ಕಳೆದ ವರ್ಷ ಜೂನ್ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಜೀವನವನ್ನು ಆಧರಿಸಿ ತಯಾರಿಸಿರುವ ‘ನ್ಯಾಯ್: ದಿ ಜಸ್ಟೀಸ್’ ಚಿತ್ರ ನಾಳೆ (ಶುಕ್ರವಾರ) ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ತಡೆ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ತಂದೆ ಕೃಷ್ಣ ಕಿಶೋರ್ ಸಿಂಗ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ನ್ಯಾಯಾಲಯ ವಜಾಗೊಳಿಸಿದೆ. ಈ ಚಿತ್ರವನ್ನು ಕುಟುಂಬದ ಒಪ್ಪಿಗೆಯಿಲ್ಲದೆ ಚಿತ್ರೀಕರಿಸಲಾಗಿದೆ ಮತ್ತು ಮಗನ ಆತ್ಮಹತ್ಯೆಯಲ್ಲಿ ಪಾತ್ರವಿದೆ ಎಂದು ಆರೋಪಿಸಲ್ಪಟ್ಟ ವ್ಯಕ್ತಿಗಳನ್ನು ಚಿತ್ರದಲ್ಲಿ ವಿಶ್ವಾಸಾರ್ಹರು ಎಂದು ತೋರಿಸಲಾಗಿದೆ ಎಂದು ಅರ್ಜಿ ಸಲ್ಲಿಸಲಾಗಿತ್ತು.
ನ್ಯಾಯಮೂರ್ತಿ ಸಂಜೀವ್ ನರುಲಾ ನೇತೃತ್ವದ ನ್ಯಾಯಪೀಠವು ಕೃಷ್ಣ ಕಿಶೋರ್ ಸಿಂಗ್ ಅರ್ಜಿಯನ್ನು ವಜಾಗೊಳಿಸಿದೆ. ಏಪ್ರಿಲ್ನಲ್ಲಿ ದೆಹಲಿ ಹೈಕೋರ್ಟ್ ವಿವಿಧ ಚಲನಚಿತ್ರಗಳ ನಿರ್ಮಾಪಕರಿಗೆ, ನಟ ಸುಶಾಂತ್ ರಜಪೂತ್ ಅವರ ತಂದೆಯ ಮನವಿಗೆ ಸ್ಪಂದಿಸಲು ತಿಳಿಸಿತ್ತು. ತಮ್ಮ ಮಗನ ಹೆಸರು ಅಥವಾ ಹೋಲಿಕೆಯನ್ನು ಬೆಳ್ಳಿ ಪರದೆಯಲ್ಲಿ ಬಳಸದಂತೆ ತಡೆಯಲು ಕೃಷ್ಣ ಕಿಶೋರ್ ಸಿಂಗ್ ಪ್ರಯತ್ನಿಸಿದ್ದರು.
ಇದನ್ನೂ ಓದಿ: ಹೈದರಾಬಾದ್: 3 ವರ್ಷದ ಮಗುವಿಗೆ ಮನಸೋ ಇಚ್ಚೆ ಥಳಿಸಿದ ಪೋಷಕರು- ಮೃತಪಟ್ಟ ಮಗು
‘ನ್ಯಾಯ್: ದಿ ಜಸ್ಟೀಸ್’ ಚಿತ್ರದ ಜೊತೆಗೆ, ಸುಶಾಂತ್ ರಜಪೂತ್ ಅವರ ಜೀವನದ ಸುತ್ತ ಸುತ್ತುವ, ಸೂಸೈಡ್ ಆರ್ ಮರ್ಡರ್: ಎ ಸ್ಟಾರ್ ವಾಸ್ ಲಾಸ್ಟ್’, ‘ಶಶಾಂಕ್’ ಮತ್ತು ಇನ್ನೂ ಹೆಸರಿಡದ ಹಲವು ಚಿತ್ರಗಳು ತೆರೆಗೆ ಬರಲು ಸಿದ್ಧವಾಗುತ್ತಿವೆ.
“ಚಲನಚಿತ್ರ ನಿರ್ಮಾಪಕರು ಪರಿಸ್ಥಿತಿಯ ಲಾಭವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ನಾಟಕಗಳು, ಚಲನಚಿತ್ರಗಳು, ವೆಬ್-ಸರಣಿಗಳು, ಪುಸ್ತಕಗಳು, ಸಂದರ್ಶನಗಳು ಅಥವಾ ಇತರ ವಸ್ತುಗಳನ್ನು ಪ್ರಕಟಿಸಲಾಗುತ್ತಿದೆ. ಇವುಗಳಿಂದ ತಮ್ಮ ಮಗನ ಪ್ರತಿಷ್ಠೆ ಮತ್ತು ಕುಟುಂಬಕ್ಕೆ ಧಕ್ಕೆ ತರುತ್ತದೆ” ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
ಇವುಗಳಿಂದ ಪ್ರತಿಷ್ಠೆ ಕಳೆದುಕೊಳ್ಳುವುದು, ಮಾನಸಿಕ ಆಘಾತ ಮತ್ತು ಕಿರುಕುಳ ಉಂಟಾಗುವುದರಿಂದ 2 ಕೋಟಿ ರೂಪಾಯಿ ನಷ್ಟವನ್ನು ಅರ್ಜಿಯಲ್ಲಿ ಕೋರಲಾಗಿದೆ.
ಬಾಲಿವುಡ್ನ ಜನಪ್ರಿಯ ನಟ ಸುಶಾಂತ್ ಸಿಂಗ್ ರಜಪೂತ್ (34) ತಮ್ಮ ಮುಂಬೈ ಅಪಾರ್ಟ್ಮೆಂಟ್ನಲ್ಲಿ ಜೂನ್ 14 ರಂದು ಶವವಾಗಿ ಪತ್ತೆಯಾಗಿದ್ದರು. ಇವರ ಸಾವು ಹಲವು ವಿವಾದಗಳಿಗೆ ಕಾರಣವಾಗಿತ್ತು. ಬಿಹಾರ ಮತ್ತು ಮುಂಬೈ ಪೊಲೀಸರ ನಡುವೆ ಆರೋಪ – ಪ್ರತ್ಯಾರೋಪಗಳಿಗೆ ಕಾರಣವಾಗಿ, ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ತನಿಖಾ ಏಜೆನ್ಸಿಗಳು ಪ್ರಕರಣದ ತನಿಖೆಯಲ್ಲಿ ಸಕ್ರಿಯವಾಗಿವೆ.
ಇದನ್ನೂ ಓದಿ: ಕೊರೊನಾ ಮೊದಲ ಅಲೆಯಲ್ಲಿ ಸಿಂಧಿಯಾ, ಎರಡನೆ ಅಲೆಯಲ್ಲಿ ಜಿತಿನ್: ರಾಹುಲ್ ತೊರೆದ ಆಪ್ತರು!


