಯ ವಿಡಿಯೋ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : FACT CHECK: ‘ದೇಶದ ಸಂಪತ್ತಿನಲ್ಲಿ ಮೊದಲ ಅಧಿಕಾರ ಮುಸ್ಲಿಮರಿಗೆ’ ಎಂದು ಮನಮೋಹನ್ ಸಿಂಗ್ ಹೇಳಿಲ್ಲ